ಕುವೆಂಪು ವಿವಿಯಲ್ಲಿ ಮಾರ್ಕ್ಸ್ ಕಾರ್ಡ್ ತಿದ್ದುಪಡಿ ಬಯಲಿಗೆ: 1 ವಿಷಯದ ಅಂಕ ಬದಲಿಸಲು 10 ಸಾವಿರ ಡೀಲ್

ಕುವೆಂಪು ವಿವಿಯಲ್ಲಿ ಅಂಕಪಟ್ಟಿ ತಿದ್ದುಪಡಿ ಅಕ್ರಮ ಬಯಲಾಗಿದೆ. ಮೌಲ್ಯಮಾಪನ ವಿಭಾಗದ ಡಿಜಿಟಲ್ ಸಹಿ ಮತ್ತು OTP ದುರ್ಬಳಕೆ ಮಾಡಿಕೊಂಡು ಫೇಲ್ ಆದ ವಿದ್ಯಾರ್ಥಿಯನ್ನ ಪಾಸ್ ಮಾಡಲಾಗಿದೆ. ವಿವಿಯ ಮೌಲ್ಯಮಾಪನ ವಿಭಾಗದ ಪ್ರೊ. ಆರ್. ತಿಮ್ಮರಾಯಪ್ಪ ದೂರು ಬೆನ್ನಲ್ಲೇ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಕುವೆಂಪು ವಿವಿಯಲ್ಲಿ ಮಾರ್ಕ್ಸ್ ಕಾರ್ಡ್ ತಿದ್ದುಪಡಿ ಬಯಲಿಗೆ: 1 ವಿಷಯದ ಅಂಕ ಬದಲಿಸಲು 10 ಸಾವಿರ ಡೀಲ್
ಕುವೆಂಪು ವಿವಿ
Image Credit source: tv9 kannada
Edited By:

Updated on: Sep 14, 2026 | 6:22 PM

ಶಿವಮೊಗ್ಗ, ಸೆಪ್ಟೆಂಬರ್​ 14: ಕುವೆಂಪು ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಅಧಿಕಾರಿಯ ಡಿಜಿಟಲ್ ಸಹಿ ಹಾಗೂ ಒಟಿಪಿ ದುರ್ಬಳಕೆ ಮಾಡಿಕೊಂಡು ಮಾರ್ಕ್ಸ್‌ ಕಾರ್ಡ್ ತಿದ್ದುಪಡಿ ಮಾಡಿರುವ ಗಂಭೀರ ಅಕ್ರಮ ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯದ ಯುಯುಸಿಎಂಎಸ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನುಷಾ ಎಂಬಾಕೆ ಅಧಿಕಾರಿಯ ಡಿಜಿಟಲ್ ಸಹಿ ಬಳಸಿ, 5ನೇ ಸೆಮಿಸ್ಟರ್‌ನಲ್ಲಿ ಫೇಲ್ ಆಗಿದ್ದ ವಿದ್ಯಾರ್ಥಿಯನ್ನು ಪಾಸ್ ಮಾಡಿರುವ ಜಾಲದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

ಒಂದು ವಿಷಯಕ್ಕೆ 10 ಸಾವಿರ ರೂ. ಡೀಲ್

ವಿದ್ಯಾರ್ಥಿಯ ಅಂಕ ತಿದ್ದುಪಡಿಗಾಗಿ ಹಣದ ಡೀಲ್ ನಡೆದಿರುವ ಆರೋಪ ಕೇಳಿಬಂದಿದೆ. 1 ವಿಷಯದ ಅಂಕ ಬದಲಿಸಲು 10 ಸಾವಿರ ರೂಪಾಯಿಯಂತೆ, ಒಟ್ಟು 5 ವಿಷಯಗಳ ಅಂಕ ತಿದ್ದುಪಡಿ ಮಾಡಲು ಅನುಷಾ 50 ಸಾವಿರ ರೂಪಾಯಿ ಆಮಿಷವೊಡ್ಡಿದ್ದಳು ಎನ್ನಲಾಗಿದೆ. ಈ ಅಕ್ರಮದ ಮೂಲಕ ಅನುತ್ತೀರ್ಣನಾಗಿದ್ದ ಶಿವಮೊಗ್ಗದ ಪಿಇಎಸ್ ಕಾಲೇಜು ವಿದ್ಯಾರ್ಥಿ ವರ್ಷಿತ್ ಎನ್‌. ಎಂಬಾತನ ಅಂಕಪಟ್ಟಿಯನ್ನು ತಿದ್ದಿ ಪಾಸ್ ಮಾಡಲಾಗಿತ್ತು.

ಪೊಲೀಸ್ ಠಾಣೆಯಲ್ಲಿ ದೂರು, ತನಿಖೆ ಚುರುಕು

ಪ್ರಕರಣ ಸಂಬಂಧ ಕುವೆಂಪು ವಿವಿಯ ಮೌಲ್ಯಮಾಪನ ವಿಭಾಗದ ಪ್ರೊ. ಆರ್. ತಿಮ್ಮರಾಯಪ್ಪ ಅವರು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಅನುಷಾಳನ್ನು ಮೊದಲ ಆರೋಪಿ ಹಾಗೂ ವಿದ್ಯಾರ್ಥಿ ವರ್ಷಿತ್ ಎನ್. ಎಂಬಾತನನ್ನು ಎರಡನೇ ಆರೋಪಿಯನ್ನಾಗಿಸಿ ಬಿಎನ್‌ಎಸ್ (BNS/BNSS) ಸೆಕ್ಷನ್‌ಗಳು ಮತ್ತು ಐಟಿ ಕಾಯ್ದೆ 2000ರ ಅಡಿಯಲ್ಲಿ ಎಫ್‌ಐಆರ್​ ದಾಖಲಾಗಿದೆ.

ದೂರಿನಲ್ಲಿ ಏನಿದೆ?

ಕುವೆಂಪು ವಿವಿಯ ಯುಯುಸಿಎಂಎಸ್ ಅಡ್ಮಿನ್ ಆಗಿ ಕಾರ್ಯನಿರ್ವಹಿಸುತ್ತಿರುವ ಅನುಷಾ ವಿದ್ಯಾರ್ಥಿಗಳಿಗೆ ಆಮಿಷವೊಡ್ಡಿ ಅನುತ್ತೀರ್ಣರಾದವರಿಂದ ಪ್ರತಿ ವಿಷಯಕ್ಕೆ 10,000 ರೂ.ನಂತೆ 5 ವಿಷಯಗಳಿಗೆ 50,000 ರೂ. ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಿವಮೊಗ್ಗದ ಪಿಇಎಸ್ ಕಾಲೇಜಿನ 5ನೇ ಸೆಮಿಸ್ಟರ್ ಬಿ.ಎಸ್ಸಿ ವಿದ್ಯಾರ್ಥಿ ವರ್ಷಿತ್ ಎನ್. ಎಂಬಾತ ನವೆಂಬರ್/ಡಿಸೆಂಬರ್ 2025ರ ಪರೀಕ್ಷೆಯಲ್ಲಿ ‘ರಿಯಲ್ ಅನಾಲಿಸಿಸ್-II ಆ್ಯಂಡ್ ಕಾಂಪ್ಲೆಕ್ಸ್ ಅನಾಲಿಸಿಸ್’ ಹಾಗೂ ‘ಅಡ್ವಾನ್ಸ್‌ಡ್ ಆಲ್ಜಿಬ್ರಾ ಆ್ಯಂಡ್ ವೆಕ್ಟರ್ ಕ್ಯಾಲ್ಕುಲಸ್’ ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಅಮಾನವೀಯ ಕೃತ್ಯ: ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದಕ್ಕೆ ಮಕ್ಕಳಿಗೆ ರಕ್ತ ಬರುವಂತೆ ಥಳಿಸಿದ ಶಿಕ್ಷಕಿ

ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸದೆ ಇದ್ದರೂ 2026 ಜೂನ್​ 22ರಂದು ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಆತನ ಫಲಿತಾಂಶ ‘ಪಾಸ್’ ಎಂದು ಪ್ರಕಟವಾಗಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅನುಷಾ ಅಧಿಕಾರಿಯ ಡಿಜಿಟಲ್ ಕೀ ದುರ್ಬಳಕೆ ಮಾಡಿಕೊಂಡು ಅಂಕ ಬದಲಾವಣೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us