Mysuru Dasara: ಮೈಸೂರು ದಸರಾ ಜಂಬೂ ಸವಾರಿಗೆ 9 ಆನೆಗಳ ಆಯ್ಕೆ ಅಂತಿಮ: ಇಲ್ಲಿದೆ ಪಟ್ಟಿ

ಮೈಸೂರು ದಸರಾ ಆನೆಗಳ ಪಟ್ಟಿ: ವಿಶ್ವವಿಖ್ಯಾತ ಮೈಸೂರು ದಸರೆಗೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಕಾಡಿನಿಂದ ನಾಡಿಗೆ ಬರುವ 9 ಆನೆಗಳ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಯಾವ್ಯಾವ ಆನೆಗಳು ಈ ಬಾರಿ ದಸರಾಗೆ ಆಯ್ಕೆಯಾಗಿವೆ ಎಂಬ ವಿವರವಾದ ಮಾಹಿತಿ ಇಲ್ಲಿದೆ.

Mysuru Dasara: ಮೈಸೂರು ದಸರಾ ಜಂಬೂ ಸವಾರಿಗೆ 9 ಆನೆಗಳ ಆಯ್ಕೆ ಅಂತಿಮ: ಇಲ್ಲಿದೆ ಪಟ್ಟಿ
ದಸರಾ ಜಂಬೂ ಸವಾರಿಗೆ 9 ಆನೆಗಳ ಆಯ್ಕೆ ಅಂತಿಮ
Edited By:

Updated on: Jul 25, 2025 | 7:10 AM

ಮೈಸೂರು, ಜುಲೈ 25: ನಾಡ ಹಬ್ಬ, ಕರುನಾಡಿನ ಗತವೈಭವವನ್ನು ಸಾರುವ ಹಬ್ಬವಾದ ವಿಶ್ವ ವಿಖ್ಯಾತ ಮೈಸೂರು ದಸರಾಗೆ (Mysuru Dasara) ಭರದ ಸಿದ್ಧತೆಗಳು ಆರಂಭವಾಗಿವೆ. ದಸರೆಯ ಪ್ರಮುಖ ಆಕರ್ಷಣೆ ಎಂದರೆ, ಅದು ಗಜ ಪಡೆ ಹಾಗೂ ಜಂಬೂ ಸವಾರಿ. ದಸರಾ (Dasara) ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಗೆ ಮೊದಲ ಹಂತದ ಗಜಪಡೆಯ ಆಯ್ಕೆ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಒಟ್ಟು 14 ಆನೆಗಳ ಪೈಕಿ ಮೊದಲ ಹಂತದಲ್ಲಿ 9 ಆನೆಗಳನ್ನು ಆಯ್ಕೆ ಮಾಡಲಾಗಿದೆ.

ಚಿನ್ನದ ಅಂಬಾರಿ ಹೊರುವುದು ಯಾರು?

ಎಲ್ಲರ ನಿರೀಕ್ಷೆಯಂತೆ ಈ ಬಾರಿಯೂ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗಿ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಆಗಸ್ಟ್ 4 ರಂದು ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಲಿವೆ.

ದಸರಾ ಆನೆಗಳ ಪಟ್ಟಿ

  1. ಕ್ಯಾಪ್ಟನ್ ಅಭಿಮನ್ಯು, 59 ವರ್ಷ, ನಾಗರಹೊಳೆಯ ಮತ್ತಿಗೋಡು ಶಿಬಿರ, ದಸರಾ ಅನುಭವ: 20 ವರ್ಷ
  2. ಭೀಮ, 25 ವರ್ಷ, ಮತ್ತಿಗೋಡು ಶಿಬಿರ, ದಸರಾ ಅನುಭವ: 4 ವರ್ಷ
  3. ಪ್ರಶಾಂತ, 53 ವರ್ಷ, ದುಬಾರೆ ಶಿಬಿರ, ದಸರಾ ಅನುಭವ: 15 ವರ್ಷ
  4. ಮಹೇಂದ್ರ, 42 ವರ್ಷ, ಮತ್ತಿಗೋಡು ಶಿಬಿರ, ದಸರಾ ಅನುಭವ: 4 ವರ್ಷ
  5. ಧನಂಜಯ, 45 ವರ್ಷ, ದುಬಾರೆ ಶಿಬಿರ, ದಸರಾ ಅನುಭವ: 7 ವರ್ಷ
  6. ಕಂಜನ್, 26 ವರ್ಷ, ದುಬಾರೆ ಶಿಬಿರ, ದಸರಾ ಅನುಭವ: 2 ವರ್ಷ
  7. ಏಕಲವ್ಯ, 40 ವರ್ಷ, ಮತ್ತಿಗೋಡು, ದಸರಾ ಅನುಭವ: 2 ವರ್ಷ
  8. ಕಾವೇರಿ, 45 ವರ್ಷ, ದುಬಾರೆ ಶಿಬಿರ, ದಸರಾ ಅನುಭವ: 13 ವರ್ಷ
  9. ಲಕ್ಷ್ಮಿ, 54 ವರ್ಷ, ಬಳ್ಳೆ ಆನೆ ಶಿಬಿರ , ದಸರಾ ಅನುಭವ: 2 ವರ್ಷ

ನಾಗರಹೊಳೆಯ ಮತ್ತಿಗೋಡು ಶಿಬಿರದಲ್ಲಿರುವ 59 ವರ್ಷದ ಅಭಿಮನ್ಯು 300ಕ್ಕೂ ಹೆಚ್ಚು ಆನೆ ಸೆರೆ ಕಾರ್ಯಾಚರಣೆ ಹಾಗೂ 80ಕ್ಕೂ ಹೆಚ್ಚು ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಪ್ರಮುಖ ಕುಮ್ಕಿ ಆನೆ ಎಂದೇ ಖ್ಯಾತನಾಗಿದ್ದಾನೆ. ಇವನ ಜೊತೆಗೆ ಮತ್ತಿಗೋಡು ಶಿಬಿರದ ಭೀಮ, ದುಬಾರೆ ಶಿಬಿರದ ಪ್ರಶಾಂತ, ಮತ್ತಿಗೋಡು ಶಿಬಿರದ ಮಹೇಂದ್ರ, ದುಬಾರೆ ಶಿಬಿರದ ಧನಂಜಯ, ಕಂಜನ್, ಮತ್ತಿಗೋಡು ಶಿಬಿರದ ಏಕಲವ್ಯ, ದುಬಾರೆ ಶಿಬಿರದ ಕಾವೇರಿ, ಬಳ್ಳೆ ಶಿಬಿರದ ಲಕ್ಷ್ಮೀ ಆನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ಆಗಮಿಸಲಿವೆ. 2ನೇ ಹಂತದಲ್ಲಿ 5 ಆನೆಗಳು ಆಗಮಿಸಲಿವೆ.

ಇದನ್ನೂ ಓದಿ: ಉತ್ತಮ ಮಳೆ, ರೈತನ ಮುಖದಲ್ಲಿ ಮಂದಹಾಸ; ಈ ಬಾರಿ ವಿಜೃಂಭಣೆಯಿಂದ ದಸರಾ ಮಹೋತ್ಸವ: ಸಿದ್ದರಾಮಯ್ಯ

ಆಗಸ್ಟ್ 4 ರಂದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ವೀರನ ಹೊಸಳ್ಳಿ ನಾಗರಹೊಳೆ ಹೆಬ್ಬಾಗಿಲಿನಿಂದ ಗಜ ಪಯಣ ಆರಂಭವಾಗಲಿದೆ. ಅಂದು ಈ ಒಂಬತ್ತು ಆನೆಗಳು, ಕಾಡಿನಿಂದ ನಾಡಿಗೆ ಪಯಣ ಬೆಳೆಸಲಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us