
ಮಂಡ್ಯ, (ಆಗಸ್ಟ್ 27): ಮೊನ್ನೇ ಅಷ್ಟೇ ಮೃತಪಟ್ಟಿದ್ದ ಮಂಡ್ಯದ (Mandya) ನೂರ್ ಎನ್ನುವ ಬಿಕ್ಷುಕಿ (Beggar) ಮನೆಯಲ್ಲಿ ಬರೋಬ್ಬರಿ 8.40 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಮಂಡ್ಯದಲ್ಲಿ ಮತ್ತೋರ್ವ ಬಿಕ್ಷುಕಿ ನಿವಾಸದಲ್ಲೂ ಸಹ ಲಕ್ಷಾಂತರ ರೂ ಹಣ ಪತ್ತೆಯಾಗಿದೆ. ಹೌದು… ಶ್ರೀರಂಗಪಟ್ಟಣದ ನಿವಾಸಿ ಸಾವಿತ್ರಮ್ಮ ಹೊಟ್ಟೆಪಾಡಿಗಾಗಿ ಬಿಕ್ಷಾಟನೆ ಮಾಡುತ್ತಿದ್ದಳು. ಆದ್ರೆ, ಇದೀಗ ಆಕೆ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಹೀಗಾಗಿ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದ ತಂಡ ಸಾವಿತ್ರಮ್ಮನಿಗೆ ಸ್ನಾನ ಮಾಡಿಸಿ ಮನೆ ಸ್ವಚ್ಛ ಮಾಡುವಾಗ ಚೀಲದಲ್ಲಿ ಚಿಲ್ಲರೆ ಹಾಗೂ ನೋಟುಗಳು ಪತ್ತೆಯಾಗಿವೆ.ಬಳಿಕ ಎಲ್ಲಾ ಎಣಿಕೆ ಮಾಡಿದಾಗ 3.5 ಲಕ್ಷ ರೂ. ಆಗಿದೆ.
ಕೆಲವು ತಿಂಗಳ ಹಿಂದಷ್ಟೇ ಸಾವಿತ್ರಮ್ಮ ತಾಯಿ ಮೃತಪಟ್ಟಿದ್ದರು. ಇನ್ನು ಸಾವಿತ್ರಮ್ಮ ಸಹ ತಾಯಿ ಜತೆ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದಳು. ಆದ್ರೆ, ಇದೀಗ ಸಾವಿತ್ರಮ್ಮ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದನ್ನ ಅರಿತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ನೇತೃತ್ವದ ತಂಡ ಸಾವಿತ್ರಮ್ಮನಿಗೆ ಸ್ನಾನ ಮಾಡಿಸಿ ಆರೈಕೆ ಮಾಡಿದೆ. ಅಲ್ಲದೇ ಸಾವಿತ್ರಮ್ಮನ ಮನೆಯನ್ನು ಸಹ ಸಚ್ಛಗೊಳಿಸಲಾಗಿದೆ. ಈ ಸ್ವಚ್ಛತೆ ಮಾಡುವಾಗ ಮನೆಯಲ್ಲಿದ್ದ ಚೀಲದಲ್ಲಿ ನಾಣ್ಯ, ಹತ್ತು, ಇಪ್ಪತ್ತು ರೂಪಾಯಿಯ ನೋಟುಗಳು ಪತ್ತೆಯಾಗಿದ್ದು, ಬಳಿಕ ಭಾನುಪ್ರಕಾಶ್ ಶರ್ಮಾ , ಎಲ್ಲಾವನ್ನು ಪ್ರತ್ಯೇಕಿಸಿ ಎಣಿಕೆ ಮಾಡಿದ್ದು, ಬರೋಬ್ಬರಿ 3.5 ಲಕ್ಷ ರೂ. ಸಂಗ್ರಹವಾಗಿದೆ.
ಮೊನ್ನೇ ಅಷ್ಟೇ ಸಾವನ್ನಪ್ಪಿದ್ದ ಬಿಕ್ಷುಕಿ ನೂರ್ ಮನೆಯಲ್ಲಿ ಹಣದ ಮೂಟೆ ಸಿಕಿತ್ತು. ಮಂಡ್ಯ (Mandya) ನಗರದ ಗುತ್ತಲು ಬಡಾವಣೆಯ ಮನೆಯಲ್ಲಿ ಬರೋಬ್ಬರಿ 8.40 ಲಕ್ಷ ರೂ. ಹಣ ಪತ್ತೆಯಾಗಿತ್ತು. ಮೃತ ನೂರ್ ಉನ್ನೀಸ್ ಅವರು ಸಹೋದರಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇಬ್ಬರು ಸಹೋದರಿಯರು ಮದುವೆ ಆಗಿರಲಿಲ್ಲ. ಎರಡು ವರ್ಷದ ಹಿಂದೆ ಅಕ್ಕ ನಿಧನರಾಗಿದ್ದರು. ಅದಾದ ಬಳಿಕ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದರು.
ಇನ್ನು ವೃದ್ಧೆ ಜೀವಂತವಾಗಿದ್ದಾಗ ಯಾರೊಬ್ಬರೂ ಆಕೆಯನ್ನು ನೋಡಿಕೊಳ್ಳಲಿಲ್ಲ, ಊಟಕ್ಕೂ ಗತಿಯಿಲ್ಲದೆ ಭಿಕ್ಷೆ ಬೇಡಿ ಬದುಕಿದ್ದರು. ಆದರೆ ಸಾವಿನ ನಂತರ ಆಕೆ ಕೂಡಿಟ್ಟಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಸಂಬಂಧಿಕರು ಹಂಚಿಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ಅಸಮಾಧಾನ ವ್ಯಕ್ತವಾಗಿದೆ.
Published On - 7:29 pm, Thu, 27 August 26