ಕಚೇರಿ ಸಮಯ ಬದಲಾವಣೆ: ವಿಜಯಪುರ ಸರ್ಕಾರಿ ಅಧಿಕಾರಿ-ಸಿಬ್ಬಂದಿಗೆ ಹೇಳೋರಿಲ್ಲ, ಕೇಳೋರಿಲ್ಲ
ಬಿಸಿಲಿನ ಕಾರಣ ಬೆಳಿಗ್ಗೆ 8 ರಿಂದ 1:30 ರವರೆಗೆ ಸರ್ಕಾರಿ ಕಚೇರಿ ಸಮಯವನ್ನು ಬದಲಾವಣೆ ಮಾಡಲಾಗಿದೆ. ಅದನ್ನೇ ಬಂಡವಾಳ ಮಾಡಿಕೊಂಡ ವಿಜಯಪುರ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿನ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾದ ಸಮಯಕ್ಕೆ ಬಾರದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ವಿಜಯಪುರ, ಏಪ್ರಿಲ್ 13: ಜಿಲ್ಲೆಯಲ್ಲಿನ ಸರ್ಕಾರಿ ಇಲಾಖೆಯ ಅಧಿಕಾರಿಗಳು (government offices) ಹಾಗೂ ಸಿಬ್ಬಂದಿ ಅನ್ನ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದೆ. ಕಾರಣ ಯಾರೋಬ್ಬರು ಸರಿಯಾದ ಸಮಯಕ್ಕೆ ಕಚೇರಿಗೆ ಆಗಮಿಸುತ್ತಿಲ್ಲ. ಬಿಸಿಲಿನ (summer) ಕಾರಣ ಎಲ್ಲಾ ಸರ್ಕಾರಿ ಇಲಾಖೆಗಳ ಸಮಯ ಬೆಳಿಗ್ಗೆ 8ರಿಂದ ಮದ್ಯಾಹ್ನ 1:30 ರವರೆಗೆ ನಿಗದಿ ಮಾಡಲಾಗಿದೆ. ಆದರೆ 9ಗಂಟೆಯಾದರೂ ಅಧಿಕಾರಿಗಳು, ಸಿಬ್ಬಂದಿ ಕಚೇರಿಗೆ ಆಗಮಿಸದೇ ಸೇವಾ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚುತ್ತಿರುವ ತೀವ್ರ ಬಿಸಿಲು ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಬಿಸಿಲಿನ ತಾಪಮಾನದಿಂದ ಜನತೆ ಬಸವಳಿಯುತ್ತಿದೆ. ಇದನ್ನು ಮನಗಂಡ ಸರ್ಕಾರ ವಿವಿಧ ಸರ್ಕಾರಿ ಕಚೇರಿಗಳ ಕಾರ್ಯ ಸಮಯವನ್ನು ಬದಲಿಸಿದೆ. ಏಪ್ರಿಲ್ 1 ರಿಂದ ಮೇ ತಿಂಗಳ ಕೊನೆಯವರೆಗೆ ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಗಳ ಸರ್ಕಾರಿ ಕಚೇರಿಗಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1-30ರವರೆಗೆ ಕೆಲಸದ ಸಮಯ ನಿಗದಿಪಡಿಸಲಾಗಿದೆ. ಆದರೆ ಸಮಯ ಬದಲಾವಣೆಯಾದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: “ಸರ್ ಪ್ಲೀಸ್, ಸುಡುವ ಬಿಸಿಲಲ್ಲಿ ಕೆಲಸ ಕಷ್ಟ”: ಗದಗದಲ್ಲಿ ಕೆಲಸದ ಸಮಯ ಬದಲಾವಣೆಗೆ ಸರ್ಕಾರಿ ನೌಕರರ ಪಟ್ಟು!
ಹಲವು ಇಲಾಖೆಗಳ ಕಚೇರಿಗಳಲ್ಲಿ ಸಿಬ್ಬಂದಿ ಬೆಳಿಗ್ಗೆ 8 ಗಂಟೆಗೆ ಹಾಜರಾಗದೆ, 9ಗಂಟೆಯಾದರೂ ಕಚೇರಿಗೆ ಬಾರದ ಸ್ಥಿತಿ ಕಂಡುಬರುತ್ತಿದೆ. ಯೋಜನಾ ನಿರ್ದೇಶಕರ ಕಾರ್ಯಾಲಯ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ ನಿರ್ದೇಶಕರ ಕಚೇರಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಸೇರಿದಂತೆ ಹಲವೆಡೆ ಈ ನಿರ್ಲಕ್ಷ್ಯ ಕಂಡುಬಂದಿದೆ.
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಸರ್ಕಾರಿ ಕೆಲಸವನ್ನು ದೇವರ ಕೆಲಸ ಎಂದು ಪರಿಗಣಿಸಿದರೂ, ನಿಗದಿತ ಸಮಯಕ್ಕೆ ಅಧಿಕಾರಿಗಳು ಹಾಜರಾಗದೇ ಜನರ ಕೆಲಸ ವಿಳಂಬವಾಗುತ್ತಿದೆ. ತಡವಾಗಿ ಬರುವ ಸಿಬ್ಬಂದಿ ಮಧ್ಯಾಹ್ನಕ್ಕೂ ಮುನ್ನವೇ ಕಚೇರಿ ತೊರೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿಸಿಲಿನ ತೀವ್ರತೆಯನ್ನು ಮನಗಂಡು ಸರ್ಕಾರ ಸಮಯ ಬದಲಾವಣೆ ಮಾಡಿದ್ದರೂ, ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದಾಗಿ ಆರೋಪಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಿಗದಿತ ಸಮಯಕ್ಕೆ ಬಾರದಿದ್ದರೆ ಹಾಜರಾತಿ ಗೈರು
ಸರ್ಕಾರದ ಆದೇಶದಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಳಿಗ್ಗೆ 8 ಗಂಟೆಗೆ ಸೇವೆಗೆ ಹಾಜರಾಗಲೇಬೇಕು. ಮಧ್ಯಾಹ್ನ 1:30 ರವರೆಗೆ ಕೆಲಸ ಮಾಡಬೇಕು. ಆದರೆ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನಿಗದಿತ ಸಮಯಕ್ಕೆ ಯಾರೊಬ್ಬ ಅಧಿಕಾರಿಗಳು ಆಗಮಿಸುತ್ತಿಲ್ಲ. ಮನಸ್ಸಿಗೆ ಬಂದಂತೆ ಕರ್ತವ್ಯ ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ವಿ ವಿ ಸಾಲೀಮಠ ಇಲಾಖೆಯ ಇತರೆ ಅಧಿಕಾರಿಗಳು, ಸಿಬ್ಬಂದಿ ಹಾಜರಾತಿ ಪುಸ್ತಕವನ್ನು ತಮ್ಮ ಚೇಂಬರ್ನಲ್ಲೇ ಇಟ್ಟುಕೊಂಡಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಬಾರದ ಅಧಿಕಾರಿಗಳು, ಸಿಬ್ಬಂದಿ ಹಾಜರಾತಿಯನ್ನು ಗೈರು ಎಂದು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ.
ಡಿಸಿ ಕೆ ಆನಂದ್ ಹೇಳಿದ್ದಿಷ್ಟು
ಇನ್ನು ಈ ವಿಷಯ ಕುರಿತು ಡಿಸಿ ಕೆ ಆನಂದ್ ಪ್ರತಿಕ್ರಿಯಿಸಿದ್ದು, ಬಿಸಿಲಿನ ಕಾರಣ ಏಪ್ರಿಲ್ 1 ರಿಂದ ಮೇ ಕೊನೆಯವರೆಗೆ ಎಲ್ಲಾ ಸರ್ಕಾರಿ ಇಲಾಖೆಗಳ ಕಚೇರಿಗಳ ಸಮಯ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1-30 ರವರೆಗೆ ಮಾಡಲಾಗಿದೆ. ನಿಗದಿತ ಸಮಯಕ್ಕೆ ಅಧಿಕಾರಿಗಳು, ಸಿಬ್ಬಂದಿ ಹಾಜರಾಗಬೇಕು. ಇಲ್ಲವಾದರೆ ಮೊದಲಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ಆಗಲೂ ಸರಿಯಾಗಿ ಸೇವೆಗೆ ಹಾಜರಾಗದಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಜಯಪುರ: 21 ವರ್ಷಗಳ ಕಳ್ಳ-ಪೊಲೀಸ್ ಆಟಕ್ಕೆ ಬ್ರೇಕ್: ಪೆರೋಲ್ ಮೇಲೆ ಎಸ್ಕೇಪ್ ಆಗಿದ್ದ ಕೈದಿ ಅಂದರ್
ಸದ್ಯ ವಿಜಯಪುರ ಜಿಲ್ಲೆಯ ಸರ್ಕಾರಿ ಕಚೇರಿಗಳ ಅಧಿಕಾರಿಗಳಿಗೆ, ಸಿಬ್ಬಂದಿಗೆ ಒಂದು ರೀತಿಯ ಸಮ್ಮರ್ ವೆಕೇಷನ್ ಎಂಬಂತಾಗಿದೆ. ಬಿಸಿಲಿನ ಕಾರಣ ಕಚೇರಿ ಸಮಯ ಬದಲಾವಣೆಯಾಗಿದ್ದರೂ ಸರಿಯಾಗಿ ಕಚೇರಿಗೆ ಆಗಮಿಸದ ಅಧಿಕಾರಿಗಳು, ಸಿಬ್ಭಂದಿ ಮೇಲೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲವಾದರೆ ಸಾರ್ವಜನಿಕರಿಗೆ ಸಮಸ್ಯೆ ಮುಂದುವರೆಯಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



