ಪ್ರಧಾನಿ ಮೋದಿಯದ್ದು ಸುಳ್ಳಿನ ಪಿಕ್ಚರ್ ಬಾಕಿ ಇರಬಹುದು: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿಯವರದ್ದು ಸುಳ್ಳಿನ ಪಿಕ್ಚರ್ ಬಾಕಿ ಇರಬಹುದು ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಅಭಿವೃದ್ಧಿ ಮಾಡಿದ್ದರೆ ತಾನೇ ಎಂದು ಪ್ರಶ್ನಿಸಿರುವ ಅವರು, ಈ ಚುನಾವಣೆಯಲ್ಲಿ ಬಿಜೆಪಿ 200 ಸೀಟ್​ ಗೆಲ್ಲುವುದು ಅನುಮಾನವಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯದ್ದು ಸುಳ್ಳಿನ ಪಿಕ್ಚರ್ ಬಾಕಿ ಇರಬಹುದು: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಸಿಎಂ ಸಿದ್ದರಾಮಯ್ಯ
Edited By:

Updated on: Apr 01, 2024 | 2:22 PM

ಮೈಸೂರು, ಏಪ್ರಿಲ್ 1: ಅಭಿವೃದ್ಧಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ನೀಡಿರುವ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ (Siddaramaiah) ಮೈಸೂರಿನಲ್ಲಿ (Mysuru) ತಿರುಗೇಟು ನೀಡಿದರು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಆಗಿದ್ದರೆ ತಾನೇ ಟ್ರೇಲರ್. ಅವರದ್ದು (ಮೋದಿ) ಸುಳ್ಳಿನ ಪಿಕ್ಚರ್ ಬಾಕಿ ಇರಬಹುದು ಎಂದು ವ್ಯಂಗ್ಯವಾಡಿದರು. ಬಿಜೆಪಿ 400 ಸೀಟ್ ಗೆಲ್ಲಬೇಕು ಎಂಬ ಮೋದಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಈ ಚುನಾವಣೆಯಲ್ಲಿ ಬಿಜೆಪಿ 200 ಸೀಟ್​ ಗೆಲ್ಲುವುದು ಅನುಮಾನವಿದೆ. ಬಿಜೆಪಿಯ ಸಮೀಕ್ಷೆಯಿಂದಲೇ ಈ ವಿಚಾರ ಬಹಿರಂಗವಾಗಿದೆ. ಹೀಗಾಗಿ ಅವರು 400 ಸೀಟ್​ ಗೆಲ್ಲುತ್ತೇವೆಂದು ಬಿಂಬಿಸುತ್ತಿದ್ದಾರೆ ಎಂದರು.

ಕಡಿಮೆ ಸ್ಥಾನ ಬರುತ್ತದೆ ಎಂದು ಗೊತ್ತಾದ ಮೇಲೆಯೇ ಹೆಚ್ಚು ಸ್ಥಾನ ಬರುತ್ತವೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ‌. ಇದು ಕೂಡ ಅವರ ತಂತ್ರಗಾರಿಕೆ. ಕರ್ನಾಟಕದಲ್ಲಿ ನನಗೆ ವಿಶ್ವಾಸ ಇದೆ. 18ರಿಂದ 20 ಸ್ಥಾನ ಗೆಲ್ಲುತ್ತೇವೆ‌ ಎಂದು ಸಿದ್ದರಾಮಯ್ಯ ಹೇಳಿದರು.

ಈ ಬಾರಿ ಬಿಜೆಪಿಯ ಸುಳ್ಳಿಗೆ ಯಾರು ಸಹ ಮರಳಾಗುವುದಿಲ್ಲ. ಮೋದಿಯೂ ಬಂದು ಪ್ರಚಾರ ಮಾಡಲಿ. ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದ್ದರು. ಆಗ ಏನಾಯಿತು ಎಂಬುದು ಗೊತ್ತಿದೆ. ಈಗಲೂ ಮಾಡಲಿ ಬಿಡಿ ಎಂದು ಅವರು ಹೇಳಿದರು.

ಕುಮಾರಸ್ವಾಮಿಗೆ ತಿರುಗೇಟು

ಸಿದ್ದರಾಮಯ್ಯ ಗರ್ವ ಭಂಗವಾಗಬೇಕು ಎಂಬ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿ, ನನಗೆ ಗರ್ವ ಇದ್ದರೆ ತಾನೇ ಭಂಗ ಆಗುವುದು ಎಂದರು. ಸತ್ಯ ಹೇಳಿದ್ದಕ್ಕೆ ನನಗೆ ಗರ್ವ ಅಂತಾ ಹೇಳುತ್ತಿದ್ದಾರೆ. ಮೋದಿ ಪಿಎಂ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ಯಾರು? ಮುಂದಿನ ಜನ್ಮ ಇದ್ದರೆ ಮುಸ್ಲಿಂ ಆಗುತ್ತೇನೆ ಎಂದವರು ಯಾರು? ಇದನ್ನು ನಾನು ಹೇಳಿದ್ದಕ್ಕೆ ಗರ್ವ ಎನ್ನುತ್ತಾರೆ, ನನಗೆ ಗರ್ವ ಇಲ್ಲ. ನಮ್ಮ ಸರ್ಕಾರದ ಜನಪರ ಆಡಳಿತ ನಮ್ಮ ಕೈ ಹಿಡಿಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಅಮಿತ್ ಶಾ ಗೂಂಡಾ ಎಂಬ ಯತೀಂದ್ರ ಹೇಳಿಕೆಯನ್ನು ಸಮರ್ಥಿಸಿದ ಸಿದ್ದರಾಮಯ್ಯ, ಸಿಬಿಐ ಹೇಳಿದನ್ನು ಯತೀಂದ್ರ ಹೇಳಿದ್ದಾನೆ. ಅದು ಅವನು ಬಳಸಿದ ಪದ ಅಲ್ಲ ಎಂದರು.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಲೇ ಅಮಿತ್ ಶಾ ಪ್ರಚಾರ; ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಬಿಜೆಪಿಗೆ ಸಂಸ್ಕಾರವೇ ಗೊತ್ತಿಲ್ಲ. ಬಿಜೆಪಿಯವರು ಯತೀಂದ್ರಗೆ ಸಂಸ್ಕಾರ ಹೇಳಿಕೊಡಲು ಬಂದಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರವನ್ನು ಗೆದ್ದೇ ಗೆಲ್ಲುತ್ತೇವೆ. ಮೈಸೂರು ಮಾತ್ರವೇ ನನಗೆ ಮುಖ್ಯವಲ್ಲ. ಎಲ್ಲಾ ಕ್ಷೇತ್ರಗಳು ಬಹಳ ಮುಖ್ಯ. ಎಲ್ಲಾ ಕ್ಷೇತ್ರಗಳಿಗೆ ಸಾದ್ಯವಾದಷ್ಟು ಹೋಗುತ್ತೇನೆ‌ ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us