ಬಿಬಿಎಂಪಿ ಇನ್ಮುಂದೆ ಗ್ರೇಟರ್ ಬೆಂಗಳೂರು ಅಥಾರಿಟಿ? ರಾಮನಗರ, ಕನಕಪುರವನ್ನು ಬೆಂಗಳೂರಿಗೆ ಸೇರಿಸಲು ರೂಪುರೇಷೆ

ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಐಟಿ ಹಬ್ ಹೀಗೆ ಹಲವು ವಿಚಾರಗಳಲ್ಲಿ ಬೆಂಗಳೂರು ಈಗಾಗಲೇ ವಿಶ್ವಮಟ್ಟದಲ್ಲಿ ಮಹತ್ವ ಪಡೆದಿದೆ. ಇದೀಗ ರಾಜಧಾನಿ ನಗರದ ಹೆರಿಗೇ ‘ಗ್ರೇಟರ್’ ಎಂಬ ಕಿರೀಟ ತೊಡಿಸಲು ಸರ್ಕಾರ ಮುಂದಾಗಿದೆ. ಇದುವರೆಗೆ ಇದ್ದ ಬಿಬಿಎಂಪಿ ಎಂಬ ಹೆಸರಿನ ಬದಲು ‘ಗ್ರೇಟರ್ ಬೆಂಗಳೂರು ಅಥಾರಿಟಿ’ ಅಸ್ತಿತ್ವಕ್ಕೆ ಬರಲಿದೆ. ‘ಗ್ರೇಟರ್ ಬೆಂಗಳೂರು ಅಥಾರಿಟಿ’ ಆಡಳಿತ ಹೇಗಿರಲಿದೆ ಎಂಬುದೂ ಸೇರಿದಂತೆ ವಿಧೇಯಕದ ಸಂಪೂರ್ಣ ವಿವರ ಇಲ್ಲಿದೆ.

ಬಿಬಿಎಂಪಿ ಇನ್ಮುಂದೆ ಗ್ರೇಟರ್ ಬೆಂಗಳೂರು ಅಥಾರಿಟಿ? ರಾಮನಗರ, ಕನಕಪುರವನ್ನು ಬೆಂಗಳೂರಿಗೆ ಸೇರಿಸಲು ರೂಪುರೇಷೆ
ಸಿಟಿ ಬಸ್ ನಿಲ್ದಾಣ (ಮೆಜೆಸ್ಟಿಕ್), ಕೆಂಪೇಗೌಡ ಮೆಟ್ರೋ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಸಿಟಿ ರೈಲು ನಿಲ್ದಾಣ, ಬೆಂಗಳೂರು, ಭಾರತದ ವೈಮಾನಿಕ ನೋಟImage Credit source: Getty Images
Follow us
| Updated By: ಗಣಪತಿ ಶರ್ಮ

Updated on: Jul 23, 2024 | 6:57 AM

ಬೆಂಗಳೂರು, ಜುಲೈ 23: ಕೋಟ್ಯಂತರ ಮಂದಿಯ ಕನಸಿನ ಸೂರು ಬೆಂಗಳೂರು ಕೆಂಪೇಗೌಡರು ಕಟ್ಟಿದ್ದ ನಾಲ್ಕು ಗಡಿ ಗೋಪುರಗಳನ್ನು ದಾಟಿ ಬೆಳೆದು ಅದೆಷ್ಟೋ ವರ್ಷಗಳಾಯಿತು. ನಾಲ್ಕೈದು ಕಿಲೋ ಮೀಟರ್ ಸುತ್ತಳತೆಯ ಬೆಂಗಳೂರು ಇದೀಗ 50-60 ಕಿಲೋ ಮೀಟರ್ ವಿಸ್ತೀರ್ಣಕ್ಕೂ ಮೀರಿ ಬೆಳೆದುಬಿಟ್ಟಿದೆ. ದಿನದಿಂದ ದಿನಕ್ಕೆ ಬೆಂಗಳೂರಿನ ವ್ಯಾಪ್ತಿ ದೊಡ್ಡದಾಗುತ್ತಲೇ ಹೋಗುತ್ತಿದೆ. ಇದಕ್ಕಾಗಿ ಸರ್ಕಾರ ಹೊಸದೊಂದು ಯೋಚನೆ ಮಾಡಿದ್ದು ‘ಗ್ರೇಟರ್ ಬೆಂಗಳೂರು ಅಥಾರಿಟಿ’ ಅಸ್ತಿತ್ವಕ್ಕೆ ತರಲು ತೀರ್ಮಾನಿಸಿದೆ.

ಬೆಂಗಳೂರು 5 ಭಾಗ, ಸಂಪುಟ ಅನುಮೋದನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇನ್ನು ಮುಂದೆ ಗ್ರೇಟರ್ ಬೆಂಗಳೂರು ಅಗಲಿದೆ. ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಿರುವ ಬೆಂಗಳೂರಿಗೆ ಹೊಸ ರೂಪ, ಹೊಸ ಆಡಳಿತ ನೀಡಲು ಸರ್ಕಾರ ತೀರ್ಮಾನಿಸಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಸ್ಥಾಪನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ವಿಧಾನಸಭೆ, ಪರಿಷತ್​ನಲ್ಲಿ ‘ದಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ 2024 (The Greater Bengaluru Governance Bill 2024)’ ಮಂಡನೆಗೆ ಸರ್ಕಾರ ನಿರ್ಧರಿಸಿದೆ.

ಹೇಗಿರಲಿದೆ ಗ್ರೇಟರ್ ಬೆಂಗಳೂರು?

ರಾಮನಗರ, ಕನಕಪುರವನ್ನು ಬೆಂಗಳೂರಿಗೆ ಸೇರಿಸಲು ರೂಪುರೇಷೆ ಮಾಡಲಾಗಿದೆ. ಸದ್ಯ ಇರುವ ಬಿಬಿಎಂಪಿಯನ್ನು 5 ಭಾಗಗಳಾಗಿ ವಿಭಜಿಸಲು ಕ್ಯಾಬಿನೆಟ್ ಅನುಮೋದನೆ ಕೊಟ್ಟಿದೆ. ಹೊಸದಾಗಿ ವಾರ್ಡ್​ಗಳನ್ನು ಸೇರಿಸಿಕೊಂಡು ವಿಸ್ತರಿಸಲು ಪ್ಲ್ಯಾನ್ ಮಾಡಲಾಗಿದೆ. ಈ ಮೂಲಕ ಬಿಬಿಎಂಪಿ ಬದಲು ‘ಗ್ರೇಟರ್ ಬೆಂಗಳೂರು ಅಥಾರಿಟಿ’ ಅಸ್ತಿತ್ವಕ್ಕೆ ತರಲಾಗುತ್ತದೆ. ಸುಮಾರು‌ 1400 ಚದರ ಕಿಲೋಮೀಟರ್​​​​ನಷ್ಟು ವ್ಯಾಪ್ತಿ ‘ಜಿಬಿಎ’ ಅಡಿಯಲ್ಲಿ ಬರಲಿದೆ. 1 ರಿಂದ 10 ಕಾರ್ಪೊರೇಷನ್​ಗಳು ವ್ಯಾಪ್ತಿಗೆ ಬರಲಿವೆ. ಈ ಕಾರ್ಪೊರೇಷನ್​ಗಳು 950 ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಲಿದೆ. ಸದ್ಯ ಇರುವ708 ಚದರ ಕಿಲೋ ಮೀಟರ್​ಗಳ ಬಿಬಿಎಂಪಿ ರದ್ದಾಗಲಿದೆ.

ಅಧಿಕಾರ ವಿಕೇಂದ್ರೀಕರಣ ಹೇಗೆ?

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರಾಗಿರುತ್ತಾರೆ. ಗ್ರೇಟರ್ ಬೆಂಗಳೂರು ಯೋಜನೆ ಮತ್ತು ಹಣಕಾಸು ಅಧಿಕಾರ ನಿರ್ವಹಣೆಯ ಅಧಿಕಾರ ಸಿಎಂಗೆ ಇರುತ್ತೆ. ಗ್ರೇಟರ್ ಬೆಂಗಳೂರು ಅಡಿ ವಿವಿಧ ಹಂತದಲ್ಲಿ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿದ್ದು, ಸಿಎಂ ಅಧ್ಯಕ್ಷತೆಯ ಗ್ರೇಟರ್ ಬೆಂಗಳೂರು ಅಡಿ 5-10 ಸಿಟಿ ಕಾರ್ಪೊರೇಷನ್​ಗಳು ಬರುತ್ತವೆ.

400 ವಾರ್ಡ್​ಗಳು ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಗೆ ಬರುವ ಸಾಧ್ಯತೆ ಇದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬಿಡಿಎ, ಬೆಸ್ಕಾಂ ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಗೆ ಬರಲಿವೆ.

ಇದನ್ನೂ ಓದಿ: ಕೇಂದ್ರ ಸರ್ಕಾರದ 3 ವಿಚಾರಗಳ ಬಗ್ಗೆ ನಿರ್ಣಯ ಕೈಗೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧಾರ

ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ಗ್ರೇಟರ್ ಬೆಂಗಳೂರು ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದರು. ರಾಮನಗರ, ಚನ್ನಪಟ್ಟಣ, ಕನಕಪುರ ಸೇರಿ ಎಲ್ಲವನ್ನೂ ಬೆಂಗಳೂರಿಗೆ ಸೇರಿಸುವುದಾಗಿ ಹೇಳಿಕೆ ಕೊಟ್ಟಿದ್ದರು. ಅಲ್ಲದೆ ರಾಮನಗರ ಜಿಲ್ಲೆಯ ಹೆಸರನ್ನ ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಬದಲಿಸಬೇಕೆಂದು ಖುದ್ದು ಸಿಎಂಗೆ ಮನವಿ ಕೂಡ ಮಾಡಿದ್ದರು. ಅದರ ಭಾಗವಾಗಿ ಸಚಿವ ಸಂಪುಟ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಗ್ರೇಟರ್ ಬೆಂಗಳೂರು ಅಥಾರಿಟಿ ಸ್ಥಾಪನೆಯ ಹಿಂದೆ ಅನೇಕ ರಾಜಕೀಯ ಲೆಕ್ಕಾಚಾರಗಳೂ ಅಡಗಿವೆ. ಆದರೆ ಈ ಯೋಜನೆ ವಿರೋಧಗಳಿಗೂ ಕೂಡ ಕಾರಣವಾಗುವ ಸಾಧ್ಯತೆ ಇದೆ. ಇವೆಲ್ಲದರ ನಡುವೆ ಗ್ರೇಟರ್ ಬೆಂಗಳೂರು ಅಥಾರಿಟಿ ಹಾಗೂ ಇತರ ಮೂರು ವಿಧೇಯಕಗಳು ಇಂದು ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ