ಅಭಯಾರಣ್ಯದಿಂದ ಮೈಸೂರಿನತ್ತ ಬಂದ ಹುಲಿ: ಅನಾವಶ್ಯಕವಾಗಿ ಹೊರ ಬರದಂತೆ ಅರಣ್ಯ ಇಲಾಖೆ ಎಚ್ಚರಿಕೆ
ಮೈಸೂರು ತಾಲೂಕಿನ ಬ್ಯಾತಹಳ್ಳಿ ಗ್ರಾಮದ ಬಳಿ ಹುಲಿ ಕಾಣಿಸಿಕೊಂಡಿದೆ. ದೂರದ ಅಭಯಾರಣ್ಯದಿಂದ ಮೈಸೂರಿನತ್ತ ಹುಲಿ ಬಂದಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹೀಗಾಗಿ ಬ್ಯಾತಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಸಂಜೆಯ ಬಳಿಕ ಅನಾವಶ್ಯಕವಾಗಿ ಮನೆಯಿಂದ ಹೊರ ಬರದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮೈಸೂರು, ಡಿಸೆಂಬರ್ 05: ದೂರದ ಅಭಯಾರಣ್ಯದಿಂದ ಮೈಸೂರು ತಾಲೂಕಿನ ಬ್ಯಾತಹಳ್ಳಿ ಗ್ರಾಮದ ಬಳಿ ಹುಲಿ (Tiger) ಕಾಣಿಸಿಕೊಂಡಿರವುದನ್ನು ಅರಣ್ಯ ಇಲಾಖೆ ಖಚಿತಪಡಿಸಿದೆ. ಕಳೆದ ಭಾನುವಾರ ದೊಡ್ಡಕಾನ್ಯ ಗ್ರಾಮದ ಬಳಿ ಹುಲಿಯನ್ನು ಕಂಡಿರುವುದಾಗಿ ಗ್ರಾಮಸ್ಥರು ಹೇಳಿದ್ದಾರೆ. ಕೂಡಲೇ ಆ ಭಾಗದಲ್ಲಿ ಡ್ರೋಣ್ ಕ್ಯಾಮರಾ ನೆರವಿನಿಂದ ಕಾರ್ಯಾಚರಣೆ ನಡೆಸಲಾಗಿದ್ದು, ಆದರೆ ಹುಲಿಯ ಸುಳಿವು ಪತ್ತೆಯಾಗಿರಲಿಲ್ಲ. ಆದರೆ ಅಸ್ಪಷ್ಟವಾದ ಹೆಜ್ಜೆ ಗುರುತುಗಳು ಕಂಡು ಬಂದಿದ್ದವು.
ಇದರ ಬೆನ್ನಲ್ಲೇ ಬ್ಯಾತಹಳ್ಳಿ ಬಳಿ ಅಳವಡಿಸಿದ್ದ ಟ್ಯ್ರಾಪಿಂಗ್ ಕ್ಯಾಮರಾದಲ್ಲಿ ಹುಲಿಯ ಛಾಯಾಚಿತ್ರ ಸೆರೆ ಆಗಿದೆ. ಹುಲಿ ಮಾತ್ರವಲ್ಲದೇ ಚಿರತೆಯೊಂದರ ಛಾಯಾಚಿತ್ರವೂ ಟ್ಯ್ರಾಪಿಂಗ್ ಕ್ಯಾಮರಾದಲ್ಲಿ ಸೆರೆ ಆಗಿದೆ. ಹೀಗಾಗಿ ಬ್ಯಾತಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಸಂಜೆಯ ಬಳಿಕ ಅನಾವಶ್ಯಕವಾಗಿ ಮನೆಯಿಂದ ಹೊರ ಬರದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಮೈಸೂರು ತಾಲೂಕಿನ ವಿವಿಧ ಗ್ರಾಮಗಳ ಜನರಲ್ಲಿ ಆತಂಕ ಮೂಡಿಸಿದ್ದ ಹುಲಿಯ ಚಲನವಲನ ಸಿಸಿಕ್ಯಾಮೆರಾದಲ್ಲಿ ಸೆರೆ
ಜನರು ವದಂತಿಗಳಿಗೆ ಕಿವಿಗೊಡಬಾರದು ಭಯಭೀತರಾಗಬಾರದು. ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಮುಗಿಯುವವರೆಗೆ ಜನರು ಸಹಕಾರ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಯಿಂದ ಮನವಿ ಮಾಡಲಾಗಿದೆ.
ಕೊನೆಗೂ ಬಲೆಗೆ ಬಿದ್ದ ಹುಲಿ
ಮೈಸೂರು ಜಿಲ್ಲೆಯಲ್ಲಿ ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಎಸ್. ನಂಜನಗೂಡು ತಾಲೂಕಿನ ಬಂಡಿಪುರ ಕಾಡಂಚಿನ ಪ್ರದೇಶದಲ್ಲಿ ಜನರಿಗೆ ಭಯ ಹುಟ್ಟಿಸಿದ್ದ ಹುಲಿಯನ್ನು ಕೊನೆಗೂ ಅರಣ್ಯ ಇಲಾಖೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಹತ್ತು ವರ್ಷದ ಗಂಡು ಹುಲಿ ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಸೆರೆ ಹಿಡಿಯಲಾಗಿರುವ ಹುಲಿಯನ್ನ ಮೈಸೂರಿನ ಕೂರ್ಗಳ್ಳಿಯಲ್ಲಿರುವ ಪ್ರಾಣಿ ಪುನರ್ವಸತಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ ಸೆರೆ ಸಿಕ್ಕಿರುವ ಹುಲಿ ಆರೋಗ್ಯವಾಗಿತ್ತು.
ಸೆರೆಯಾಗಿರುವ ಹುಲಿ ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ ಗ್ರಾಮದ ರೈತ ಮಹಿಳೆ ರತ್ನಮ್ಮರನ್ನು ಬಲಿ ಪಡೆದುಕೊಂಡಿತ್ತು. ರತ್ನಮ್ಮ ಕಾಡಂಚಿನಲ್ಲಿ ಜಾನುವಾರು ಮೇಯಿಸುತ್ತಿದ್ದ ವೇಳೆ ಮೇಲೆಗರಿದ ಹುಲಿ ಆಕೆಯನ್ನು ಕೊಂದು ಕಾಡಿಗೆ ಮೃತದೇಹವನ್ನು ಎಳೆದೋಯ್ದಿತ್ತು. ಇದಕ್ಕೂ ಮುನ್ನ ಒಂದು ತಿಂಗಳ ಹಿಂದೆ ಇದೇ ವ್ಯಾಪ್ತಿಯ ಮಹದೇವ ನಗರದ ಹೊರವಲಯದಲ್ಲಿ ದನಗಾಯಿ ವೀರಭದ್ರ ಬೋವಿ ಮೇಲೆ ದಾಳಿ ಮಾಡಿತ್ತು. ಘಟನೆಯಲ್ಲಿ ವೀರಭದ್ರ ಬೋವಿ ಗಾಯಗೊಂಡಿದ್ದರು. ಹುಲಿ ದಾಳಿ ಹೆಚ್ಚಾದಂತೆ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.