ಹನಿಟ್ರ್ಯಾಪ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ: ಕೊನೆಗೂ ಗೃಹ ಸಚಿವರಿಗೆ ದೂರು ನೀಡಿದ ಕೆಎನ್ ರಾಜಣ್ಣ
ಹನಿಟ್ರ್ಯಾಪ್ ಬಗ್ಗೆ ಕೆಲವು ಸುಳಿವನ್ನ ಬಿಟ್ಟುಕೊಟ್ಟ ಸಚಿವ ಕೆಎನ್ ರಾಜಣ್ಣ ಇಂದು(ಮಾರ್ಚ್ 25) ದೂರು ನೀಡಲೇಬೇಕೆಂದು ತೀರ್ಮಾನ ಮಾಡಿದ್ದರು. ಪರಮೇಶ್ವರ್ ಎಲ್ಲೆ ಇದ್ದರೂ ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆಂದು ಹೇಳಿದಂತೆಯೇ ತುಮಕೂರಿನಿಂದ ಬೆಂಗಳೂರಿಗೆ ಆಗಮಿಸಿದ ರಾಜಣ್ಣ ನೆಲಮಂಗಳದ ಟಿ.ಬೇಗೂರು ಕಾಲೇಜ್ನಲ್ಲಿರುವ ಪರಮೇಶ್ವರ್ರನ್ನು ಭೇಟಿ ಮಾಡಿದರು. ಆದ್ರೆ, ಅಲ್ಲಿ ಬದಲಿಗೆ ಬೆಂಗಳೂರಿನ ಅವರ ಸದಾಶಿವ ನಗರದ ನಿವಾಸಕ್ಕೆ ಬಂದು ಹನಿಟ್ರ್ಯಾಪ್ ಬಗ್ಗೆ ದೂರು ನೀಡಿದ್ದಾರೆ.

ಬೆಂಗಳೂರು, (ಮಾರ್ಚ್ 25): ಕರ್ನಾಟಕದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವ ಸಚಿವ ಕೆಎನ್ ರಾಜಣ್ಣ(KN Rajanna )ಆರೋಪಿಸಿರುವ ಹನಿಟ್ರ್ಯಾಪ್(honeytrap) ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಅಂತಿಮವಾಗಿ ದೂರು ನೀಡಿದ್ದಾರೆ. ಹನಿಟ್ರ್ಯಾಪ್ ಯತ್ನ ನಡೆದಿರುವ ಬಗ್ಗೆ ಸದನದಲ್ಲೇ ರಾಜಣ್ಣ ಬಹಿರಂಗ ಪಡಿಸಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ದೂರು ನೀಡಿರಲಿಲ್ಲ. ಆದ್ರೆ, ಇದೀಗ ಅಂತಿಮವಾಗಿ ಇಂದು(ಮಾರ್ಚ್ 25) ಬೆಂಗಳೂರಿನ ಸದಾಶಿವನಗರದಲ್ಲಿರುವ ಗೃಹ ಸಚಿವ(Home Minister Dr G Parameshwar) ಅವರ ನಿವಾಸಕ್ಕೆ ಭೇಟಿ ನೀಡಿ ಡಾ. ಜಿ ಪರಮೇಶ್ವರ್ ಅವರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಹೀಗಾಗಿ ಈಗ ಗೃಹ ಸಚಿವರು ಈ ಪ್ರಕರಣವನ್ನು ಯಾವ ತನಿಖೆಗೆ ಆದೇಶಿಸುತ್ತಾರೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಹನಿಟ್ರ್ಯಾಪ್ ಬಗ್ಗೆ ಕೆಲವು ಸುಳಿವನ್ನ ಬಿಟ್ಟುಕೊಟ್ಟಿರುವ ರಾಜಣ್ಣ ಇಂದು ದೂರು ನೀಡಬೇಕೆಂದು ತೀರ್ಮಾನ ಮಾಡಿದ್ದರು. ಗೃಹ ಸಚಿವ ಪರಮೇಶ್ವರ್ ಎಲ್ಲೇ ಇದ್ದರೂ ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆ ಎಂದು ಹೇಳಿದ್ದರು. ಹೇಳಿದಂತೆಯೇ ರಾಜಣ್ಣ ನೆಲಮಂಗಲದಲ್ಲಿದ್ದ ಪರಮೇಶ್ವರ್ರನ್ನ ಹುಡುಕಿಕೊಂಡು ಹೋಗಿದ್ದರು. ಆದ್ರೆ, ಇಲ್ಲಿ ಬೇಡ ಸದಾಶಿವನಗರದ ನಿವಾಸಕ್ಕೆ ಬನ್ನಿ ಎಂದು ಪರಮೇಶ್ವರ್ ಹೇಳಿ ಕಳುಹಿಸಿದ್ದರು. ಅದರಂತೆ ಇದೀಗ ರಾಜಣ್ಣ ಪರಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಮಧುಬಲೆ ಕೇಸಿಗೆ ಬಿಗ್ ಟ್ವಿಸ್ಟ್: ಹನಿಟ್ರ್ಯಾಪ್ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ?
ಮನವಿ ಸ್ವೀಕರಿಸಿದ ಗೃಹ ಸಚಿವ ಹೇಳಿದ್ದೇನು?
ಇನ್ನು ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸದನದಲ್ಲಿ ಹನಿಟ್ರ್ಯಾಪ್ ಆಗಿದೆ ಅಂತ ಚರ್ಚೆಗೆ ಬಂದಾಗ ಸಹಕಾರಿ ಸಚಿವ ರಾಜಣ್ಣನವರು ನನ್ನ ಮೇಲೂ ಪ್ರಯತ್ನ ಆಗಿದೆ ಎಂದು ಸರ್ಕಾರ, ಹಾಗೂ ಗೃಹ ಸಚಿವರಿಗೆ ಮನವಿ ಕೊಡುತ್ತೇನೆ ಎಂದು ಹೇಳಿದ್ದರು. ಇದು ನಿಜಾ ಆಗಿದ್ರೆ ಉನ್ನತ ಮಟ್ಟದ ತನಿಖೆ ಮಾಡುವುದಾಗಿ ಹೇಳಿದ್ದೆ. ಆದ್ರೆ, ರಾಜಣ್ಣ ಅವರಿಗೆ ಪೂರ್ವ ನಿಯೋಜಿತ ಕೆಲಸದ ನಡುವೆ ದೂರು ಕೊಡಲು ಆಗಲಿಲ್ಲ. ಇಂದು ನನಗೆ ಮನವಿ ಕೊಟ್ಟಿದ್ದಾರೆ. ವಿಧಾನಸಭೆಯಲ್ಲ ಪ್ರಸ್ತಾಪಿಸಿದಂತೆ ಮನವಿ ಕೊಟ್ಟಿದ್ದು, ಮುಂದಿನ ಕ್ರಮದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಹನಿಟ್ರ್ಯಾಪ್ ಪ್ರಕರಣ ಯಾವ ತನಿಖೆಗೆ?
ಬಜೆಟ್ ಮೇಲಿನ ಚರ್ಚೆ ವೇಳೆ ಸಚಿವ ರಾಜಣ್ಣ ಅವರು ಸದನದಲ್ಲೇ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಬಹಿರಂಗಪಡಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ರಾಜಣ್ಣ ಅವರನ್ನ ಮಧುಬಲೆಗೆ ಬೀಳಿಸಲು ಪ್ರಯತ್ನಿಸಿದವರು ಯಾರು? ಈ ಹನಿಟ್ರ್ಯಾಪ್ ಯತ್ನ ಹಿಂದೆ ಯಾರ ಕೈವಾಡ ಇದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲ್ಲೇ ಇವೆ. ಈ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಆರೋಪ-ಪ್ರತ್ಯಾರೋಪಗಳ ನಡೆದಿವೆ. ಮತ್ತೊಂದೆಡೆ ಬಿಜೆಪಿ ನಾಯಕರು ಸಹ ಈ ಹನಿಟ್ರ್ಯಾಪ್ ಅನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಈ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ನೀಡುವಂತೆ ಪಟ್ಟು ಹಿಡಿದಿದೆ. ಹೀಗಾಗಿ ಗೃಹ ಸಚಿವ ಪರಮೇಶ್ವರ್ ಅವರೇ ಉನ್ನತ ಮಟ್ಟದ ತನಿಖೆ ಮಾಡಿಸಿವುದಾಗಿ ಸದನದಲ್ಲೇ ಘೋಷಿಸಿದ್ದರು. ಆದ್ರೆ, ರಾಜಣ್ಣ ಅವರು ದೂರು ಕೊಟ್ಟ ಬಳಿಕ ಯಾವ ತನಿಖೆ ಎನ್ನುವುದನ್ನು ಹೇಳುವುದಾಗಿ ಪರಮೇಶ್ವರ್ ಹೇಳಿದ್ದರು. ಇದೀಗ ಕೊನೆಗೂ ರಾಜಣ್ಣ ಅವರು ದೂರು ನೀಡಿದ್ದು, ಅದ್ಯಾವ ತನಿಖೆಗೆ ಆದೇಶಿಸುತ್ತಾರೆ? ಆ ತನಿಖೆಯಿಂದ ಹನಿಟ್ರ್ಯಾಪ್ ಹಿಂದಿರುವ ಕೈಯನ್ನು ಪತ್ತೆ ಮಾಡುತ್ತಾರಾ ಎನ್ನುವುದು ಕಾದುನೋಡಬೇಕಿದೆ.
ದಾಖಲೆಗಳಿಲ್ಲದೇ ಪರದಾಡುತ್ತಿರುವ ರಾಜಣ್ಣ
ರಾಜಣ್ಣ ಅವರು ಈಗ ದೂರು ಏನೋ ನೀಡಿದ್ದಾರೆ. ಆದ್ರೆ, ಈ ಬಗ್ಗೆ ಸೂಕ್ತ ದಾಖಲೆಗಳು ಲಭ್ಯವಿಲ್ಲದೇ ಪರದಾಡುತ್ತಿದ್ದಾರೆ. ಏಕೆಂದರೆ ಸಚಿವರ ಸರ್ಕಾರಿ ನಿವಾಸದಲ್ಲಿ ಸಿಸಿಟಿವಿಗಳೇ ಇಲ್ಲ. ಹೀಗಾಗಿ ಹನಿಟ್ರ್ಯಾಪ್ ಗ್ಯಾಂಗ್ ಬಂದು ಹೋಗಿರುವ ಯಾವುದೇ ವಿಡಿಯೋ ಸಾಕ್ಷಿಗಳು ಇಲ್ಲ. ಹೌದು…ಸರ್ಕಾರಿ ನಿವಾಸದಲ್ಲೇ ಹನಿಟ್ರ್ಯಾಪ್ಗೆ ಯತ್ನಿಸಿದ್ದಾರೆ ಎಂದಿದ್ದ ರಾಜಣ್ಣ ಸದ್ಯ ಅದನ್ನು ಸಾಬೀತುಪಡಿಸಲು ದಾಖಲೆಗಳಿಲ್ಲದೇ ಪರದಾಡುವಂತಾಗಿದೆ. ಇದರಿಂದ ರಾಜಣ್ಣಗೆ ದೊಡ್ಡ ತಲೆ ನೋವಾಗಿದ್ದು, ಸರ್ಕಾರಿ ನಿವಾಸದಲ್ಲಿ ಸಿಟಿಟಿವಿ ಇಲ್ಲದಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಹನಿಟ್ರ್ಯಾಪ್ ಮಾಡಲು ಬಂದ ಯುವತಿ ಯಾರು? ಚಹರೆ ಬಿಚ್ಚಿಟ್ಟ ರಾಜಣ್ಣ
ಇನ್ನು ರಾಜಣ್ಣ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಹೈಕಮಾಂಡ್ ಮುಂದೆಯೂ ಹೆಸರು ಹೇಳಲು ದಾಖಲೆ ಒದಗಿಸಬೇಕು. ಬಹಿರಂಗವಾಗಿ ಹೆಸರು ಹೇಳಲು ದಾಖಲೆಗಳನ್ನು ಒದಗಿಸಬೇಕು. ತನಿಖೆ ಶುರುವಾದರೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ರಾಜಕೀಯವಾಗಿ ಎಚ್ಚರಿಕೆ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ರಾಜಣ್ಣ ಮುಂದೆ ಈ ಪ್ರಕರಣದ ಬಗ್ಗೆ ಯಾವೆಲ್ಲಾ ಹೆಜ್ಜೆ ಇಡುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ಸದ್ಯ ಹನಿಟ್ರ್ಯಾಪ್ ವಿಚಾರವಾಗಿ ರಾಜಣ್ಣ ದೂರು ನೀಡಿದ್ದು, ಗೃಹ ಸಚಿವರು ಯಾವ ತನಿಖೆಗೆ ಆದೇಶಿಸುತ್ತಾರೆ? ಹನಿಟ್ರ್ಯಾಪ್ ಹಿಂದಿರುವವರ ಬಂಧನವಾಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಇನ್ನು ಈ ಹನಿಟ್ರ್ಯಾಪ್ ಸಮರ ಮತ್ತೊಂದು ಹಂತ ತಲುಪಿದ್ರು ಅಚ್ಚರಿಯಿಲ್ಲ.