ಕನಕಪುರದಲ್ಲಿ ಕಾಡಾನೆ ದಾಳಿಗೆ ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿ ದಾರುಣ ಸಾವು: ಅತ್ತ ಚಾಮರಾಜನಗರದಲ್ಲಿಯೂ ಮುಂದುವರಿದ ಒಂಟಿ ಸಲಗದ ಕಾಟ
ರಾಜ್ಯದಲ್ಲಿ ಕಾಡಾನೆ ದಾಳಿಗೆ ಸಾವಿನ ಸರಣಿ ಮುಂದುವರಿದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕನಕಪುರ ತಾಲೂಕಿನ ಚೀಲಂದವಾಡಿ ಗ್ರಾಮದಲ್ಲಿ ವ್ಯಕ್ತಿಯೋರ್ವರು ಉಸಿರು ಚೆಲ್ಲಿದ್ದಾರೆ. ಸಂಗಮ ಪ್ರದೇಶದಲ್ಲಿ ಮಹಿಳೆ ಮೇಲೆ ಇತ್ತೀಚೆಗೆ ಕಾಡಾನೆ ದಾಳಿ ನಡೆಸಿದ್ದು ಮಾಸುವ ಮುನ್ನವೇ ನಡೆದಿರುವ ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಅತ್ತ ಚಾಮರಾಜನಗರದಲ್ಲೂ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಒಂಟಿ ಸಲಗದ ದಾಂಧಲೆಗೆ ಮೆಕ್ಕೆಜೋಳ ಬೆಳೆ ಸಂಪೂರ್ಣ ಹಾಳಾಗಿದೆ.

ರಾಮನಗರ/ ಚಾಮರಾಜನಗರ, ಏಪ್ರಿಲ್ 26: ರಾಜ್ಯದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಮುಂದುವರಿದಿದ್ದು, ಕನಕಪುರದ ಪ್ರವಾಸಿ ಸ್ಥಳ ಸಂಗಮದಲ್ಲಿ ಮಹಿಳೆಯೋರ್ವರ ಮೇಲೆ ಕಾಡಾನೆ ಇತ್ತೀಚೆಗಷ್ಟೇ ದಾಳಿ ನಡೆಸಿತ್ತು. ಏಕಾಏಕಿ ಬಂದ ಕಾಡಾನೆ ಕಂಡು ಪ್ರಾಣ ಭೀತಿಯಿಂದ ಜನರು ದಿಕ್ಕಾಪಾಲಾಗಿ ಓಡುವ ವಿಡಿಯೋ ವೈರಲ್ ಆಗಿತ್ತು. ಆ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಚೀಲಂದವಾಡಿ ಗ್ರಾಮದಲ್ಲಿ ಒಂಟಿ ಸಲಗ ದಾಳಿಗೆ ವ್ಯಕ್ತಿಯೋರ್ವರ ಬಲಿಯಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಕರಿಗುಂಡ(55) ಎಂಬವರು ಮೃತಪಟ್ಟಿದ್ದಾರೆ. ಸಂಗಮ ಅರಣ್ಯ ವಲಯ ಪ್ರದೇಶ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕರಿಗುಂಡ ಅವರ ಮೃತದೇಹವನ್ನು ಕನಕಪುರ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮೆಕ್ಕೆಜೋಳ ಬೆಳೆ ನಾಶಪಡಿಸಿದ ಒಂಟಿ ಸಲಗ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಕಾಲೋನಿಯ ನಾಗಪಟ್ಟಣ ಬಳಿ ಕಾಡಾನೆ ಹಾವಳಿಯಿಂದ ಮಹೇಶ್ ಎಂಬುವರಿಗೆ ಸೇರಿದ ಬೆಳೆ ಹಾನಿಯಾಗಿದೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ಗೆ ಅಂಟಿಕೊಂಡಂತಿರುವ ನಾಗಪಟ್ಟಣ ಗ್ರಾಮಕ್ಕೆ ಲಗ್ಗೆ ಇಟ್ಟ ಒಂಟಿ ಸಲಗ ಮೆಕ್ಕೆಜೋಳ ಬೆಳೆಯನ್ನ ಸಂಪೂರ್ಣ ನಾಶ ಮಾಡಿ ತೆರಳಿದೆ.
ಇದನ್ನೂ ಓದಿ: ಸುಟ್ಟಘಟ್ಟ ಗ್ರಾಮದ ತೋಟದಲ್ಲಿ ಪ್ರತ್ಯಕ್ಷವಾಯಿತು ಕಾಡಾನೆಗಳ ಹಿಂಡು!
ಕೆರೆಯಲ್ಲಿ ಕಂಡ ಕಾಡಾನೆಗಳ ಹಿಂಡು
ಮತ್ತೊಂದೆಡೆ ಹನೂರು ತಾಲೂಕಿನ ಪಿಜಿ ಪಾಳ್ಯದಲ್ಲಿ ಮರಿಗಳ ಜೊತೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ. ತನ್ನ ಮರಿಗಳ ಜೊತೆ ಕೆರೆಯ ನೀರಿಗಿಳಿದಿರುವ 10ಕ್ಕೂ ಹೆಚ್ಚು ಆನೆಗಳು, ಗಂಟಗಟ್ಟಲೆ ಕೆರೆಯಲ್ಲೆ ರಿಲ್ಯಾಕ್ಸ್ ಮಾಡಿರುವ ದೃಶ್ಯ ಕಂಡುಬಂದಿದೆ. ಬಿಸಿಲ ಧಗೆಗೆ ಕಾಡು ಪ್ರಾಣಿಗಳೂ ತತ್ತರಿಸುತ್ತಿದ್ದು, ಚಾಮರಾಜನಗರ ಜಿಲ್ಲೆಯಲ್ಲಿರುವ 36ರಿಂದ 37 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನದಿಂದ ರಕ್ಷಣೆ ಪಡೆಯಲು ನೀರಿನ ಮೂಲಗಳತ್ತ ಹೆಜ್ಜೆ ಹಾಕುತ್ತಿರೋದು ಕಂಡುಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:57 pm, Sun, 26 April 26



