
ತುಮಕೂರು, ಜುಲೈ 01: ಎತ್ತಿನಹೊಳೆ ಯೋಜನೆ (Yettinahole Project) ಕುಡಿಯುವ ನೀರು ಪೂರೈಸುವ ಮಹತ್ವದ ಯೋಜನೆ ಆಗಿದೆ. ತುಮಕೂರು (tumakuru), ಹಾಸನ, ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು 7 ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಸದ್ಯ ಈ ಯೋಜನೆಯ ಕಾಮಗಾರಿ ವೇಗ ಪಡೆದುಕೊಂಡಿದೆ. ಒಟ್ಟು 252 ಕಿಮೀನಲ್ಲಿ 220 ಕಿಮೀ ಸಂಪೂರ್ಣಗೊಂಡಿದೆ. ಅದರಲ್ಲಿ 23 ಕಿಮೀ ಪ್ರಗತಿಯಲ್ಲಿದ್ದು, 9 ಕಿಮೀ ಕಾಮಗಾರಿ ಬಾಕಿಯಿದೆ ಎಂದು ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಎತ್ತಿನಹೊಳೆ ಯೋಜನೆ ಕಾಮಗಾರಿ ವೀಕ್ಷಿಸಿದರು. ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ನಾಲೆ ಜಾಗ ಪರಿಶೀಲನೆ ಮಾಡಿ, ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ರಾಮಲಿಂಗಾರೆಡ್ಡಿಗೆ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.
ಇದನ್ನೂ ಓದಿ: ಏನಿದು ಎತ್ತಿನಹೊಳೆ ಯೋಜನೆ? ಇಲ್ಲಿದೆ ಕರ್ನಾಟಕದ ಬೃಹತ್ ಯೋಜನೆಯ ಆಳ-ಅಗಲ
ಇನ್ನು ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲನೆ ಬಳಿಕ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಎತ್ತಿನಹೊಳೆ ಕುಡಿಯುವ ನೀರು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆ. 220 ಕಿಮೀ ಕಾಮಗಾರಿ ಮುಗಿದಿದೆ. ಇದರಲ್ಲಿ 6 ಕಿಮೀ ಅರಣ್ಯಕ್ಕೆ ಸೇರಿದ್ದು, ಸದ್ಯ ಗುಬ್ಬಿ ತಾಲೂಕಿನ ಮಾರಶೆಟ್ಟಿಹಳ್ಳಿಯಲ್ಲಿ 1.9 ಕಿಮೀ ಬಾಕಿ ಇತ್ತು. ನೂರು ದಿನಗಳಲ್ಲಿ 174 ಕಿಮೀವರೆಗೆ ಕೆಲಸ ಮುಗಿಸಿ ನೀರು ಬಿಡಬಹುದು ಎಂದು ಹೇಳಿದರು.
ಡಿಎಫ್ಓ ವಕ್೯ ಆರ್ಡರ್ ಕೊಟ್ಟಿದ್ದು, ಕೆಲಸ ಆರಂಭಿಸುತ್ತಾರೆ. ಅರಸೀಕೆರೆ ಹತ್ತಿರ ಅರಣ್ಯ ಇದೆ ಅದಕ್ಕೂ ಕ್ಲಿಯರೆನ್ಸ್ ಕೊಟ್ಟಿದ್ದಾರೆ. ಅರಣ್ಯದ್ದು ಎಲ್ಲಾ ಕ್ಲಿಯರ್ ಆಗಿದೆ. ವಕ್೯ ಆರ್ಡರ್ ಕೊಟ್ಟಿದ್ದಾರೆ. ಇದು ಕ್ಲೋಸಿಂಗ್ ಕೆನಾಲ್ ಆಗಿದ್ದು, ಯಾವುದೇ ತೊಂದರೆ ಆಗುವುದಿಲ್ಲ. ಪ್ರಾಣಿಗಳಿಗೆ ತೊಂದರೆ ಆಗಬಾರದು ಅಂತಾ ಸೂಚನೆ ಮೇಲೆ ಅನುಮತಿ ಕೊಟ್ಟಿದ್ದಾರೆ. ಅದನ್ನ ತೆಗೆದು ಮತ್ತೆ ಕ್ಲೋಸ್ ಮಾಡಬೇಕು ಎಂದರು.
ರಾಜ್ಯದಲ್ಲಿ ಮಳೆ ಕೊರತೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಕಡಿಮೆ ಆಗಿದೆ. ನಮ್ಮ ರಾಜ್ಯ ಮಾತ್ರವಲ್ಲ 12 ರಾಜ್ಯದಲ್ಲಿ ಮಳೆ ಕಡಿಮೆ ಆಗಿದೆ. ಮಧ್ಯ ಭಾರತದಲ್ಲಿ ಶೇ.50 ರಷ್ಟು ಮಳೆ ಕೊರತೆ ಇದೆ. ನಮ್ಮ ಡ್ಯಾಂಗಳಲ್ಲಿ ಕುಡಿಯುವ ನೀರಿಗೆ 3 ತಿಂಗಳಿಗೆ ಆಗುತ್ತೆ. ಮಳೆ ಬರದೆ ಇದ್ದರೆ ವ್ಯವಸಾಯಕ್ಕೆ ಕಷ್ಟ ಆಗುತ್ತೆ. ಕಳೆದ ಭಾರೀ ಎಲ್ಲಾ ಡ್ಯಾಂಗಳು ಇಷ್ಟೋತ್ತಿಗೆ ಭರ್ತಿ ಆಗಿದ್ದವು ಎಂದು ಹೇಳಿದರು.
ಇನ್ನು ಬೆಂಗಳೂರಿಗೆ ನೀರನ ಸಮಸ್ಯೆ ಎದುರಾಗುತ್ತಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದು ನಮ್ಮ ರಾಜ್ಯದ ಸಮಸ್ಯೆಯಲ್ಲ, ಇದು ದೇಶದ ಅರ್ಧ ಭಾಗದ ಸಮಸ್ಯೆ. ಸದ್ಯ ನಮಗೆ ತೊಂದರೆ ಇಲ್ಲ. ಮೂರು ತಿಂಗಳಿಗೆ ಆಗುವಷ್ಟು ಕುಡಿಯುವ ನೀರಿಗೆ ಇದೆ. ಅಷ್ಟರಲ್ಲಿ ಮಳೆ ಬರುವ ನಿರೀಕ್ಷೆ ಇದೆ ಎಂದಿದ್ದಾರೆ.
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿವಾದ ವಿಚಾರವಾಗಿ ಮಾತನಾಡಿದ್ದು, ಪರಮೇಶ್ವರ್ ಜೊತೆ ಮಾತನಾಡಬೇಕು. ಎಲ್ಲಾ ಒಂದೇ ಜಿಲ್ಲೆಯ ಸಮಸ್ಯೆ ಇರುವುದು. ಮಾಗಡಿ, ಕುಣಿಗಲ್, ಥೇಲೆಂಡ್ ಎರಡಕ್ಕೂ ನೀರು ಬರುವುದಲ್ಲ. ಅವರಿಗೆ ಎಷ್ಟು ಬೇಕು ಅಷ್ಟು ನೀರು ನಾಲೆಯಲ್ಲೇ ತಗೋಳಿ ಅಂತಾ ಇವರು. ಪರಮೇಶ್ವರ್ ಮತ್ತು ನಾವು ಮಾತನಾಡಿ ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಪರ ವಿರೋಧ ಇದೆ, ಎಲ್ಲಾ ಪಾರ್ಟಿ ಅವರು ಕೂತು ಮಾತನಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಅರಣ್ಯ ಇಲಾಖೆಯಿಂದ ಜಮೀನು ಪಡೆಯುವ ಪ್ರಕ್ರಿಯೆ ಜಾರಿಯಲ್ಲಿದೆ: ಶಿವಕುಮಾರ್
ಇನ್ನು ಕೊರಟಗೆರೆ ವಡೇರಹಳ್ಳಿ ಬಳಿ ಎತ್ತಿನ ಹೊಳೆ ಬಫರ್ ಡ್ಯಾಮ್ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ವಿರೋಧ ಇದೆ ನೀರು ಸ್ಟೋರೇಜ್ ಮಾಡಲೇ ಬೇಕಲ್ಲ. ಎರಡು ಮೂರು ಜಾಗ ಗುರುತಿಸಿದ್ದಾರೆ. ನೀರು ಸ್ಟೋರೇಜ್ ಮಾಡದೇ ಇದ್ದರೆ ಬೇಸಿಗೆಯಲ್ಲಿ ಕಷ್ಟ. 4 ಟಿಎಂಸಿ ನೀರಿದ್ದರೆ ಜನರಿಗೆ ಅನುಕೂಲ ಆಗುತ್ತೆ. ಅದನ್ನ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.