AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಯಚೂರು: ಜೋಳ ಮಾರಾಟದ ಹಣ ಪಡೆಯಲು ಅಧಿಕಾರಿಗಳಿಗೆ ನೀಡಬೇಕು ಲಂಚ, ರೈತರಿಂದ ಗಂಭೀರ ಆರೋಪ

ಸರ್ಕಾರದ ಜೋಳ ಖರೀದಿ ಕೇಂದ್ರಗಳಲ್ಲಿ ರೈತರು ಮಾರಾಟ ಮಾಡಿರೊ ಜೋಳದ ಹಣ ಪಡೆಯಲು ಅಧಿಕಾರಿಗಳಿಗೆ ಲಂಚ ನೀಡಬೇಕು ಎಂಬ ಆರೋಪ ಕೇಳಿ ಬಂದಿದೆ. ರಾಯಚೂರು ರೈತರು ಕೂಡಲೇ ಹಣ ರಿಲೀಸ್ ಮಾಡಬೇಕು. ಇಲ್ದಿದ್ರೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.

ರಾಯಚೂರು: ಜೋಳ ಮಾರಾಟದ ಹಣ ಪಡೆಯಲು ಅಧಿಕಾರಿಗಳಿಗೆ ನೀಡಬೇಕು ಲಂಚ, ರೈತರಿಂದ ಗಂಭೀರ ಆರೋಪ
ರಾಯಚೂರು: ಜೋಳ ಮಾರಾಟದ ಹಣ ಪಡೆಯಲು ಅಧಿಕಾರಿಗಳಿಗೆ ನೀಡಬೇಕು ಲಂಚ
ಭೀಮೇಶ್​​ ಪೂಜಾರ್
| Edited By: |

Updated on:Aug 06, 2024 | 1:06 PM

Share

ರಾಯಚೂರು, ಆಗಸ್ಟ್.06: ರಾಜ್ಯದಲ್ಲಿ ಪೋಸ್ಟಿಂಗ್ ಗಾಗಿ ಲಂಚ ಪಡೆಯುತ್ತಿರೊ ಸರಣಿ ಆರೋಪಗಳು ಕೇಳಿ ಬರ್ತಿವೆ. ಅದರಲ್ಲೂ ಮೊನ್ನೆಯಷ್ಟೇ ಯಾದಗಿರಿ ಪಿಎಸ್​ಐ ಪರಶುರಾಮ್ ಸಾವನ್ನಪ್ಪಿದ ಪ್ರಕರಣ ರಾಜ್ಯ ಸರ್ಕಾರದ ಬುಡವನ್ನೇ ಅಲ್ಲಾಡಿಸುತ್ತಿದೆ. ಈ ಮಧ್ಯೆ ದೇಶದ ಬೆನ್ನೆಲುಬು ಅಂತ ಕರೆಸಿಕೊಳ್ಳೊ ರೈತರು ಲಂಚ (Bribe) ಕೊಟ್ರೆ ಮಾತ್ರ ತಾವು ಮಾರಾಟ ಮಾಡಿದ ಬೆಳೆಯ ಹಣ ರಿಲೀಸ್ ಮಾಡಲಾಗುತ್ತೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.

ಇಂಥದೊಂದು ಗಂಭೀರ ಆರೋಪವನ್ನ ರಾಯಚೂರಿನ ರೈತರು ಮಾಡಿದ್ದಾರೆ. ಸರ್ಕಾರದ ಜೋಳ ಖರೀದಿ ಕೇಂದ್ರಗಳಲ್ಲಿ ರೈತರು ಮಾರಾಟ ಮಾಡಿರೊ ಜೋಳದ ಹಣ ಕೇಳಿದ್ರೆ, ರೈತರು ರಾಯಚೂರಿನಲ್ಲಿರೊ ರಾಜ್ಯ ಕೃಷಿ ಮಾರಾಟ ಮಂಡಳಿ ಅಧಿಕಾರಿಗಳಿಗೆ ಲಂಚ ಕೊಡಲೇಬೇಕು ಅನ್ನೋ ಗಂಭೀರ ಆರೋಪವನ್ನು ರೈತರು ಮಾಡಿದ್ದಾರೆ. ಹಣ ರಿಲೀಸ್ ಮಾಡಬೇಕಾದರೇ ಪ್ರತಿ ರೈತ ಕ್ವಿಂಟಲ್ ಜೋಳಕ್ಕೆ ಎರಡು ರೂಪಾಯಿ ಲಂಚ ಕೊಡಲೇಬೇಕು. ಇಲ್ದಿದ್ರೆ ಹಣ ಜಮೆ ಮಾಡಲ್ಲ. ನಾವೇ ಬೆಳೆದ ಬೆಳೆಯನ್ನ ಸರ್ಕಾರಕ್ಕೆ ಮಾರಾಟ ಮಾಡಿ ನಮ್ಮ ದುಡ್ಡು ಪಡೀಬೇಕಂದ್ರೆ ಅದಕ್ಕೂ ಲಂಚ ಕೊಡಬೇಕು. ಇದೆಂತ ಕರ್ಮ ಅಂತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌‌.

ಇದನ್ನೂ ಓದಿ: ಲಂಚ್ ವಿರಾಮಕ್ಕೆ ಮೊದಲು ರೌದ್ರಾವತಾರ ತಳೆದಿದ್ದ ಸಿದ್ದರಾಮಯ್ಯ ಊಟದ ನಂತರ ಸಂತನಂತೆ ಮಾತಾಡಿದರು!

ರಾಯಚೂರು ಜಿಲ್ಲೆಯ ವಿವಿಧ ಸರ್ಕಾರದ ಜೋಳ ಖರೀದಿ ಕೇಂದ್ರಗಳಲ್ಲಿ ಜಿಲ್ಲೆಯ 15,687 ರೈತರು 13,56,762 ಕ್ವಿಂಟಲ್ ಜೋಳ ಮಾರಾಟ ಮಾಡಿದ್ರು‌. ಈ ಮೂಲಕ ಒಟ್ಟು 431 ಕೋಟಿ ಮೊತ್ತದ ಜೋಳ ಮಾರಾಟವಾಗಿತ್ತು..‘ ಈ ಪೈಕಿ ಇನ್ನೂ 3811 ರೈತರಿಗೆ 99 ಕೋಟಿ ಹಣ ಬಾಕಿ ಇದೆ. ಈ ಹಣ ಬಿಡುಗಡೆಗೆ ರೈತರು ಮನವಿ ಮಾಡಿದ್ರೆ, ರಾಯಚೂರಿನಲ್ಲಿರೊ ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳು ಕ್ವಿಂಟಲ್ ಜೋಳಕ್ಕೆ 2 ರೂ.ಲಂಚ ಕೊಡಬೇಕು ಅಂತ ಹೇಳಿದ್ದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಯಚೂರಿನ ರೈತರು ರಾಜ್ಯ ಕೃಷಿ ಮಾರಾಟ ಮಂಡಳಿ ಕಚೇರಿಗೆ ತೆರಳಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ್ರು‌. ಇದು ಕೆಲಹೊತ್ತು ವಾಗ್ವಾದಕ್ಕೆ ಕಾರಣವಾಗಿತ್ತು.

ಈ ಬಗ್ಗೆ ರಾಯಚೂರಿನ ರಾಜ್ಯ ಕೃಷಿ ಮಾರಾಟ ಮಂಡಳಿ ಅಧಿಕಾರಿ ಜಿಲ್ಲಾ ವ್ಯವಸ್ಥಾಪಕ ಶಿವ ಬಸವರಾಜ್ ಪ್ರತಿಕ್ರಿಯಿಸಿದ್ದು, ರೈತರಿಂದ ಲಂಚ ಕೇಳಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಹಣ ಬಾಕಿ ಇದೆ ಶೀಘ್ರದಲ್ಲೇ ಎಲ್ಲ ಹಣ ರಿಲೀಸ್ ಮಾಡಲಾಗುತ್ತೆ ಅಂದ್ರು. ರೈತರು ಮೂರು ದಿನಗಳ ಕಾಲ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದು, ಕೂಡಲೇ ಹಣ ರಿಲೀಸ್ ಮಾಡಬೇಕು. ಇಲ್ದಿದ್ರೆ ಉಗ್ರ ಹೋರಾಟ ಮಾಡೋದಾಗಿ ರೈತರು ಎಚ್ಚರಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:05 pm, Tue, 6 August 24