ಕೊಪ್ಪಳ ಅತ್ಯಾಚಾರ ಪ್ರಕರಣದಿಂದ ಹಂಪಿ ಪ್ರವಾಸೋದ್ಯಮಕ್ಕೆ ತೀವ್ರ ಹೊಡೆತ: ಪ್ರವಾಸಿಗರ ಸಂಖ್ಯೆ ಭಾರಿ ಇಳಿಕೆ
ಕೊಪ್ಪಳ ಜಿಲ್ಲೆಯ ಸಾಣಾಪುರದಲ್ಲಿ ನಡೆದ ಅತ್ಯಾಚಾರ ಪ್ರಕರಣದಿಂದ ಹಂಪಿ ಪ್ರವಾಸೋದ್ಯಮಕ್ಕೆ ತೀವ್ರ ಹೊಡೆತ ಬಿದ್ದಿರುವುದಾಗಿ ವರದಿಯಾಗಿದೆ. ಅನೇಕ ಪ್ರವಾಸಿಗರು ತಮ್ಮ ಬುಕಿಂಗ್ಗಳನ್ನು ರದ್ದುಗೊಳಿಸಿದ್ದಾರೆ. ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಪೊಲೀಸರು ಹೆಚ್ಚಿನ ಭದ್ರತೆಯನ್ನು ಒದಗಿಸುವ ಭರವಸೆ ನೀಡಿದ್ದಾರೆ. ಆದಾಗ್ಯೂ, ಹೋಂಸ್ಟೇ, ರೆಸಾರ್ಟ್ ಬುಕಿಂಗ್ ಕ್ಯಾನ್ಸಲೇಷನ್ ಮುಂದುವರಿದಿದೆ.

ಹೊಸಪೇಟೆ, ಮಾರ್ಚ್ 10: ಕೊಪ್ಪಳ ಜಿಲ್ಲೆಯ ಸಾಣಾಪುರ ಗ್ರಾಮದಲ್ಲಿ ಇಸ್ರೇಲಿ ಪ್ರಜೆ ಹಾಗೂ ಹೋಮ್ ಸ್ಟೇ ಮಾಲಕಿ ಮೇಲೆ ನಡೆದ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣದ ನಂತರ ಹಂಪಿಗೆ (Hampi) ಬರುವ ಪ್ರವಾಸಿಗರ (Tourists) ಸಂಖ್ಯೆಯಲ್ಲಿ ಗಣನೀಯ ಕುಸಿತವಾಗಿರುವುದಾಗಿ ವರದಿಯಾಗಿದೆ. ಹೋಂಸ್ಟೇಗಳು ಮತ್ತು ಹೋಟೆಲ್ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದ ಅನೇಕ ಪ್ರವಾಸಿಗರು ಅವುಗಳನ್ನು ರದ್ದುಗೊಳಿಸಿದ್ದಾರೆ. ಕೊಪ್ಪಳದ ಸಾಣಾಪುರ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದೆ. ಹತ್ಯೆಯಾದವರಲ್ಲಿ ಇಸ್ರೇಲಿ ಪ್ರಜೆ ಇದ್ದುದರಿಂದ, ಇದೀಗ ಇತರ ದೇಶಗಳ ರಾಯಭಾರ ಕಚೇರಿಗಳು ತಮ್ಮ ದೇಶದ ಪ್ರಜೆಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಲಾರಂಭಿಸಿವೆ. ಹಲವಾರು ರಾಯಭಾರ ಕಚೇರಿಗಳು ತಮ್ಮ ತಮ್ಮ ದೇಶಗಳ ಪ್ರವಾಸಿಗರ ಸ್ಥಿತಿಯನ್ನು ತಿಳಿದುಕೊಳ್ಳಲು ಮುಖ್ಯಮಂತ್ರಿಗಳ ಕಚೇರಿ ಮತ್ತು ಕೊಪ್ಪಳ ಆಡಳಿತದೊಂದಿಗೆ ಸಂಪರ್ಕದಲ್ಲಿವೆ.
ಹಂಪಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಇಸ್ರೇಲ್ನಿಂದ ಬರುವ ವಿದೇಶಿ ಪ್ರವಾಸಿಗರ ಪೈಕಿ ಸುಮಾರು ಶೇ 60 ಜನರನ್ನು ಆಕರ್ಷಿಸುತ್ತವೆ ಎನ್ನಲಾಗಿದೆ. ಹೀಗಾಗಿ, ಸಾಣಾಪುರ ಘಟನೆಯು ಹಂಪಿಯ ಪ್ರವಾಸೋದ್ಯಮದ ಮೇಲೆ ನೇರ ಪರಿಣಾಮ ಬೀರಿದೆ.
25ಕ್ಕೂ ಹೆಚ್ಚು ಹೋಂಸ್ಟೇಗಳಲ್ಲಿ ಬುಕಿಂಗ್ ಕ್ಯಾನ್ಸಲ್
ಕಳೆದ ಎರಡು ದಿನಗಳಲ್ಲಿ, ಹಂಪಿ ಮತ್ತು ಅದರ ಸುತ್ತಮುತ್ತಲಿನ 25 ಕ್ಕೂ ಹೆಚ್ಚು ಹೋಂಸ್ಟೇಗಳಲ್ಲಿ ಬುಕಿಂಗ್ ಕ್ಯಾನ್ಸಲ್ ಮಾಡಲಾಗಿರುವುದು ತಿಳಿದುಬಂದಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಕೊಪ್ಪಳ ಘಟನೆಯು ಹಂಪಿ ಪ್ರವಾಸೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಕಾರ್ಯದರ್ಶಿ ವಿರೂಪಾಕ್ಷಿ ವಿ ಹಂಪಿ ಹೇಳಿರುವುದಾಗಿಯೂ ವರದಿ ಉಲ್ಲೇಖಿಸಿದೆ. ಘಟನೆ ವರದಿಯಾದ ನಂತರ, ಹೋಂಸ್ಟೇಗಳಲ್ಲಿ ಬುಕಿಂಗ್ನಲ್ಲಿ ಕುಸಿತ ಕಂಡುಬಂದಿರುವುದನ್ನು ಅವರು ದೃಢಪಡಿಸಿದ್ದಾರೆ.
ಹಂಪಿಗೆ ಬರಲು ಇತರ ರಾಜ್ಯಗಳ ಪ್ರವಾಸಿಗರಿಂದಲೂ ಹಿಂದೇಟು
ವಿದೇಶಗಳ ಪ್ರಯಾಣಿಕರು ಮಾತ್ರವಲ್ಲ, ಇತರ ರಾಜ್ಯಗಳ ಪ್ರವಾಸಿಗರು ಕೂಡ ಹಂಪಿಗೆ ನಿಗದಿಪಡಿಸಿದ್ದ ಪ್ರವಾಸವನ್ನು ರದ್ದುಗೊಳಿಸುತ್ತಿದ್ದಾರೆ ಅಥವಾ ಮುಂದೂಡುತ್ತಿದ್ದಾರೆ. ಇಡೀ ರಾಷ್ಟ್ರವು ಸಾಣಾಪುರ ಅತ್ಯಾಚಾರ ಘಟನೆಯನ್ನು ಖಂಡಿಸಿದೆ. ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಗಸ್ತು ಹೆಚ್ಚಿಸುತ್ತಾರೆ ಎಂದು ಆಶಿಸುತ್ತೇವೆ ಎಂದು ವಿರೂಪಾಕ್ಷಿ ಹೇಳಿದ್ದಾರೆ. ಏತನ್ಮಧ್ಯೆ, ವಿಜಯನಗರ ಪೊಲೀಸರು ಹಂಪಿ ಮತ್ತು ಸುತ್ತಮುತ್ತಲಿನ ಎಲ್ಲಾ ಹೋಂಸ್ಟೇಗಳ ಮಾಲೀಕರೊಂದಿಗೆ ಸಭೆ ನಡೆಸಿದ್ದಾರೆ.
ಕೊಪ್ಪಳ ಘಟನೆಯು ಎಲ್ಲಾ ಹೋಂಸ್ಟೇ ಮಾಲೀಕರಿಗೆ ಮತ್ತು ಪೊಲೀಸ್ ಇಲಾಖೆಗೆ ಒಂದು ಎಚ್ಚರಿಕೆಯಾಗಿದೆ ಎಂದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿಎಲ್ ಹೇಳಿದ್ದಾರೆ.
ಇದನ್ನೂ ಓದಿ: ಪ್ರವಾಸಿಗರ ಮೇಲೆ ಅತ್ಯಾಚಾರ ಕೇಸ್: ಪರಾರಿಯಾಗಿದ್ದ ಮತ್ತೋರ್ವ ಆರೋಪಿ ತಮಿಳುನಾಡಿನಲ್ಲಿ ಅರೆಸ್ಟ್
ಹಂಪಿ ಮತ್ತು ಜಿಲ್ಲೆಯ ಇತರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವವರಿಗೆ ಸುರಕ್ಷತೆ ಒದಗಿಸಲು ಪೊಲೀಸ್ ಇಲಾಖೆ ಸಿದ್ಧವಾಗಿದೆ ಮತ್ತು ಶೀಘ್ರದಲ್ಲೇ ಹೋಂಸ್ಟೇ ಮಾಲೀಕರಿಗೆ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಹಂಪಿಯ ಹೋಂಸ್ಟೇ ಮಾಲೀಕರೊಂದಿಗೆ ಭಾನುವಾರ ಸಭೆಗಳನ್ನು ನಡೆಸಿರುವುದಾಗಿಯೂ ಅವರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:25 am, Mon, 10 March 25