ಪ್ರವಾಸಿಗರ ಜೀವದ ಜೊತೆ ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರ ಚೆಲ್ಲಾಟ ಆರೋಪ: ಎಸ್ಪಿ ಖಡಕ್ ಸೂಚನೆ
ಕೊಪ್ಪಳ ಜಿಲ್ಲೆಯಲ್ಲಿನ ಹೋಮ್ಸ್ಟೇ ಮತ್ತು ರೆಸಾರ್ಟ್ ಮಾಲೀಕರು ಅತಿಯಾದ ಹಣಕ್ಕಾಗಿ ಪ್ರವಾಸಿಗರನ್ನು ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗೆ ನಡೆದ ಗ್ಯಾಂಗ್ ರೇಪ್ ಮತ್ತು ಹಲ್ಲೆ ಘಟನೆಯು ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ರೆಸಾರ್ಟ್ ಮತ್ತು ಹೋಮ್ಸ್ಟೇ ಮಾಲೀಕರಿಗೆ ಸೂಕ್ತ ಸೂಚನೆ ನೀಡಿದ್ದಾರೆ. ಪ್ರವಾಸಿಗರು ಸುರಕ್ಷಿತವಾಗಿರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಕೊಪ್ಪಳ, ಮಾರ್ಚ್ 10: ಕೊಪ್ಪಳ (Koppal) ಜಿಲ್ಲೆಗೆ ಪ್ರತಿನಿತ್ಯ ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಪ್ರವಾಸಿಗರ ಜೀವದ ಜೊತೆ ಸ್ಥಳೀಯ ರೆಸಾರ್ಟ್ ಮತ್ತು ಹೋಮ್ ಸ್ಟೇ ಮಾಲೀಕರು ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರೆಸಾರ್ಟ್ ಮತ್ತು ಹೋಂ ಸ್ಟೇ (Resort and Homestay) ಮಾಲೀಕರು ಹೆಚ್ಚಿನ ಹಣ ಪಡೆದು, ಪ್ರವಾಸಿಗರನ್ನು ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದು, ಅನೇಕರ ಜೀವವನ್ನು ಬಲಿ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಾರ್ಚ್ 6 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿಯಿರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ದೇಶವೆ ಬೆಚ್ಚಿಬೀಳಿಸುವ ಘಟನೆ ನಡೆದಿತ್ತು. ರಾತ್ರಿ 11 ಗಂಟೆ ಸಮಯದಲ್ಲಿ ಕಾಲುವೆ ಬಳಿ ಗಿಟಾರ್ ಬಾರಿಸುತ್ತಾ, ನಕ್ಷತ್ರಗಳನ್ನು ನೋಡಿ ಆನಂದದಿಂದ ಸಮಯ ಕಳೆಯುತ್ತಿದ್ದ ದೇಶ, ವಿದೇಶದ ಪ್ರವಾಸಿಗರು ಮತ್ತು ಹೋಮ್ ಸ್ಟೇ ಮಾಲೀಕೆ ಮೇಲೆ ದುಷ್ಕರ್ಮಿಗಳು ಅಟ್ಟಹಾಸ ಮೆರದಿದ್ದರು. ಪುರುಷ ಪ್ರವಾಸಿಗರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ, ನಂತರ ತುಂಬಿ ಹರಿಯುತ್ತಿದ್ದ ಕಾಲುವೆಗೆ ದೂಡಿದ್ದರು, ಇಸ್ರೇಲ್ ಮಹಿಳಾ ಪ್ರವಾಸಿ ಮೇಲೆ ಮತ್ತು ಸ್ಥಳೀಯ ಹೋಮ್ ಸ್ಟೇ ಮಾಲೀಕಿ ಮೇಲೆ ದುಷ್ಕರ್ಮಿಗಳು ಗ್ಯಾಂಗ್ ರೇಪ್ ಮಾಡಿದ್ದರು. ರಾಜ್ಯವೇ ತಲೆ ತಗ್ಗಿಸುವಂತಹ ಈ ಘಟನೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ಬಳಿಕ ಎಚ್ಚತ್ತ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ಸೋಮವಾರ (ಮಾ.10) ರೆಸಾರ್ಟ್ ಮತ್ತು ಹೋಮ್ ಸ್ಟೇ ಮಾಲೀಕರು ಸಭೆ ನಡೆಸಿದೆ. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ದಿ, “ಪ್ರವಾಸಿಗರ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನವಿರಲಿ. ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಯಬಾರದು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ರೆಸಾರ್ಟ್ ಮತ್ತು ಹೋಮ್ ಸ್ಟೇ ಮಾಲೀಕರಿಗೆ ಖಡಕ್ ಸೂಚನೆ ನೀಡಿದರು.
ಚುರುಕುಗೊಂಡ ಪೊಲೀಸರ ತನಿಖೆ
ಬಂಧಿತ ಆರೋಪಿಗಳನ್ನು ಘಟನೆ ನೆಡದ ಸ್ಥಳಕ್ಕೆ ಕರೆದುಕೊಂಡು ಬಂದ ಪೊಲೀಸರು ಸ್ಥಳ ಪಂಚನಾಮೆ ನಡೆಸಿದ್ದಾರೆ. ಘಟನೆ ಹೇಗಾಯ್ತು, ತಾವು ಯಾವ ರೀತಿ ಕೃತ್ಯ ವೆಸಗಿದ್ದೇವೆ ಅನ್ನೋದನ್ನು ಆರೋಪಿಗಳಿಂದಲೇ ಸ್ಥಳದಲ್ಲಿ ಹೇಳಿಕೆ ಪಡೆದು, ಪಂಚನಾಮೆ ಮಾಡಿದ್ದಾರೆ.
ಗಂಗಾವತಿ ತಾಲೂಕಿನ ಆನೆಗೊಂದಿ, ಹಂಪೆ ನೋಡಲು ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹೀಗಾಗಿ, ಆನೆಗೊಂದಿ ಸುತ್ತಮುತ್ತ ಹೋಮ್ ಸ್ಟೇ, ರೆಸಾರ್ಟ್ ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಆದರೆ, ಇದೇ ಹೋಮ್ ಸ್ಟೇ ಮಾಲೀಕರು, ರೆಸಾರ್ಟ್ ಮಾಲೀಕರು, ಪ್ರವಾಸಿಗರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆರೋಪಗಳು ಇದೀಗ ಕೇಳಿ ಬಂದಿವೆ. ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆಯುವ ಮಾಲೀಕರು, ಮೋಜು ಮಸ್ತಿ, ಆನಂದದಾಯಕ ಕ್ಷಣಗಳನ್ನು ಕಳೆಯುವ ನೆಪ ಹೇಳಿ ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ.
ಇದನ್ನೂ ಓದಿ: ಸಿಎಂ ಸೂಚನೆ ಪಾಲಿಸದ ಕೊಪ್ಪಳ ಜಿಲ್ಲಾಧಿಕಾರಿ: ಯಥಾಸ್ಥಿತಿ ಮುಂದುವರಿದ ಬಲ್ಡೋಟ ಫ್ಯಾಕ್ಟರಿ ಕಾಮಗಾರಿ
ಮೊನ್ನೆ ನಡೆದ ಘಟನೆಗೆ ಹೋಮ್ ಸ್ಟೇ ಮಾಲೀಕೆಯ ನಿರ್ಲಕ್ಷ್ಯ ಕೂಡಾ ಪ್ರಮುಖ ಕಾರಣ ಅಂತ ಹೇಳಲಾಗುತ್ತಿದೆ. ಘಟನೆ ನಡೆದ ಸ್ಥಳ, ನಿರ್ಜನ ಪ್ರದೇಶವಾಗಿದ್ದು, ಹಗಲೊತ್ತಿನಲ್ಲಿಯೇ ಜನರ ಸಂಚಾರ ಕಡಿಮೆ ಇರುತ್ತದೆ. ಈ ಬಾಗದಲ್ಲಿ ಕರಡಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ಕೂಡ ಹೆಚ್ಚಾಗಿರುವುದರಿಂದ ಜನರು ರಾತ್ರಿ ಸಮಯದಲ್ಲಿ ಓಡಾಡಲು ಭಯಪಡ್ತಾರೆ. ಆದರೆ, ಇದೆಲ್ಲಾ ಗೊತ್ತಿದ್ದರೂ ಕೂಡ ಹೋಮ್ ಸ್ಟೇ ಮಾಲೀಕೆ, ರಾತ್ರಿ 11 ಗಂಟೆ ಸಮಯದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗಿದ್ದೇ, ಘಟನೆಗೆ ಪ್ರಮುಖ ಕಾರಣ ಅಂತ ಹೇಳಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Mon, 10 March 25