ನೌಕರಿ ಮಾಡೋ ಕನಸು: ಆಪರೇಷನ್ ಆಗಿದ್ರೂ ಆಸ್ಪತೆಯಿಂದ ನೇರವಾಗಿ ಸಂದರ್ಶನಕ್ಕೆ ಬಂದ ಯುವಕ

Koppal News: ಉದ್ಯೋಗ ಜೀವನಕ್ಕೆ ಎಷ್ಟು ಆಸರೆ ಎನ್ನುವುದಕ್ಕೆ ಕೊಪ್ಪಳದಲ್ಲಿ ನಡೆದ ಅದೊಂದು ಘಟನೆ ಸಾಕ್ಷಿ ಆಗಿದೆ. ಬಾಗಲಕೋಟೆ ಮೂಲದ ಉದ್ಯೋಗ ಆಕಾಂಕ್ಷಿ ತನಗೆ ಆಪರೇಷನ್​​ ಆಗಿದ್ದರೂ ಅದನ್ನು ಲೆಕ್ಕಿಸದೆ ಇಂದು ದಾಖಲೆಗಳ ಪರಿಶೀಲನೆಗೆ ನೇರವಾಗಿ ಆಸ್ಪತ್ರೆಯಿಂದಲೇ ಆಗಮಿಸಿದ್ದ ಘಟನೆ ನಡೆದಿದೆ.

ನೌಕರಿ ಮಾಡೋ ಕನಸು: ಆಪರೇಷನ್ ಆಗಿದ್ರೂ ಆಸ್ಪತೆಯಿಂದ ನೇರವಾಗಿ ಸಂದರ್ಶನಕ್ಕೆ ಬಂದ ಯುವಕ
ಕೊಪ್ಪಳದಲ್ಲಿ ಉದ್ಯೋಗಕ್ಕಾಗಿ ಹರಸಾಹಸ
Image Credit source: tv9 kannada
Edited By:

Updated on: Aug 07, 2026 | 3:59 PM

ಕೊಪ್ಪಳ, ಆಗಸ್ಟ್​​ 07: ಒಂದು ಉದ್ಯೋಗ (job) ಮನುಷ್ಯನ ಜೀವನಕ್ಕೆ ಎಷ್ಟು ದೊಡ್ಡ ಆಸರೆ ಮತ್ತು ಭರವಸೆಯನ್ನು ನೀಡುತ್ತದೆ ಎನ್ನುವುದಕ್ಕೆ ಕೊಪ್ಪಳ (koppal) ಜಿಲ್ಲೆಯಲ್ಲಿ ನಡೆದ ಘಟನೆಯೇ ಜೀವಂತ ಸಾಕ್ಷಿ. ಬದುಕಿನ ನಿರ್ವಹಣೆಗಾಗಿ ಹುದ್ದೆಯೊಂದನ್ನು ಪಡೆಯಲು ಯುವಕರು ಎಂತಹ ಕಷ್ಟಗಳನ್ನ ಎದುರಿಸಲೂ ಸಿದ್ಧರಿದ್ದಾರೆ ಎಂಬುದನ್ನು ಈ ಘಟನೆ ಸ್ಪಷ್ಟವಾಗಿ ಬಿಂಬಿಸುತ್ತದೆ. ಆಪರೇಷನ್​ ಆದರೂ ಓರ್ವ ಯುವಕ ನೇಮಕಾತಿ ಪ್ರಕ್ರಿಯೆಗೆ ಆಗಮಿಸಿದ ಮನಕಲಕುವ ಘಟನೆಯೊಂದು ನಡೆದಿದೆ.

ನಡೆದಿದ್ದೇನು?

ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಖಾಲಿ ಇರುವ ಕೇವಲ 26 ಗುತ್ತಿಗೆ ಆಧಾರಿತ ಹುದ್ದೆಗಳ ನೇಮಕಾತಿಗಾಗಿ ಕರೆ ನೀಡಿತ್ತು. ಹಾಗಾಗಿ ಇಂದು ದಾಖಲೆಗಳ ಪರಿಶೀಲನೆಗೆ, ಸಾವಿರಾರು ಆಕಾಂಕ್ಷಿಗಳು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು.

ಇದನ್ನೂ ಓದಿ: ಕೈಯಲ್ಲಿ ಕೂಸು, ಕಣ್ಣಲ್ಲಿ ಸರ್ಕಾರಿ ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು

ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ (11 ಹುದ್ದೆ), ಫಾರ್ಮಸಿ ಅಧಿಕಾರಿ (4 ಹುದ್ದೆ) ಹಾಗೂ ಶುಶ್ರೂಷಾಧಿಕಾರಿ (11 ಹುದ್ದೆ) ಸೇರಿದಂತೆ ಒಟ್ಟು 26 ಹುದ್ದೆಗಳಿಗೆ ಒಂದು ವರ್ಷದ ಗುತ್ತಿಗೆ ಒಪ್ಪಂದವಿದ್ದರೂ, ಸುಮಾರು 2,000ಕ್ಕೂ ಹೆಚ್ಚು ಆಕಾಂಕ್ಷಿಗಳು ಆಗಮಿಸಿದ್ದರು.

ನೇರವಾಗಿ ಆಸ್ಪತ್ರೆಯಿಂದಲೇ ಬಂದ ಉದ್ಯೋಗ ಆಕಾಂಕ್ಷಿ

ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಗಲಕೋಟೆ ಮೂಲದ ಗೋವಿಂದ ಎಂಬ ಉದ್ಯೋಗ ಆಕಾಂಕ್ಷಿ, ಆಪರೇಷನ್ ಆಗಿದ್ದರೂ ಅದನ್ನು ಲೆಕ್ಕಿಸದೆ ನೇರವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಕಾರಿನಲ್ಲಿಯೇ ಕೊಪ್ಪಳದ ಕಚೇರಿಗೆ ಆಗಮಿಸಿದ್ದರು. ಲ್ಯಾಬ್ ಟೆಕ್ನಿಷಿಯನ್ ಹುದ್ದೆಯ ಕನಸು ಹೊತ್ತಿದ್ದ ಅವರು, ತಮ್ಮ ತಾಯಿ ಹಾಗೂ ಸಂಬಂಧಿಕರ ನೆರವಿನಿಂದ ಈ ದಾಖಲಾತಿ ಪರಿಶೀಲನೆಯ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.

ಮಕ್ಕಳಿಗಾಗಿ ಆವರಣದಲ್ಲಿ ಜೋಳಿಗೆ ಕಟ್ಟಿದ ಕುಟುಂಬಸ್ಥರು

ಮತ್ತೊಂದೆಡೆ, ಕೊಪ್ಪಳದ ಜಿಲ್ಲಾ ಆರೋಗ್ಯ ಇಲಾಖೆಯ ಆವರಣದಲ್ಲಿ ಉದ್ಯೋಗಾಕಾಂಕ್ಷಿಗಳ ಆತಂಕ ಮತ್ತು ಬದುಕಿನ ಹೋರಾಟದ ಮತ್ತೊಂದು ಹತಾಶ ಚಿತ್ರಣ ಕಂಡುಬಂತು. ದೂರದೂರುಗಳಿಂದ ಬಂದಿದ್ದ ಮಹಿಳಾ ಆಕಾಂಕ್ಷಿಗಳು ತಮ್ಮ ಸಣ್ಣ ಸಣ್ಣ ಮಕ್ಕಳೊಂದಿಗೆ ಆಗಮಿಸಿದ್ದು, ಮಕ್ಕಳನ್ನು ನಿಭಾಯಿಸಲು ಇಲಾಖೆಯ ಆವರಣದಲ್ಲೇ ಕುಟುಂಬಸ್ಥರು ಜೋಳಿಗೆಯನ್ನು ಕಟ್ಟಿ ಮಲಗಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:54 pm, Fri, 7 August 26

Loading...
Unable to load recommendations.
Follow Us