ಮುಡಾ ಹಗರಣದಲ್ಲಿ ಸಿಎಂ ಪುತ್ರ ಯತೀಂದ್ರ ಭಾಗಿ ಆರೋಪ: ಸಚಿವ ಬೈರತಿ ಸುರೇಶ್ ಹೇಳಿದ್ದೇನು?

| Updated By: ರಮೇಶ್ ಬಿ. ಜವಳಗೇರಾ

Updated on: Jul 01, 2024 | 8:27 PM

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ನೇತೃತ್ವದಲ್ಲಿ 5 ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ. ಬೇರೆ ಯಾರು ಅಲ್ಲ ಬಿಜೆಪಿ ಪರಿಷತ್ ಸದಸ್ಯ ಎಂದು ಎಚ್.ವಿಶ್ವನಾಥ್ ಹೀಗೊಂದು ಗಂಭೀರ ಆರೋಪ ಮಾಡಿದ್ದಾರೆ. ಆದ್ರೆ, ಈ ಆರೋಪವನ್ನು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅಲ್ಲಗೆಳೆದಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಪುತ್ರ ಯತೀಂದ್ರ ಭಾಗಿ ಆರೋಪ: ಸಚಿವ ಬೈರತಿ ಸುರೇಶ್ ಹೇಳಿದ್ದೇನು?
ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್
Follow us on

ಮೈಸೂರು, (ಜುಲೈ 01): ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣದಲ್ಲಿ ಯತೀಂದ್ರ ಸಿದ್ದರಾಮಯ್ಯ ಹೆಸರು ಕೇಳಿಬಂದಿದೆ. ಯತೀಂದ್ರ ಸಿದ್ದರಾಮಯ್ಯ ಮತ್ತು ತಂಡದ ಸಹಕಾರದಿಂದ ಮುಡಾ ಅಧಿಕಾರಿಗಳು ಸುಮಾರು 5 ಸಾವಿರ ಕೋಟಿ ರೂ. ಗಳ ಅವ್ಯವಹಾರ ನಡೆಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆರೋಪಿಸಿದ್ದಾರೆ. ಇನ್ನು ಇದಕ್ಕೆ ಸ್ವತಃ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್​ ಪ್ರತಿಕ್ರಿಯಿಸಿ, ಮುಡಾ ಹಗರಣದಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾತ್ರ ಈ ಕ್ಷಣಕ್ಕೆ ಕಂಡುಬಂದಿಲ್ಲ. ಯತೀಂದ್ರ ಹಿಂದೆ ಶಾಸಕರಾಗಿದ್ದರು, ಅವರಿಗೂ ಇದಕ್ಕೂ ಸಂಬಂಧವಿಲ್ಲ. ಬಿಜೆಪಿ ಎಂಎಲ್​ಸಿ ವಿಶ್ವನಾಥ್ ಬಳಿ ಸಾಕ್ಷ್ಯಾಧಾರ ಇದ್ದರೆ ಕೊಡಲಿ ಎಂದು ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೈರತಿ ಸುರೇಶ್, ​ಮುಡಾ ಹಗರಣದಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾತ್ರ ಇದೆ ಎಂಬ ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಯತೀಂದ್ರ ಅವರ ಪಾತ್ರ ಈ ಕ್ಷಣಕ್ಕೆ ಕಂಡುಬಂದಿಲ್ಲ. ಯತೀಂದ್ರ ಈಗ ಎಂಎಲ್‌ಸಿ ಆಗಿದ್ದಾರೆ. ಈ ಹಿಂದೆ ಶಾಸಕರಾಗಿದ್ದರು ಇದಕ್ಕೂ ಅವರಿಗೂ ಸಂಬಂಧವಿಲ್ಲ. ಹೆಚ್. ವಿಶ್ವನಾಥ್ ಅವರು ನಮಗಿಂತ ಹಿರಿಯರು. ಯತೀಂದ್ರ ಬಗ್ಗೆ ಹೇಳೋದಕ್ಕೆ ಏನು ಸಾಕ್ಷಿಯಿದೆ? ಅವರ ಹೇಳಿಕೆಯನ್ನ ಆ ದೇವರೇ ಮೆಚ್ಚಬೇಕು. ವಿಶ್ವನಾಥ್ ಅವರ ಬಳಿ ಸಾಕ್ಷಿ ಇದ್ದರೆ ತಂದು ಕೊಡಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಮೈಸೂರು ಮುಡಾದಲ್ಲಿ ಹಗರಣ: ನಿವೇಶನಗಳ ಹಂಚಿಕೆ ರದ್ದು, ಅಧಿಕಾರಿಗಳ ತಲೆದಂಡ

ಇನ್ನೂ ಮುಡಾ ದಾಖಲಾತಿಗಳನ್ನ ಪೆನ್‌ಡ್ರೈವ್‌ನಲ್ಲಿ ಹಾಕಿ ಕೊಡುವಂತೆ ಕೇಳಿದ್ದ ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಪೆನ್‌ಡ್ರೈವ್‌ ಸಂಸ್ಕೃತಿ ಇಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ, ವಿಶ್ವನಾಥ್ ಈಗ ಮಾತನಾಡುತ್ತಿದ್ದಾರೆ. ನನ್ನ ಬಳಿ ಸೈಟ್ ಕೊಡಿಸುವಂತೆ ವಿಶ್ವನಾಥ್ ಬಂದಿದ್ದರು. ಅದನ್ನ ನೆನಪು ಮಾಡಿಕೊಳ್ಳಲಿ. ಸುಮ್ಮನೆ ಆರೋಪಗಳನ್ನ ಮಾಡುವುದನ್ನ ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದರು.

ಮಾಹಿತಿ ಕಲೆಹಾಕಲು ಮುಂದಾದ ಎಂಎಲ್​ಸಿ ಹೆಚ್.ವಿಶ್ವನಾಥ್

ಈ ಬಗ್ಗೆ ಜಿಲ್ಲಾ ನೋಂದಣಾಧಿಕಾರಿ ಮತ್ತು ಮುಡಾ ನೋಂದಣಾಧಿಕಾರಿಗೆ ಪತ್ರ ಬರೆದಿದ್ದು, ಮುಡಾದಲ್ಲಿ ನೋಂದಣಿ ಬಗ್ಗೆ ಮಾಹಿತಿ ನೀಡಲು ಸೂಚಿಸಿದ್ದಾರೆ. 2020ರ ಜನವರಿಯಿಂದ ಈವರೆಗೆ ಮುಡಾ ಕಚೇರಿಯಲ್ಲಿ ನೋಂದಣಿ ಆಗಿರುವ ಸೈಟ್​ಗಳ ವಿವರ ನೀಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಶ್ವನಾಥ್ ಹೇಳಿದ್ದೇನು?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ನೇತೃತ್ವದಲ್ಲಿ 5 ಸಾವಿರ ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದೆ. 2019ರಲ್ಲಿ ಮುಡಾ ಸುಪರ್ದಿನಲ್ಲಿ 9 ಸಾವಿರ ನಿವೇಶನಗಳಿದ್ದವು. ಇದರಲ್ಲಿ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಮಾರಿಕೊಳ್ಳಲಾಗಿದೆ. ಹಿಂದಿನ ಬಿಜೆಪಿ ಸರಕಾರ ಹಾಗೂ ಈಗಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಿಯಮ ಬಾಹಿರವಾಗಿ ನಿವೇಶನ ಹಂಚಿಕೆಯಾಗಿದೆ ಎಂದು ದೂರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತನಿಂದ ಮುಡಾ ಅಧೋಗತಿಗೆ ತಲುಪಿದೆ. ಒಂದಷ್ಟು ನಾಯಕರು, ಅಧಿಕಾರಿಗಳು ಸಿಂಡಿಕೇಟ್ ರಚಿಸಿಕೊಂಡಿದ್ದು, ಈ ದಂಧೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಎಲ್ಲ ಆರೋಪಿಗಳನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:15 pm, Mon, 1 July 24