ಮುಡಾ ಹಗರಣ ಕೇಸ್: ಸಿಎಂ ಪತ್ನಿ ಹಾಗೂ ಸಚಿವ ಭೈರತಿ ಸುರೇಶ್ಗೆ ತಾತ್ಕಾಲಿಕ ರಿಲೀಫ್!
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಹಾಗೂ ಸಚಿವ ಭೈರತಿ ಸುರೇಶ್ಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಇಡಿ ಪರ ವಕೀಲರು ಹಾಗೂ ಭೈರತಿ ಸುರೇಶ್ ಮತ್ತು ಸಿಎಂ ಪತ್ನಿ ಪರ ಪರ ವಕೀಲರ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ , ಇಡಿ ಸಮನ್ಸ್ ಗೆ ತಡೆಯಾಜ್ಞೆ ವಿಸ್ತರಣೆ ಮಾಡಿದೆ, ಇನ್ನು ವಾದ-ಪ್ರತಿವಾದ ಹೇಗಿತ್ತು ಎನ್ನುವುದನ್ನು ನೋಡಿ.

ಬೆಂಗಳೂರು, (ಫೆಬ್ರವರಿ 10): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ಗೆ ಇಡಿ ಸಮನ್ಸ್ಗೆ ನೀಡಿದ್ದ ತಡೆಯಾಜ್ಞೆ ವಿಸ್ತರಣೆಯಾಗಿದೆ. ಇಡಿ ನೀಡಿರುವ ಸಮನ್ಸ್ ರದ್ದುಕೋರಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ. ಹೀಗಾಗಿ ಫೆ.20ರ ರವರೆಗೆ ಇಡಿ ಸಮನ್ಸ್ ಗೆ ತಡೆಯಾಜ್ಞೆ ವಿಸ್ತರಣೆಯಾಗಿದೆ. ಇದರಿಂದ ಸಿಎಂ ಪತ್ನಿ ಹಾಗೂ ಭೈರತಿ ಸುರೇಶ್ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಇಡಿ ಪರ ಸಾಲಿಸಿಟರ್ ಜನರಲ್ ವಾದ: ಇಡಿ ಪರ ಹೆ್ಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ವಾದ ಮಂಡಿಸಿದ್ದು, ಇಡಿ ಸಮನ್ಸ್ ಜಾರಿಗೊಳಿಸಿದಾಗ ಹೈಕೋರ್ಟ್ ಮಧ್ಯಪ್ರವೇಶ ಮಾಡಬಾರದು. ಈ ಬಗ್ಗೆ ಸುಪ್ರೀಂಕೋರ್ಟ್ ನ ಇತ್ತೀಚಿನ ತೀರ್ಪು ಇದ್ದು, ಆರೋಪಿಗೆ ಸಮನ್ಸ್ ಜಾರಿಗೊಳಿಸಬೇಕೆಂಬ ನಿಯಮವಿಲ್ಲ ಎಂದರು.
ಸಚಿವ ಭೈರತಿ ಸುರೇಶ್ ಪರ ವಕೀಲ ಸಿ.ವಿ.ನಾಗೇಶ್: ಇಡಿ ತನಿಖಾಧಿಕಾರಿಗಳು ನಮೂನೆಯೊಂದನ್ನು ಕಳುಹಿಸಿದ್ದಾರೆ. ಇದರಲ್ಲಿ ಭೈರತಿ ಕುಟುಂಬದವರು, ಉದ್ಯೋಗಿಗಳು ಇತರರ ವಿವರ ಕೇಳಿದ್ದಾರೆ. ಇದು ಅವರ ಖಾಸಗಿತನದ ಸ್ಪಷ್ಟ ಉಲ್ಲಂಘನೆ.14 ಸೈಟ್ ಹಂಚಿಕೆಗೂ ಭೈರತಿ ಸುರೇಶ್ ಗೂ ಸಂಬಂಧವಿಲ್ಲ. ಮುಡಾದಲ್ಲಿ ಭೈರತಿ ಸುರೇಶ್ ಯಾವುದೇ ಹುದ್ದೆ ವಹಿಸಿಕೊಂಡಿಲ್ಲ. ಹೀಗಾಗಿ ಇಡಿ ಸಮನ್ಸ್ ಕಾನೂನುಬಾಹಿರವೆಂದು ಮನವಿ ಮಾಡಿದರು.
ಹೈಕೋರ್ಟ್ ಜಡ್ಜ್: ಭೈರತಿ ಸುರೇಶ್ ಯಾವ ಇಲಾಖೆ ಸಚಿವರೆಂದು ಹೈಕೋರ್ಟ್ ಪ್ರಶ್ನಿಸಿದ್ದು, ಇದಕ್ಕೆ ಸಿವಿ ನಾಗೇಶ್ ಪ್ರತಿಕ್ರಿಯಿಸಿ, ಭೈರತಿ ಸುರೇಶ್ ನಗರಾಭಿವೃದ್ಧಿ ಇಲಾಖೆ ಸಚಿವ ರು ಎಂದು ಉತ್ತರಿಸಿದರು.
ವಕೀಲ ಸಿ.ವಿ.ನಾಗೇಶ್: ಭೈರತಿ ಸುರೇಶ್ 2023 ರಲ್ಲಷ್ಟೇ ನಗರಾಭಿವೃದ್ದಿ ಸಚಿವರಾಗಿದ್ದಾರೆ. ಇಡಿ ಕಳುಹಿಸಿರುವ ನಮೂನೆಯಲ್ಲಿ ವೈಯಕ್ತಿಕ ವಿವರ ಕೇಳಿದ್ದಾರೆ. ಇದು ಖಾಸಗಿತನದ ಹಕ್ಕಿನ ಸ್ಪಷ್ಟ ಉಲ್ಲಂಘನೆ. ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ವಿರುದ್ಧ ಇಡಿ ಸಮನ್ಸ್ ಹೈಕೋರ್ಟ್ ರದ್ದುಪಡಿಸಿದೆ ಎಂದು ಹೈಕೋರ್ಟ್ ಆದೇಶದ ವಿವರ ಓದಿದರು.
ವಕೀಲ ಸಿ.ವಿ.ನಾಗೇಶ್: ಡಿ.ಬಿ.ನಟೇಶ್ ವಿರುದ್ಧದ ಶೋಧನೆ, ಜಪ್ತಿ ಕ್ರಮ ರದ್ದುಪಡಿಸಲಾಗಿದೆ. ಹೈಕೋರ್ಟ್ ಇಡಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಸ್ವಾತಂತ್ರ್ಯ ಕೊಟ್ಟಿದೆ. ಭೈರತಿ ಸುರೇಶ್ ಪಾತ್ರದ ಬಗ್ಗೆ ಸಮನ್ಸ್ ಯಾವುದೇ ಉಲ್ಲೇಖವಿಲ್ಲ. 2023 ರ ಜೂನ್ ತಿಂಗಳಿನಲ್ಲಷ್ಟೇ ನಗರಾಭಿವೃದ್ದಿ ಸಚಿವರಾಗಿದ್ದಾರೆಂದು ವಾದ ಮಂಡಿಸಿದರು.
ಹೈಕೋರ್ಟ್ ಜಡ್ಜ್: ನಗರಾಭಿವೃದ್ಧಿ ಸಚಿವರಾಗಿರುವುದರಿಂದಲೇ ಸಮನ್ಸ್ ನೀಡರಬಹುದಲ್ಲವೇ ಎಂದು ಹೈಕೋರ್ಟ್ ಜಡ್ಜ್ ಪ್ರಶ್ನಿಸಿದರು.
ವಕೀಲ ಸಿ.ವಿ.ನಾಗೇಶ್: ಆದರೆ ಇಡಿ ಯಾವುದೇ ಕಾರಣ ನೀಡದೇ ಸಮನ್ಸ್ ಜಾರಿಗೊಳಿಸಿದೆ. 14 ಸೈಟ್ ಹಂಚಿಕೆ ವಿಚಾರದಲ್ಲಿ ಭೈರತಿ ಸುರೇಶ್ ಪಾತ್ರವಿಲ್ಲ. ತಂಗಿ, ಮಗಳು, ಅಳಿಯ ಸಂಬಂಧಿಗಳ ಬ್ಯಾಂಕ್ ಅಕೌಂಟ್ ಕೇಳಿದ್ದಾರೆ. ಇನ್ನೂ ಮೊಮ್ಮಕ್ಕಳಲು. ಹೀಗಾಗಿ ಮೊಮ್ಮಕ್ಕಳ ವಿವರ ಕೇಳಿಲ್ಲ. ಐಟಿ ಅಧಿಕಾರಿಗಳು ಕೇಳಿದ್ದರೇ ಹೇಳಬಹುದು, ಇಡಿಗಲ್ಲ ಎಂದು ಇಡಿಯ ಸಮನ್ಸ್ ನ ನಮೂನೆ ಉಲ್ಲೇಖಿಸಿದರು.
ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್: ಒಂದೆರಡು ದಿನಗಳಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುತ್ತೇನೆ. ಅರ್ಜಿದಾರರ ಪರ ವಕೀಲರು ಇಂದೇ ವಾದ ಮುಗಿಸಬಹುದು ಎಂದು ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಹೇಳಿದರು.
ಸಿಎಂ ಪತ್ನಿ ಪರ ವಕೀಲ ಸಂದೇಶ್ ಚೌಟ ವಾದ: ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಪರವಾಗಿ ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದು, ಈ ಪ್ರಕರಣದಲ್ಲಿ ಅಪರಾಧದಿಂದ ಗಳಿಸಿದ ಹಣವಿಲ್ಲ. ಅಕ್ರಮ ಹಣ ವರ್ಗಾವಣೆ ಇಲ್ಲದಿರುವುದರಿಂದ ಇಡಿ ತನಿಖೆ ಸರಿಯಲ್ಲ. ಈಗಾಗಲೇ ತನಿಖೆ ನಡೆದಿರುವ ಬಗ್ಗೆಯೇ ಇಡಿ 2ನೇ ತನಿಖೆ ನಡೆಸುವಂತಿಲ್ಲ. ಅಕ್ರಮ ಹಣದ ಗಳಿಕೆಯಿದ್ದರೆ ಮಾತ್ರ ಇಡಿಗೆ ಅಧಿಕಾರವಿದೆ. ಆಗ ಮಾತ್ರ ಇಡಿ ಸರ್ಚ್ ಮತ್ತು ಸೀಜ್ ಮಾಡಬಹುದು. ಡಿ.ಬಿ.ನಟೇಶ್ ಪ್ರಕರಣದಲ್ಲಿ ಇಡಿಯ ಸರ್ಚ್ ಮತ್ತು ಸೀಜ್ ರದ್ದುಪಡಿಸಿದೆ. ಇಡಿ ಕಾನೂನನ್ನು ಉಲ್ಲಂಘಿಸಿದೆ ಎಂದು ಹೈಕೋರ್ಟ್ ನಮ್ಮ ಪರ ತೀರ್ಪು ನೀಡಿದೆ ಎಂದು ಹೇಳಿದರು.
ಸಿಎಂ ಪತ್ನಿ ಪರ ವಕೀಲ ಸಂದೇಶ್ ಚೌಟ ವಾದ: ಇಡಿ ಸರ್ಚ್ ಮತ್ತು ಸೀಜ್ ನಲ್ಲಿ ಯಾವುದೇ ದಾಖಲೆ ಸಿಕ್ಕಿಲ್ಲ. ಏನೂ ಸಿಗದೇ ಇಡಿ ಡಿ.ಬಿ.ನಟೇಶ್ ಮೊಬೈಲ್ ಸೀಜ್ ಮಾಡಿದ್ದರು. ಇಡಿ ಸಮನ್ಸ್ ನೀಡುವ ಮುನ್ನ ಪ್ರಕ್ರಿಯೆ ಪಾಲಿಸಿಲ್ಲ. ಅಕ್ರಮ ಹಣ ವರ್ಗಾವಣೆ ತಡೆಯಲು ಪಿಎಂಎಲ್ಎ ಕಾಯ್ದೆ ತರಲಾಗಿದೆ. ಮಾದಕ ದ್ರವ್ಯ ಸಾಗಾಟದಂತಹ ಹಣ ಆರ್ಥಿಕತೆಗೆ ಬರಬಾರದು. ಹೀಗಾಗಿಯೇ ಪಿಎಂಎಲ್ಎ ಕಾಯ್ದೆ ಜಾರಿಗೆ ತರಲಾಯಿತು. ಆದರೆ ಇಡಿ ಅದನ್ನು ಎಲ್ಲಾ ಕೇಸ್ ಗೂ ಅನ್ವಯಿಸುತ್ತಿದೆ ಎಂದು ವಾದ ಮಂಡಿಸಿದರು.
ಸಿಎಂ ಪತ್ನಿ ಪರ ವಕೀಲ ಸಂದೇಶ್ ಚೌಟ ವಾದ: ಒಬ್ಬ ವ್ಯಕ್ತಿ 1 ಕೋಟಿ ಹಣ ವಂಚಿಸಿದ್ದಾನೆಂದುಕೊಳ್ಳೋಣ. ಆ ಹಣ ವಾಪಸ್ ಕೊಟ್ಟರೆ ವಂಚನೆ ಕೇಸ್ ಮುಕ್ತಾಯವಾಗುವುದಿಲ್ಲ. ಆದರೆ ಪಿಎಂಎಲ್ ಕಾಯ್ದೆಯಡಿ ಕೇಸ್ ಮುಕ್ತಾಯಗೊಳ್ಳುತ್ತದೆ.. ಏಕೆಂದರೆ ಜಪ್ತಿ ಮಾಡಲು ಆ ಅಕ್ರಮ ಹಣ ಇರುವುದಿಲ್ಲ. ಅನುಸೂಚಿತ ಅಪರಾಧದಿಂದ ಅಕ್ರಮ ಹಣ ಗಳಿಸಿರಬೇಕು. ಆ ಹಣವನ್ನು ಆರ್ಥಿಕತೆಗೆ ಬಿಟ್ಟು ಲಾಭ ಗಳಿಸುತ್ತಿರಬೇಕು. ಆದರೆ ಅಂತಹ ಯಾವುದೇ ಪ್ರಕ್ರಿಯೆಗಳು ಈ ಕೇಸ್ ನಲ್ಲಿ ನಡೆದಿಲ್ಲ ಎಂದರು.
ಹೈಕೋರ್ಟ್ ಜಡ್ಜ್: ಆಕ್ಷೇಪಣೆ ಎಂದು ಸಲ್ಲಿಸುತ್ತೀರೆಂದು ಹೈಕೋರ್ಟ್ ಕೇಳಿದ ಪ್ರಶ್ನಿಗೆ ಇಡಿ ಪರ ಹೆ್ಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಪ್ರತಿಕ್ರಿಯಿಸಿ, ಒಂದೆರಡು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸುತ್ತೇವೆ. ಫೆಬ್ರವರಿ 14 ರಂದು ವಾದಮಂಡನೆಗೆ ಸಿದ್ದವೆಂದು ತಿಳಿಸಿದರು.
ಸಿಎಂ ಪತ್ನಿ ಪರ ವಕೀಲ ವಿಕ್ರಮ್ ಹುಯಿಲಗೋಳ: ಮುಂದಿನ ವಾರಕ್ಕೆ ವಿಚಾರಣೆ ನಿಗದಿ ಮಾಡುವಂತೆ ಸಿಎಂ ಪತ್ನಿ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಮನವಿ ಮಾಡಿದರು. ಆದ್ರೆ, ಹೈಕೋರ್ಟ್ ಫೆಬ್ರವರಿ 20ಕ್ಕೆ ವಿಚಾರಣೆ ನಿಗದಿಪಡಿಸಿತು.
Published On - 3:43 pm, Mon, 10 February 25