ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ: ರಾಜ್ಯಪಾಲರಿಗೆ ದೂರು ನೀಡಲು ಆರ್​ಟಿಐ ಕಾರ್ಯಕರ್ತ ಸಿದ್ಧತೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾವರ್ತಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ರಾಜ್ಯಪಾಲರಿಗೆ ದೂರು ನೀಡಲು ಆರ್​ಟಿಐ ಕಾರ್ಯಕರ್ತ ಗಂಗರಾಜು ಸಿದ್ಧತೆ ನಡೆಸುತ್ತಿದ್ದಾರೆ. ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದ ಬಳಿಕ ಅವರು ರಾಜ್ಯಪಾಲರಿಗೆ ದೂರು ನೀಡುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ: ರಾಜ್ಯಪಾಲರಿಗೆ ದೂರು ನೀಡಲು ಆರ್​ಟಿಐ ಕಾರ್ಯಕರ್ತ ಸಿದ್ಧತೆ
ಸಿದ್ದರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಭೂ ಅಕ್ರಮ ಆರೋಪ: ರಾಜ್ಯಪಾಲರಿಗೆ ದೂರು ನೀಡಲು ಆರ್​ಟಿಐ ಕಾರ್ಯಕರ್ತ ಸಿದ್ಧತೆ
Follow us
| Updated By: ಗಣಪತಿ ಶರ್ಮ

Updated on: Oct 21, 2024 | 10:08 AM

ಮೈಸೂರು, ಅಕ್ಟೋಬರ್ 21: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮದ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ರಾಜ್ಯಪಾಲರಿಗೆ ದೂರು ನೀಡುವ ಮುನ್ನ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸುವುದಾಗಿ ಆರ್​ಟಿಐ ಕಾರ್ಯಕರ್ತ ಗಂಗರಾಜು ‘ಟಿವಿ9’ಗೆ ತಿಳಿಸಿದ್ದಾರೆ. ಭೂ ಅಕ್ರಮ ಆರೋಪ ಸಂಬಂಧ ಇಂದು ರಾಜ್ಯಪಾಲರಿಗೆ ದೂರು ನೀಡಲು ಅವರು ನಿರ್ಧರಿಸಿದ್ದರು. ಅದರಂತೆ, ಇಂದು ಕಾನೂನು ತಜ್ಞರ ಜೊತೆ ಚರ್ಚಿಸಿ ಅರ್ಜಿ ಸಿದ್ಧಪಡಿಸಿಕೊಳ್ಳಲಿದ್ದಾರೆ.

ಮುಡಾಗೆ ನೀಡಲಾಗಿದ್ದ ಜಾಗವನ್ನು ಮತ್ತೆ ತಮ್ಮ ಹೆಸರಿಗೆ ಕ್ರಯ ಮಾಡಿಸಿಕೊಂಡಿದ್ದ ಆರೋಪ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮೇಲಿದೆ.

ಏನಿದು ಭೂ ಅಕ್ರಮ ಪ್ರಕರಣ?

ಮೈಸೂರು ನಗರದ ಕೆಆರ್​​ಎಸ್ ರಸ್ತೆಯಲ್ಲಿರುವ‌ ಗಣೇಶ್ ದೀಕ್ಷಿತ್ ಎಂಬುವವವರಿಗೆ ಸೇರಿದ್ದ ಸರ್ವೆ ನಂ. 445ರ 20 ಗುಂಟೆ ಜಾಗವನ್ನು ಪಾರ್ವತಿ ಸಿದ್ದರಾಮಯ್ಯ ಖರೀದಿಸಿದ್ದರು. 29.9.2023 ರಂದು ಖರೀದಿ ಮಾಡಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದರು. ಗಣೇಶ್ ಅವರಿಗೆ 4 ಎಕರೆ 11 ಗುಂಟೆ ಜಾಗವಿತ್ತು. 20 ಗುಂಟೆ ಜಾಗಕ್ಕೆ 1.85 ಕೋಟಿ ರೂಪಾಯಿ ಕೊಟ್ಟು ಸಿಎಂ ಪತ್ನಿ ಖರೀದಿಸಿದ್ದರು. 21,771,99 ಚದರಡಿ ಜಾಗ ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಅದರಲ್ಲಿ 8998 ಚದರಡಿ ಜಾಗ ರಸ್ತೆ ಮತ್ತು ಪೈಪ್ ಲೈನ್‌ಗೆಂದು ಗಣೇಶ್ ಅವರು ಮುಡಾಗೆ ಬಿಟ್ಟು ಕೊಟ್ಟಿದ್ದರು. ಕೈಗಾರಿಕೆಯಿಂದ ವಸತಿ ಉದ್ದೇಶಕ್ಕೆ ಪರಿವರ್ತನೆಯಾಗುವ ವೇಳೆ ಬಿಟ್ಟುಕೊಟ್ಟಿದ್ದರು. ರಸ್ತೆ ಮತ್ತು ಪೈಪ್ ಲೈನ್‌ಗೆ ಬಿಟ್ಟುಕೊಟ್ಟಿದ್ದ ಜಾಗವನ್ನು ಸೇರಿಸಿಕೊಂಡು ತಮ್ಮ ಹೆಸರಿಗೆ ಪಾರ್ವತಿ ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಈ ಬಗ್ಗೆ ಗಂಗರಾಜು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ ಮಾಹಿತಿ ಪಡೆದುಕೊಂಡಿದ್ದರು. ಅರ್ಜಿ ಹಾಕುತ್ತಿದ್ದಂತೆ ಎಚ್ಚೆತ್ತ ಪಾರ್ವತಿ ಸಿದ್ದರಾಮಯ್ಯ, 31.8.2024 ರಂದು ಮತ್ತೆ ರಿಜಿಸ್ಟರ್ ತಿದ್ದುಪಡಿ ಮಾಡಿಸಿದ್ದರು. ಮುಡಾ ಜಾಗವನ್ನು ಬಿಟ್ಟು ಇನ್ನುಳಿದ 12,782 ಚದರಡಿ ಜಾಗಕ್ಕೆ ಮಾತ್ರ ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ದೂರು ನೀಡಲು ಗಂಗರಾಜು ನಿರ್ಧರಿಸಿದ್ದಾರೆ.

ಇಡಿ ಕಾರ್ಯಾಚರಣೆ ಮಾಹಿತಿ ನೀಡದಂತೆ ತಾಕೀತು

ಮುಡಾ ಹಗರಣ ಸಂಬಂಧ ಮೈಸೂರಿನಲ್ಲಿರುವ ಮುಡಾ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿರುವ ಜಾರಿ ನಿರ್ದೇಶನಾಲಯ, ಕಾರ್ಯಾಚರಣೆ ಮಾಹಿತಿ ನೀಡದಂತೆ ಮುಡಾ ಅಧಿಕಾರಿಗಳಿಗೆ ತಾಕೀತು ಮಾಡಿದೆ. ಈ ಬಗ್ಗೆ ಇಡಿ ಅಧಿಕಾರಿಗಳು ಆಯಕ್ತ ರಘುನಂದನ್, ಕಾರ್ಯದರ್ಶಿ ಪ್ರಸನ್ನ ಕುಮಾರ್ ಸೇರಿದಂತೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇಡಿ ದಾಳಿ ಸಂಬಂಧ ಮೊದಲ ದಿನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಇಡಿ ಅಧಿಕಾರಿಗಳು, ಯಾವುದೇ ಮಾಹಿತಿ ನೀಡದಂತೆ ಖಡಕ್ ಸೂಚನೆ ನೀಡಿದ್ದಾರೆ.

ಮುಡಾ ಕಚೇರಿ ಸಾರ್ವಜನಿಕರಿಗೆ ಮುಕ್ತ

ಇಡಿ ದಾಳಿಯ ಕಾರಣ ಶುಕ್ರವಾರ ಹಾಗೂ ಶನಿವಾರ ಮುಡಾ ಕಚೇರಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಮುಚ್ಚಿತ್ತು. ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿತ್ತು. ಇಂದಿನಿಂದ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

ಚುರುಕುಗೊಳ್ಳಲಿದೆ ಇಡಿ ತನಿಖೆ

ಮುಡಾದಲ್ಲಿ ಇಡಿ ಅಧಿಕಾರಿಗಳು ನಡೆಸಿರುವ ಶೋಧ ಕಾರ್ಯಾಚರಣೆ ಸ್ಯಾಂಪಲ್ ಮಾತ್ರ. ಮುಡಾದಲ್ಲಿ ಸಂಗ್ರಹಿಸಿರುವ ದಾಖಲೆಗಳ ಆಧಾರದ ಮೇಲೆ ಇಡಿಯಿಂದ ಮುಂದಿನ ತನಿಖೆ ಚುರುಕುಗೊಳ್ಳಲಿದೆ. 50:50 ಅನುಪಾತದಲ್ಲಿ ಬದಲಿ ಭೂಮಿ ಹಂಚಿಕೆ ತನಿಖೆ ಚುರುಕುಗೊಳ್ಳಲಿರುವುದರಿಂದ, 50:50 ಅನುಪಾತದಲ್ಲಿ ಬದಲಿ ಭೂಮಿ ನೀಡಿದ ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿಗೆ ಢವ ಢವ ಶುರುವಾಗಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮೇಲೆ ಮತ್ತೊಂದು ಭೂ ಅಕ್ರಮ ಆರೋಪ

ಅನುಮತಿ ನೀಡಿ ಶಿಫಾರಸ್ಸು ಮಾಡಿದ, ಅನುಮೋದನೆ ನೀಡಿದ ಜನಪ್ರತಿನಿಧಿಗಳನ್ನೂ ವಿಚಾರಣೆಗೆ ಕರೆಯಲು ಇಡಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಿಂದಿನ ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ವರದಿಯಲ್ಲಿ ಉಲ್ಲೇಖವಾಗಿರುವ ಹಿಂದಿನ ಆಯುಕ್ತರು, ಮಾಜಿ ಅಧ್ಯಕ್ಷರನ್ನು ವಿಚಾರಣೆಗೆ ಕರೆಸಲು ಸಿದ್ಧತೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ