ಬಾಕಿ ಬಿಲ್ ಪಾವತಿ, ಕಮಿಷನ್ ಸ್ಥಗಿತಗೊಳಿಸದಿದ್ದರೆ ಹೈಕಮಾಂಡ್ಗೆ ದೂರು: ಕಾಂಗ್ರೆಸ್ ಸರ್ಕಾರಕ್ಕೆ ಗುತ್ತಿಗೆದಾರರ ಎಚ್ಚರಿಕೆ
ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಗುತ್ತಿಗೆದಾರರು ಮತ್ತೆ ಮಗ್ಗಲ ಮುಳ್ಳಾಗಿ ಪರಿಣಮಿಸುವ ಸಾಧ್ಯತೆ ಇದೆ. ಬಾಕಿ ಉಳಿದಿರುವ ಬಿಲ್ಗಳ ಪಾವತಿ ಮತ್ತು ಅತಿಯಾದ ಕಮಿಷನ್ ವಿಚಾರದಲ್ಲಿ ಗುತ್ತಿಗೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಪರಿಹಾರವಾಗದಿದ್ದರೆ ಹೈಕಮಾಂಡ್ಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಈ ಮಧ್ಯೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗುತ್ತಿಗೆದಾರರೊಂದಿಗೆ ಸಭೆ ಕರೆದಿದ್ದಾರೆ.

ಬೆಂಗಳೂರು, ಮಾರ್ಚ್ 3: ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಗುತ್ತಿಗೆದಾರರು ಮತ್ತೆ ಮಗ್ಗುಲ ಮುಳ್ಳಾಗಿ ಕಾಡುವ ಎಲ್ಲಾ ಸಾಧ್ಯತೆಗಳು ಗೋಚರಿಸಿವೆ. ಈಗಾಗಲೇ ಕೆಲವು ಬಾರಿ ಸರ್ಕಾರದ ವಿರುದ್ಧ ಸಮರ ಸಾರಿದ್ದಗುತ್ತಿಗೆದಾರರು ಬಳಿಕ ತುಸು ತಣ್ಣಗಾಗಿದ್ದರು. ಇದೀಗ ಮತ್ತೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಬಾಕಿ ಬಿಲ್ ಪಾವತಿ ಮಾಡಬೇಕು. ಕಮಿಷನ್ಸ್ ಸ್ಥಗಿತಗೊಳಿಸಬೇಕು. ಇಲ್ಲವಾದರೆ ಹೈಕಮಾಂಡ್ಗೆ ಮಾಹಿತಿ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಮಿಷನ್ ಸ್ಥಗಿತಗೊಳಿಸಬೇಕು. ಬಾಕಿ ಬಿಲ್ ಬಿಡುಗಡೆ ಮಾಡಬೇಕು. ಇಲ್ಲವಾದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಗೆ ದೂರು ನೀಡುವುದಾಗಿ ಗುತ್ತಿಗೆದಾರರು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಉಪಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಎಚ್ಚೆತ್ತುಕೊಂಡಿದ್ದಾರೆ.
ಗುತ್ತಿಗೆದಾರರ ಜೊತೆ ಸಭೆ ನಡೆಸಲು ಡಿಸಿಎಂ ಮುಂದಾಗಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿ ಸಭೆ ನಡೆಸುವ ನಿರೀಕ್ಷೆ ಇದೆ. ಈ ಮೂಲಕ ಗುತ್ತಿಗೆದಾರರನ್ನು ಸಮಾಧಾನಿಸಲು ಡಿಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.
ಗುತ್ತಿಗೆದಾರರ ಆರೋಪಗಳೇನು?
ಸರ್ಕಾರದ ವಿರುದ್ಧ ಗುತ್ತಿಗೆದಾರರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಾಕಿ ಬಿಲ್ ಬಿಡುಗಡೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಿರುವ ಅವರು, ಈ ಸರ್ಕಾರದಲ್ಲಿ ಕಮಿಷನ್ ಪರ್ಸೆಂಟೇಜ್ ಮಿತಿಮೀರಿದು ಎಂದು ದೂರಿದ್ದಾರೆ.
ಇದೇ ಮೊದಲಲ್ಲ
ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಹಾಗೂ ಗುತ್ತಿಗೆದಾರರು ಆರೋಪ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಆರೋಪ ಮಾಡಿ, ನಂತರ ಯು ಟರ್ನ್ ತೆಗೆದುಕೊಂಡಿತ್ತು.
ಇದನ್ನೂ ಓದಿ: ಬಿಬಿಎಂಪಿ ಗುತ್ತಿಗೆದಾರ ಯೂಟರ್ನ್, ಡಿಕೆ ಶಿವಕುಮಾರ್ ಕ್ಷಮೆಯಾಚಿಸಿದ ಹೇಮಂತ್ ಕುಮಾರ್
ಬಾಕಿ ಬಿಲ್ ಬಿಡುಗಡೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯ ಹೇಮಂತ್ ಕುಮಾರ್ ಆರೋಪಿಸಿದ್ದರು. ಈ ವಿಚಾರವಾಗಿ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡುವಂತೆ ಸವಾಲು ಕೂಡ ಹಾಕಿದ್ದರು. ಆದರೆ ನಂತರ ಯು ಟರ್ನ್ ಹೊಡೆದಿದ್ದ ಅವರು, ಪ್ರತಿಪಕ್ಷದ ನಾಯಕರ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ. ಆ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ, ಕ್ಷಮೆ ಕೋರುತ್ತೇನೆ ಎಂದಿದ್ದರು.
ಇದನ್ನೂ ಓದಿ: ಸಾರಿಗೆ ಸಚಿವರ ಆದೇಶಕ್ಕಿಲ್ಲ ಕಿಮ್ಮತ್ತು: ಬಿಎಂಟಿಸಿ ಸಿಬ್ಬಂದಿಗೆ ಇನ್ನೂ ಬಿಡುಗಡೆಯಾಗಿಲ್ಲ ವೇತನ
ಒಟ್ಟಿನಲ್ಲಿ, ಗುತ್ತಿಗೆದಾರರು ಇದೀಗ ಮತ್ತೊಂದು ಭಾರಿ ಸರ್ಕಾರದ ವಿರುದ್ಧ ಸಿಡಿದೇಳಲು ಸಿದ್ದರಾಗಿದ್ದಾರೆ. ಡಿಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯ ಬಳಿಕ ಅವರು ಯಾವ ನಿಲುವು ಪ್ರಕಟಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:43 am, Mon, 3 March 25