ಮುಡಾ ಸಭೆಯಲ್ಲಿ ಮಹತ್ವದ ನಿರ್ಣಯ: 50:50 ಅನುಪಾತದಲ್ಲಿ ಸೈಟ್‌ ಪಡೆದವರಿಗೆ ಬಿಗ್ ಶಾಕ್

ಮುಡಾ ಅಕ್ರಮ ಪ್ರಕರಣದಲ್ಲಿ ಇಡಿ ತನಿಖೆ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. 50:50 ಅನುಪಾತದಲ್ಲಿ ಅಕ್ರಮವಾಗಿ ಹಂಚಿಕೆ ಮಾಡಿರುವ ಸುಮಾರು 1,500ಕ್ಕೂ ಹೆಚ್ಚು ಸೈಟುಗಳನ್ನು ಜಪ್ತಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಇದರ ಬೆನ್ನಲ್ಲೇ ಇದೇ 50:50 ನಿವೇಶನದ ಸಂಬಂಧ ಮುಡಾ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಮುಡಾ ಸಭೆಯಲ್ಲಿ ಮಹತ್ವದ ನಿರ್ಣಯ: 50:50 ಅನುಪಾತದಲ್ಲಿ ಸೈಟ್‌ ಪಡೆದವರಿಗೆ ಬಿಗ್ ಶಾಕ್
ಮುಡಾ
Edited By:

Updated on: Nov 07, 2024 | 3:26 PM

ಮೈಸೂರು, (ನವೆಂಬರ್ 07): ಅಕ್ರಮ ಪ್ರಕರಣ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮುಡಾ ಸಭೆ ನಡೆಸಿದ್ದು,ಈ ಸಭೆಯಲ್ಲಿ 50:50 ನಿವೇಶನಗಳನ್ನು ಜಪ್ತಿ ಮಾಡಲು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಹೌದು…ಇಂದು (ನವೆಂಬರ್ 07) ನಡೆದ ಮುಡಾ ಸಭೆಯಲ್ಲಿ 50-50 ಸೈಟಗಳ ಜಪ್ತಿಗೆ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಪಿ.ಎನ್.ದೇಸಾಯಿ (PN Desai) ವರದಿ ಬಂದ ಬಳಿಕ ಜಪ್ತಿಯ ವರದಿ ಅಂಗೀಕರಿಸಲು ತೀರ್ಮಾನಿಸಲಾಗಿದೆ. ಈ ಮೂಲಕ ಅಕ್ರಮವಾಗಿ 50:50 ಸೈಟ್ ಪಡೆದವರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಮುಡಾ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಜಿಟಿ ದೇವೇಗೌಡ, ಮೈಸೂರು:50:50 ಅನುಪಾತದ ಬಗ್ಗೆ ಲೋಕಾಯುಕ್ತ, ಇಡಿ, ದೇಸಾಯಿ ಆಯೋಗ ತನಿಖೆ ಮಾಡುತ್ತಿದೆ. 50:50 ಅನುಪಾತ ವಾಪಾಸ್ ಪಡೆಯಬೇಕು. 50:50 ಅಕ್ರಮವಾಗಿರೋದನ್ನ ರದ್ದು ಮಾಡಬೇಕು. ಕಾನೂನುನಾತ್ಮಕವಾಗಿ ಇರುವವರಿಗೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ. ಮೊದಲು ಆಯೋಗದ ತನಿಖಾ ವರದಿ ಬರಲಿ. ನಂತರ ನಿರ್ಧಾರ ಮಾಡೋಣ ಅನ್ನೋ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮುಡಾ ಸೈಟ್​ ಹಿಂಪಡೆಯಲು ಸಿದ್ದರಾಮಯ್ಯ ಸಮ್ಮತಿ: ನಿವೇಶನ ​ಪಡೆದವರಿಗೆ ಟೆನ್ಷನ್​ ಶುರು

ಕಾಂಗ್ರೆಸ್ ಶಾಸಕ ಕೆ.ಹರೀಶ್​ಗೌಡ ಮಾತನಾಡಿ, 50:50 ಅನುಪಾತದಡಿ ನೀಡಿರುವ ಸೈಟ್​​ ಜಪ್ತಿಗೆ ಸದಸ್ಯರ ಒಪ್ಪಿಗೆ ಸೂಚಿಸಲಾಗಿದೆ. ವರದಿ ಬಳಿಕ ಕ್ರಮ ತೆಗೆದುಕೊಳ್ಳೋಣ ಎಂದು ಅಧ್ಯಕ್ಷರು ಹೇಳಿದ್ದಾರೆ. ಮುಡಾ ಸ್ವಚ್ಛವಾಗಬೇಕು ಎಂಬುವುದೇ ಎಲ್ಲಾ ಸದಸ್ಯರ ಅಭಿಪ್ರಾಯ. 2020ರಿಂದ 50:50 ಅನುಪಾತದಡಿ ಸೈಟ್​ ಹಂಚಿಕೆ ಮಾಡಲಾಗಿದೆ. ಕೆಲವೆಡೆ ಪರಿಹಾರ ರೂಪದಲ್ಲೂ 50:50 ಅನುಪಾತದಡಿ ಸೈಟ್​ ಹಂಚಿಕೆ ಮಾಡಲಾಗಿದೆ. ಎಲ್ಲಾ ದಾಖಲೆಗಳನ್ನ ಇಟ್ಟುಕೊಂಡು‌ ಸಭೆಯಲ್ಲಿ ಮಾತನಾಡಿದ್ದೇನೆ. ಕಳೆದ ಬಾರಿ ನಡೆದ ಸಭೆಯಲ್ಲೂ ಈ ಬಗ್ಗೆ ಚರ್ಚೆ ಮಾಡಲಾಗಿತ್ತು. ದಾಖಲೀಕರಣ ಮಾಡದ ಅಧಿಕಾರಿಗಳ ವಿರುದ್ಧ ಕೇಸ್​ ದಾಖಲಿಸಲು ನಿರ್ಧರಿಸಲಾಗಿದೆ. ಅಲ್ಲದೇ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೂ ಪತ್ರ ಬರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರದ್ದು ಸಹ ಇದೇ ಪ್ಲಾನ್!

50:50 ಅನುಪಾತದಲ್ಲಿ ಅಕ್ರಮವಾಗಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಕಾರ್ಯದರ್ಶಿಗಳಿಗೆ ಸಿಎಂ ಲಿಖಿತ ಸೂಚನೆ ನೀಡಿದ್ದರು. ಮೈಸೂರು ನಗರದ ಬಿಜೆಪಿ ಶಾಸಕ ಟಿ.ಎಸ್‌ ಶ್ರೀವತ್ಸ ಅವರು ಬರೆದ ಪತ್ರ ಆಧರಿಸಿ ಸೈಟು ವಾಪಸ್‌ ಪಡೆಯುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಖುದ್ದು ಮುಖ್ಯಮಂತ್ರಿಗಳೇ ಕ್ರಮಕ್ಕೆ ಲಿಖಿತ ಸೂಚನೆ ನೀಡಿದ್ದಾರೆ.

2020 ರಿಂದ 2024ರ ಅವಧಿಯಲ್ಲಿ 50:50 ಅನುಪಾತದಲ್ಲಿ ಸುಮಾರು 1,500ಕ್ಕೂ ಹೆಚ್ಚು ಸೈಟುಗಳು ಹಂಚಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಸದ್ಯ ಮುಖ್ಯಮಂತ್ರಿಗಳೇ ಖುದ್ದು ಕ್ರಮಕ್ಕೆ ಲಿಖಿತ ಸೂಚನೆ ನೀಡಿದ್ದಾರೆ. ಹಾಗಾಗಿ ಅಕ್ರಮವಾಗಿ ಹಂಚಿಕೆಯಾಗಿರುವ ಎಲ್ಲಾ ಸೈಟುಗಳು ಶೀಘ್ರದಲ್ಲೇ ಜಪ್ತಿಯಾಗುತ್ತಾ? ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Dileep CP

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಅದನ್ನು ಹೊರತು ಪಡಿಸಿದರೆ ಒಂದಷ್ಟು ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Follow Us