ಮಂಡ್ಯ: ಇಡಿ ಊರಿಗೂರೇ ಶಾಕ್! ಮೃತ ಭಿಕ್ಷುಕಿ ಮನೆಯಲ್ಲಿ ಮೂಟೆಗಟ್ಟಲೆ ನಾಣ್ಯ, ನೋಟುಗಳು ಪತ್ತೆ
Mandya News: ಬದುಕಿದ್ದಾಗ ಯಾರೊಬ್ಬರೂ ಆಸರೆಯಾಗದೆ, ಬೀದಿ ಬೀದಿಯಲ್ಲಿ ಭಿಕ್ಷಾಟನೆ ಮಾಡಿ ಜೀವನ ನಡೆಸಿದ್ದ ಮಂಡ್ಯದ ವೃದ್ಧೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಆದರೆ ಅವರ ಮನೆಯಲ್ಲಿ ಮೂಟೆಗಟ್ಟಲೆ ನೋಟು ಹಾಗೂ ನಾಣ್ಯಗಳ ರೂಪದಲ್ಲಿದ್ದ ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಮೊತ್ತದ ಹಣ ಪತ್ತೆಯಾಗಿದ್ದು ಎಲ್ಲರನ್ನೂ ದಂಗುಬಡಿಸಿದೆ.
ಮಂಡ್ಯ, ಆಗಸ್ಟ್ 23: ಭಿಕ್ಷಾಟನೆ (Begging) ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆ ವಯೋಸಹಜ ಕಾಯಿಲೆಯಿಂದ ಮಂಡ್ಯ (mandya)ದ ಗುತ್ತಲು ಬಡಾವಣೆಯಲ್ಲಿ ಮೃತಪಟ್ಟಿದ್ದಾರೆ. ನೂರ್ ಮೃತ ವೃದ್ಧೆ. ಆದರೆ ಆ ವೃದ್ಧೆ ಮನೆಯಲ್ಲಿ ಸಿಕ್ಕ ಹಣ ನೋಡಿ ಊರಿನ ಜನರೇ ದಂಗಾಗಿದ್ದಾರೆ. ನೂರ್ ಮನೆಯಲ್ಲಿ ಮೂಟೆಗಳಲ್ಲಿ ನೋಟು, ಚಿಲ್ಲರೆ ಕಾಸು ಸೇರಿದಂತೆ ಲಕ್ಷಾಂತರ ರೂ ಪತ್ತೆ ಆಗಿದೆ. ಬದುಕಿದ್ದಾಗ ಯಾರೊಬ್ಬರೂ ಆಸರೆಯಾಗದ ಸಂಬಂಧಿಗಳು ಇದೀಗ ವೃದ್ಧೆಯ ಹಣ ಹಂಚಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಡೆದಿದ್ದೇನು?
ಮಂಡ್ಯ ನಗರದ ಗುತ್ತಲು ಬಡಾವಣೆಯ ನಿವಾಸಿಯಾಗಿದ್ದ ವೃದ್ಧೆ ನೂರ್, ಕುಟುಂಬದವರ ಆಸರೆಯಿಲ್ಲದೆ, ಮನೆಯವರಿಂದ ತಿರಸ್ಕೃತಗೊಂಡು ಬೀದಿಬೀದಿಗಳಲ್ಲಿ ಭಿಕ್ಷಾಟನೆ ಮಾಡಿಕೊಂಡುವ ಜೀವನ ಸಾಗಿಸುತ್ತಿದ್ದರು. ಆದರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನೂರ್, ನಿನ್ನೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಕೈ ಶಾಸಕನ ಎಡವಟ್ಟು: ಆಸ್ಪತ್ರೆಯಲ್ಲಿಯೇ ಮಹಿಳಾ ಪಾತ್ರಧಾರಿಗಳ ಡ್ಯಾನ್ಸ್, ರೀಲ್ಸ್
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಸಂಬಂಧಿಕರು ಸೇರಿ ಆಕೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ. ಆದರೆ, ಅಂತ್ಯಕ್ರಿಯೆ ಮುಗಿಸಿ ಆಕೆಯ ಮನೆಗೆ ತೆರಳಿದ ಜನರಿಗೆ ಅಲ್ಲಿನ ದೃಶ್ಯ ಕಂಡು ದಿಗ್ಭ್ರಮೆಯಾಗಿದೆ.
ಬರೋಬ್ಬರಿ 8 ಲಕ್ಷ ರೂಪಾಯಿ ಪತ್ತೆ
ಮನೆಯ ಮೂಲೆ ಮೂಲೆಗಳಲ್ಲಿ ಪ್ಲಾಸ್ಟಿಕ್ ಕವರ್ಗಳಲ್ಲಿ ಸುತ್ತಿಟ್ಟಿದ್ದ ನೋಟಿನ ಕಂತೆಗಳು ಹಾಗೂ ಚೀಲಗಳಲ್ಲಿ ತುಂಬಿಟ್ಟಿದ್ದ ರಾಶಿಗಟ್ಟಲೆ ನಾಣ್ಯಗಳು ಪತ್ತೆಯಾಗಿವೆ. ಸ್ಥಳೀಯರು ಮತ್ತು ಸಂಬಂಧಿಕರು ಒಟ್ಟಾಗಿ ಕುಳಿತು ಬೆಳಿಗ್ಗೆಯಿಂದ ಸಂಜೆಯವರೆಗೆ ಎಣಿಕೆ ನಡೆಸಿದಾಗ ಆ ಒಟ್ಟು ಮೊತ್ತ ಬರೋಬ್ಬರಿ 8 ಲಕ್ಷ ರೂಪಾಯಿಗೂ ಹೆಚ್ಚು ಎನ್ನಲಾಗಿದೆ. ಜೀವಮಾನವಿಡೀ ಒಂದೊಂದು ರೂಪಾಯಿ ಕಾಸನ್ನು ಜೋಪಾನವಾಗಿ ಕೂಡಿಟ್ಟಿದ್ದ ಈ ಅಪಾರ ಮೊತ್ತವನ್ನು ನೋಡಿ ಇಡೀ ಬಡಾವಣೆಯ ಜನರೇ ದಂಗಾಗಿದ್ದಾರೆ.
ವೃದ್ಧೆಯ ಹಂಚಿಕೊಂಡ ಕುಟುಂಬಸ್ಥರು
ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ, ಸ್ಥಳೀಯ ಮುಖಂಡರು ಮಾತುಕತೆ ನಡೆಸಿ ಕೊನೆಗೆ ಆ ಸಂಪೂರ್ಣ ಹಣವನ್ನು ಮೃತ ವೃದ್ಧೆಯ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ಆದರೆ, ಬದುಕಿದ್ದಾಗ ಅನ್ನ, ನೀರು, ಪ್ರೀತಿ ಯಾವುದನ್ನೂ ನೀಡದೆ ಕಣ್ಣೀರಿನಲ್ಲೇ ಕೈತೊಳೆಯುವಂತೆ ಮಾಡಿದ್ದ ಕುಟುಂಬಸ್ಥರು, ಆಕೆಯ ಸಾವಿನ ಬಳಿಕ ಭಿಕ್ಷಾಟನೆಯ ಹಣವನ್ನು ಹಂಚಿಕೊಂಡ ಮಾನವೀಯತೆಯಿಲ್ಲದ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಹಾಗೂ ಬೇಸರ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:25 pm, Sun, 23 August 26




