ಉಡುಪಿ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್: ನನ್ನನ್ನು ಯಾರೂ ಅಪಹರಿಸಿಲ್ಲ ಎಂದ ಯುವತಿ
ಉಡುಪಿ ಕರಾವಳಿಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದ್ದ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಯುವತಿ ನ್ಯಾಯಾಲಯಕ್ಕೆ ಹಾಜರಾಗಿ, ಯುವಕನ ಜೊತೆ ಸ್ವಯಂಪ್ರೇರಿತವಾಗಿ ಹೋಗಿದ್ದಾಗಿ ಹೇಳಿಕೆ ನೀಡಿದ್ದಾರೆ. ತಮ್ಮ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಪೋಷಕರು ದೂರು ನೀಡಿದ್ದರು. ಆದರೆ ಯುವತಿಯ ಹೇಳಿಕೆಯಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಉಡುಪಿ, ಏಪ್ರಿಲ್ 05: ಓರ್ವ ಮುಸ್ಲಿಂ (Muslim) ಯುವಕ ನನ್ನ ಮಗಳನ್ನು ಅಪಹರಿಸಿದ್ದಾನೆ. ಇದು ಲವ್ ಜಿಹಾದ್ (Love Jihad) ಷಡ್ಯಂತ್ರವಾಗಿದೆ ಎಂದು ಯುವತಿಯ ತಂದೆ ಇತ್ತೀಚೆಗೆ ಆರೋಪಿಸಿದ್ದರು. ಈ ಪ್ರಕರಣ ಕರಾವಳಿಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಸದ್ಯ ಈ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ನ್ಯಾಯಾಲಯಕ್ಕೆ ಹಾಜರಾದ ಯುವತಿ ಜೀನಾ ಮೆರಿಲ್, ಸ್ವಇಚ್ಛೆಯಿಂದ ಮೊಹಮ್ಮದ್ ಅಕ್ರಮ್ ಜೊತೆ ಹೋಗಿರುವುದಾಗಿ ಒಪ್ಪಿಕೊಂಡಿದ್ದಾಳೆ.
ತಮ್ಮ ಮಗಳನ್ನ ಅಕ್ರಮ್ ಎಂಬಾತ ಅಪಹರಿಸಿದ್ದಾನೆ ಎಂದು ಪೋಷಕರು ದೂರು ನೀಡಿದ್ದರು. ಯುವತಿಯನ್ನ ಶೀಘ್ರ ಪತ್ತೆ ಹಚ್ಚುವಂತೆ ಆಗ್ರಹಿಸಿ ಪೋಷಕರಿಂದ ಹೈ ಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ನನ್ನನ್ನು ಯಾರೂ ಅಪಹರಿಸಿಲ್ಲ ಎಂದ ಯುವತಿ
ಈ ಪ್ರಕರಣದ ವಿಚಾರಣೆಗಾಗಿ ಯುವತಿ ಜೀನಾ ಮೆರಿಲ್ ಮತ್ತು ಅಕ್ರಮ್ ತಮ್ಮ ಲಾಯರ್ ಜೊತೆಗೆ ನ್ಯಾಯಾಲಯಕ್ಕೆ ಹಾಜರಾಗಿದ್ದರು. ತನ್ನನ್ನು ಯಾರೂ ಕೂಡ ಅಪಹರಿಸಿರುವುದಿಲ್ಲ. ನಾನು ಸ್ವಇಚ್ಛೆಯಿಂದ ಅಕ್ರಮ್ ಜೊತೆ ತೆರಳಿರುವುದಾಗಿ ಹೇಳಿದ್ದಾಳೆ. ಈ ವೇಳೆ ಹುಡುಗಿ ಜೊತೆ ಮಾತನಾಡಲು ತಾಯಿ ಅನುಮತಿ ಕೇಳಿದಾಗ ನ್ಯಾಯಾಧೀಶರು ಕೊಠಡಿಯಲ್ಲೇ ಅವಕಾಶ ನೀಡಿದ್ದು, ಬಳಿಕ ವಿಚಾರಣೆಯಲ್ಲಿ ಮಗಳನ್ನು ತನ್ನ ಜೊತೆ ಕಳಿಸುವಂತೆ ನ್ಯಾಯಾಧೀಶರಲ್ಲಿ ತಾಯಿ ಮನವಿ ಮಾಡಿದರು. ಆದರೆ ಇದಕ್ಕೆ ಯುವತಿ ಒಪ್ಪಿಲ್ಲ.
ಇದನ್ನೂ ಓದಿ: ವಿದ್ಯಾರ್ಥಿನಿಯನ್ನ ಅಪಹರಿಸಿ ಮದ್ವೆಯಾಗಲು ಯತ್ನ: ಉಡುಪಿಯಲ್ಲಿ ಹೀಗೊಂದು ಲವ್ ಜಿಹಾದ್ ಆರೋಪ
ತಾನು ಅಕ್ರಮ್ ಜೊತೆ ಏಪ್ರಿಲ್ 19 ರಂದು ರಿಜಿಸ್ಟರ್ ಮದುವೆ ಮಾಡಿಕೊಳ್ಳುತ್ತೇನೆ. ಮದುವೆ ನಂತರ ತಾಯಿಯನ್ನು ಭೇಟಿಯಾಗುವುದಾಗಿ ಯುವತಿ ಭರವಸೆ ನೀಡಿದ್ದು, ತಾಯಿ ಜೊತೆಗೆ ಉತ್ತಮ ಬಾಂಧವ್ಯದೊಂದಿಗೆ ಇರುತ್ತೇನೆ ಎಂದಿದ್ದಾಳೆ. ಸದ್ಯ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏಪ್ರಿಲ್ 22 ರಂದು ನಿಗದಿಪಡಿಸಿದೆ.
ಜೀನಾ 9ನೇ ತರಗತಿಯಲ್ಲಿರುವಾಗಲೇ ಅಕ್ರಮ್ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ. ಆ ಸಂದರ್ಭ ಚಿನ್ನದ ಸರ ಕಳ್ಳತನ, ಪೋಕ್ಸೋ ಕೇಸ್ ದಾಖಲಾಗಿತ್ತು. ಆ ನಂತರ ನಿರಂತರ ಸಂಪರ್ಕದಲ್ಲಿದ್ದು, ಆ ಸೇಡನ್ನು ಈಗ ತೀರಿಸುತ್ತಿದ್ದಾನಂತೆ. ಮಾರ್ಚ್ 19ರಂದು ಯುವತಿ ಕಣ್ಮರೆಯಾಗಿದ್ದಳು. ಇದಕ್ಕೂ ಒಂದು ದಿನ ಮೊದಲು ಸಬ್ ರಿಜಿಸ್ಟರ್ ಆಫೀಸ್ನಲ್ಲಿ ಅಕ್ರಮ್ ಮತ್ತು ಜೀನಾ ಮದುವೆ ನೋಂದಣಿ ಮಾಡಿಕೊಂಡಿದ್ದರು.
ಇದನ್ನೂ ಓದಿ: ಪ್ರಯಾಣದಲ್ಲೂ ಖಾಸಗಿ ಸಮಯ ಕಳೆಯಲು ಜೋಡಿಗಳಿಗಾಗಿ ಬೆಂಗಳೂರಿನಲ್ಲಿ ಸ್ಮೂಚ್ ಕ್ಯಾಬ್
ಈ ವಿಚಾರ ಪೋಷಕರಿಗೆ ಮರುದಿನ ಗೊತ್ತಾಗಿತ್ತು. ಇದು ತಿಳಿಯುತ್ತಿದ್ದಂತೆ, ಯುವತಿಯನ್ನು ಅಕ್ರಮ್ ಅಪಹರಿಸಿದ್ದಾನೆ ಎಂದು ಪೋಷಕರು ದೂರಿದ್ದರು. ನಮ್ಮ ಮಗಳು ಮರ್ಯಾದೆಗೆ ಅಂಜಿದ್ದಾಳೆ. ಯುವಕನನ್ನು ವಿಚಾರಣೆಗೆ ಒಳಪಡಿಸಬೇಕು, ಇದರ ಹಿಂದಿರುವ ಜಾಲವನ್ನು ಪತ್ತೆಹಚ್ಚಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.