
ಮೈಸೂರು, (ಸೆಪ್ಟೆಂಬರ್ 14): ಮಸೀದಿ ಮುಂದೆ ಮೆರವಣಿಗೆ ಮಾಡಿ ಪಟಾಕಿ ಹೊಡೆದ್ರೆ ನಿಮ್ ಗ್ರಹಚಾರ ಬಿಡಿಸ್ತೀನಿ ಎನ್ನುವ ಟಿ.ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ದರ್ಪದ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಇನ್ಸ್ಪೆಕ್ಟರ್ ಧನಂಜಯ್ನನ್ನು ಅಮಾನತು ಮಾಡಲೇಬೇಕೆಂದು ವಿಪಕ್ಷ ಬಿಜೆಪಿ ಪಟ್ಟು ಹಿಡಿದಿದೆ. ಆದ್ರೆ, ಗೃಹ ಇಲಾಖೆ ಮಾತ್ರ, ಮಸೀದಿ ಮಾರ್ಗದಲ್ಲಿ ಗಣೇಶ ಮರವಣಿಗೆಗೆ ಅವಕಾಶ ನೀಡಿ ಕೈತೊಳೆದುಕೊಂಡಿದೆ. ಅಲ್ಲದೇ ಬಿಜೆಪಿಗರಿಗೆ ಬೆಣ್ಣೆ ಹಚ್ಚುವ ಕೆಲಸಕ್ಕೆ ಮುಂದಾಗಿದೆ. ಇದರ ಮಧ್ಯೆ ಇದೀಗ ಇನ್ಸ್ಪೆಕ್ಟರ್ ಧನಂಜಯ್ ವಿರುದ್ಧ ಹಳೇ ಪ್ರಕರಣ ಮುನ್ನಲೆಗೆ ಬಂದಿವೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಾಲ್ವರು ದಲಿತ ಯುವಕರನ್ನ ಠಾಣೆಗೆ ಕರೆತಂದು ಥಳಿಸಿದ್ದ ಫೋಟೋಗಳು ವೈರಲ್ ಆಗಿವೆ. ಅಲ್ಲದೇ 2014ರಲ್ಲಿ ಇನ್ಸ್ಪೆಕ್ಟರ್ ವಿರುದ್ಧ ಅತ್ಯಾಚಾರ ಪ್ರಕರಣ ಆರೋಪ ಬೆಳಕಿಗೆ ಬಂದಿದೆ. ಇದರೊಂದಿಗೆ ಗ್ರಹಚಾರ ಬಿಡಿಸ್ತೀನಿ ಎಂದಿದ್ದ ಇನ್ಸ್ಪೆಕ್ಟರ್ನ ಗ್ರಹಚಾರ ಕೆಟ್ಟಾಗಿದೆ.
ಗಣೇಶ ಭಕ್ತರಿಗೆ ಧಮ್ಕಿ ಹಾಕಿರುವ ಈ ಇನ್ಸ್ಪೆಕ್ಟರ್ ಧನಂಜಯ್ ವಿರುದ್ಧ ಹಳೇ ಫೋಟೋಗಳು ವೈರಲ್ ಆಗಿವೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಾಲ್ವರು ದಲಿತ ಯುವಕರನ್ನ ಠಾಣೆಗೆ ಕರೆತಂದು ಥಳಿಸಿದ್ರು ಅನ್ನೋ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕ್ರಿಕೆಟ್ ಬ್ಯಾಟ್ ಹಾಗೂ ಸ್ಟಂಪ್ ಸೇರಿದಂತೆ ಕೆಲ ಫೋಟೋಗಳು ಈಗ ಮತ್ತೆ ವೈರಲ್ ಆಗುತ್ತಿವೆ.
ಇನ್ನು ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿದ್ದ ಧನಂಜಯ್ ವಿರುದ್ಧ 2014ರಲ್ಲಿಅತ್ಯಾಚಾರ ಆರೋಪ ಕೇಳಿಬಂದಿತ್ತು. ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ದಿಲ್ಲಿ ಮೂಲದ ಮಾಡೆಲ್ ಇಬ್ಬರು ದೆಹಲಿ ಕೋರ್ಟ್ನಲ್ಲಿ PCR ದಾಖಲಿಸಿದ್ದರು. ಈ ದೂರಿನ ಮೇರೆಗೆ ದೆಹಲಿ ಪೊಲೀಸರು ಇನ್ಸಪೆಕ್ಟರ್ ಧನಂಜಯ ಹುಡುಕಿಕೊಂಡು ಬಂದಿದ್ದರು. ಆಗ ಇನ್ಸ್ಪೆಕ್ಟರ್ ಧನಂಜಯ್ ತಲೆಮರಿಸಿಕೊಂಡಿದ್ದರು. ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಧನಂಜಯ್ ಗೆ ಪ್ರಕರಣದ ಸಂಬಂಧ ಯುವತಿ ಪರಿಚಯವಾಗಿತ್ತು . ನಂತರ ಮದುವೆ ಆಗಿರುವುದನ್ನ ಮುಚ್ಚಿಟ್ಟು ಮಾಡೆಲ್ ಜೊತೆ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿತ್ತು.

ಹೀಗೆ ಗಣೇಶೋತ್ಸವ ಸಮಿತಿಯ ಯುವಕರಿಗೆ ಧಮ್ಕಿ ಹಾಕಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ಟಿ ನರಸೀಪುರ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ಅವರ ಹಳೆಯ ದರ್ಪದ ಘಟನೆಗಳು ಮತ್ತು ಕ್ರೌರ್ಯದ ನಡವಳಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಭಾರೀ ಸದ್ದು ಮಾಡುತ್ತಿವೆ. ಈ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.
ಪಿಐ ಧನಂಜಯ್ ಅವರು ಟಿ.ನರಸೀಪುರ ಠಾಣೆಗೆ ಬಂದು 2 ವರ್ಷ 8 ತಿಂಗಳು ಆಗಿವೆ. ಮೇ 10ರಂದು ಮೈಸೂರು ದಕ್ಷಿಣ ಠಾಣೆಗೆ ವರ್ಗಾವಣೆಯಾಗಿತ್ತು. ಆದ್ರೆ, ವರ್ಗಾವಣೆ ಆದೇಶ ಬಂದ 24 ಗಂಟೆಯಲ್ಲೇ ರದ್ದು ಮಾಡಿಸಿಕೊಂಡಿದ್ದರು. 2 ವರ್ಷ ಕಾರ್ಯನಿರ್ವಹಿಸಿದ ಬಳಿಕವೂ ಜಾಗ ಖಾಲಿ ಮಾಡದೇ ಇದೇ ಟಿ. ನರಸೀಪುರ ಠಾಣೆಯಲ್ಲೇ ಠಿಕಾಣಿ ಹೂಡಿಸಿದ್ದಾರೆ.
ಇನ್ನು ಇನ್ಸ್ಪೆಕ್ಟರ್ ಧನಂಜಯ್ ಅವರನ್ನು ಅಮಾನತು ಮಾಡಬೇಕೆಂದು ಬಿಜೆಪಿಗರಿ ಪಟ್ಟು ಹಿಡಿದಿರುವುದಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಕ್ರಮ ಬಗ್ಗೆ ನೋಡೋಣ, ಬಿಜೆಪಿಯವರನ್ನು ಕೇಳಿ ಮಾಡಲು ಆಗಲ್ಲ. ಬಿಜೆಪಿಯವರು ಹೇಳಿದಂತೆ ನಾವು ಆಡಳಿತ, ಕೇಳುವುದಕ್ಕೆ ಆಗಲ್ಲ. ಅಶೋಕ್ ಗೃಹ ಸಚಿವರಿದ್ದಾಗ ಸಭೆ ಮಾಡಿಲ್ವಾ, ಸೂಚನೆ ಕೊಟ್ಟಿಲ್ವಾ? ಅಶೋಕ್ ಇದ್ದಾಗ ಏನು ನಿಯಮ ಇತ್ತೋ ಈಗಲೂ ಅದೇ ನಿಯಮ. ಮೈಸೂರಿನ ನಿರುದ್ಯೋಗಿ ರಾಜಕಾರಣಿಗೆ ಕೆಲಸ ಇಲ್ಲ. ಪೊಲೀಸ್ ಸ್ಟೇಷನ್ಗೆ ನುಗ್ಗುತ್ತೇನೆ ಅಂತಾರಲ್ಲ, ಸರಿನಾ? ಇವರ ಸರ್ಕಾರದಲ್ಲಿ ಠಾಣೆಗೆ ನುಗ್ತೀನಿ ಅಂದ್ರೆ ಸುಮ್ಮನಿರುತ್ತೀರಾ? ಎಸ್ಪಿ ವರದಿ ಕೊಡಲಿ, ವರದಿ ನೋಡಿ ತೀರ್ಮಾನ ಮಾಡುತ್ತೇವೆ. ಬಿಜೆಪಿಯವರು ಅಮಾನತು ಮಾಡಿ ಅಂದ್ರೆ ಮಾಡಿಬಿಡಬೇಕಾ? ಎಂದು ಪ್ರಶ್ನಿಸಿದರು.
Published On - 2:08 pm, Mon, 14 September 26