12 ವರ್ಷ ತಲೆಮರೆಸಿಕೊಂಡಿದ್ದ ಹಂತಕ: ಮಹಿಳೆಯ ಹಿಂದೆ ಬಿದ್ದು ಸಿಕ್ಕಿಬಿದ್ದ ಕೈದಿ
12 ವರ್ಷಗಳ ಹಿಂದೆ ವಿಜಯಪುರ ಜೈಲಿನಿಂದ ಪರಾರಿಯಾಗಿದ್ದ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಗುರುತು ಬದಲಿಸಿಕೊಂಡು ವಾಸಿಸುತ್ತಿದ್ದ ಆರೋಪಿ ಬಸವರಾಜ್ ಪಾಟೀಲ್ನನ್ನು ಫಿಂಗರ್ಪ್ರಿಂಟ್ ಸಹಾಯದಿಂದ ಪತ್ತೆಹಚ್ಚಿ, ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಇದರೊಂದಿಗೆ ಕಳೆದ 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕೈದಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಹಾಗಾದ್ರೆ ಏನಿದು ಪ್ರಕರಣ? ತಪ್ಪಿಸಿಕೊಂಡಿದ್ಹೇಗೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ವಿಜಯಪುರ, (ಸೆಪ್ಟೆಂಬರ್ 20): ಕಳೆದ 12 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಸರ್ಕಾರಿ ಅಧಿಕಾರಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ತಪಾಸಣೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಬಸವರಾಜ್ ಪಾಟೀಲ್ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ. ಕಳೆದ 12 ವರ್ಷಗಳಿಂದ ನಾಪತ್ತೆಯಾಗಿದ್ದವನ್ನು ವಿಜಯಪುರ ಜಿಲ್ಲಾ ಪೊಲೀಸ್ ಪಡೆ ಪತ್ತೆ ಮಾಡಿದೆ. ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಗುರುತು ಬದಲಿಸಿಕೊಂಡು ವಾಸಿಸುತ್ತಿದ್ದ ಆರೋಪಿ ಬಸವರಾಜ್ ಪಾಟೀಲ್ನನ್ನು ಫಿಂಗರ್ಪ್ರಿಂಟ್ ಸಹಾಯದಿಂದ ಪತ್ತೆಹಚ್ಚಿ, ಸಿನಿಮೀಯ ರೀತಿಯಲ್ಲಿ ಸೆರೆಹಿಡಿಯಲಾಗಿದೆ. ಮಹಿಳೆಯೊಂದಿಗೆ ನಂಟಿನಿಂದಲೇ ಬಸವರಾಜ್ ಪಾಟೀಲ್ ಸಿಕ್ಕಿಬಿದ್ದಿದ್ದಾರೆ.
ಕಳೆದ 2009 ರಲ್ಲಿ ಬಾಗಲಕೋಟೆಯಲ್ಲಿ ಕೃಷಿ ಅಧಿಕಾರಿಯೊಬ್ಬರಿಗೆ ಹನಿಟ್ರ್ಯಾಪ್ ನಡೆಸಿ, ನಂತರ ಅವರನ್ನು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿ ಮುಧೋಳ ಪಟ್ಟಣದ ನಿವಾಸಿ ಬಸವರಾಜ್ ಪಾಟೀಲ್ಗೆ ಜೀವಾವಧಿ ಶಿಕ್ಷೆಯಾಗಿತ್ತು. 2014 ರಲ್ಲಿ ವಿಜಯಪುರ ಜಿಲ್ಲಾ ಕಾರಾಗೃಹದಲ್ಲಿದ್ದ ಈತ, ಅನಾರೋಗ್ಯದ ನೆಪ ಹೇಳಿ ಜಿಲ್ಲಾಸ್ಪತ್ರೆಗೆ ಅಡ್ಮಿಟ್ ಆಗಿದ್ದ. ಆಗ ಪೊಲೀಸರ ಕಣ್ಣು ತಪ್ಪಿಸಿ ಅಲ್ಲಿಂದ ನಾಪತ್ತೆಯಾಗಿದ್ದ. ಮುಖ-ಚಹರೆಯನ್ನೇ ಬದಲಾಯಿಸಿಕೊಂಡು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ .
ಇದನ್ನೂ ನೋಡಿ: ಅಲೋಕ್ ಕುಮಾರ್ ದಿಟ್ಟ ಕ್ರಮ: ಕರ್ನಾಟಕದ ಹಲವು ಜೈಲುಗಳಲ್ಲಿ ಬರೋಬ್ಬರಿ 410 ಮೊಬೈಲ್ ಸೀಜ್
ಪ್ರಕರಣದ ವಿವರ
ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿಯಾಗಿದ್ದ ಬಸವರಾಜ್ ಪಾಟೀಲ್ 2009ರಲ್ಲಿ ಬಾಗಲಕೋಟೆ ಕೃಷಿ ಅಧಿಕಾರಿ ಹನಿಟ್ರಾಪ್ ಮತ್ತು ಕೊಲೆ ಕೇಸಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದ. 2014ರಲ್ಲಿ ವಿಜಯಪುರ ಕೇಂದ್ರ ಕಾರಾಗೃಹದಿಂದ ಆಸ್ಪತ್ರೆಗೆ ಎಂದು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಈ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಕಣ್ಣು ತಪ್ಪಿಸಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ. ಬಳಿಕ 12 ವರ್ಷ ಎಲ್ಲಿ ಹೋದ? ಏನು ಮಾಡುತ್ತಿದ್ದ? ಎನ್ನುವ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಜೈಲಿಂದ ಪಾರಾರಿಯಾದ ಬಳಿಕ ಕುಟುಂಬದವರ ಸಂಪರ್ಕಕ್ಕೂ ಬಾರದೆ ಜೀವನ ಮಾಡುತ್ತಿದ್ದನಂತೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ವಿಜಯಪುರ ಪೊಲೀಸರಿಗೆ ಸಿಕ್ಕಿತ್ತು. ಕ್ರೈಂ ಥ್ರಿಲ್ಲರ್ ಮೂವಿ ರೀತಿಯಲ್ಲಿ ಜೈಲಿಂದ ಓಡಿ ಹೋದ ಹಂತಕನ ಬೆನ್ನಟ್ಟಿದ ಗಾಂಧಿ ಚೌಕ ಪೊಲೀಸರು ಕೊನೆಗೂ ಆತನನ್ನು ಬಂಧಿಸಿ ಕರೆತಂದಿದ್ದಾರೆ.
ಕೈದಿಯನ್ನು ಹಿಡಿದುಕೊಟ್ಟ ಅನೈತಿಕ ಸಂಬಂಧದ
ಜೈಲಿಂದ ಪರಾರಿಯಾದ ಬಳಿಕ ಈ ಖತರ್ನಾಕ್ ಹಂತಕ ಪಕ್ಕಾ ಪ್ಲಾನ್ ಮಾಡಿದ್ದ. ಸ್ವಂತ ಕುಟುಂಬದ ಸಂಪರ್ಕವನ್ನೂ ಸಂಪೂರ್ಣವಾಗಿ ಕಟ್ ಮಾಡಿ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಿದ್ಧಸಮುದ್ರ ಗ್ರಾಮದಲ್ಲಿ ಅಡಗಿದ್ದ. ಗಡ್ಡ-ಕೂದಲು ಬೆಳೆಸಿ, ಅದೇ ಗ್ರಾಮದಲ್ಲಿ ಜಮೀನು ಲೀಜ್ಗೆ ಪಡೆದು ರೈತನಂತೆ ಕಾಲ ಕಳೆಯುತ್ತಿದ್ದ. ಆದರೆ ಗದ್ದನಕೇರಿ ಕ್ರಾಸ್ನ ಮಹಿಳೆಯೊಬ್ಬಳ ಜೊತೆಗಿದ್ದ ಸಂಪರ್ಕವೇ ಈತನಿಗೆ ಮುಳುವಾಯಿತು. ಅನೈತಿಕ ಸಂಬಂಧದ ಸುಳಿವು ಹಿಡಿದ ಪೊಲೀಸರು ಕೊನೆಗೂ ಬಸವರಾಜ್ ಪಾಟೀಲ್ನನ್ನ ಅರೆಸ್ಟ್ ಮಾಡಿದ್ದಾರೆ.
ವಿಜಯಪುರ ಪೊಲೀಸರ ರೋಚಕ ಬೇಟೆ
ಗಾಂಧಿಚೌಕ್ ಪೊಲೀಸ್ ಠಾಣೆಯ ಸಿಪಿಐ ಪ್ರದೀಪ್ ತಳಕೇರಿ ನೇತೃತ್ವದ ರೌಡಿ ನಿಗ್ರಹ ಪಡೆ ಬಸವರಾಜ್ ಪಾಟೀಲರ ಜಾಡು ಹಿಡಿದು ಹೋದಾಗ ಒಂದು ಕ್ಲ್ಯೂ ಸಿಕ್ಕಿತ್ತು. ಕೈದಿ ಬಸವರಾಜ ಪಾಟೀಲ್ ಬಾಗಲಕೋಟೆ ಜಿಲ್ಲೆ ಗದ್ದನಕೇರಿ ಕ್ರಾಸ್ ಬಳಿಯ ಓರ್ವ ಮಹಿಳೆಯ ಮನೆಗೆ ಬರುತ್ತಾನೆ ಎಂಬ ಮಾಹಿತಿ ಸಿಕ್ಕಿತ್ತು. ಆಗ ಆ ಮಹಿಳೆ ಹೆಸರು ವಿಳಾಸ ಪತ್ತೆ ಮಾಡಿದ ಖಾಕಿ ಪಡೆ ಆಕೆಯ ಕಾಲ್ ಡಿಟೇಲ್ಸ್ ಮೇಲೆ ನಿಗಾ ಇಟ್ಟಿತ್ತು. ಆ ಮಹಿಳೆ ಕೈದಿ ಬಸವರಾಜನೊಂದಿಗೆ ನಿರಂತರ ಗಂಟೆ ಗಟ್ಟಲೆ ಮಾತನಾಡುವುದು ಕಂಡು ಬಂದಿತ್ತು. ರಾತ್ರಿ ಹೊತ್ತು ದೀರ್ಘಕಾಲ ಸಂಭಾಷಣೆ ನಡೆಸಿದ ನಂಬರ್ ಬಸವರಾಜ್ ಪಾಟೀಲ್ ನದ್ದು ಅಂತಾ ಕನ್ಪರ್ಮ್ ಮಾಡಿಕೊಂಡು ಟ್ರೇಸ್ ಮಾಡೋಕೆ ಮುಂದಾಗಿತ್ತು.
ಆ ನಂಬರ್ ಲೊಕೇಷನ್ ಬೆನ್ನಟ್ಟಿದ ಖಾಕಿ ಪಡೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಿದ್ಧಸಮುದ್ರ ಗ್ರಾಮದಲ್ಲಿ ಬಸವರಾಜ್ ಇರೋ ಸುಳಿವು ಪತ್ತೆ ಮಾಡಿತ್ತು. ಪೊಲೀಸರು ಬಸವರಾಜ್ ನನ್ನ ಹಿಡಿಯುತ್ತಿದ್ದಂತೆ ನಾನವನಲ್ಲ ಎಂದು ಹೈಡ್ರಾಮಾ ಮಾಡಿದ್ದ. ಆದರೆ ಗಾಂಧಿಚೌಕ ಪೊಲೀಸರು ತಂದಿದ್ದ ಡಿಜಿಟಲ್ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಈತನ ಅಸಲಿ ಬಣ್ಣ ಬಯಲು ಮಾಡಿತ್ತು. 2009ರಲ್ಲಿ ಸಂಗ್ರಹಿಸಿದ್ದ ಬೆರಳಚ್ಚು ಮಾದರಿ ಶೇಕಡಾ 100ರಷ್ಟು ಮ್ಯಾಚ್ ಆಗಿತ್ತು. ನಂತರ ವಿಚಾರಣೆಯಲ್ಲಿ ಕೈದಿ ಬಸವರಾಜ ಎಲ್ಲ ಸತ್ಯವನ್ನು ಬಾಯ್ಬಿಟ್ಟಿದ್ದ. ಪೊಲೀಸರ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.




