ಮುಡಾದಿಂದ ಬದಲಿ ನಿವೇಶನ ವಿಚಾರ; ಮೈಸೂರಿನಲ್ಲಿ ಸಿಎಂ ಸ್ಪಷ್ಟನೆ, ಹೇಳಿದಿಷ್ಟು

ಮುಡಾದಿಂದ ಸಿಎಂ ಬದಲಿ ನಿವೇಶನ ಪಡೆದಿರುವ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇನ್ನು ಮತ್ತೊಂದೆಡೆ ಇದೇ ವೇಳೆ ಬಿಎಸ್​ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಎಸ್​​ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಆಗಿದೆ. ಹೀಗಾಗಿ ಬಿಎಸ್​ವೈಗೆ ನನ್ನ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದಿದ್ದಾರೆ.

ಮುಡಾದಿಂದ ಬದಲಿ ನಿವೇಶನ ವಿಚಾರ; ಮೈಸೂರಿನಲ್ಲಿ ಸಿಎಂ ಸ್ಪಷ್ಟನೆ, ಹೇಳಿದಿಷ್ಟು
ಸಿಎಂ ಸಿದ್ದರಾಮಯ್ಯ
Edited By:

Updated on: Aug 07, 2024 | 11:42 AM

ಮೈಸೂರು, ಆಗಸ್ಟ್.07: ಮುಡಾದಿಂದ (MUDA) ಸಿಎಂ ಬದಲಿ ನಿವೇಶನ ಪಡೆದಿರುವ ವಿಚಾರಕ್ಕೆ ಸಂಬಂಧಿಸಿ ಬದಲಿ ಭೂಮಿ ಕೊಡುವುದು ಬೇಡ ಎಂದು ನಾನು ಹೇಳಿದ್ದೆ ಎಂದು ಮೈಸೂರು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ. ನನ್ನ ಪತ್ನಿ ಬದಲಿ ನಿವೇಶನಕ್ಕೆ ಅರ್ಜಿ ಕೊಟ್ಟಾಗ ನಾನು ಸಿಎಂ ಆಗಿದ್ದೆ. ಸಿಎಂ ಆಗಿರುವ ತನಕ ಬದಲಿ ಭೂಮಿ ಕೊಡಬೇಡಿ ಎಂದು ನಾನು ಹೇಳಿದ್ದೆ. ಪ್ರಭಾವ ಬಳಸುವುದಿದ್ದರೆ ಅಂದೇ ಬಳಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಆಗಿ ಕೊಡಲು ಆಗಿತ್ತಿರಲಿಲ್ಲವಾ? ಬದಲಿ ಸೈಟ್​ಗೆ ಮತ್ತೆ ನನ್ನ ಪತ್ನಿ 2021ರಲ್ಲಿ ಅರ್ಜಿ ಹಾಕಿದಾಗ ಬಿಜೆಪಿ ಸರ್ಕಾರ ಕಾನೂನಾತ್ಮಕವಾಗಿ ಭೂಮಿ ನೀಡಿದೆ. ಮುಡಾ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಪ್ರಭಾವ ಬಳಸಿಲ್ಲ. ಬಿಎಸ್​ಯಡಿಯೂರಪ್ಪ ಜೈಲಿಗೆ ಹೋಗಿದ್ದ ಪ್ರಕರಣವೇ ಬೇರೆ ಇದೇ ಬೇರೆ. ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು. ಚೆಕ್ ಮೂಲಕ ಹಣ ಪಡೆದಿದ್ದರು. ಇಲ್ಲಿ ನಾನು ಯಾವುದೇ ಹಣ ಪಡೆದಿಲ್ಲ ಪ್ರಭಾವ ಬೀರಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಬಿಎಸ್​ವೈಗೆ ನನ್ನ ಬಗ್ಗೆ ಮಾತಾಡುವ ನೈತಿಕತೆ ಇಲ್ಲ

ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆಪರೇಷನ್ ಕಮಲ ಮಾಡಲು ಪ್ರಯತ್ನಿಸಿದ್ರು ಆಗಲಿಲ್ಲ. ಈಗ ಬಿಜೆಪಿ-ಜೆಡಿಎಸ್​ ಸೇರಿ ಸರ್ಕಾರ ಅಸ್ಥಿರಗೊಳಿಸಲು ಯತ್ನ ನಡೆಯುತ್ತಿದೆ. ನಮ್ಮ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದೆ. ಹೀಗಾಗಿ ನಮ್ಮ ಸರ್ಕಾರದ ಬಗ್ಗೆ ಬಿಜೆಪಿ-ಜೆಡಿಎಸ್​ಗೆ ಭಯವಿದೆ. ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆಂದು ಸುಳ್ಳು ಹೇಳಿಕೆ ನೀಡಿದ್ರು, ನಾವು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿದ್ದೇವ ಹೇಳಲಿ. ಬಡವರ ಪರ ನಮ್ಮ ಸರ್ಕಾರ ಕೆಲಸ ಮಾಡುತ್ತಿರುವುದಕ್ಕೆ ಅವರಿಗೆ ಭಯವಿದೆ. ಹೀಗಾಗಿ ಬಿಜೆಪಿ-ಜೆಡಿಎಸ್ ನಮ್ಮ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದರು.

ಇದನ್ನೂ ಓದಿ: BJP JDS Padayatra Live: ಬಿಜೆಪಿ-ಜೆಡಿಎಸ್​ 5ನೇ ದಿನದ ಪಾದಯಾತ್ರೆ ಬಾರುಕೋಲು ಬೀಸುವ ಮೂಲಕ ಆರಂಭ

ಇನ್ನು ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ ಎಂಬ ಬಿಎಸ್​ ಯಡಿಯೂರಪ್ಪ ಹೇಳಿಕೆಗೆ ಸಿಎಂ ಫುಲ್ ಗರಂ ಆಗಿದ್ದಾರೆ. ಬಿಎಸ್​​ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಆಗಿದೆ. ಹೀಗಾಗಿ ಬಿಎಸ್​ವೈಗೆ ನನ್ನ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದರು. ನ್ಯಾಯಾಲಯದ ದಯೆಯಿಂದ ಯಡಿಯೂರಪ್ಪ ಬದುಕಿದ್ದಾರೆ. ಇಲ್ಲವಾದರೇ ಯಡಿಯೂರಪ್ಪ ಜೈಲಲ್ಲಿ ಇರಬೇಕಿತ್ತು. 82 ವರ್ಷ ವಯಸ್ಸಿನಲ್ಲಿ ಇದು ಬೇಕಿತ್ತಾ? ಚಿಕ್ಕ ಮಗುವಿನ ಮೇಲೆ ಈ ರೀತಿ ಮಾಡಬೇಕಿತ್ತಾ? ಯಡಿಯೂರಪ್ಪಗೆ ಯಾವ ನೈತಿಕತೆ ಇದೆ ನನ್ನ ಬಗ್ಗೆ ಮಾತನಾಡುವುದ್ದಕ್ಕೆ. ಯಡಿಯೂರಪ್ಪ ರಾಜಕೀಯ ಜೀವನದಿಂದ ನಿವೃತ್ತಿಯಾಗಬೇಕಿತ್ತು. ಅವರಿಗೆ ರಾಜಕೀಯ ನಿವೃತ್ತರಾಗಲು ಹೇಳಿ ಎಂದು ವಾಗ್ದಾಳಿ ನಡೆಸಿದರು.

ಮೈಸೂರು ಸಮಾವೇಶದಲ್ಲಿ ಬಿಜೆಪಿ ಹಗರಣಗಳನ್ನು ಬಿಚ್ಚಿಡ್ತೇನೆ. ಬಿಜೆಪಿ, ಜೆಡಿಎಸ್​ ಸರ್ಕಾರದ ಎಲ್ಲಾ ಹಗರಣಗಳನ್ನು ಬಿಚ್ಚಿಡ್ತೇನೆ. ಜೆಡಿಎಸ್, ಬಿಜೆಪಿಯವರು ಯಾವ ಹಗರಣಗಳನ್ನು ಮಾಡಿದ್ದಾರೆ. ಎಲ್ಲವನ್ನೂ ಸಂಪೂರ್ಣವಾಗಿ ಸಮಾವೇಶದಲ್ಲಿ ತೆರೆದಿಡುತ್ತೇನೆ. ಇದೆಲ್ಲವನ್ನೂ ಹೇಳಲು ಸುದ್ದಿಗೋಷ್ಠಿಯನ್ನು ನಾನು ಕರೆದಿದ್ದೆ. ಸಮಾವೇಶದಲ್ಲೇ ಹೇಳಬೇಕೆಂದು ಸುದ್ದಿಗೋಷ್ಠಿ ರದ್ದು ಮಾಡಿದೆ. ಬಿಜೆಪಿ ಸರ್ಕಾರದ ಹಗರಣ ಬಗ್ಗೆ ತನಿಖೆಯೂ ನಡೆಯುತ್ತಿದೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us