ಮಗಳ ಜನ್ಮದಿನವೇ MLC ರಾಜೇಂದ್ರ ಹತ್ಯೆಗೆ ಸ್ಕೆಚ್: ಎಫ್ಐಆರ್ ದಾಖಲು, ಪ್ರಭಾವಿ ರಾಜಕಾರಣಿಗಳ ಕೈವಾಡ ಶಂಕೆ
ಒಂದೆಡೆ ಸಚಿವ ಕೆ.ಎನ್ ರಾಜಣ್ಣ ಅವರಿಗೆ ಹ್ರನಿಟ್ರ್ಯಾಪ್ ಯತ್ನ ಪ್ರಕರಣ ಭಾರೀ ಸಂಚಲನ ಮೂಡಿಸಿದ್ದರೆ ಮತ್ತೊಂದೆಡೆ ಅವರ ಪುತ್ರ ಎಂಎಲ್ಸಿ ಸಿ ರಾಜೇಂದ್ರ ಹತ್ಯೆಗೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಫ್ಐಆರ್ ದಾಖಲಾಗಿದೆ. ಹತ್ಯಗೆ ಸಂಚು ರೂಪಿಸಿದ್ದ ಐವರು ಯಾರು ಎನ್ನುವುದು ಬಹಿರಂಗವಾಗಿದ್ದು, ಇದೀಗ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಸಿದ್ದಾರೆ. ಇನ್ನು ಈ ಪ್ರಕರಣದ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ತುಮಕೂರು, (ಮಾರ್ಚ್ 28): ಕಳೆದ ನವೆಂಬರ್ನಲ್ಲಿ ನನ್ನ ಕೊಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಿದ್ದ ಸಚಿವ ಕೆ.ಎನ್ ರಾಜಣ್ಣ (KN rajanna) ಅವರ ಪುತ್ರ ಎಂಎಲ್ಸಿ ರಾಜೇಂದ್ರ (Congress MLC Rajendra) ಇಂದು(ಮಾರ್ಚ್ 28) ತುಮಕೂರು (Tumakuru)ಎಸ್ಪಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅನಾಮಧೇಯ ಮೂಲಗಳಿಂದ ಆಡಿಯೋ ಸಿಕ್ಕ ಹಾಗೂ ಆಡಿಯೋದಲ್ಲಿ ರಾಜೇಂದ್ರ ಸುಪಾರಿ ಬಗ್ಗೆ ನಡೆಸಿದ್ದ ಮಾತುಕತೆ ಮಾಹಿತಿ ಮೇರೆಗೆ ಸೋಮ, ಭರತ, ಅಮಿತ್, ಗುಂಡ, ಯತೀಶ್ ಕೊಲೆಗೆ ಸಂಚು ರೂಪಿಸಿರುವುದು ಬಹಿರಂಗವಾಗಿದ್ದು, ಈ ಸಂಬಂಧ ಈ ಐವರ ವಿರುದ್ಧ ಕ್ಯಾತ್ಸಂದ್ರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಸಿದ್ದಾರೆ.
ರಾಜೇಂದ್ರ ಅವರ ಮಗಳ ಜನ್ಮದಿನವೇ ಹತ್ಯೆಗೆ ಪ್ಲ್ಯಾನ್ ನಡೆದಿತ್ತು. ಆದ್ರೆ, ಸಮಯ ಸಂದರ್ಭ ಕಾರಣದಿಂದ ಕೃತ್ಯವೆಸಗಲಾಗಿರಲಿಲ್ಲ. ಮುಂದೊಂದು ದಿನ ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಇದಕ್ಕಾಗಿಯೇ ರಾಜೇಂದ್ರ ಹತ್ಯೆಗೆ ಹೊಸ ಕಾರು, ಶಸ್ತ್ರಾಸ್ತ್ರ ಖರೀದಿಸಿದ್ದರು. ಆರೋಪಿಗಳಾದ ಸೋಮ, ಭರತ, ಅಮಿತ್, ಗುಂಡ, ಯತೀಶ್ ಕೊಲೆಗೆ ಸಂಚು ರೂಪಿಸಿದ್ದು, 70 ಲಕ್ಷಕ್ಕೆ ಡೀಲ್ ಮಾಡಿಕೊಂಡು ಅದರಲ್ಲಿ 5 ಲಕ್ಷ ಮುಂಗಡವಾಗಿ ಪಡೆದಿದ್ದರು. ಮಧುಗಿರಿ, ತುಮಕೂರು, ಬೆಂಗಳೂರು, ಕಲಾಸಿಪಾಳ್ಯಗಳಲ್ಲಿ ಚಲನವಲನಗಳ ಬಗ್ಗೆ ಆಪ್ಡೇಟ್ ಮಾಡುತ್ತಿದ್ದ ಬಗ್ಗೆ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ತುಮಕೂರಿನ ಶಿರಾ ಗೇಟ್ ಶೆಡ್ನಲ್ಲಿ ಸ್ಕೆಚ್ ಹಾಕುತ್ತಿದ್ದರು. ಉನ್ನತಮಟ್ಟದ ರಾಜಕಾರಣಿಗಳ ಕೈವಾಡವಿರುವುದಾಗಿ ರಾಜೇಂದ್ರ ದೂರಿನಲ್ಲಿ ತಿಳಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಹಾಗೇ ತಮಗೆ ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸಚಿವ ರಾಜಣ್ಣ ಹನಿಟ್ರ್ಯಾಪ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಸದ್ದಿಲ್ಲದೇ ತನಿಖೆ ಶುರು!
ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿ ರಾಜೇಂದ್ರ
ದೂರು ಕೊಟ್ಟ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿ ರಾಜೇಂದ್ರ, ನಾನು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜಿಗೆ ದೂರು ನೀಡಿದ್ದೇನೆ. ತುಮಕೂರು ಎಸ್ಪಿಗೆ ದೂರು ನೀಡುವಂತೆ ಸೂಚನೆ ಕೊಟ್ಟಿದ್ದರು. ಅದರಂತೆ ಇವತ್ತು ದೂರು ತುಮಕೂರು ಎಸ್ಪಿಗೆ ದೂರು ಕೊಟ್ಟಿದ್ದೇನೆ. ನನ್ನ ಮಗಳ ಬರ್ತ್ಡೇ ದಿನದಂದು ನನ್ನ ಕೊಲೆಗೆ ಯತ್ನಿಸಿದ್ದರು. ಕೊಲೆಗೆ 70 ಲಕ್ಷ ರೂಪಾಯಿ ಸುಪಾರಿ ನೀಡಲಾಗಿತ್ತು. ಅದರಲ್ಲಿ ಐದು ಲಕ್ಷ ರೂಪಾಯಿ ಪಡೆದಿದ್ದಾರೆ. ಇದೆಲ್ಲಾ ಆಡಿಯೋ ನನ್ನ ಬಳಿ ಇದೆ. ಒಂದು ಹುಡುಗಿ ಹುಡುಗನ ನಡುವೆ ನಡೆದ ಸಂಭಾಷಣೆ ಆಡಿಯೋ ಇದೆ. ಹೀಗಾಗಿ ಭದ್ರತೆ ಕೊಡಿ ಎಂದು ಕೂಡ ಪೊಲೀಸ್ ಇಲಾಖೆಗೆ ಕೇಳಿದ್ದೇನೆ ಎಂದು ಸಿ ರಾಜೇಂದ್ರ ಹೇಳಿದ್ದಾರೆ.
ನಾನು, ನಾನಾಗಲಿ ನನ್ನ ಕೆಲಸ ಆಗಲಿ ಅಂತ ಇದ್ದೋನು. ನನ್ನ ಮುಗಿಸಲು ಸುಪಾರಿ ಯಾಕೆ ಕೊಟ್ಟಿದ್ದಾರೆ ಅಂತ ಗೊತ್ತಿಲ್ಲ. ಸೋಮ ಮತ್ತು ಭರತ್ ಅನ್ನೋ ಹೆಸರು ಆಡಿಯೋದಲ್ಲಿದೆ. ಅವರಿಬ್ಬರು ಯಾರು ಎಂದು ಕೂಡ ನನಗೆ ಗೊತ್ತಿಲ್ಲ. ಲೇಡಿ ಮತ್ತು ಒಬ್ಬ ಹುಡುಗ ಮಾತಾಡಿರುವ ಆಡಿಯೋ ಅದು. 18 ನಿಮಿಷದ ಸಂಭಾಷಣೆ ಆಡಿಯೋದಲ್ಲಿದೆ. ಸುಪಾರಿ ಕೊಟ್ಟಿದ್ದಾರೆ ಹೊಡೆಯಬೇಕು ಅಂತ. ಇದರ ವಿಚಾರವೇನು ಎಂಬುದರ ಬಗ್ಗೆ ತನಿಖೆಯಾಗಬೇಕು. ಯಾವ ಕಾರಣಕ್ಕೆ ನನ್ನ ಮೇಲೆ ದ್ವೇಷ ಇದೆ ಎಂಬುದು ಗೊತ್ತಾಗಬೇಕು ಎಂದು ರಾಜೇಂದ್ರ ಹೇಳಿದ್ದಾರೆ.
ಜಿಪಿಎಸ್ ಚಿಪ್ ನನ್ನ ಕಾರಿಗೆ ಅಳವಡಿಸಬೇಕು ಎಂದುಕೊಂಡಿದ್ದರು. ಜನವರಿಯಲ್ಲಿ ನನ್ನ ಸರ್ಕಲ್ನಲ್ಲಿ ಅದು ಸಿಕ್ತು. ನಾನು ತಮಾಷೆ ಎಂದು ಸುಮ್ಮನಾಗಿದ್ದೆ. ಆದ್ರೆ ಅದು ಗಂಭೀರ ವಿಷಯ ಎಂದು ಗೊತ್ತಾಗಿ ಈಗ ದೂರು ನೀಡಿದ್ದೇನೆ. ಹನಿಟ್ರ್ಯಾಪ್ ವಿಚಾರಾಗಿ ಸಿಐಡಿ ತನಿಖೆ ನಡೆಸುತ್ತಿದೆ. ಅವರು ನಿನ್ನೆ ಬೆಂಗಳೂರಿನ ಮನೆ ಹತ್ತಿರ ಬಂದಿದ್ದಾರೆ, ತನಿಖೆ ನಡೆಸುತ್ತಾರೆ ಎಂದರು.