ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಇಡಿ ನೋಟಿಸ್​

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಭೈರತಿ ಸುರೇಶ್​ಗೆ ನೋಟಿಸ್​​ ಜಾರಿ ಮಾಡಿದೆ. ಇದರಿಂದ ಸಿಎಂಗೆ ಸಂಕಷ್ಟ ಹೆಚ್ಚಾಗಿದೆ.

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಇಡಿ ನೋಟಿಸ್​
ಸಿದ್ದರಾಮಯ್ಯ
Edited By: ವಿವೇಕ ಬಿರಾದಾರ

Updated on: Jan 27, 2025 | 1:19 PM

ಬೆಂಗಳೂರು, ಜನವರಿ 27: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮತ್ತು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ED) ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ  ಮತ್ತು ಸಚಿವ ಭೈರತಿ ಸುರೇಶ್ ನೋಟಿಸ್​​ ಜಾರಿ ಮಾಡಿದೆ. ಇಡಿ ನೋಟಿಸ್​ ನೀಡುತ್ತಿದ್ದಂತೆ ಪಾರ್ವತಿ ಸಿದ್ದರಾಮಯ್ಯ ಮತ್ತು ಭೈರತಿ ಸುರೇಶ್ ಕರ್ನಾಟಕ ಹೈಕೋರ್ಟ್​​ನ​ ಧಾರವಾಡ ಏಕಸದಸ್ಯ ಪೀಠಕ್ಕೆ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.

ಈ ಸಂಬಂಧ ತುರ್ತು ವಿಚಾರಣೆ ನಡೆಸುವಂತೆ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ್ ಪೀಠಕ್ಕೆ ಮನವಿ ಮಾಡಿದರು. ಸೋಮವಾರ ಕಲಾಪದ ಕೊನೆಗೆ ವಿಚಾರಣೆ ನಡೆಸುವುದಾಗಿ ನ್ಯಾ.ಎಂ.ನಾಗಪ್ರಸನ್ನ ಒಪ್ಪಿಗೆ ಸೂಚಿಸಿದರು.

ನೋಟಿಸ್​ನಲ್ಲಿ ಏನಿದೆ?

ಜ 9ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಜನವರಿ 3ರಂದು ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಮೊದಲ ನೋಟಿಸ್ ನೀಡಿತ್ತು. ನೋಟಿಸ್​ಗೆ ಪ್ರತಿಯಾಗಿ ಸಿಎಂ ಪತ್ನಿ ಪಾರ್ವತಿ ದಾಖಲೆ ಸಂಗ್ರಹಿಸಲು ಎರಡು ವಾರ ಕಾಲಾವಕಾಶ ಕೋರಿದ್ದರು. ವಯಸ್ಸಾಗಿರುವುದರಿಂದ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ಇಡಿ ಸಿಎಂ ಪತ್ನಿಗೆ ಎರಡನೇ ನೋಟಿಸ್ ನೀಡಿತ್ತು. ಜನವರಿ 28ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ನಲ್ಲಿ ಹೇಳಲಾಗಿದೆ. ​

ಇಡಿ ಅಧಿಕಾರಿಗಳು ಮತ್ತೆ ಅಕ್ರಮ ಹಣ ವರ್ಗಾವಣೆ ಆ್ಯಕ್ಟ್​ ಅಡಿಯಲ್ಲಿ ವಿ. ಮುರಳೀಕಣ್ಣನ್ ಹೆಸರಿನಲ್ಲಿ ಜನವರಿ 24ರಂದು ನೋಟಿಸ್ ನೀಡಿದ್ದಾರೆ. ಜನವರಿ 28 ರಂದು ಬೆಳಗ್ಗೆ 11 ಗಂಟೆಗೆ ಶಾಂತಿನಗರದ ಕಚೇರಿಯಲ್ಲಿ ವಿಚಾರಣೆಗೆ ಖುದ್ದು ಹಾಜರಾಗಿ, ಪ್ರಕರಣ ಸಂಬಂಧ ಸಾಕ್ಷಿಗಳು ಮತ್ತು ದಾಖಲೆಗಳನ್ನು ಸಲ್ಲಿಸಿ ಎಂದು ಸಮನ್ಸ್​ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಇ.ಡಿಗೆ ಸಿಕ್ತು ಮುಡಾ ​631 ಸೈಟ್​ಗಳ ಮಾಹಿತಿ: ಬೇನಾಮಿ ಸೈಟ್​ಗಳೇ ಹೆಚ್ಚು, ಈ ವಾರ ಜಪ್ತಿ ಸಾಧ್ಯತೆ

300 ಕೋಟಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು

ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಈಗಾಗಲೆ ಸುಮಾರು 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳು, ಏಜೆಂಟ್​ಗಳು ಸೇರಿದಂತೆ ವಿವಿಧ ವ್ಯಕ್ತಿಗಳ ಹೆಸರಿನಲ್ಲಿದ್ದ ಪ್ರಾಪರ್ಟಿ, ನಿವೇಶನ, ಜಮೀನು ಸೇರಿದಂತೆ ಇನ್ನಿತರ ಆಸ್ತಿ ಒಳಗೊಂಡಂತೆ ಅಂದಾಜು 300 ಕೋಟಿ ರೂ. ಮೌಲ್ಯದ 142 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿತ್ತು.

ಜಯರಾಮ್​, ರಾಕೇಶ್​ ಪಾಪಣ್ಣ ರಿಯಲ್​ ಎಸ್ಟೇಟ್​ ಉದ್ಯಮಿಗಳಾಗಿದ್ದು, ಮಂಜುನಾಥ್​ ಹಾಗೂ ತೇಜಸ್​ ಎಂದುವವರಿಗೆ ಸೇರಿದ ಆಸ್ತಿ ಜಪ್ತಿ ಮಾಡಲಾಗಿತ್ತು. ಈ ಹಿಂದೆ ಮುಡಾ ಆಯುಕ್ತರಾಗಿದ್ದ ನಟೇಶ್​ ಮತ್ತು ದಿನೇಶ್​ ಆಸ್ತಿ ಕೂಡ ಜಪ್ತಿ ಮಾಡಿದ್ದು, ಮತ್ತಷ್ಟು ಹೆಸರುಗಳು ಇಡಿ ಪಟ್ಟಿಯಲ್ಲಿರುವ ಇರುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:21 am, Mon, 27 January 25

Loading...
Unable to load recommendations.
Follow Us