ರಾಮಲಿಂಗಾರೆಡ್ಡಿ ರಾಜೀನಾಮೆ: ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಯಾಕಿಷ್ಟು ಡಿಮ್ಯಾಂಡ್?
ಕರ್ನಾಟಕದಲ್ಲಿ ಯಾವುದೇ ಸರ್ಕಾರದ ಬರಲಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಖಾತೆಗೆ ಭಾರೀ ಪೈಪೋಟಿ ಇರುತ್ತೆ. ಉತ್ತರ ಕರ್ನಾಟಕ, ಮದ್ಯ ಕರ್ನಾಟಕದ ನಾಯಕರು ಯಾರು ಈ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೇಳಲ್ಲ. ಕೇವಲ ಈ ಖಾತೆ ಬೆಂಗಳೂರು ನಗರ ಪ್ರಭಾವಿ ನಾಯಕರಿಗೆ ಅಚ್ಚುಮೆಚ್ಚು. ಇದಕ್ಕೆ ಪೂರಕವೆಂಬಂತೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ್ದಕ್ಕೆ ಕಾಂಗ್ರೆಸ್ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರು ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಷ್ಟಕ್ಕೂ ಈ ಖಾತೆಗೆ ಯಾಕಿಷ್ಟು ಬೇಡಿಕೆ? ಅಂತಹದ್ದೇನಿದೆ? ಎನ್ನುವ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು, (ಜೂನ್ 05): ಕರ್ನಾಟಕ ಸಚಿವ ಸಂಪುಟ (Karnataka Cabinet) ರಚನೆಯಾಗುವಾಗ ಅಥವಾ ಖಾತೆ ಹಂಚಿಕೆಯಾಗುವಾಗ ಸದಾ ಮುಂಚೂಣಿಯಲ್ಲಿ ಕೇಳಿಬರುವ ಹೆಸರೇ “ಬೆಂಗಳೂರು ನಗರಾಭಿವೃದ್ಧಿ ಇಲಾಖೆ” (Bengaluru Development portfolio). ಪ್ರಸ್ತುತ ಡಿಕೆ ಶಿವಕುಮಾರ್ ಸಂಪುಟದಲ್ಲೂ ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇದೀಗ ಹಿರಿಯ ಶಾಸಕ ರಾಜೀನಾಮೆ ಹಂತಕ್ಕೆ ಹೋಗಿದೆ. ಹೌದು..ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದು ಕೇವಲ ಮೂರು ದಿನ ಆಗಿದೆ ಅಷ್ಟೇ. ಆಗಲೇ ಸಚಿವರ ಖಾತೆಗಳ ಕ್ಯಾತೆ ಶುರುವಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೃಷ್ಣಭೈರೇಗೌಡಗೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬೆಂಗಳೂರು ಕೇವಲ ರಾಜ್ಯ ರಾಜಧಾನಿ ಮಾತ್ರವಲ್ಲ, ಇದು ಜಾಗತಿಕ ಮಟ್ಟದ ಐಟಿ ಹಬ್ ಆಗಿದ್ದು, ಅಧಿಕಾರದ ಅಕ್ಷಯಪಾತ್ರೆ. ಒಂದು ರೀತಿ ಬಂಗಾರದ ಖನಿಜ ಎಂದೇ ಹೇಳಬಹುದು.
ಬೆಂಗಳೂರು ನಗರವು ಇಡೀ ಕರ್ನಾಟಕಕ್ಕೆ ಅತಿ ಹೆಚ್ಚು ರಾಜಸ್ವ (Revenue) ತಂದುಕೊಡುವ ಆರ್ಥಿಕ ಎಂಜಿನ್ ಆಗಿದೆ.ಇಲ್ಲಿ ಕೈಗೊಳ್ಳುವ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ “ಬ್ರ್ಯಾಂಡ್ ಬೆಂಗಳೂರು” ಇಮೇಜ್ ಮೇಲೆ ಪ್ರಭಾವ ಬೀರುವುದರಿಂದ, ಈ ಖಾತೆಯನ್ನು ನಿಭಾಯಿಸುವ ನಾಯಕರಿಗೆ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಮುಖ್ಯಮಂತ್ರಿಯ ನಂತರದ ಅತ್ಯುನ್ನತ ಸ್ಥಾನಮಾನ ಸಿಗುತ್ತದೆ. ಹೀಗಾಗಿ ಈ ಖಾತೆಗೆ ಹೆಚ್ಚಾಗಿ ಬೇಡಿಕೆ ಇರುತ್ತೆ.
ಇದನ್ನೂ ನೋಡಿ: Ramalinga Reddy Resigns: ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ
ರಾಜಕೀಯ ಮತ್ತು ಆರ್ಥಿಕ ಶಕ್ತಿ ಕೇಂದ್ರ
ಬೆಂಗಳೂರು ಕೇವಲ ಕರ್ನಾಟಕದ ರಾಜಧಾನಿಯಲ್ಲ, ಅದು ಇಡೀ ರಾಜ್ಯದ ರಾಜಕೀಯ ಮತ್ತು ಆರ್ಥಿಕತೆಯ ಶಕ್ತಿ ಕೇಂದ್ರವಾಗಿದೆ. ಇಡೀ ದೇಶದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಿಂದ ಬರುವ ಆದಾಯವೇ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಆಸರೆ. ಇಂತಹ ಜಾಗತಿಕ ಮಟ್ಟದ ನಗರದ ಉಸ್ತುವಾರಿ ವಹಿಸಿಕೊಳ್ಳುವುದು ಯಾವುದೇ ಒಬ್ಬ ರಾಜಕಾರಣಿಗೆ ಅತ್ಯುನ್ನತ ರಾಜಕೀಯ ಗೌರವ ಮತ್ತು ಶಕ್ತಿಯನ್ನು ತಂದುಕೊಡುತ್ತದೆ. ಹೀಗಾಗಿಯೇ ಈ ಇಲಾಖೆಗೆ ಇಷ್ಟೊಂದು ಮಹತ್ವ ಇದೆ.
ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಬರುವ ಬಜೆಟ್ ಗಾತ್ರ ಸಾಮಾನ್ಯವಾದುದಲ್ಲ. ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಮತ್ತು ಅಭಿವೃದ್ಧಿ ಯೋಜನೆಗಳು ಈ ಇಲಾಖೆಯ ಮೂಲಕವೇ ಹಾದುಹೋಗುತ್ತವೆ. ನಮ್ಮ ಮೆಟ್ರೋ ವಿಸ್ತರಣೆ, ಮೇಲ್ಸೇತುವೆಗಳು, ಸುರಂಗ ಮಾರ್ಗಗಳು (ಟನಲ್ ರೋಡ್ಸ್), ರಾಜಕಾಲುವೆ ಹಾಗೂ ಕೆರೆಗಳ ಅಭಿವೃದ್ಧಿ, ಮತ್ತು ನಗರದ ಟ್ರಾಫಿಕ್ ನಿರ್ವಹಣೆಯಂತಹ ಬಿಲಿಯನ್ ಡಾಲರ್ ಯೋಜನೆಗಳ ಮೇಲ್ವಿಚಾರಣೆ ಮಾಡುವ ನೇರ ಅವಕಾಶ ಈ ಖಾತೆಯ ಸಚಿವರಿಗೆ ಇರುತ್ತೆ.
ಬೆಂಗಳೂರಿನ ಭವಿಷ್ಯವನ್ನು ರೂಪಿಸುವ ಮತ್ತು ಅತ್ಯಂತ ಪ್ರಭಾವಶಾಲಿ ಎನಿಸಿಕೊಂಡಿರುವ ಪ್ರಮುಖ ಸರ್ಕಾರಿ ಸಂಸ್ಥೆಗಳು ಈ ಇಲಾಖೆಯ ಅಡಿಯಲ್ಲೇ ಕಾರ್ಯನಿರ್ವಹಿಸುತ್ತವೆ. BDA (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ), BWSSB (ಬೆಂಗಳೂರು ಜಲಮಂಡಳಿ), GBA (ಗ್ರೇಟರ್ ಬೆಂಗಳೂರು ಅಥಾರಿಟಿ) ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ನಿರ್ಧಾರಗಳು, ನೇಮಕಾತಿಗಳು ಮತ್ತು ಒಟ್ಟಾರೆ ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣವಿರುತ್ತೆ.
ಬೆಂಗಳೂರಿನ ಮೂಲಸೌಕರ್ಯ ಹೆಚ್ಚುಸವು ದೃಷ್ಟಿಯಿಂದ ವರ್ಷದಿಂದ ವರ್ಷಕ್ಕೆ ರಾಜ್ಯ ಸರ್ಕಾರ ಅನುದಾನವನ್ನು ಹೆಚ್ಚಿಸುತ್ತಲೇ ಇದೆ. ಜತೆಗೆ ಬೆಳೆಯುತ್ತುರುವ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಮವೂ ನಾಗಾಲೋಟದಲ್ಲಿ ಓಡುತ್ತಿದೆ. ಇಲ್ಲಿ ಹಣ ಹೂಡಿದರೆ ಚಿನ್ನದ ಮಳೆ ಗ್ಯಾರಂಟಿ ಎಂದಯ ದೇಶದ ಬಹಳಷ್ಟು ಉದ್ಯಮಿಗಳು ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಓಡೋಡಿ ಬರುತ್ತಾರೆ.
ಇದೇ ಖಾತೆ ಬೇಕೆನ್ನಲು ಪ್ರಮುಖ ಕಾರಣಗಳು
- ಸರ್ಕಾರದ ವಿಶೇಷ ಅನುದಾನ: ಕರ್ನಾಟಕ ಬಜೆಟ್ ಪ್ರಕಾರ, ಬೆಂಗಳೂರಿನ ಅಭಿವೃದ್ಧಿಗಾಗಿ ವಾರ್ಷಿಕವಾಗಿ 7,000 ಕೋಟಿಗೂ ಹೆಚ್ಚಿನ ವಿಶೇಷ ಅನುದಾನವನ್ನು ನೀಡಲಾಗುತ್ತದೆ.
- ಈ ಇಲಾಖೆಯ ಸಚಿವರು ನಗರದ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಪ್ರಭಾವಶಾಲಿ ಸ್ವಾಯತ್ತ ಸಂಸ್ಥೆಗಳ ಮೇಲೆ ನೇರ ನಿಯಂತ್ರಣ ಹೊಂದಿರುತ್ತಾರೆ.
- ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮತ್ತು 5 ಪಾಲಿಕೆಗಳು: ಇಡೀ ನಗರದ ಆಡಳಿತ ಮತ್ತು ನಾಗರಿಕ ಸೌಲಭ್ಯಗಳ ಮೇಲ್ವಿಚಾರಣೆ.
- ಬಿಡಿಎ (BDA) ಮತ್ತು ಬಿಎಂಆರ್ಡಿಎ (BMRDA): ನಗರದ ಭೂ ನಿಯಂತ್ರಣ, ಹೊಸ ಲೇಔಟ್ಗಳ ರಚನೆ ಮತ್ತು ವಾಣಿಜ್ಯ ಯೋಜನೆಗಳ ಅನುಮೋದನೆ.
- ಬಿಡಬ್ಲ್ಯೂಎಸ್ಎಸ್ಬಿ (BWSSB): ಕೋಟ್ಯಂತರ ಜನರಿಗೆ ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಜವಾಬ್ದಾರಿ.
2026ರಿಂದ 2019ರವರೆಗೆ ವಾರ್ಷಿಕ ಸರಾಸರಿ 5 ಸಾವಿರ ಕೋಟಿಯಿಂದ 7.300 ಕೋಟಿಯಷ್ಟು ಅನುದಾನವನ್ನು ಬೆಂಗಳೂರು ಅಭಿವೃದ್ಧಿಗೆ ನೀಡಲಾಗಿದೆ. ಟೆಂಡರ್ ಶೂರ್ ರಸ್ತೆಗಳು, ನಮ್ಮ ಮೆಟ್ರೋ ಎರಡನೇ ಹಂತ ಸೇರಿದಂತೆ ಹಲವು ಯೋಜನೆಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ.
2019ರಿಂದ 2021ರವರೆಗೆ ಮುಖ್ಯಮಂತ್ರಿ ಅವರ ನವ ನಗರೋತ್ಥಾನ ಯೋಜನೆಯಡಿಯಲ್ಲಿ ನಗರ ಸಮಗ್ರ ಅಭಿವೃದ್ಧಿಗೆ ಸುಮಾರು 8300 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು.
ಇನ್ನು 2022ರಿಂದ-23ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ರಸ್ತೆಗಳ ನವೀಕರಣಕ್ಕೆ ಸೇರಿದಂತೆ ಇತರೆ ಕೆಲಸಗಳಿಗೆ 8 409 ಕೋಟಿ ರೂ ಹಂಚಿಕೆ ಮಾಡಲಾಗಿತ್ತು.
2024-25ರಲ್ಲಿ ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಸುರಂಗ ರಸ್ತೆಗಳು ಮತ್ತು ವೈಟ್ ಟಾಪಿಂಗ್ ಯೋಜನೆಗಳಿಗೆ 12 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಇನ್ನು 2026-27ನೇ ಸಾಲಿನಲ್ಲಿ ಬೆಂಗಳೂರಿಗೆ 7 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ.
ಬೆಂಗಳೂರು ಶಾಸಕರಿಗೆ ಇದೇ ಖಾತೆ ಅಚ್ಚುಮೆಚ್ಚು ಏಕೆ?
ಇನ್ನು ಮುಖ್ಯವಾಗಿ ಗಮನಿಸಿದಬೇಕಾದ ಅಂಶ ಅಂದ್ರೆ, ಈ ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ಬೆಂಗಳೂರು ಲೋಕಲ್ ಶಾಸಕರ ಕಣ್ಣಿರುತ್ತೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಶಾಸಕರು ಅಷ್ಟಾಗಿ ಈ ಖಾತೆ ಪಡೆಯಲು ಇಷ್ಟಪಡಲ್ಲ. ಯಾಕಾಂದ್ರೆ ಈ ಖಾತೆ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತ. ಹೀಗಾಗಿ ಬೆಂಗಳೂರು ಶಾಸಕರೇ ಹೆಚ್ಚಾಗಿ ಇದೇ ಖಾತೆ ಬೇಕೆಂದು ಬೇಡಿಕೆ ಇಡುತ್ತಾರೆ . ಈ ಖಾತೆ ಒಂದು ರೀತಿ ಲೋಕಲ್ ಇದ್ದಂತೆ. ರಾಜ್ಯಾದ್ಯಂತ ಸುತ್ತಾಟ ಇರುವುದಿಲ್ಲ. ಕ್ಷೇತ್ರದಲ್ಲೇ ಇದ್ದುಕೊಂಡು ಇಲಾಖೆಯನ್ನು ನಿರ್ವಹಿಸಬಹುದು. ಇದರೊಂದಿಗೆ ಕ್ಷೇತ್ರದಲ್ಲಿ ಹಿಡಿತ ಸಾಧಿಸಬಹುದಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




