ಮೈಸೂರಿನ ಹೋಟೆಲ್ನಲ್ಲಿ ಸರ್ಕಾರಿ ಅಧಿಕಾರಿ ಶವ ಪತ್ತೆ: RFO ಸಾವಿನ ಸುತ್ತ ಅನುಮಾನದ ಹುತ್ತ
ಮೈಸೂರು ಕೇಂದ್ರ ಬಸ್ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್ನಲ್ಲಿ ಟಿ. ನರಸೀಪುರ ಆರ್ಎಫ್ಒ ಶವವಾಗಿ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಇತ್ತೀಚೆಗಷ್ಟೇ ವರ್ಗಾವಣೆಯಾಗಿದ್ದರು. ಸದ್ಯ ಅಧಿಕಾರಿಯ ಸಾವು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಲಷ್ಕರ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮೈಸೂರು, ಜನವರಿ 19: ನಗದರ ಖಾಸಗಿ ಹೋಟೆಲ್ವೊಂದರಲ್ಲಿ ಆರ್ಎಫ್ಒ (RFO) ಶವವಾಗಿ ಪತ್ತೆ ಆಗಿರುವಂತಹ ಘಟನೆ ಮೈಸೂರು (Mysuru) ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಹೋಟೆಲ್ನಲ್ಲಿ ನಡೆದಿದೆ. ಟಿ ನರಸೀಪುರ ಆರ್ಎಫ್ಒ ಕಾಂತರಾಜ್ ಚೌಹಾಣ್ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದು, ಘಟನಾ ಸ್ಥಳಕ್ಕೆ ಲಷ್ಕರ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ನಡೆದದ್ದೇನು?
RFO ಕಾಂತರಾಜ್ ಚೌಹಾಣ್ ಅವರು 15 ದಿನದ ಹಿಂದೆಯಷ್ಟೇ ನರಸೀಪುರಕ್ಕೆ ವರ್ಗವಾಗಿದ್ದರು. ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದ ಸ್ನೇಹಿತ ಮಲ್ಲನಗೌಡ ಪಾಟೀಲ್ ಜೊತೆಗೆ ನಿನ್ನೆ ಮಧ್ಯಾಹ್ನ ಮಲ್ಲನಗೌಡ ರೂಮ್ ಬುಕ್ ಮಾಡಿದ್ದರು. ಆದರೆ ಏಕಾಏಕಿ ಮೃತಪಟ್ಟಿದ್ದಾರೆ. ಯುವರಾಜ್ ಗೆಲಾಕ್ಸಿ ಹೋಟೆಲ್ ಸಮೀಪದ ಕುಮಾರನ್ ಜ್ಯುವೆಲರ್ಸ್ ಹಿಂಭಾಗದ ಕಾರಿಡಾರ್ನಲ್ಲಿ ಕಾಂತರಾಜ್ ಚೌಹಾಣ್ ಶವ ಬಿದ್ದಿತ್ತು. ಇನ್ನು ಇತ್ತ ಕಾಂತರಾಜ್ ಸ್ನೇಹಿತ ಮಲ್ಲನಗೌಡ ಪಾಟೀಲ್ ನಾಪತ್ತೆಯಾಗಿದ್ದಾರೆ.
ಪಾರ್ಕಿಂಗ್ನಲ್ಲಿ ಮಲಗಿದ್ದ ಯುವಕರಿಬ್ಬರ ಮೇಲೆ ಹರಿದ ಕಾರು
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಯಲ್ಲಿ ಪಾರ್ಕಿಂಗ್ನಲ್ಲಿ ಮಲಗಿದ್ದ ಯುವಕರಿಬ್ಬರ ಮೇಲೆ ಕಾರು ಹರಿದು ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿರುವಂತಹ ಘಟನೆ ನಡೆದಿದೆ. ಪ್ರದೀಪ್ ಮೃತ ವ್ಯಕ್ತಿ, ರವಿ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಕಾಲು ಜಾರಿ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ನೀರುಪಾಲು
ರವಿ ಸುತ್ತೂರು ಜಾತ್ರೆಯಲ್ಲಿ ಪಾರ್ಕಿಂಗ್ನಲ್ಲಿ ಕೆಲಸ ಮಾಡುತ್ತಿದ್ದ. ಪ್ರದೀಪ್ ನಾಟಕ ನೋಡಲು ಸುತ್ತೂರಿಗೆ ಆಗಮಿಸಿದ್ದ. ತಡವಾದ ಹಿನ್ನೆಲೆ ರಾತ್ರಿ ಇಬ್ಬರು ಪಾರ್ಕಿಂಗ್ನಲ್ಲೇ ಮಲಗಿದ್ದಾರೆ. ಚಾಲಕ ಮಧ್ಯರಾತ್ರಿ ಕಾರು ತೆಗೆಯುವಾಗ ಗಮನಿಸದ ದುರಂತ ಸಂಭವಿಸಿದೆ. ಬದನವಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳ್ಳದಲ್ಲಿ ಈಜಲು ಹೋಗಿ ಮುಳುಗಿ ಬಾಲಕ ಸಾವು
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡ ಗ್ರಾಮದಲ್ಲಿ ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸಿದ್ಧಾರ್ಥ್(10) ಮೃತ ಬಾಲಕ. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.