ಸೋಶಿಯಲ್ ಮೀಡಿಯಾದಲ್ಲಿ ಕಾಡಿಸುತ್ತಿದ್ದ ಕಾನ್ಸ್‌ಟೇಬಲ್‌; ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆ!

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕಾನ್‌ಸ್ಟೆಬಲ್ ಮೋಹನ್ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಆಕೆಗೆ ನಿರಂತರ ತೊಂದರೆ ನೀಡಿದ್ದ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪತಿ ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ, ಇದೀಗ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಇಬ್ಬರು ಪುಟ್ಟ ಹೆಣ್ಣುಮಕ್ಕಳು ಅನಾಥರಾಗಿದ್ದಾರೆ. ಮೋಹನ್ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಕಾಡಿಸುತ್ತಿದ್ದ ಕಾನ್ಸ್‌ಟೇಬಲ್‌; ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆ!
ಸೋಶಿಯಲ್ ಮೀಡಿಯಾದಲ್ಲಿ ಕಾಡಿಸುತ್ತಿದ್ದ ಕಾನ್ಸ್‌ಟೇಬಲ್‌; ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆ!
Edited By:

Updated on: Feb 22, 2026 | 7:25 AM

ಶಿವಮೊಗ್ಗ, ಫೆಬ್ರವರಿ 21: ಜಿಲ್ಲೆಯಲ್ಲಿ ಕಾನ್ಸ್‌ಟೇಬಲ್‌ನ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿ (Shivamogga) ತಾಲೂಕಿನ ಹೊಸ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಮಹಿಳೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಆಕೆಗೆ ವಿಪರೀತ ತೊಂದರೆ ನೀಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ.

ಕಾನ್ಸ್‌ಟೇಬಲ್ ಮೋಹನ್ ವಿರುದ್ಧ ಎಫ್‌ಐಆರ್

ಮೃತಳ ತಾಯಿ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಕಾನ್ಸ್‌ಟೇಬಲ್ ಮೋಹನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಫೇಸ್‌ಬುಕ್ ಹಾಗೂ ಮೆಸೇಂಜರ್ ಮೂಲಕ ತನ್ನ ಮಗಳಿಗೆ ನಿರಂತರವಾಗಿ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದನೆಂದು, ಬ್ಲಾಕ್ ಮಾಡಿದರೂ ಬೇರೆ ಖಾತೆಗಳಿಂದ ಸಂಪರ್ಕಿಸುತ್ತಿದ್ದನೆಂದು ದೂರಿನಲ್ಲಿ ತಾಯಿ ಉಲ್ಲೇಖಿಸಿದ್ದಾರೆ. ಮಹಿಳೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.ಮೃತದೇಹದ ಮರಣೋತ್ತರ ಪರೀಕ್ಷೆ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಪೂರ್ಣಗೊಂಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಬಿ. ನಿಖಿಲ್ ಪ್ರತಿಕ್ರಿಯೆ ನೀಡಿದ್ದು, ಆರೋಪಿ ಕಾನ್ಸ್‌ಟೇಬಲ್ ಮೋಹನ್ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಹಾಗೂ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನೂ ಅನೇಕ ಮಹಿಳೆಯರಿಗೆ ಕಾಟ ಕೊಟ್ಟಿದ್ದ ಆಸಾಮಿ

ಮೋಹನ್ ಈ ಹಿಂದೆ ಭದ್ರಾವತಿ ನ್ಯೂಟೌನ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, ಅಶಿಸ್ತು ಹಿನ್ನೆಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಠಾಣೆಗೆ ವರ್ಗಾವಣೆಗೊಂಡಿದ್ದ ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಇನ್ನೂ ಅನೇಕ ಮಹಿಳೆಯರಿಗೆ ಇದೇ ರೀತಿ ಕಿರುಕುಳ ನೀಡಿದ್ದಾನೆ ಎಂಬ ಆರೋಪಗಳೂ ಕೇಳಿಬಂದಿವೆ. ಜೊತೆಗೆ ನಗರದಲ್ಲಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದನೆಂಬ ದೂರುಗಳೂ ದಾಖಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ ತುಂಗಾ ನದಿ ತೀರದಲ್ಲಿ ವಿದೇಶಿಗರ ಪಾರ್ಟಿ! ರೆಸಾರ್ಟ್ ಮಾಲೀಕರ ಮೇಲೆ ಬಿತ್ತು ಕೇಸ್

ಆರು ದಿನಗಳ ಹಿಂದೆ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಪೊಲೀಸ್ ಪೇದೆ ಜಗದೀಶ್ ಅನಾರೋಗ್ಯದಿಂದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಆತ್ಮಹತ್ಯೆಯಾದ ಆರು ದಿನಗಳಲ್ಲೇ ಪತ್ನಿ ಕೂಡ ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ತಂದೆ ತಾಯಿಯಿಲ್ಲದೆ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಈಗ ಅನಾಥರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:19 pm, Sat, 21 February 26

Basavaraj Yaraganavi
Follow Us