AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ಕೇಂದ್ರ ಕೈಗೊಂಡ ಕ್ರಮಗಳೇನು? ಕೇಂದ್ರ ಕೃಷಿ ಸಚಿವ ಹೇಳಿದ್ದೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರು ಎಲೆ ಚುಕ್ಕೆ ಮತ್ತು ಕೊಳೆ ರೋಗದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. 2024-25ರಲ್ಲಿ 300 ಕೋಟಿ ರೂ.ಗೂ ಹೆಚ್ಚು ನಷ್ಟ ಸಂಭವಿಸಿದೆ. ಈ ರೋಗಗಳು ಬೆಳೆಗಾರರ ಜೀವನೋಪಾಯಕ್ಕೆ ಸಮಸ್ಯೆ ತಂದೊಡ್ಡಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೋಗ ನಿರ್ವಹಣೆ ಮತ್ತು ಪರಿಹಾರಕ್ಕಾಗಿ ಹಲವು ಕೋಟಿ ರೂ. ಅನುದಾನ, ಸಹಾಯಧನ ಹಾಗೂ ವಿಮಾ ಸೌಲಭ್ಯ ಒದಗಿಸಿವೆ. ರೈತರಿಗೆ ಆರ್ಥಿಕ ನೆರವು ನೀಡಿ ಸಂಕಷ್ಟ ನಿವಾರಿಸಲು ಪ್ರಯತ್ನಿಸಲಾಗುತ್ತಿದೆ.

ಕರ್ನಾಟಕ ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ಕೇಂದ್ರ ಕೈಗೊಂಡ ಕ್ರಮಗಳೇನು? ಕೇಂದ್ರ ಕೃಷಿ ಸಚಿವ ಹೇಳಿದ್ದೇನು?
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Dec 18, 2025 | 12:21 PM

Share

ಶಿವಮೊಗ್ಗ, ಡಿ.18: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅಡಿಕೆ (Arecanut disease) ಹೆಚ್ಚು ಬೆಳೆಯುವ ಕಾರಣ, ಇದು ಅಲ್ಲಿನ ಬೆಳೆಗಾರರ ಜೀವನೋಪಾಯಕ್ಕೆ ಸಮಸ್ಯೆ ತಂದೊಡ್ಡಿವೆ. ಆದರೆ ಕಳೆದು ಮೂರು ವರ್ಷಗಳಿಂದ ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಲವು ಭಾಗದಲ್ಲಿ ಅಡಿಕೆ ಬೆಳಗಾರರು ಸಂಕಷ್ಟದಲ್ಲಿದ್ದಾರೆ. ರೋಗದಿಂದ ಬೆಳೆ ಹಾನಿಯಾಗಿ ಭಾರೀ ಮೊತ್ತ ನಷ್ಟವನ್ನು ಅನುಭವಿಸುತ್ತಿದ್ದಾರೆ. ಈಗಾಗಲೇ ಕೇಂದ್ರದ ಅಧಿಕಾರಿಗಳು ಮಲೆನಾಡು ಪ್ರದೇಶದಲ್ಲಿ ಪ್ರಮುಖ ಸೋಂಕುಗಳ ಮಾತ್ರ ಇದೆ ಎಂಬ ವರದಿಯನ್ನು ನೀಡಿದೆ. ಜಿಲ್ಲೆಯಲ್ಲಿ ಎಲೆ ಚುಕ್ಕೆ ರೋಗ ಮತ್ತು ಕೊಳೆ ರೋಗ ದಿಂದ ಉಂಟಾದ ಆರ್ಥಿಕ ನಷ್ಟವು (2024-25) ಏರಿಕೆಯಾಗಿದೆ. ಒಂದೇ ವರ್ಷದಲ್ಲಿ ನಷ್ಟವು 300 ಕೋಟಿ ರೂ.ಗಳನ್ನು ದಾಟಿದೆ. ಇದು ಶಿವಮೊಗ್ಗದಲ್ಲಿ ಮಾತ್ರ ಕಂಡು ಬಂದಿಲ್ಲ, ಅದರ ಅಕ್ಕ -ಪಕ್ಕ ಹಾಗೂ ಕರಾವಳಿ ಜಿಲ್ಲೆಗಳಲ್ಲೂ ಈ ಸಮಸ್ಯೆ ಕಂಡು ಬಂದಿದೆ ಎಂದು ಕೇಂದ್ರದ ಅಧಿಕಾರಿಗಳು ನೀಡಿದ ವರದಿಯಲ್ಲಿ ಹೇಳಲಾಗಿದೆ.

ಈ ಬಗ್ಗೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರಶ್ನೆ ಮಾಡಿದ್ದರು. ಇದಕ್ಕೆ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ರಾಮ್ ನಾಥ್ ಠಾಕೂರ್ ಲಿಖಿತ ಉತ್ತರ ನೀಡಿದ್ದಾರೆ. ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಕೇಂದ್ರೀಯ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು (ಸಿಐಪಿಎಂಸಿಗಳು) ನಡೆಸಿದ ಸಮೀಕ್ಷೆಗಳ ಪ್ರಕಾರ, 2022-23 ರಿಂದ 2024-25 ರ ಅವಧಿಯಲ್ಲಿ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಕೊಳೆ ರೋಗ ಮತ್ತು ಅಡಿಕೆಯ ಮೇಲೆ ಪರಿಣಾಮ ಬೀರುವ ಎಲೆ ಚುಕ್ಕೆ ರೋಗದ ಕುರುಹು ಕಂಡುಬಂದಿದೆ ಎಂದು ಹೇಳಿದರು. 2025-26 ರ ಅವಧಿಯಲ್ಲಿ ಇಲ್ಲಿಯವರೆಗೆ ಕೊಳೆ ರೋಗ ಮತ್ತು ಎಲ್‌ಎಸ್‌ಡಿಯ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಎಲೆ ಚುಕ್ಕೆ ರೋಗ ಮತ್ತು ಕೊಳೆ ರೋಗದಿಂದ ಉಂಟಾದ ಆರ್ಥಿಕ ನಷ್ಟವು 2024-25ರಲ್ಲಿ ಏರಿಕೆಯಾಗಿರುವುದು ನಿಜ. ಒಂದೇ ವರ್ಷದಲ್ಲಿ 300 ಕೋಟಿ ರೂ.ಗಳನ್ನು ದಾಟಿದೆ. ಇದು ಇತರ ಪ್ರದೇಶಕ್ಕೂ ಹರಡಿದೆ ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ. ಈ ರೋಗ ಅಡಿಕೆ ಒಂದರ ಮೇಲೆ ಮಾತ್ರ ಪರಿಣಾಮವನ್ನು ಉಂಟು ಮಾಡಿದೆ. 2022-23ರಲ್ಲಿ, ಎಲೆ ಚುಕ್ಕೆ ರೋಗವು ಜಿಲ್ಲೆಯಲ್ಲಿ ಸುಮಾರು 5,991 ಹೆಕ್ಟೇರ್‌ಗಳನ್ನು ಬಾಧಿಸಿದ್ದು, 15 ಕೋಟಿ ರೂ.ಗಳಷ್ಟು ನಷ್ಟವನ್ನುಂಟು ಮಾಡಿದೆ. ಆದರೆ ಕೊಳೆ ರೋಗವು 6,720 ಹೆಕ್ಟೇರ್‌ಗಳಿಗಿಂತ ಹೆಚ್ಚು ಪರಿಣಾಮ ಬೀರಿ ಸುಮಾರು 16.8 ಕೋಟಿ ರೂ.ಗಳಷ್ಟು ನಷ್ಟವನ್ನುಂಟು ಮಾಡಿದೆ. 2023-24ರಲ್ಲಿ ಇದು ಹೆಚ್ಚಾಗಿದ್ದು, ಒಟ್ಟು ನಷ್ಟವು ರೂ.54 ಕೋಟಿಗೂ ಹೆಚ್ಚಾಗಿದೆ.

ಎಲೆ ಚುಕ್ಕೆ ರೋಗ ನಿರ್ವಹಣೆಗೆ 3 ವರ್ಷದಲ್ಲಿ 6.31 ಕೋಟಿ ರೂ. ಮಂಜೂರು:

ಶಿವಮೊಗ್ಗ ಸೇರಿದಂತೆ ನಾಲ್ಕು ಜಿಲ್ಲೆಗಳ 10 ತಾಲ್ಲೂಕುಗಳಲ್ಲಿ ಕಂಡುಬಂದ ಈ ಎಲೆ ಚುಕ್ಕೆ ರೋಗವನ್ನು ನಿರ್ವಹಣೆ ಮಾಡಲು ಅಡಿಕೆ ಮತ್ತು ಸಾಂಬಾರ ಅಭಿವೃದ್ಧಿ ನಿರ್ದೇಶನಾಲಯವು ದೊಡ್ಡ ಪ್ರಮಾಣದ ಪ್ರಾತ್ಯಕ್ಷಿಕೆಗಳನ್ನು ಪ್ರಾರಂಭಿಸಿದೆ. ಮೂರು ವರ್ಷಗಳಲ್ಲಿ ಈ ಕಾರ್ಯಕ್ರಮಕ್ಕಾಗಿ ಒಟ್ಟು 6.31 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಅಡಿಕೆಯಲ್ಲಿ ಎಲೆ ಚುಕ್ಕೆ ರೋಗದ ನಿರ್ವಹಣೆಗಾಗಿ ಕೇಂದ್ರವು 2024-25ರಲ್ಲಿ ಕರ್ನಾಟಕ ರಾಜ್ಯ ತೋಟಗಾರಿಕಾ ಮಿಷನ್‌ಗೆ 3,700 ಲಕ್ಷ ರೂ.ಗಳನ್ನು ಮಂಜೂರು ಮಾಡಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿಯಲ್ಲಿ, ಕೇಂದ್ರವು 2025-26ರಲ್ಲಿ ಅಡಿಕೆಯಲ್ಲಿ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕಾಗಿ 860.65 ಲಕ್ಷ ರೂ.ಗಳನ್ನು ಹಂಚಿಕೆ ಮಾಡಿದೆ, ಅದರಲ್ಲಿ 189.25 ಲಕ್ಷ ರೂ.ಗಳನ್ನು ಶಿವಮೊಗ್ಗಕ್ಕೆ ಮೀಸಲಿಡಲಾಗಿದೆ. ಜಿಲ್ಲೆಯ 2,755 ರೈತರಿಗೆ ಇದುವರೆಗೆ 146.24 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು, ಬಳ್ಳಾರಿ ಗಾಳಿಯ ಗುಣಮಟ್ಟ ಅಪಾಯದಲ್ಲಿ, ಹೈ ಅಲರ್ಟ್​​​​​ ನೀಡಿದ ತಜ್ಞರು

ಪ್ರತಿ ಹೆಕ್ಟೇರ್‌ಗೆ 1,500 ರೂ. ಸಹಾಯಧನ

2023-24ನೇ ಸಾಲಿನಲ್ಲಿ ಅಡಿಕೆ ಎಲೆ ಚುಕ್ಕೆ ರೋಗದ ನಿರ್ವಹಣೆಗಾಗಿ ತೋಟಗಾರಿಕಾ ಇಲಾಖೆಯಿಂದ 8,661 ರೈತರಿಗೆ 250 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ ಎಂದು ಸಚಿವರು ಹೇಳಿದರು. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿಯಲ್ಲಿ, ಅಡಿಕೆ ಬೆಳೆ ಸೇರಿದಂತೆ ತೋಟಗಾರಿಕಾ ಬೆಳೆಗಳ ಸಮಗ್ರ ರೋಗ/ಕೀಟ ಮತ್ತು ಪೋಷಕಾಂಶ ನಿರ್ವಹಣೆಗೆ ಪ್ರತಿ ಹೆಕ್ಟೇರ್‌ಗೆ 1,500 ರೂ.ಗಳ ಸಹಾಯಧನವನ್ನು ನೀಡಲಾಗುತ್ತಿದೆ. 2025-26ರಲ್ಲಿ, ಆರ್‌ಡಬ್ಲ್ಯೂಬಿಸಿಐಎಸ್ ಅಡಿಯಲ್ಲಿ ಅಡಿಕೆ ವಿಮೆಗಾಗಿ ಒಟ್ಟು 6,52,440 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 1,18,345 ಶಿವಮೊಗ್ಗ ಜಿಲ್ಲೆಯಿಂದ ಬಂದಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ