KIAB: ಪ್ರಯಾಣಿಕರ ಮನಸೂರೆಗೊಂಡ ದಸರಾ ಸಂಭ್ರಮ; ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೀಕ್ಷಕರು ಫಿದಾ
ದಸರಾ ಹಿನ್ನೆಲೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಚರಿಸಲಾದ ಕಾರ್ಯಕ್ರಮಕ್ಕೆ ಪ್ರಯಾಣಿಕರು ಫಿದಾ ಆಗಿದ್ದಾರೆ. ಸೆ. 22ರಿಂದ ಸೆ. 29ರವರೆಗೆ ವಿಮಾನ ನಿಲ್ದಾಣದ ಎರಡೂ ಟರ್ಮಿನಲ್ಗಳಲ್ಲಿ ನಾಡಹಬ್ಬದ ಸಂಭ್ರಮ ಮನೆಮಾಡಿತ್ತು. ಕರ್ನಾಟಕದ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆ ಬಿಂಬಿಸುವ ಕಾರ್ಯಕ್ರಮಗಳು ಪ್ರೇಕ್ಷರ ಮನಸೂರೆಗೊಂಡಿವೆ.

ಬೆಂಗಳೂರು, ಅಕ್ಟೋಬರ್ 01: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ನಾಡಹಬ್ಬ ದಸರಾವನ್ನ ಒಂದು ವಾರಗಳ ಕಾಲ ಅದ್ಧೂರಿಯಾಗಿ ಆಚರಿಸಲಾಯಿತು. ಕರ್ನಾಟಕದ ಸಾಂಸ್ಕೃತಿಕ ಮತ್ತು ಜಾನಪದ ಪರಂಪರೆ ಕಾರ್ಯಕ್ರಮದಲ್ಲಿ ವಿಶಿಷ್ಟವಾಗಿ ಅನಾವರಣಗೊಂಡಿದ್ದು, ದೇಶ-ವಿದೇಶಗಳ ಪ್ರಯಾಣಿಕರು ಇವನ್ನು ಕಣ್ತುಂಬಿಕೊಂಡಿದ್ದಾರೆ. ಸೆ. 22ರಿಂದ ಸೆ. 29ರವರೆಗೆ ವಿಮಾನ ನಿಲ್ದಾಣದ ಎರಡೂ ಟರ್ಮಿನಲ್ ಗಳಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆಮಾಡಿತ್ತು. ದಸರಾ ಗೊಂಬೆಗಳನ್ನು ಕೂರಿಸುವ ಮೂಲಕ ಈ ಆಚರಣೆಯು ಅಪ್ಪಟ ಕರ್ನಾಟಕದ ಕಲೆ, ಸಂಸ್ಕೃತಿಗಳನ್ನು ಸಾರುವ ವೇದಿಕೆಯಂತೆ ಕಂಡುಬಂತು. ವಿಮಾನ ನಿಲ್ದಾಣದ ಆವರಣದಲ್ಲಿ ಆಯೋಜನೆಗೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಪ್ರಯಾಣಿಕರಿಗಷ್ಟೇ ಅಲ್ಲದೆ, ಬೆಂಗಳೂರು ನಗರದ ನಾಗರಿಕರಿಗೂ ಮುಕ್ತ ಮತ್ತು ಉಚಿತ ಪ್ರವೇಶ ಕಲ್ಪಿಸಲಾಗಿತ್ತು.
ವಿಮಾನ ನಿಲ್ದಾಣದಲ್ಲಿ ದಸರಾ ಆಚರಣೆಯು ಜಾನಪದ ಕಲಾ ಪ್ರದರ್ಶನಗಳ ಮೂಲಕ ಪ್ರಾರಂಭಗೊಂಡಿದ್ದು, ವೀರಾವೇಶಭರಿತ ಡೊಳ್ಳು ಕುಣಿತ ವೀಕ್ಷಕರ ಗಮನ ಸೆಳೆದಿದೆ. ಬೃಹತ್ ಗಾತ್ರದ ಗಾರುಡಿ ಗೊಂಬೆಗಳ ನೃತ್ಯವು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ (ಕೆಐಎಎಫ್) ಬೆಂಬಲಿತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಘಟಂ ವಾದ್ಯಗೋಷ್ಠಿ, ನೃತ್ಯಗಂಗಾ ಪ್ರದರ್ಶಕ ಕಲಾ ಕೇಂದ್ರದಿಂದ ದಸರಾ ವೈಭವ ಪ್ರದರ್ಶನಗಳು ದಸರಾ ಸಂಭ್ರಮವನ್ನು ಹೆಚ್ಚಿಸಿದ್ದವು. ನವರಾತ್ರಿಯ ಕಥಾ ವರ್ಣನೆ, ಸುಗಮ ಸಂಗೀತ, ಕಂಸವಧೆ ಯಕ್ಷಗಾನ ಪ್ರಸಂಗ, ವಾದ್ಯಗೋಷ್ಠಿ ಹಾಗೂ ಭರತನಾಟ್ಯ ನೃತ್ಯರೂಪಕದಂತಹ ವೈವಿಧ್ಯಮಯ ಕಾರ್ಯಕ್ರಮಗಳು ವೀಕ್ಷಕರ ಮನಸೂರೆಗೊಂಡಿವೆ. ಟರ್ಮಿನಲ್ 2ರ ಕಲಾ ಕಾರ್ಯಕ್ರಮದ ಭಾಗವಾಗಿದ್ದ ಗೊಂಬೆಯಾಟ ಕಂಡು ವೀಕ್ಷಕರು ಫಿದಾ ಆಗಿದ್ದಾರೆ. ಹೂವಿನಹಳ್ಳಿ ಗ್ರಾಮದ 9ನೇ ತಲೆಮಾರಿನ ಗೊಂಬೆಯಾಟದ ಕಲಾವಿದರಾದ ಗುಂಡುರಾಜು ಕಾರ್ಯಕ್ರಮ ಪ್ರಸ್ತುತಪಡಿಸಿದ್ದರು.ರಾಮಾಯಣ, ಮಹಾಭಾರತ ಮತ್ತು ಪುರಾಣಗಳ ಅಮರ ಕಥೆಗಳು ವೀಕ್ಷಕರನ್ನು ಮಂತ್ರಮುಗ್ದಗೊಳಿಸಿದವು.
ಇದನ್ನೂ ಓದಿ: ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್!
ವಿವಿಧ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ಗಳಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಭುತ ಸ್ವಾಗತ ನೀಡಿವೆ. ಆ ಮೂಲಕ, ವಿಮಾನ ನಿಲ್ದಾಣವು ಕೇವಲ ಪ್ರಯಾಣದ ಕೇಂದ್ರವಾಗದೆ, ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯನಿರ್ವಹಿಸಿದೆ. ಬಿಡುವಿಲ್ಲದ ಪ್ರಯಾಣದ ನಡುವೆ ಸಿಕ್ಕ ಈ ಹಬ್ಬದ ವಾತಾವರಣ, ಪ್ರಯಾಣಿಕರಿಗೆ ಹೊಸ ಉತ್ಸಾಹ ತುಂಬುವಲ್ಲಿ ಯಶಸ್ವಿಯಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




