ಅಡುಗೆ ಮಾಡುವುದಕ್ಕೆ ಲಾಯಕ್ಕು: ಬಿಜೆಪಿ ಅಭ್ಯರ್ಥಿ ವಿರುದ್ಧ ಮಾವನ ಹೇಳಿಕೆಗೆ ಸೊಸೆ ಕೊಟ್ಟ ಸ್ಪಷ್ಟನೆ ಹೀಗಿದೆ

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ‌ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಸೊಸೆ ಪ್ರಭಾ‌‌ ಮಲ್ಲಿಕಾರ್ಜುನ, ನಮ್ಮ‌ ಮಾವ ಶಾಮನೂರ ಶಿವಶಂಕರಪ್ಪ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆ ಹೇಳಿಕೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್​ಗೆ​ ಮಾತ್ರ ಸೀಮಿತ. ಆದರೆ ಇಡೀ ಮಹಿಳೆಯರ ವಿರುದ್ಧ ಹೇಳಿಕೆ ನೀಡಲಾಗಿದೆ ಎಂಬುದು ತಪ್ಪು ಎಂದಿದ್ದಾರೆ.

ಅಡುಗೆ ಮಾಡುವುದಕ್ಕೆ ಲಾಯಕ್ಕು: ಬಿಜೆಪಿ ಅಭ್ಯರ್ಥಿ ವಿರುದ್ಧ ಮಾವನ ಹೇಳಿಕೆಗೆ ಸೊಸೆ ಕೊಟ್ಟ ಸ್ಪಷ್ಟನೆ ಹೀಗಿದೆ
ಶಾಮನೂರು ಶಿವಶಂಕರಪ್ಪ, ಪ್ರಭಾ‌‌ ಮಲ್ಲಿಕಾರ್ಜುನ
Updated By: ಗಂಗಾಧರ​ ಬ. ಸಾಬೋಜಿ

Updated on: Apr 02, 2024 | 6:47 PM

ದಾವಣಗೆರೆ, ಮಾರ್ಚ್​ 02: ಮಾತು ಆಡಿದರೆ ಹೋಯ್ತು. ಮುತ್ತು ಒಡೆದರೆ ಹೋಯ್ತು ಅಂತಾರೆ. ನಾಯಕರ ಸ್ಥಾನದಲ್ಲಿದ್ದವರು ಒಂದೊಂದು ಹೇಳಿಕೆ ಕೊಡಬೇಕಾದರೂ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಸಾಕಷ್ಟು ಅವಾಂತರಗಳಿಗೆ ಕಾರಣವಾಗುತ್ತೆ. ಇತ್ತೀಚೆಗೆ ಕಾಂಗ್ರೆಸ್‌ನ ಹಿರಿಯ ನೇತಾರ, ಪ್ರಭಾವಿ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ನೀಡಿದ್ದ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಶಾಮನೂರು ಶಿವಶಂಕರಪ್ಪನವರ ಹೇಳಿಕೆಯನ್ನು ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ಖಂಡಿಸಿದ್ದರು. ಆದರೆ ಇದೀಗ ನಮ್ಮ‌ ಮಾವ ಶಾಮನೂರ ಶಿವಶಂಕರಪ್ಪ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸೊಸೆ ಪ್ರಭಾ‌‌ ಮಲ್ಲಿಕಾರ್ಜುನ ಸ್ಪಷ್ಟನೆ ನೀಡಿದ್ದಾರೆ.

ಇಡೀ ಮಹಿಳೆಯರ ವಿರುದ್ಧ ಹೇಳಿಕೆ ನೀಡಲಾಗಿದೆ ಎಂಬುದು ತಪ್ಪು: ಪ್ರಭಾ‌‌ ಮಲ್ಲಿಕಾರ್ಜುನ

ಜಿಲ್ಲೆಯ ಹರಿಹರದಲ್ಲಿ‌ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಕಮಲವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅರ್ಪಿಸುವೆ ಎಂದಿದ್ದರು. ಆ ಹೇಳಿಕೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್​ಗೆ​ ಮಾತ್ರ ಸೀಮಿತ. ಆದರೆ ಇಡೀ ಮಹಿಳೆಯರ ವಿರುದ್ಧ ಹೇಳಿಕೆ ನೀಡಲಾಗಿದೆ ಎಂಬುದು ತಪ್ಪು. ಈಗಾಗಲೇ ಈ ವಿಚಾರದ ಬಗ್ಗೆ ಪಕ್ಷದ ಮುಖಂಡರು‌ ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಬ್ಯಾಡ್ಮಿಂಟನ್ ತಾರೆ ಸೈನಾ ಕಿಡಿ 

ಮಹಿಳೆಯರ ಬಗ್ಗೆ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿದ್ದ ಹೇಳಿಕೆಗೆ ಬ್ಯಾಡ್ಮಿಂಟನ್‌ ತಾರೆ ಸೈನಾ ನೈಹ್ವಾಲ್‌ ಕಿಡಿಕಾರಿದ್ದರು. ಇದು ಕೀಳು ಅಭಿರುಚಿಯ ಹೇಳಿಕೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದರು. ಮಹಿಳೆಯನ್ನ ಅಡುಗೆ ಕೋಣೆಗೆ ಸೀಮಿತಿಗೊಳಿಸಬೇಕು ಎಂದು ಕಾಂಗ್ರೆಸ್‌ನ ಕರ್ನಾಟಕದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಬಯಸಿದ್ದಾರೆ. ಆದರೆ, ಪ್ರತಿ ಮಹಿಳೆಯೂ ಹೋರಾಟ ಮಾಡಬಲ್ಲಳು ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ಗಾಯತ್ರಿ ಸಿದ್ದೇಶ್ವರ ಅವರು ಕಣದಲ್ಲಿದ್ದಾರೆ.

ಇದನ್ನೂ ಓದಿ: ನನಗೆ ಅಡುಗೆ ಮಾಡೋದು ಗೊತ್ತು, ದೇಶ ಸೇವೆಯೂ ಗೊತ್ತು; ಶಾಮನೂರು ಶಿವಶಂಕರಪ್ಪಗೆ ಗಾಯತ್ರಿ ಸಿದ್ದೇಶ್ವರ್ ಟಾಂಗ್​

ಈ ಹಿಂದೆ ಬ್ಯಾಡ್ಮಿಂಟನ್‌ನಲ್ಲಿ ನಾನು ಭಾರತಕ್ಕಾಗಿ ಪದಕಗಳನ್ನು ಗೆದ್ದಾಗ ನಾನೇನಾಗಬೇಕು ಎಂದು ಕಾಂಗ್ರೆಸ್ ಬಯಸಿತ್ತೋ ಗೊತ್ತಿಲ್ಲ. ಆದರೆ, ಮಹಿಳೆಯರು ದೊಡ್ಡದನ್ನು ಸಾಧಿಸಲು ಹೊರಟಾಗ ಇಂಥ ಹೇಳಿಕೆಗಳನ್ನು ನೀಡುತ್ತಿರುವುದರ ಹಿಂದಿನ ಮರ್ಮ ಅರ್ಥವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಸಂಸದ ಜಿಎಂ ಸಿದ್ದೇಶ್ವರ್ ಪತ್ನಿ ಅಡುಗೆ ಮಾಡುವುದಕ್ಕೆ ಲಾಯಕ್ಕು: ಶಾಮನೂರು ಶಿವಶಂಕರಪ್ಪ

ಮತ್ತೊಂದೆಡೆ ಶಾಮನೂರುಗೆ ಟಾಂಗ್ ಕೊಟ್ಟಿರುವ ಗಾಯತ್ರಿ ಸಿದ್ದೇಶ್ವರ್, ಅಡುಗೆ ಮಾಡಿ ಕೈ ತುತ್ತು ಕೊಡೊ ಪ್ರೀತಿ ಅವರಿಗೆ ಗೊತ್ತಿಲ್ಲ. ನಾವೆಲ್ಲ ಮಹಿಳೆಯರು ಅಡುಗೆ ಮಾಡೋಕೆ ಮಾತ್ರ ಸೀಮಿತವಾ? ಮಹಿಳೆ ಅಡುಗೇನೂ ಮಾಡ್ತಾಳೆ, ಆಕಾಶದಲ್ಲೂ ಹಾರಾಡುತ್ತಾಳೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.