ಕಾವೇರಿ ನದಿಗೆ ಜೀವಕಳೆ: ಒಂದೇ ದಿನದಲ್ಲಿ ಹರಿದು ಬಂತು 2 ಟಿಎಂಸಿ ನೀರು, ಒಳಹರಿವಿನಲ್ಲಿ ಭಾರಿ ಹೆಚ್ಚಳ

ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಕೆಆರ್​ಎಸ್ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಜಲಾಶಯದ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂ ನ ಒಳಹರಿವಿನಲ್ಲಿ ಗಂಟೆ ಗಂಟೆಗೂ ಏರಿಕೆಯಾಗುತ್ತಿದ್ದು, 24 ಗಂಟೆಗಳಲ್ಲಿ ಎರಡು ಟಿಎಂಸಿ ನೀರಿನ ಮಟ್ಟ ಹೆಚ್ಚಳವಾಗಿದೆ. ಹೀಗಾಗಿ ರೈತರು ಸಂತಸಗೊಂಡಿದ್ದಾರೆ.

ಕಾವೇರಿ ನದಿಗೆ ಜೀವಕಳೆ: ಒಂದೇ ದಿನದಲ್ಲಿ ಹರಿದು ಬಂತು 2 ಟಿಎಂಸಿ ನೀರು, ಒಳಹರಿವಿನಲ್ಲಿ ಭಾರಿ ಹೆಚ್ಚಳ
ಕಾವೇರಿ ನದಿಗೆ ಜೀವಕಳೆ: ಒಂದೇ ದಿನದಲ್ಲಿ ಹರಿದು ಬಂತು 2 ಟಿಎಂಸಿ ನೀರು, ಒಳಹರಿವಿನಲ್ಲಿ ಭಾರಿ ಹೆಚ್ಚಳ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 17, 2024 | 10:13 PM

ಮಂಡ್ಯ, ಜುಲೈ 17: ಕಾವೇರಿ (Cauvery) ನಾಡಿನ ಜೀವನದಿ. ಕೆಆರ್​ಎಸ್​ ಜಲಾಶಯ (KRS Dam) ಜಿಲ್ಲೆಯ ರೈತರ ಜೀವನಾಡಿ. ಇದೀಗ ಜೀವನದಿ ಕಾವೇರಿಗೆ ಜೀವಕಳೆ ಬಂದಿದೆ. ಕೊಡುಗೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ. ಇದು ಜಿಲ್ಲೆಯ ರೈತರ ಸಂತಸಕ್ಕೂ ಕೂಡ ಕಾರಣವಾಗಿದೆ. ಜಲಾಶಯದ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್​ಎಸ್ ಡ್ಯಾಂನ ಒಳಹರಿವಿನಲ್ಲಿ ಗಂಟೆ ಗಂಟೆಗೂ ಏರಿಕೆಯಾಗುತ್ತಿದೆ.

24 ಗಂಟೆಗಳಲ್ಲಿ ಎರಡು ಟಿಎಂಸಿ ನೀರು ಹೆಚ್ಚಳ

ಸದ್ಯ ಜಲಾಶಯಕ್ಕೆ 25,933 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ನಿನ್ನೆ ಬೆಳಗ್ಗೆ 10,121 ಕ್ಯೂಸೆಕ್ ನೀರು ಹರಿದು ಬಂದಿತ್ತು. ಇಂದು ಸಂಜೆ ವೇಳೆಗೆ 19,202 ಕ್ಯೂಸೆಕ್​ಗೆ ಏರಿಕೆಯಾಗಿತ್ತು. ಇಂದು ಬೆಳಗ್ಗೆ 25 ಸಾವಿರ ಕ್ಯೂಸೆಕ್​ಗೆ ಏರಿಕೆಯಾಗಿದೆ. ಇನ್ನು ನಿರಂತರ ಮಳೆಗೆ ಕೇವಲ 24 ಗಂಟೆಗಳಲ್ಲಿ ಜಲಾಶಯದ ನೀರಿನ ಮಟ್ಟ ಎರಡು ಟಿಎಂಸಿ ನೀರು ಹೆಚ್ಚಳವಾಗಿದೆ. ಡ್ಯಾಂ ನ ಒಳಹರಿವು 30 ಸಾವಿರ ಕ್ಯೂಸೆಕ್​ಗೆ ಏರಿಕೆ ಆಗುವ ಸಾಧ್ಯತೆ ಕೂಡ ಇದೆ.

ಇದನ್ನೂ ಓದಿ: ಕೆಆರ್​ಎಸ್ ಜಲಾಶಯದಲ್ಲಿ ಹೆಚ್ಚಿದ ಒಳಹರಿವು, ಖುಷಿಯಿಂದ ಬೀಗುತ್ತಿರುವ ರೈತಾಪಿ ಸಮುದಾಯ

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಜಲಾಶಯ 124.80 ಅಡಿ ನೀರು ಸಂಗ್ರಹ ಹೊಂದಿದ್ದು, ಸದ್ಯ ಜಲಾಶಯದಲ್ಲಿ 107.60 ಅಡಿ ನೀರು ಸಂಗ್ರಹವಾಗಿದೆ. ಕೆಲವೇ ದಿನಗಳ ಕೆಳಗೆ ಜಲಾಶಯದ ಹಿನ್ನೀರು ಪ್ರದೇಶ ಸಂಪೂರ್ಣವಾಗಿ ಖಾಲಿ ಖಾಲಿಯಾಗಿತ್ತು. ಇದೀಗ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯ ದಿನದಿಂದ ದಿನಕ್ಕೆ ಭರ್ತಿಯಾಗುತ್ತಿದೆ.

ಇದೇ ರೀತಿ ಒಳಹರಿವು ಹೆಚ್ಚಳವಾದರೇ ಇನ್ನು ಕೆಲವೇ ದಿನಗಳಲ್ಲಿ ಕೆಆರ್​ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಲಿದೆ. ಈ ಮಧ್ಯೆ ಸಿಬ್ಲ್ಯೂಆರ್​ಸಿ ಕೂಡ ತಮಿಳುನಾಡಿಗೆ ಪ್ರತಿನಿತ್ಯ ಒಂದು ಟಿಎಂಸಿ ಕಾವೇರಿ ನೀರು ಬಿಡುವಂತೆ ಕೂಡ ಆದೇಶ ಮಾಡಿದೆ. ಸಂಕಷ್ಟದಲ್ಲಿ ರಾಜ್ಯ ಸರ್ಕಾರ ಕೂಡ ಸಿಲುಕಿತ್ತು. ಆದರೆ ಜಲಾಶಯದ ಒಳಹರಿವು ಹೆಚ್ಚಳವಾಗಿರುವುದು ಕೊಂಚ ನೆಮ್ಮದಿ ತಂದಿದೆ. ಅಲ್ಲದೆ ರೈತರ ಸಂತಸಕ್ಕೂ ಕಾರಣವಾಗಿದೆ.

ಇದನ್ನೂ ಓದಿ: ಕಾವೇರಿಯ ಒಡಲು ತುಂಬುತ್ತಿರುವಾಗಲೇ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಹರಿಸುವಂತೆ CWRC ಆದೇಶ

ಒಟ್ಟಾರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಜಲಾಶಯದ ಒಳಹರಿವು ಹೆಚ್ಚಳವಾಗಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ. ನಾಳೆ ವೇಳೆಗೆ ಜಲಾಶಯ 110 ಅಡಿಗೂ ಕೂಡ ತಲುಪಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.