ಪ್ರತ್ಯೇಕ ಪ್ರಕರಣ: ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಇಬ್ಬರು ಯುವಕರು ಆತ್ಮಹತ್ಯೆ
ಕರ್ನಾಟಕದಲ್ಲಿ ಹೆಣ್ಣು ಸಿಗದೆ ಮದುವೆಯಾಗಲು ಸಾಧ್ಯವಾಗದ ಕಾರಣ ಇಬ್ಬರು ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ದುರದೃಷ್ಟಕರ ಘಟನೆಗಳು ನಡೆದಿವೆ. ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ಕೃಷಿ ಸಮುದಾಯದಲ್ಲಿ, ವಿವಾಹಕ್ಕೆ ವಧುಗಳನ್ನು ಹುಡುಕುವುದು ಸವಾಲಾಗಿದೆ. ಈ ಕಾರಣದಿಂದ ಯುವಕರು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ.

ವಿಜಯಪುರ/ಚಿಕ್ಕಮಗಳೂರು, ಏಪ್ರಿಲ್ 04: ಹಳ್ಳಿಗಳಲ್ಲಿ ನೆಲೆಸಿರುವವರಿಗೆ ಅದರಲ್ಲೂ ಕೃಷಿಕ ಯುವಕರಿಗೆ ಮದುವೆಗೆ ಹೆಣ್ಣು ಸಿಗೋದೇ ಕಷ್ಟ ಎಂಬ ಸ್ಥಿತಿ ಸದ್ಯ ಸಮಾಜದಲ್ಲಿದೆ. ಇದೇ ಕಾರಣಕ್ಕೆ ಅದೆಷ್ಟೋ ಯುವಕರಿಗೆ ಈವರೆಗೂ ಕಂಕಣ ಭಾಗ್ಯವೇ ಕೂಡಿಬರುತ್ತಿಲ್ಲ. ಈ ನಡುವೆ ವಿವಾಹಕ್ಕೆ ಹುಡುಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಾನಸಿಕವಾಗಿ ತೀವ್ರ ನೊಂದು ಯುವಕರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ರಾಜ್ಯದಲ್ಲಿ ನಡೆದಿವೆ. ವಿಜಯಪುರದಲ್ಲಿ ಕುರಿಗಾಹಿ ನೇಣಿಗೆ ಶರಣಾಗಿದ್ದರೆ ಇತ್ತ ಚಿಕ್ಕಮಗಳೂರಲ್ಲಿ ಕುಡಿದ ಮತ್ತಿನಲ್ಲಿ ಮತ್ತೋರ್ವ ಪ್ರಾಣ ಕಳೆದುಕೊಂಡಿದ್ದಾನೆ.
ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ
2 ವರ್ಷದ ಹಿಂದೆ ಮದುವೆ ನಿಶ್ಚಯವಾಗಿ ಮುರಿದು ಬಿದ್ದಬಳಿಕ ಎಷ್ಟೇ ಹುಡುಕಿದ್ರೂ ಹೆಣ್ಣು ಸಿಗದಿದ್ದಕ್ಕೆ ತೀವ್ರವಾಗಿ ನೊಂದಿದ್ದ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ 2 ಗ್ರಾಮದ ಯುವಕ ಶಂಕರ ತಳವಾರ(25) ಮರಕ್ಕೆ ನೇಣುಹಾಕಿಕೊಂಡು ಪ್ರಾಣ ಬಿಟ್ಟಿದ್ದಾನೆ. ಈ ಬಗ್ಗೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಇತ್ತ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೋರಗಾನಹಳ್ಳಿಯಲ್ಲೂ ಕುಮಾರ್(26) ಇದೇ ಕಾರಣಕ್ಕೆ ಸೂಸೈಡ್ ಮಾಡಿಕೊಂಡಿದ್ದಾನೆ. ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದ ನಿವಾಸಿಯಾಗಿದ್ದ ಯುವಕ ಕುಡಿದ ಮತ್ತಿನಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಹೆಣ್ಣು ಸಿಗದಿದ್ದಕ್ಕೆ ಮಾನಸಿಕವಾಗಿ ಈತ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದ್ದು, ಯಗಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಡೂರು ತಾಲೂಕಿನ ಬೋರಗಾನಹಳ್ಳಿಯ ಪರಮೇಶ್ವರಪ್ಪ ಎಂಬುವವರ ತೋಟದಲ್ಲಿ ಕುರಿ ಮಂದೆ ಬಿಟ್ಟುಕೊಂಡಿದ್ದ ಕುಮಾರ್, ರಾಮನವಮಿ ಹಬ್ಬಕ್ಕೆ ಊರಿಗೆ ಹೋದಾಗ ಮದುವೆ ಮಾಡುವಂತೆ ಮನೆಯವರನ್ನು ಒತ್ತಾಯಿಸಿದ್ದ. ಆದರೆ ಇಬ್ಬರು ಸಹೋದರರ ಮದುವೆಯಾದ ಬಳಿಕ ವಿವಾಹ ಮಾಡುವುದಾಗಿ ಪೋಷಕರು ಹೇಳಿದ್ದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಶಿರಾ ಬ್ರಹ್ಮಸಂದ್ರ ಗ್ರಾಮಕ್ಕೆ ರವಾನೆ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:24 pm, Sat, 4 April 26



