‘ಇದ್ರಿಷ್ ಪಾಷಾ ಸಾವಿಗೆ ಪ್ರತೀಕಾರವಾಗಿ ನಿನ್ನ ಮುಗಿಸುತ್ತೇವೆ’: ಪುನೀತ್ ಕೆರೆಹಳ್ಳಿಗೆ ಕೊಲೆ ಬೆದರಿಕೆ
ಇದ್ರಿಷ್ ಪಾಷಾ ಸಾವಿನ ಪ್ರತೀಕಾರವಾಗಿ ನಿನ್ನ ಮುಗಿಸುತ್ತೇವೆ ಎಂದು ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ವಾಟ್ಸಾಪ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಲಾಗಿದೆ. ಮೈಸೂರಿನ ಉದಯಗಿರಿ ನಿವಾಸಿ ಅಕ್ರಮ್ ಖಾನ್ ಎಂಬಾತನ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ.

ಮೈಸೂರು, ಮೇ 16: ‘ಇದ್ರಿಷ್ ಪಾಷಾ (Idrish Pasha) ಸಾವಿಗೆ ಪ್ರತೀಕಾರವಾಗಿ ನಿನ್ನ ಮುಗಿಸುತ್ತೇವೆ’ ಎಂದು ವಾಟ್ಸಾಪ್ ಕರೆ ಮಾಡಿ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ (Puneeth Kerehalli) ಕೊಲೆ ಬೆದರಿಕೆ ಹಾಕಿರುವಂತಹ ಘಟನೆ ನಡೆದಿದೆ. next you ಎಂದು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಜೀವಬೆದರಿಕೆ ಹಾಕಲಾಗಿದೆ. ಈ ಕುರಿತಾಗಿ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಉದಯಗಿರಿ ನಿವಾಸಿ ಅಕ್ರಮ್ ಖಾನ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಗೋವು ಸಾಗಾಣಿಕೆ ವೇಳೆ ಇದ್ರಿಷ್ ಪಾಷಾ ಅನುಮಾನಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ ಸೇರಿ ಐವರು ಆರೋಪಿಗಳನ್ನ ಬಂಧಿಸಲಾಗಿತ್ತು. ಬಳಿಕ 2023 ಮೇ ತಿಂಗಳಿನಲ್ಲಿ ಹೈಕೋರ್ಟ್ ಎಲ್ಲರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.
ಘಟನೆ ಹಿನ್ನಲೆ
ಕನಕಪುರ ತಾಲೂಕಿನ ಸಾತನೂರು ಬಳಿ ಮಾ.31ರ ರಾತ್ರಿ ಮಂಡ್ಯದಿಂದ ಗೋವುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನವೊಂದನ್ನು ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರು ತಡೆದಿದ್ದರು. ಈ ಬಗ್ಗೆ ಸೊಶೀಯಲ್ ಮೀಡಿಯಾದಲ್ಲಿ ವಿಡಿಯೋ ಕೂಡ ಹಂಚಿಕೊಂಡಿದ್ದರು. ಈ ವೇಳೆ ಕ್ಯಾಂಟರ್ನಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ಪರಾರಿಯಾಗಿದ್ದರು.
ಇದನ್ನೂ ಓದಿ: ಆರೋಪಿ ಪುನೀತ್ ಕೆರೆಹಳ್ಳಿ ತಂಡವನ್ನು ರಾಜಸ್ಥಾನದಿಂದ ರಾಮನಗರಕ್ಕೆ ಕರೆತರಲು ಪೊಲೀಸ್ ಸಿದ್ಧತೆ
ಆದರೆ ವಾಹನದಲ್ಲಿದ್ದ ಇದ್ರೀಷ್ ಪಾಷ ಮೃತ ದೇಹ ಘಟನೆ ನಡೆದ 200 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಪುನೀತ್ ಕೆರೆಹಳ್ಳಿ ನೈತಿಕ ಪೊಲೀಸ್ ಗಿರಿ ಮಾಡಿದ್ದು, ಇದ್ರಿಷ್ ಪಾಷಾ ಎಂಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ರಾಮನಗರ: ಕಸಾಯಿಖಾನೆಗೆ ಜಾನುವಾರು ಸಾಗಾಟ ವಾಹನದ ಮೇಲೆ ದಾಳಿ, ವಾಹನದಲ್ಲಿದ್ದ ವ್ಯಕ್ತಿ ನಿಗೂಢ ಸಾವು
ಪ್ರಕರಣ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ 3 ಎಫ್ಐಆರ್ ದಾಖಲಾಗಿದ್ದವು. ಮೃತ ಇದ್ರೀಷ್ ಪಾಷ ಸಹೋದರನ ದೂರಿನಂತೆ ಪೊಲೀಸರು ಐಪಿಸಿ ಸೆಕ್ಷನ್ 341, 504, 506, 324, 302, 34ರ ಅಡಿ ಪ್ರಕರಣ ದಾಖಲಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:48 am, Fri, 16 May 25







