FIR: ಪ್ರಚೋದನಾಕಾರಿ ಭಾಷಣ ಮಾಡಿದ್ದ ಶರಣ ಪಂಪ್ ವೇಲ್ ವಿರುದ್ಧ ಎಫ್ಐಆರ್ ದಾಖಲು
ಪ್ರಚೋದನಕಾರಿ ಭಾಷಣ ಮಾಡಿದ್ದ ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ವಿರುದ್ಧ ತುಮಕೂರು ಜಿಲ್ಲೆಯ ತಿಲಕ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ತುಮಕೂರು: ಪ್ರಚೋದನಕಾರಿ ಭಾಷಣ ಮಾಡಿದ್ದ ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯದರ್ಶಿ ಶರಣ್ ಪಂಪ್ವೆಲ್ (Sharan Pumpwell) ವಿರುದ್ಧ ಜಿಲ್ಲೆಯ ತಿಲಕ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಲಾಂ 157, ಸಿಆರ್ಪಿಸಿ (a)(b) ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ನಗರದ ಬಾರ್ಲೈನ್ ನಿವಾಸಿಯಾಗಿರುವ ಸೈಯದ್ ಬುರ್ಹಾನ್ ಉದ್ದೀನ್ ಎನ್ನುವವರಿಂದ ದೂರು ನೀಡಿದಲಾಗಿದೆ. ಜ. 28ರಂದು ವಿಹೆಚ್ಪಿ, ಬಜರಂಗದಳದಿಂದ ನಗರದಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ್ದ, ಶರಣ್ ಪಂಪ್ವೆಲ್ ಸಾರ್ವಜನಿಕ ವೇದಿಕೆಯಲ್ಲಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದರು. ಜಿಲ್ಲೆಯನ್ನು ಹಿಂದುತ್ವದ ಫ್ಯಾಕ್ಟರಿ ಮಾಡುತ್ತೇವೆ. ಗುಜರಾತ್ ಹತ್ಯಾಕಾಂಡವನ್ನು ಹಿಂದೂ ಪರಾಕ್ರಮ ಎಂದು ಹೊಗಳಿದ್ದರು. ಶರಣ್ ಭಾಷಣದಿಂದ ತುಮಕೂರಿನಲ್ಲಿ ಶಾಂತಿಭಂಗವಾಗಿ ಎಂದು ಆರೋಪಿಸಿದ್ದು, ಪ್ರಕರಣ ದಾಖಲಿಸಿಕೊಂಡು ತಿಲಕ್ಪಾರ್ಕ್ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.
ಶರಣ್ ಪಂಪ್ವೆಲ್ನನ್ನು ಬಂಧಿಸುವಂತೆ ಫಾಜಿಲ್ ತಂದೆ ಆಗ್ರಹ
ಇನ್ನು ಇತ್ತೀಚೆಗೆ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆಯಾಗಿದೆ ಎಂದು ಶರಣ್ ಪಂಪ್ವೆಲ್ ಇತ್ತೀಚೆಗೆ ಉಳ್ಳಾಲದಲ್ಲಿ ನಡೆದ ಶೌರ್ಯ ಯಾತ್ರೆಯಲ್ಲಿ ಹೇಳಿದ್ದರು. ಈ ವಿಚಾರವಾಗಿ ಫಾಜಿಲ್ ತಂದೆ ಉಮಾರ್ ಫಾರೂಕ್ ಮಂಗಳೂರು ಕಮಿಷನರ್ ಶಶಿಕುಮಾರ್ರನ್ನು ಭೇಟಿ ಮಾಡಿ, ಶರಣ್ ಪಂಪ್ವೆಲ್ನನ್ನು ಬಂಧಿಸಿ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು. ಬಳಿಕ ಮಾಧ್ಯಮದವರೊಂದಿ ಮಾತನಾಡಿ, ಮಗನ ಹತ್ಯೆ ಕೇಸ್ನಲ್ಲಿ ಎಂಟು ಜನರನ್ನು ಬಂಧಿಸಿ ಕೋರ್ಟ್ಗೆ ಚಾರ್ಜ್ ಶೀಟ್ ಹಾಕಲಾಗಿದೆ. ಪ್ರಕರಣದ ಸೂತ್ರಧಾರಿಗಳ ತನಿಖೆಗೆ ನಾನು ಮನವಿ ಮಾಡುತ್ತಲೇ ಇದ್ದೇನೆ. ಆದರೆ ಈವರೆಗೆ ತನಿಖಾಧಿಕಾರಿ ಸೂತ್ರಧಾರಿ ಯಾರೆಂದು ತನಿಖೆ ನಡೆಸಿಲ್ಲ. ಇದೀಗ ಬಜರಂಗದಳ ಮುಖಂಡ ಶರಣ್ ಪಂಪ್ವೆಲ್ ನನ್ನ ಮಗನ ಹತ್ಯೆಯನ್ನು ಸಮರ್ಥಿಸಿದ್ದಾನೆ ಎಂದು ಉಮಾರ್ ಫಾರೂಕ್ ಆರೋಪಿಸಿದ್ದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆ ಎಂದಿದ್ದ ಶರಣ್ ಪಂಪ್ವೆಲ್ಗೆ ಸಂಕಷ್ಟ
ಶರಣ್ ಪಂಪ ವೆಲ್ಗೆ ಸವಾಲ್ ಹಾಕಿದ ಫಾಜಿಲ್ ತಂದೆ
ನನ್ನ ಮಗ ಸತ್ತಾಗ ಸರಕಾರದಿಂದ ಒಬ್ಬರೂ ಬಂದಿಲ್ಲ ಸರಕಾರದ ಮೇಲೆ ನಂಬಿಕೆ ಇಲ್ಲ. ಈ ಪ್ರಕರಣದಲ್ಲಿ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ಶರಣ್ ಪಂಪ್ವೆಲ್ ಅಪ್ಪನಿಗೆ ಹುಟ್ಟಿರೋದು ಹೌದಾದರೆ ನನ್ನನ್ನು ಕೊಲೆ ಮಾಡಲು ಒಬ್ಬನೇ ಬರಲಿ ಎಂದು ಸವಾಲು ಹಾಕಿದ್ದರು. ಹಿಂದೂ ಮುಸ್ಲಿಂ ಎಂದು ಗಲಾಟೆ ಮಾಡಿಸಿ ಸಾಯಿಸಬೇಡಿ. ಇವನಿಗೆ ಹಿಂದೂಗಳು ಎಂದು ಹೇಳುವ ಯೋಗ್ಯತೆಯಿಲ್ಲ. ಶರಣ್ ಪಂಪ್ವೆಲ್ ಗಂಡಸು ಆಗಿದ್ರೆ ಈ ರೀತಿ ಮಾಡುತ್ತಿರಲಿಲ್ಲ. ಫಾಝಿಲ್ ತಂದೆಯಾಗಿ ದೂರು ಕೊಡುದು ನನ್ನ ಕರ್ತವ್ಯ. ಮೇಲೆ ಇರುವ ದೇವರೆ ನೋಡಿಕೊಳ್ಳುತ್ತಾನೆ ಎಂದು ಉಮಾರ್ ಫಾರೂಕ್ ಹೇಳಿದ್ದರು.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆ: ಶರಣ್ ಪಂಪ್ವೆಲ್
ಶರಣ್ ಪಂಪ್ವೆಲ್ ವಿರುದ್ಧ ಯು.ಟಿ ಖಾದರ್ ಕಿಡಿ
ಶರಣ್ ಪಂಪ್ವೆಲ್ ಹೇಳಿಕೆ ವಿಚಾರವಾಗಿ ವಿಪಕ್ಷ ಉಪನಾಯಕ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದು, ಈ ರೀತಿಯ ಹೇಳಿಕೆ ಕೊಡುವವರನ್ನು ಗಡಿಪಾರು ಮಾಡಿ ಎಂದು ಆಗ್ರಹಿಸಿದರು. ಕೊಲೆ ಘಟನೆಗಳಿಗೆ ಪ್ರೇರಣೆ ಕೊಡುವ ಹೇಳಿಕೆ ಸಮಾಜಕ್ಕೆ ಅತ್ಯಂತ ಅಪಾಯಕಾರಿ. ಈ ಹೇಳಿಕೆ ಕೊಡುವವರು ನಿಜವಾದ ದೇಶದ್ರೋಹಿಗಳು. ಸಮಾಜ ಒಗ್ಗಾಟಾಗಿರಬೇಕೆಂಬುದು ಸಮಾಜದ ನಿಲುವು. ಹಿಂದೂ, ಮುಸ್ಲಿಂ, ಕ್ರೈಸ್ಥ ಯಾರ ಕೊಲೆಯು ಆಗಬಾರದು ಎಂದು ಪ್ರಯತ್ನ ಪಡಬೇಕು. ಬಿಜೆಪಿಯವರು ಕೊಲೆ ಆಗುವುದಕ್ಕೆ ಕಾಯುತ್ತಿದ್ದಾರೆ. ಒಂದಾದರೆ ಎರಡು ಆಗಬೇಕೆಂಬ ಮನಸ್ಥಿತಿ ಯಾಕೆ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:56 pm, Wed, 1 February 23




