ಸ್ವಾಮೀಜಿಯನ್ನು ಹನಿಟ್ರಾಪ್ ಮಾಡಲು ನಡೆದಿತ್ತಾ ಸಂಚು?: ಇದರ ಹಿಂದೆ ಶಾಸಕ ಕಾಶಪ್ಪನವರ್ ಕೈವಾಡ ಇದ್ಯಾ? ದೂರಿನಲ್ಲಿ ಬಿಚ್ಚಿಟ್ಟ ಸತ್ಯ!
ವಿಜಯಪುರದ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬ್ಲಾಕ್ಮೇಲ್ ವಿವಾದದಲ್ಲಿ ಸಿಲುಕಿದ್ದಾರೆ. ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಸ್ವಾಮೀಜಿ ಮೇಲೆ ಹಲ್ಲೆ ನಡೆಸಿ, ಹಣಕ್ಕಾಗಿ ಬೆದರಿಕೆ ಹಾಕಲಾಗಿದೆ ಎಂದು ಶಿಷ್ಯರೊಬ್ಬರು ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ರಾಜಕೀಯ ಕೈವಾಡವಿದೆ ಎಂದು ಆರೋಪಿಸಲಾಗಿದ್ದು, 2ಎ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆದಿದೆ ಎಂದು ಹೇಳಲಾಗಿದೆ. ಮಹಿಳೆಯೊಬ್ಬರು ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನೂ ಮಾಡಿದ್ದಾರೆ.

ವಿಜಯಪುರ, ಏ. 07: ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಸುತ್ತ ಈಗ ವಿವಾದವೊಂದು ಸುತ್ತಿಕೊಂಡಿದೆ. ಸ್ವಾಮೀಜಿಗಳ ಮೇಲೆ ಹಲ್ಲೆ ನಡೆಸಿ, ನಂತರ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ ಎಂದು ಅವರ ಶಿಷ್ಯ ಸಂತೋಷ ಮಂಜಣ್ಣಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಕಳೆದ ಫೆಬ್ರವರಿ 11 ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ಸ್ವಾಮೀಜಿಗಳು ಕಾರಿನಲ್ಲಿ ತೆರಳುತ್ತಿದ್ದಾಗ ತ್ರಿವೇಣಿ ಎಂಬ ಮಹಿಳೆ ಮತ್ತು ಇತರರು ಕಾರು ತಡೆದು ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಆಗ ಭಕ್ತರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಆದರೆ, ಈ ಘಟನೆಯ ನಂತರ ಮಹಿಳೆಯು ಸಾಮಾಜಿಕ ಜಾಲತಾಣಗಳಲ್ಲಿ ಸ್ವಾಮೀಜಿಗಳ ವಿರುದ್ಧ ಅಪಪ್ರಚಾರ ಆರಂಭಿಸಿ, ರಾಜಕುಮಾರ್ ಎಂಬುವವರ ಮೂಲಕ 3 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಟಿವಿ9 ಜೊತೆಗೆ ಮಾತನಾಡಿರುವ ಸಂತೋಷ ಮಂಜಣ್ಣಿ, ಈ ಇಡೀ ಪ್ರಕರಣದ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಎಂದು ಗಂಭೀರವಾಗಿ ಹೇಳಿದ್ದಾರೆ. “ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಸ್ವಾಮೀಜಿಗಳಿಂದ ಎಲ್ಲ ಕೆಲಸ ಮಾಡಿಸಿಕೊಂಡು ಈಗ ಪೀಠದಿಂದ ಉಚ್ಛಾಟನೆ ಮಾಡಲು ಸಂಚು ರೂಪಿಸುತ್ತಿದ್ದಾರೆ. ಇದು 2ಎ ಮೀಸಲಾತಿ ಹೋರಾಟವನ್ನು ಹತ್ತಿಕ್ಕುವ ಹುನ್ನಾರ” ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಸವಜಯಮೃತ್ಯುಂಜಯ ವಿರುದ್ಧ ಮಹಿಳೆ ಲೈಂಗಿಕ ದೌರ್ಜುನ್ಯ ಆರೋಪ:ಸ್ಫೋಟಕ ವಿಚಾರ ಬಿಚ್ಚಿಟ್ಟ ಕೈ ಶಾಸಕ
ಇದೇ ವೇಳೆ, ಮಹಿಳೆಯು ಸ್ವಾಮೀಜಿಗಳ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂತೋಷ, “ಇಷ್ಟು ದಿನ ಸುಮ್ಮನಿದ್ದ ಮಹಿಳೆ, ಸ್ವಾಮೀಜಿಗಳು ದೂರು ನೀಡಿದ ಬಳಿಕವಷ್ಟೇ ಯಾಕೆ ದೂರು ನೀಡಿದ್ದಾರೆ? ಇದು ಕೇವಲ ಹಣಕ್ಕಾಗಿ ಮಾಡುತ್ತಿರುವ ಬೆದರಿಕೆ” ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



