ನಾಪತ್ತೆಯಾಗಿದ್ದ ಬಾಲಕ ನಾಲ್ಕು ವರ್ಷಗಳ ಬಳಿಕ ಪತ್ತೆ: ಸುಳಿವು ನೀಡಿದ್ದು ಆತನಿಗಿದ್ದ ಕಬಡ್ಡಿ ಕ್ರೇಜ್!
ಮಂಡ್ಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ಬಾಲಕನೋರ್ವ ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾನೆ. ಓದಲು ಇಷ್ಟವಿಲ್ಲದೆ ಬೆಂಗಳೂರು ಸೇರಿದ್ದ ಈತ ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಿದ್ದ. ವಿಶೇಷ ಅಂದರೆ ಆತನ ಕಬಡ್ಡಿ ಆಸಕ್ತಿಯೇ ಆತನನ್ನು ಪತ್ತೆ ಹಚ್ಚುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಬಡ್ಡಿ ಟೂರ್ನಮೆಂಟ್ನಲ್ಲಿ ಪರಿಚಿತರ ಕಣ್ಣಿಗೆ ಬಿದ್ದು, ಪೊಲೀಸರು ಆತನನ್ನು ಸುರಕ್ಷಿತವಾಗಿ ಕುಟುಂಬಕ್ಕೆ ಸೇರಿಸಿದ್ದಾರೆ.

ಮಂಡ್ಯ, ಮೇ 13: ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕ ನಾಲ್ಕು ವರ್ಷದ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಶಾಲೆಯ ಆವರಣದಿಂದ ನಾಪತ್ತೆಯಾಗಿದ್ದ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದ ತಂದೆ ಕೊನೆಗೂ ನಿಟ್ಟುಸಿರು ಬಿಟ್ಟಿದ್ದು, ಪೊಲೀಸರೂ ಈತನಿಗಾಗಿ ಶೋಧ ನಡೆಸುತ್ತಿದ್ದರು. ಅಂತಿಮವಾಗಿ ಆತನನ್ನು ಪತ್ತೆ ಮಾಡಲಾಗಿದ್ದು, ಹಿರೇಮರಳಿ ಗ್ರಾಮದ ಕಿಶೋರ್ ಎಂಬಾತನನ್ನು ಮರಳಿ ಕುಟುಂಬಸ್ಥರ ಮಡಿಲಿಗೆ ಸೇರಿಸಲಾಗಿದೆ. ವಿಶೇಷ ಅಂದರೆ ಬಾಲಕನಿಗಿದ್ದ ಕಬಡ್ಡಿ ಕ್ರೇಜೇ ಆತನ ಪತ್ತೆ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದೆ.
ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಈರೇಗೌಡರ 9ನೇ ತರಗತಿ ಓದುತ್ತಿದ್ದ ತಮ್ಮ ಪುತ್ರ ಕಿಶೋರ್ನನ್ನು ಮಂಡ್ಯ ತಾಲೂಕಿನ ತಂಗಳಗೆರೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬಿಟ್ಟು ಹೋಗಿದ್ದರು. ಮತ್ತೆ 20 ದಿನ ಬಿಟ್ಟು ಶಾಲೆಗೆ ಬಂದು ಮಗನನ್ನ ಊರಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಅವರು ತಿಳಿಸಿದಾಗ, ಆತ 20 ದಿನದಿಂದ ಶಾಲೆಗೆ ಬಂದಿಲ್ಲ ಎಂಬ ಉತ್ತರ ಬಂದಿದೆ. ಈ ವೇಳೆ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ 2022ರ ಆಗಸ್ಟ್ 10ರಂದು ಬಾಲಕ ಶಾಲೆಗೆ ಹೋಗುತ್ತಿರುವ ವೀಡಿಯೋ ಸೆರೆಯಾಗಿದೆ. ಆದರೆ ಆತ ಸ್ಕೂಲ್ಗೆ ತೆರಳದ ಕಾರಣ ಹೋಗಿದ್ದೆಲ್ಲಿಗೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಹಡುಕಾಟ ನಡೆಸಿದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆ ಬಳಿಕ ಪೊಲೀಸರು ಈ ವಿಚಾರವಾಗಿ ಕಳೆದ ನಾಲ್ಕು ವರ್ಷದಿಂದ ಬಾಲಕನ ಹುಡುಕಾಟ ನಡೆಸುತ್ತಿದ್ದು, ಈ ವೇಳೆ ಬೆಂಗಳೂರಿನಲ್ಲಿ ಕಿಶೋರ್ ಪತ್ತೆಯಾಗಿದ್ದಾನೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ 40 ಬಾಲಕಾರ್ಮಿಕರ ಪತ್ತೆ ಮಾಡಿದ ಮಂಡ್ಯ ಜಿಲ್ಲಾಡಳಿತ; 14 ಎಫ್ಐಆರ್
ಅಷ್ಟಕ್ಕೂ ಕಿಶೋರ್ನನ್ನು ಯಾರೂ ಅಪಹರಣ ಮಾಡಿರಲಿಲ್ಲ. ಬದಲಿಗೆ ಓದಲು ಇಷ್ಟ ಇಲ್ಲದ ಕಾರಣ ಆತನೇ ಶಾಲೆ ಕಾಂಪೌಂಡ್ ಹಾರಿ ಹೋಗಿ ಬೆಂಗಳೂರು ಸೇರಿದ್ದ. ಹಲವೆಡೆ ಹೋಟೆಲ್ನಲ್ಲಿ ಕೆಲಸ ಮಾಡಿ ನಾಲ್ಕು ವರ್ಷ ಜೀವನ ಮಾಡಿದ್ದ ಎಂಬುದು ಗೊತ್ತಾಗಿದೆ. ಕಬಡ್ಡಿ ಮೇಲೆ ವಿಶೇಷ ಆಸಕ್ತಿ ಹೊಂದಿದ್ದ ಕಿಶೋರ್ ಸ್ಥಳೀಯ ಯುವಕರೊಂದಿಗೆ ಲೋಕಲ್ ಟೂರ್ನಮೆಂಟ್ ಆಡುತ್ತಿದ್ದ ವೇಳೆ ಪರಿಚಯಸ್ಥರ ಕಣ್ಣಿಗೆ ಬಿದ್ದಿದ್ದಾನೆ. ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ಕೊನೆಗೂ ಕಿಶೋರ್ನನ್ನು ಹುಡುಕಿ ಗ್ರಾಮಕ್ಕೆ ವಾಪಸ್ ಕರೆತಂದಿದ್ದಾರೆ ಎನ್ನಲಾಗಿದೆ. ಆ ಮೂಲಕ ಬಾಲಕನ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



