
ಬೆಂಗಳೂರು, ಜುಲೈ 26: ಸಿದ್ದರಾಮಯ್ಯ (Siddaramaiah) ಮೇ 28ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದಿದ್ದರು. ಈಗಲೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದಿರುವ ಅವರು, ಆದರೆ 2028ಕ್ಕೆ ಸ್ಪರ್ಧಿಸಲ್ಲ ಎಂದಿದ್ದಾರೆ. ಆ ಮೂಲಕ ಚುನಾವಣಾ ರಾಜಕೀಯದಿಂದ ಸಿದ್ದರಾಮಯ್ಯ ದೂರಸರಿಯಲು ನಿರ್ಧರಿಸಿದ್ದಾರೆ. ಈ ನಿರ್ಧಾರ ಇದೀಗ ಅವರ ಅಭಿಮಾನಿಗಳು ಸೇರಿದಂತೆ ಆಪ್ತರಲ್ಲಿ ಆತಂಕ ಮನೆ ಮಾಡಿದ್ದು, ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಐಎಬಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ‘‘2028ಕ್ಕೆ ಚುನಾವಣೆಗೆ ನಿಲ್ಲುವುದಿಲ್ಲ ಅಂತಾ ಪತ್ರಿಕೆಯಲ್ಲಿ ನೋಡಿದ್ದೇನೆ, ಆದರೆ ಅವರು ನಿವೃತ್ತಿಯಾಗಬಾರದು’’ ಎಂದರು
ಇದನ್ನೂ ಓದಿ: ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
‘‘ಸಿದ್ದರಾಮಯ್ಯ ನಿವೃತ್ತಿ ಆದರೆ ರಾಜಕಾರಣದಲ್ಲಿ ಒಬ್ಬ ಸೂಕ್ತ ಮಾರ್ಗದರ್ಶಕರೇ ಇಲ್ಲದಂತಾಗುತ್ತೆ. ಇನ್ನೊಂದು ಚುನಾವಣೆಗೆ ಸ್ಪರ್ಧೆ ಮಾಡಲಿ ಅಂತಾ ಕೇಳಿಕೊಳ್ಳುವೆ’’ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಪ್ರತಿಕ್ರಿಯಿಸಿದ್ದು, ‘‘ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರು ನಿವೃತ್ತಿಯಾಗಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯನವರ ಅವಶ್ಯಕತೆ ಇದೆ. ಅವರು ರಾಜ್ಯ ಕಂಡಂತಹ ದೊಡ್ಡ ರಾಜಕಾರಣಿ. ಸಿದ್ದರಾಮಯ್ಯನವರು ನಿವೃತ್ತಿ ಹೊಂದುವ ಪ್ರಶ್ನೆಯೇ ಇಲ್ಲ. ಮುಂದೆ ಕೂಡ ಪಕ್ಷಕ್ಕೆ ಅವರ ಅವಶ್ಯಕತೆ ಇದೆ ಎನ್ನುವುದು ನನ್ನ ಭಾವನೆ’’ ಎಂದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಅಶೋಕ್ ಪಟ್ಟಣ್, ‘‘ಚುನಾವಣೆಗೆ ನಿಲ್ಲದಿದ್ದರೂ ಪಕ್ಷದ ಪರ ಕೆಲಸ ಮಾಡುತ್ತಾರೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ 100ಕ್ಕೆ 100ರಷ್ಟು ಗೆಲ್ಲುತ್ತೇವೆ. ರಾಹುಲ್ ಗಾಂಧಿ ಹೇಳಿದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದಿದ್ದರು. ಈಗ ಅವರೇ ಕರೆದು ನೀವು ಕೆಲಸ ಮಾಡಿ ಅಂದರೆ ಮಾಡುತ್ತಾರೆ. ನೀವು ಚುನಾವಣೆಗೆ ನಿಲ್ಲಿ ಅಂದರೆ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ’’ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.