ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಮುದಾಯದ ಶಾಸಕರ ಸಭೆ: ಸಿದ್ಧವಾಯ್ತು ಬೇಡಿಕೆಗಳ ಪಟ್ಟಿ
ಕರ್ನಾಟಕ ಕಾಂಗ್ರೆಸ್ನಲ್ಲಿ ಒಂದೆಡೆ ಸಿಎಂ ಹುದ್ದೆ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಮತ್ತೊಂದೆಡೆ, ಡಿಸಿಎಂ ಡಿಕೆ ಶಿವಕುಮಾರ್ ಬಣ ಹಾಗೂ ಹಿಂದುಳಿದ ವರ್ಗಗಳ ಶಾಸಕರು, ಸಚಿವರ ಬಣಗಳ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ವಾಲ್ಮೀಕಿ ಸಮುದಾಯದ ಶಾಸಕರು ಸಭೆ ಸೇರಿ ಬೇಡಿಕೆಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದಾರೆ. ಅವರ ಬೇಡಿಕೆಗಳೇನು? ಇಲ್ಲಿದೆ ವಿವರ.

ಬೆಂಗಳೂರು, ಮಾರ್ಚ್ 5: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಿವಾಸದಲ್ಲಿ ಮಂಗಳವಾರ ರಾತ್ರಿ ಹಿಂದುಳಿದ ವರ್ಗಗಳ ಶಾಸಕರು (Congress MLAs) ಸಭೆ ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ನಲ್ಲಿ (Congress) ಸಿಎಂ ಹುದ್ದೆ ಕುರಿತ ಚರ್ಚೆ, ಬಣ ಜಗಳ ನಡೆಯುತ್ತಿರುವ ಬೆನ್ನಲ್ಲೇ ಈ ಸಭೆ ನಡೆದಿದೆ. ಸಭೆಯಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ಶಾಸಕರು ಬೇಡಿಕೆ ಪಟ್ಟಿಯನ್ನೇ ಸಿದ್ಧಪಡಿಸಿದ್ದಾರೆ.
ಸಮುದಾಯದ ಬೇಡಿಕೆಗಳೇನು?
- ಎಸ್ಸಿ, ಎಸ್ಟಿ ಬ್ಯಾಕ್ಲಾಗ್ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳುವುದು.
- ಕರ್ನಾಟಕ ರಾಜ್ಯದಲ್ಲಿ ಒಂದು ಬುಡಕಟ್ಟು ವಿಶ್ವವಿದ್ಯಾಲಯ (TRIBAL UNIVERSITY) ಸ್ಥಾಪಿಸುವುದು.
- ಸುರಪುರ ತಾಲ್ಲೂಕಿನ ಬಂಡೊಳ್ಳಿಯಲ್ಲಿ ಇರುವ 17 ಎಕರೆ 21 ಗುಂಟೆ ಜಾಗದಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರಾರಂಭಿಸಲು ಸುಮಾರು 25.00 ಕೋಟಿ ರೂ.ಗಳ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
- ಪ್ರತೀ ವರ್ಷ ಸರ್ಕಾರದಿಂದ ಬುಡಕಟ್ಟು ವಾಲ್ಮೀಕಿ ಜನಾಂಗದ ಇತಿಹಾಸ, ಸಂಸ್ಕೃತಿ, ಕಲೆಗಳನ್ನು ಪ್ರೋತ್ಸಾಹಿಸಿ ಜನಗಳಿಗೆ ಪರಿಚಯಿಸುವುದು, ಚಿತ್ರದುರ್ಗದಲ್ಲಿ ದುರ್ಗೋತ್ಸವ ಎಂಬ ಕಾರ್ಯಕ್ರಮವನ್ನು ರಾಣಿಚನ್ನಮ್ಮ ಇತಿಹಾಸ ಬಿಂಬಿಸುವ ಕಿತ್ತೂರು ಉತ್ಸವ, ಹಂಪಿ ಉತ್ಸವ ಮಾದರಿಯಲ್ಲಿ ಆಯೋಜಿಸುವುದು. ಇದು ನಾಯಕರ ಪರಾಕ್ರಮಗಳ ಕಲೆಗಳನ್ನು ಬಿಂಬಿಸುವ ಸಾಂಸ್ಕೃತಿಕ ದುರ್ಗೋತ್ಸವ ಆಗಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸುವುದು.
- ಇತ್ತೀಚೆಗೆ ರಾಯಚೂರಿನಲ್ಲಿ 25 ಮಂದಿ ಎಸ್ಸಿ ಎಸ್ಟಿ ಸಮುದಾಯದ ಹೋರಾಟಗಾರರ ಮೇಲೆ ಹೂಡಿದ ಕೇಸ್ಗಳನ್ನು ಸರ್ಕಾರ ತಕ್ಷಣ ಹಿಂತೆಗೆದುಕೊಳ್ಳಲು ಒತ್ತಾಯಿಸುವುದು.
- ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ಶಿವಭಕ್ತ ಬೇಡರ ಕಣ್ಣಪ್ಪ ಸ್ವಾಮಿ ದೇವಸ್ಥಾನ ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮ ಮಹಾಸಂಸ್ಥಾನಕ್ಕೆ ಹೊಂದಿಕೊಂಡಿರುವ ನಿವೇಶನವನ್ನು ಸರ್ಕಾರದಿಂದ ಮಂಜೂರು ಮಾಡಿಸುವ ಕುರಿತು ಒತ್ತಡ ಹೇರುವುದು.
- ಪರಿಶಿಷ್ಟ ಪಂಗಡದ ಜನಾಂಗಕ್ಕೆ ಮೀಸಲಿಟ್ಟ ಹಣವು ದುರ್ಬಳಕೆಯಾಗದೇ ಸಮರ್ಪಕವಾಗಿ ಜನಾಂಗಕ್ಕೆ ತಲುಪಿಸಿ ನಿಗದಿತ ಅವಧಿಯೊಳಗೆ ಪೂರ್ತಿ ಹಣ ಖರ್ಚಾಗುವಂತೆ ನೋಡಿಕೊಳ್ಳುವುದು.
ಡಿಕೆ ಶಿವಕುಮಾರ್ ಜತೆ ಸಭೆಗೆ ಗೈರು, ಸತೀಶ್ ನಿವಾಸಕ್ಕೆ ರಾಜಣ್ಣ ಹಾಜರ್!
ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಎಸ್ಟಿ ಶಾಸಕರ ಸಭೆಯಲ್ಲಿ ಸಚಿವ ಕೆಎನ್ ರಾಜಣ್ಣ ಭಾಗಿಯಾಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಜೊತೆಗಿನ ಸಭೆಗೆ ಗೈರಾಗಿದ್ದ ಅವರು ಸಮುದಾಯದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇದರೊಂದಿಗೆ, ರಾಜಣ್ಣ ಹಾಗೂ ಡಿಕೆ ಶಿವಕುಮಾರ್ ಸಮರ ಮುಂದುವರಿದಂತಾಗಿದೆ.
ಇದನ್ನೂ ಓದಿ: ಬಾಕಿ ಬಿಲ್ ಪಾವತಿ, ಕಮಿಷನ್ ಸ್ಥಗಿತಗೊಳಿಸದಿದ್ದರೆ ಹೈಕಮಾಂಡ್ಗೆ ದೂರು: ಕಾಂಗ್ರೆಸ್ ಸರ್ಕಾರಕ್ಕೆ ಗುತ್ತಿಗೆದಾರರ ಎಚ್ಚರಿಕೆ
ಅಪೆಕ್ಸ್ ಬ್ಯಾಂಕ್ ವಿಚಾರವಾಗಿ ರಾಜಣ್ಣ ಜತೆ ಸಭೆ ಮಾಡಲು ಡಿಕೆ ಶಿವಕುಮಾರ್ ತೆರಳಿದ್ದರು. ವಿಧಾನಸೌಧದ ಸಚಿವ ರಾಜಣ್ಣ ಕೊಠಡಿಗೆ ತೆರಳಿದ್ದರು. ಆದರೆ, ಆರೋಗ್ಯ ಸರಿಯಿಲ್ಲ ಎಂಬ ಕಾರಣ ನೀಡಿ ರಾಜಣ್ಣ ಸಭೆಗೆ ಬಂದಿರಲಿಲ್ಲ. ಹೀಗಾಗಿ ರಾಜಣ್ಣ ಕೊಠಡಿಯಲ್ಲಿ ಕಾದು ಡಿಕೆ ಶಿವಕುಮಾರ್ ವಾಪಸ್ ಹೋಗಿದ್ದರು. ಆದರೆ, ಹುಷಾರಿಲ್ಲದ ರಾಜಣ್ಣ ಅತ್ತ ವಾಲ್ಮೀಕಿ ಸಮುದಾಯದ ಸಭೆಗೆ ಹಾಜರಾಗಿದ್ದಾರೆ! ಈ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಜೊತೆಗಿನ ಅವರ ಮುನಿಸು ಮತ್ತೊಮ್ಮೆ ಬಹಿರಂಗವಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 am, Wed, 5 March 25