ರಾಮನಗರದಲ್ಲಿ SIR ಪ್ರಕ್ರಿಯೆಯಲ್ಲಿ ಲೋಪ: ಕುಮಾರಸ್ವಾಮಿ ಗಂಭೀರ ಆರೋಪ, ಆಗಿದ್ದೇನು?
ರಾಮನಗರದಲ್ಲಿ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಲೋಪ ಕಂಡುಬಂದಿರುವ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕೂಡ ಮಾತನಾಡಿದ್ದು, ಕಳ್ಳ ಮತದಾರರನ್ನ ಒಂದೆಡೆ ಕೂರಿಸಿ ಎಸ್ಐಆರ್ ಮಾಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.

ಮುಖ್ಯಾಂಶಗಳು
- ರಾಮನಗರದಲ್ಲಿ SIR ಪ್ರಕ್ರಿಯೆ ಬಗ್ಗೆ ಆಕ್ಷೇಪ
- ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಲೋಪ
- ಸಮುದಾಯ ಭವನದಲ್ಲಿ ಕೂತು ಗಣತಿ ನಮೂನೆ ವಿತರಣೆ
ರಾಮನಗರ, ಜುಲೈ 02: ರಾಜ್ಯದಲ್ಲಿ ಜೂನ್ 30ರಿಂದ ಮತ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮತದಾರರು ಸ್ವಯಂಪ್ರೇರಿತರಾಗಿ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ಇತ್ತ ರಾಮನಗರದಲ್ಲಿ SIR ಪ್ರಕ್ರಿಯೆ ಬಗ್ಗೆ ಆಕ್ಷೇಪಗಳು ಕೇಳಿಬಂದಿವೆ. ಬಿಎಲ್ಒಗಳ ಕರ್ತವ್ಯ ಲೋಪದ ಗಂಭೀರ ಆರೋಪಗಳು ಕೇಳಿಬಂದಿವೆ. ಹೀಗಾಗಿ ರಾಮನಗರ ಕ್ಷೇತ್ರದ ಪ್ರಸ್ತುತ SIR ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸುವಂತೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಲೋಪ
ರಾಮನಗರದಲ್ಲಿ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಲೋಪಗಳು ಕಂಡುಬಂದಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ಬಿಎಲ್ಒಗಳು ಮನೆ ಮನೆಗೆ ಭೇಟಿ ನೀಡಿ ಚುನಾವಣಾ ಆಯೋಗದ ಗಣತಿ ನಮೂನೆಗಳನ್ನು ವಿತರಿಸುವ ಬದಲಿಗೆ, ಸಮುದಾಯ ಭವನದಲ್ಲೇ ಕುಳಿತು ವಿತರಣೆ ಮಾಡುತ್ತಿದ್ದಾರೆ. ಇದು ಮನೆ ಮನೆ ಪರಿಶೀಲನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತದೆ ಎಂಬ ಆರೋಪಗಳು ಕೇಳಿಬಂದಿವೆ.
ಕಳ್ಳ ಮತದಾರರನ್ನ ಒಂದು ಕಡೆ ಕೂರಿಸಿ ಎಸ್ಐಆರ್ ಮಾಡುತ್ತಿದ್ದಾರೆ: ಹೆಚ್ಡಿ ಕುಮಾರಸ್ವಾಮಿ
ಇನ್ನು ರಾಮನಗರದಲ್ಲಿ SIR ಪ್ರಕ್ರಿಯೆ ಲೋಪ ಕಂಡುಬಂದ ಬಗ್ಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಕೂಡ ಮಾಡಿದ್ದಾರೆ. ಈ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ರಾಮನಗರದಲ್ಲಿ ಬಿಎಲ್ಒಗಳು ಸಾವಿರಾರು ಜನರನ್ನ ಸಮುದಾಯ ಭವನದಲ್ಲೇ ಕರೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕಳ್ಳ ಮತದಾರರನ್ನ ಒಂದೇ ಕಡೆ ಕೂರಿಸಿ ಎಸ್ಐಆರ್ ಮಾಡುತ್ತಿದ್ದಾರೆ. ನಮ್ಮನ್ನ ರಾಮನಗರದಿಂದ ಹೊರಹಾಕುವ ಬಗ್ಗೆ ಮಾತಾಡಿದ್ದಾರೆ. ನಮ್ಮನ್ನ ಹೊರಹಾಕುವುದಕ್ಕೆ ಆಗಲ್ಲ. ಬೇರೆ ರಾಜ್ಯದ ಬಗ್ಗೆ ಮಾತಾಡುತ್ತಾರೆ. ಇದು ಅಧಿಕಾರಿಗಳ ವೈಪಲ್ಯ. ಸಿಎಂ ಪ್ರಭಾವ ಬೀರಿ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಚುನಾವಣಾ ಆಯೋಗ ಕೂಡ ಗಮನ ಹರಿಸಬೇಕು. ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ, ಗೃಹ ಸಚಿವರ ಗಮನಕ್ಕೂ ತರುತ್ತೇನೆ ಎಂದಿದ್ದಾರೆ.
ಕಳ್ಳಮತದಾನ ಸೃಷ್ಟಿ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ
ರಾಮನಗರದ ಬಿಡದಿ ಹೋಬಳಿಯ ಕೇತಗನಹಳ್ಳಿಯಲ್ಲಿ ನಮ್ಮ ಕುಟುಂಬದ ಮತ ಇದೆ. ಮುಖ್ಯಮಂತ್ರಿಗಳೇ ಕಳ್ಳಮತದಾನ ಸೃಷ್ಟಿ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಕಠಿಣ ಕ್ರಮ ತೆಗೆದಕೊಳ್ಳಬೇಕು. ಇದು ಸರ್ಕಾರದ ದುರ್ಬಳಕೆ. ಈ ಕೆಲಸ ನಿರ್ವಹಣೆ ಮಾಡುತ್ತಿರುವುದು ರಾಜ್ಯ ಸರ್ಕಾರ, ಸಿಎಂ ಇದಕ್ಕೆ ಪ್ರೇರೆಪಣೆ. ಚುನಾವಣೆ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪ್ರಾಮಾಣಿಕವಾಗಿ ಎಸ್ಐಆರ್ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ 2002ರ ದಾಖಲೆ ಸಿಗದಿದ್ದರೆ ಬೇಡ ಆತಂಕ: ಪರ್ಯಾಯ ಮಾರ್ಗ ತಿಳಿಸಿದ ಚುನಾವಣಾ ಆಯೋಗ
ಮುತುವರ್ಜಿ ವಹಿಸಿ ಎಸ್ಐಆರ್ನಲ್ಲಿ ಸರಿಯಾಗಿ ಮಾಹಿತಿ ಕೊಡಿ ಅಂತ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮತದಾರರ ಲಿಸ್ಟ್ನಿಂದ ಹೊರ ಹೋದರೆ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗುತ್ತೀರಿ. ಈ ದೊಡ್ಡ ಜಾಹೀರಾತಿನ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು ಎಸ್ಐಆರ್ ಬಗ್ಗೆ ಕಟುವಾಗಿ ಮಾತಾಡುತ್ತಿದ್ದಾರೆ. ಇದು ಸಿಎಂ ಪ್ರೇರಣೆ ಇರಬೇಕು ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



