AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಧಿಕೃತ ಧಾರ್ಮಿಕ ಕಟ್ಟಡ ತೆರವು ವಿವಾದ: ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?

ಅನಧಿಕೃತ ಅಂದ್ರೆ ಸ್ಥಳೀಯ ಆಡಳಿತದ ಮಂಜೂರಾತಿ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಕಟ್ಟಿದ ಕಟ್ಟಡ ಎಂದು ಕೋರ್ಟ್ ವ್ಯಾಖ್ಯಾನಿಸಿತ್ತು.

ಅನಧಿಕೃತ ಧಾರ್ಮಿಕ ಕಟ್ಟಡ ತೆರವು ವಿವಾದ: ಸುಪ್ರೀಂಕೋರ್ಟ್ ಆದೇಶದಲ್ಲೇನಿದೆ?
ಸಾಂಕೇತಿಕ ಚಿತ್ರ
TV9 Web
| Updated By: guruganesh bhat|

Updated on: Sep 13, 2021 | 2:53 PM

Share

ಮೈಸೂರಿನಲ್ಲಿ ಭುಗಿಲ್ಲೆದ್ದಿರುವ ಹಿಂದೂ ದೇವಸ್ಥಾನ ತೆರವು ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ಆದೇಶವೊಂದರ ಪ್ರಸ್ತಾಪವಾಗುತ್ತಿದೆ. ಹಾಗಾದರೆ ಸುಪ್ರೀಂಕೋರ್ಟ್ ನೀಡಿದ ಆ ಆದೇಶವಾದರೂ ಏನು? ಎಂಬ ಮಾಹಿತಿ ಇಲ್ಲಿದೆ. 2009 ಸೆಪ್ಟೆಂಬರ್ 29ರ ನಂತರದ ಅನಧಿಕೃತ ಧಾರ್ಮಿಕ ಕಟ್ಟಡಗಳಗಳನ್ನು ತೆರವುಗೊಳಿಸುವಂತೆ ಕೋರ್ಟ್ ಆದೇಶಿಸಿತ್ತು. ಸರ್ಕಾರಿ ರಸ್ತೆ, ಪಾರ್ಕ್‌, ಮೈದಾನದಲ್ಲಿ ಧಾರ್ಮಿಕ ಕಟ್ಟಡಗಳು ಕಟ್ಟಬಾರದು ಎಂದು ಆದೇಶಿಸಿದ್ದ ಸುಪ್ರೀಂಕೋರ್ಟ್ ದೇವಾಲಯ, 2009 ಸೆಪ್ಟೆಂಬರ್ 29ರ ಬಳಿಕ ಕಟ್ಟಿರುವ ಧಾರ್ಮಿಕ ಸ್ಥಳಗಳನ್ನೂ ಸೇರಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಸ್ಪಷ್ಟವಾಗಿ ಆದೇಶಿಸಿತ್ತು. 

2009 ಸೆಪ್ಟೆಂಬರ್ 29ರ ಮುಂಚಿನ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಆಯಾ ಜಿಲ್ಲಾಡಳಿತವೇ ಪರಿಶೀಲನೆ ನಡೆಸಬೇಕು. ಕಟ್ಟಡ ನೆಲಸಮ ಮಾಡಬೇಕಾ? ಸ್ಥಳಾಂತರಿಸಬೇಕಾ? ಉಳಿಸಿಕೊಳ್ಳಬೇಕಾ? ಎಂಬ 3 ಹಂತಗಳಲ್ಲಿ ಜಿಲ್ಲಾಡಳಿತಗಳು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರ್ಟ್ ತಿಳಿಸಿತ್ತು. ಜತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಅನಧಿಕೃತ ಧಾರ್ಮಿಕ ಕಟ್ಟಡಗಳ ವಿಚಾರದಲ್ಲಿ ಉತ್ತರದಾಯಿಯನ್ನಾಗಿಸಿತ್ತು. ಈಕುರಿತು ಎಲ್ಲಾ ರಾಜ್ಯಗಳಿಗೂ ನಿರ್ದೇಶನ ನೀಡಿತ್ತು.

ಇಲ್ಲಿ ಅನಧಿಕೃತ ಪದದ ಅರ್ಥವೇನು? ಅನಧಿಕೃತ ಅಂದ್ರೆ ಸ್ಥಳೀಯ ಆಡಳಿತದ ಮಂಜೂರಾತಿ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಕಟ್ಟಿದ ಕಟ್ಟಡ ಎಂದು ಕೋರ್ಟ್ ವ್ಯಾಖ್ಯಾನಿಸಿತ್ತು.

2009 ಸೆಪ್ಟೆಂಬರ್ 29ರ ನಂತರದ ಅನಧಿಕೃತ ಕಟ್ಟಡಗಳ ಪಟ್ಟಿ ಆಯಾ ಜಿಲ್ಲಾಡಳಿತ ಸಿದ್ಧಪಡಿಸಬೇಕಿತ್ತು. ಪಟ್ಟಿ ಮಾಡಿದ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಆಯಾ ಜಿಲ್ಲಾಡಳಿತಗಳು ಕ್ರಮವಹಿಸಬೇಕಿತ್ತು. ಆದರೆ ಸುಪ್ರೀಂಕೋರ್ಟ್‌ ನಿರ್ದೇಶಿಸಿದ 12 ವರ್ಷಗಳ ನಂತರವೂ ಜಿಲ್ಲಾಡಳಿತಗಳು ಸಮರ್ಪಕ ಪಟ್ಟಿಯನ್ನೇ ಸಿದ್ಧಪಡಿಸಿಲ್ಲ. ಆದ್ದರಿಂದಲೇ ಅನಧಿಕೃತ ಧಾರ್ಮಿಕ ಕಟ್ಟಡಗಳ ಬಗ್ಗೆ ಆಯಾ ಜಿಲ್ಲಾಡಳಿತಗಳಿಂದ ಗೊಂದಲದ ಕ್ರಮ ಕೈಗೊಳ್ಳಲಾಗಿದೆ. 12 ವರ್ಷಗಳು ಸುಮ್ಮನೇ ಕುಳಿತು ಇದೀಗ ದಿಢೀರ್ ನೆಲಸಮಕ್ಕೆ ಮುಂದಾಗಿರುವುದೇ ವಿವಾದಕ್ಕೆ ಕಾರಣವಾಗಿದೆ. 2009ರ ಸೆಪ್ಟೆಂಬರ್ 29ಕ್ಕಿಂತ ಮುಂಚೆ ಕಟ್ಟಿದ ಧಾರ್ಮಿಕ ಕಟ್ಟಡಗಳನ್ನು ಜಿಲ್ಲಾಡಳಿತ ಗುರುತಿಸಬೇಕಿತ್ತು. ಪ್ರತೀ ಧಾರ್ಮಿಕ ಕಟ್ಟಡಗಳ ಸ್ಥಳಗಳ ಕುರಿತು ಸಮರ್ಪಕ ಸಮೀಕ್ಷೆ ನಡೆಸಿ ವರದಿ ತಯಾರಿಸಬೇಕಾಗಿತ್ತು. ಆ ಧಾರ್ಮಿಕ ಕಟ್ಟಡ ಐತಿಹಾಸಿಕವಾಗಿದ್ದರೆ ಅವುಗಳನ್ನು ಉಳಿಸಿಕೊಳ್ಳಲು ಸರ್ಕಾರ ಆದೇಶಿಸಬಹುದಿತ್ತು.

ಜತೆಗೆ ರಸ್ತೆಗೆ ಅಡ್ಡಲಾಗಿ ಧಾರ್ಮಿಕ ಕಟ್ಟಡವಿದ್ದರೆ ಆ ರೀತಿಯ ಕಟ್ಟಡಗಳನ್ನು ಸ್ಥಳಾಂತರಿಸುವ ಅವಕಾಶವಿತ್ತು. ಕೆಲ ಕಟ್ಟಡಗಳು ಅನಧಿಕೃತವಾಗಿದ್ದು ನೆಲಸಮ ಅಗತ್ಯವಾಗಿದ್ದರೆ ಆ ಬಗ್ಗೆಯೂ ಆದೇಶಿಸಬಹುದಾಗಿತ್ತು. ಸರ್ಕಾರ, ಆಯಾ ಜಿಲ್ಲಾಡಳಿತ ಸೂಕ್ತ ವಿವೇಚನೆ ಬಳಸದೇ ಕ್ರಮ ಕೈಗೊಂಡ ಹಿನ್ನೆಲೆ ಸಮಸ್ಯೆ ಉದ್ಭವವಾಗಿದೆ ಎನ್ನಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಜಾರಿ ಹೇಗಿದೆ ಎಂದು ಕರ್ನಾಟಕ ಹೈಕೋರ್ಟ್ ಪರಿಶೀಲನೆ ನಡೆಸುತ್ತಿದೆ.

ಇದನ್ನೂ ಓದಿ:  

ಇನ್ನೂ 92 ದೇಗುಲಗಳು ಇವೆ; ಅವುಗಳನ್ನು ಮುಟ್ಟಲು ಬಿಡಲ್ಲ- ನಂಜನಗೂಡು ದೇಗುಲ ತೆರವು ಬಳಿಕ ಪ್ರತಾಪ್ ಸಿಂಹ ವಾಗ್ದಾಳಿ

ದೇವಸ್ಥಾನಗಳ ತೆರವಿಗೆ ಸಂಸದ ಪ್ರತಾಪ್​ ಸಿಂಹ ತೀವ್ರ ಆಕ್ರೋಶ; ಅನಧಿಕೃತ ಮಸೀದಿ ನಿರ್ಮಾಣ ತಪ್ಪು ಅನ್ನಿಸಲ್ವಾ? ಎಂದು ಪ್ರಶ್ನೆ

(Supreme Court verdict on Unauthorised Religious Building Clearance about Mysuru Nanjanagudu Temple demolished issue)