
ಮೈಸೂರು, ಆಗಸ್ಟ್ 06: ಧರ್ಮದ ಆಧಾರದ ಮೇಲೆ ದೇಶ ಕಟ್ಟಲು ಸಾಧ್ಯವಿಲ್ಲ. ಹಿಂದೂ ರಾಷ್ಟ್ರವಾದರೆ ಜಾತಿ ವ್ಯವಸ್ಥೆ ಮತ್ತೆ ಬರುತ್ತದೆ. ಹೀಗಾಗಿ ಹಿಂದೂ ರಾಷ್ಟ್ರಕ್ಕೆ ನಮ್ಮ ವಿರೋಧವಿದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಸಂವಿಧಾನನಾತ್ಮಕವಾಗಿ ನನ್ನ ಮಾತು ಹೇಳಿದ್ದೇನೆ. ಹಿಂದೂ ರಾಷ್ಟ್ರ ಆಗಬಾರದು ಎಂಬ ತತ್ನ ನಿಲುವಿಗೆ ಬದ್ಧನಾಗಿದ್ದೇನೆ ಎಂದು ಸಚಿವರು ಹೇಳಿರೋದೀಗ ವಿಪಕ್ಷ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ವಿಧಾನ ಸಭೆ ವಿಪಕ್ಷ ನಾಯಕ ಆರ್. ಅಶೋಕ್, ಅವರಿಗೆ ಹಿಂದೂ ಧರ್ಮ ಅಂದ್ರೆ ಆಗೋದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವವರಿಗೆ ಕಾಂಗ್ರೆಸಿಗರು ಬೆಂಬಲ ಕೊಡ್ತಾರೆ. ವಿಧಾನಸೌದದಲ್ಲಿ ಪಾಕಿಸ್ತಾನ ಬಗ್ಗೆ ಮಾತನಾಡುವವರಿಗೆ ರಾಜ್ಯ ಸಭೆ ಸ್ಥಾನ ಕೊಟ್ಟು ಗೌರವಿಸ್ತಾರೆ. ಇಂಥವರಿಂದ ಹಿಂದುತ್ವ ವಿಚಾರ ಕಲಿಯುವ ಅವಶ್ಯಕತೆ ಇಲ್ಲ. ಅವರು ಪಾಕಿಸ್ತಾನ, ಬಾಂಗ್ಲಾದೇಶದ ಬಗ್ಗೆ ಮಾತನಾಡಲಿ. ಅವರಿಗೆ ಹಿಂದುತ್ವದ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಭಾರತದಲ್ಲಿ ಇರುವವರೆಲ್ಲ ಹಿಂದೂಗಳು ಎಂದು ಸುಪ್ರೀಂಕೋರ್ಟ್ ಈಗಾಗಲೇ ಹೇಳಿದೆ. ಹೀಗಾಗಿ ಇವರು ಹಿಂದುತ್ವದ ಬಗ್ಗೆ ವ್ಯಾಖ್ಯಾನ ಮಾಡುವ ಅವಶ್ಯಕತೆ ಇಲ್ಲ. ಮೊದಲು ಅಂಬೇಡ್ಕರ್ ಅವರ ವಾದದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲಿ ಎಂದು ಅಶೋಕ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಹೈಕಮಾಂಡ್ಗೆ ಕೊಟ್ಟ ಪಟ್ಟಿಯಲ್ಲಿ ಹೆಚ್ಸಿ ಮಹದೇವಪ್ಪ ಹೆಸರಿದ್ದರೂ ಸಚಿವ ಸ್ಥಾನ ತಪ್ಪಿದೆ: ಯತೀಂದ್ರ
ಮತ್ತೊಂದೆಡೆ ತಮ್ಮದೇ ಸಚಿವ ಸಂಪುಟ ಸಹೋದ್ಯೋಗಿ ಯತೀಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿ. ನಾಗೇಂದ್ರ, ಅವರು ಯಾವ ಅರ್ಥದಲ್ಲಿ ಹೀಗೆ ಹೇಳಿದ್ದಾರೋ ಗೊತ್ತಿಲ್ಲ. ನಾವೆಲ್ಲ ಹಿಂದೂಗಳು, ಬಿಜೆಪಿಯವ್ರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮ ಸಿಎಂಗಿಂತಲೂ ಹಿಂದುತ್ವವಾದಿ ಯಾರಾದ್ರೂ ಇದ್ದಾರಾ? ಅವರು ಮಾಡಿಸುವಷ್ಟು ಪೂಜೆ, ಪುನಸ್ಕಾರ, ಹೋಮ ಯಾರೂ ಮಾಡಿಸಲ್ಲ. ಹಿಂದೂ ಅನ್ನೋದು ನಮ್ಮ ಸಂಪ್ರದಾಯ. ಜಾತಿ ವ್ಯವಸ್ಥೆ ಹೋಗಬೇಕು ಅನ್ನೋದು ನಿಜ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:23 pm, Thu, 6 August 26