ಲೋಕಾಯುಕ್ತ ಭರ್ಜರಿ ಕಾರ್ಯಚರಣೆ: ಲಂಚ ಪಡೆಯುವಾಗ ಸಿಕ್ಕಿಬಿದ್ದ ಹಲವು ಅಧಿಕಾರಿಗಳು
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆ ಆಡಿದ್ದಾರೆ. ಸಾವಿರಾರು ರೂ ಲಂಚಕ್ಕೆ ಕೈಯೊಡ್ಡಿದ ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಯಾದಗಿರಿಯ ಎಇಇ ಮತ್ತು ಜೆಇ, ಬೆಂಗಳೂರಿನ ಜಿಬಿಎ ಅಧಿಕಾರಿಗಳಿಬ್ಬರು ಮತ್ತು ಹಳಿಯಾಳ ಉಪಕಾರಾಗೃಹದಲ್ಲಿ ಕೈದಿಯ ಕೂಲಿ ಹಣಕ್ಕೆ ಲಂಚ ಕೇಳಿದ ಜೈಲರ್ ಲೋಕಾ ಬಲೆಗೆ ಬಿದ್ದವರು.

ಯಾದಗಿರಿ, ಏಪ್ರಿಲ್ 02: ಗುತ್ತಿಗೆದಾರನಿಂದ ಲಂಚ (Bribe) ಸ್ವೀಕರಿಸುತ್ತಿದ್ದ ವೇಳೆ ಕೆಬಿಜೆಎನ್ಎಲ್ ಭೀಮರಾಯನಗುಡಿ ವಿಭಾಗದ ಎಇಇ ಮತ್ತು ಜೆಇ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಎಇಇ ಮಧುಸೂದನ್ ಮತ್ತು ಜೆಇ ಮಂಜುನಾಥ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು. ಲೋಕಾಯುಕ್ತ ಡಿವೈಎಸ್ಪಿ ಜೆ.ಹೆಚ್.ಇನಾಂದಾರ್ ನೇತೃತ್ವದಲ್ಲಿ ದಾಳಿ ಮಾಡಿ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದ ಅಧಿಕಾರಿಗಳು
ಎಇಇ ಮಧುಸೂದನ್ ಮತ್ತು ಜೆಇ ಮಂಜುನಾಥ ಕಾಮಗಾರಿ ಬಿಲ್ ಮಂಜೂರು ಮಾಡಲು ಗುತ್ತಿಗೆದಾರ ಖಾಸಿಂ ಸಾಬ್ನಿಂದ 35 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇತ್ತ ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟ ಬಗ್ಗೆ ಗುತ್ತಿಗೆದಾರ ದೂರು ಕೂಡ ನೀಡಿದ್ದ. ಇಂದು ಫೋನ್ಪೇ ಮೂಲಕ ಲಂಚ ಸ್ವೀಕರಿಸಲು ಮುಂದಾದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
3 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಜಿಬಿಎ ಅಧಿಕಾರಿಗಳು ಲೋಕಾ ಬಲೆಗೆ
ಇನ್ನು ಇತ್ತ ಬೆಂಗಳೂರಿನ ಥಣಿಸಂದ್ರದಲ್ಲಿ ಕೂಡ ಜಿಬಿಎ ಅಧಿಕಾರಿಗಳಿಬ್ಬರು ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದಿದ್ದಾರೆ. ಆರ್ಐ ವೆಂಕಟೇಶ್ ಮತ್ತು ತೆರಿಗೆ ಅಧಿಕಾರಿ ಶ್ರೀನಿವಾಸ್ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಕಟ್ಟಡದ ಖಾತೆ ಮಾಡಿಕೊಡಲು 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂತ್ರಿ ಬಿಲ್ಡರ್ಸ್ ಮೇಲೆ ಇಡಿ ದಾಳಿ: ಮತ್ತೆ ಶಾಕ್ ಕೊಟ್ಟ ದೆಹಲಿ ಅಧಿಕಾರಿಗಳು
ಬೆಂಗಳೂರಿನ ಥಣಿಸಂದ್ರದಲ್ಲಿ ನ್ಯಾಮತುಲ್ಲಾ ಖಾನ್ ಎಂಬುವವರಿಂದ 3 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಇಬ್ಬರು ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳು ಹಿಡಿದಿದ್ದಾರೆ. ಈ ಬಗ್ಗೆ ನ್ಯಾಮತುಲ್ಲಾ ಖಾನ್ ದೂರು ನೀಡಿದ್ದರು. ಹೀಗಾಗಿ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸದ್ಯ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಕೈದಿಯ ಕೂಲಿ ಹಣಕ್ಕೆ ಲಂಚ ಕೇಳಿದ ಅಧಿಕಾರಿ ಲೋಕಾ ಬಲೆಗೆ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಉಪಕಾರಾಗೃಹದಲ್ಲಿ ಕೈದಿಯ ಕೂಲಿ ಹಣಕ್ಕೆ ಲಂಚ ಕೇಳಿದ ಅಧಿಕಾರಿ ಲೋಕಾ ಬಲೆಗೆ ಬಿದಿದ್ದಾರೆ. ಕಲ್ಲಪ್ಪ ಗಸ್ತಿ ಲೋಕಾಯುಕ್ತ ಬಲೆಗೆ ಬಿದ್ದ ಉಪ ಕಾರಾಗೃಹದ ಅಧೀಕ್ಷಕ. ಕೊಲೆ ಆರೋಪಿ ರಾಜಕುಮಾರ್ ಹುಂದೇಕರನಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಇದನ್ನೂ ಓದಿ: ಜಿಎಸ್ಟಿ ಹೆಸರಿನಲ್ಲಿ ಲಂಚ ಕೇಳಿದ ಕಮರ್ಷಿಯಲ್ ಟ್ಯಾಕ್ಸ್ ಅಡಿಟ್ ಡಿಸಿ ಭರತ್ ಹೆಗಡೆ ಲೋಕಾಯುಕ್ತ ಬಲೆಗೆ!
ಹಳಿಯಾಳ ತಾಲೂಕಿನ ಯಡೋಗಾ ಗ್ರಾಮದ ರಾಜಕುಮಾರ್ 2022ರಲ್ಲಿ ಪತ್ನಿಯ ಕತ್ತು ಸಿಳಿ ಜೈಲು ಪಾಲಾಗಿದ್ದ. ಕೊಲೆ ಆರೋಪದ ಮೇರೆಗೆ ಎರಡು ವರ್ಷ ಜೈಲು ಸೇರಿದ್ದ. ಜಾಮೀನು ಸಿಕ್ಕ ಹಿನ್ನೆಲೆ ಜೈಲಿನಿಂದ ಹೊರ ಬಂದಿದ್ದ. ಎರಡು ವರ್ಷ ಜೈಲಿನಲ್ಲಿ ಕೂಲಿ ಕೆಲಸ ಮಾಡಿ 1 ಲಕ್ಷ 40 ಸಾವಿರ ರೂ ಸಂಪಾದಿಸಿದ್ದ. ಜೈಲಿನ ಕೂಲಿ ವೇತನ ನೀಡಲು ಜೈಲರ್ನಿಂದ 60 ಸಾವಿರ ರೂ ಬೇಡಿಕೆ ಇಟ್ಟಿದ್ದರು. ಹಣವನ್ನು ಧಾರವಾಡದ ಮಹಿಳಾ ವಕೀಲೆಯೊಬ್ಬರಿಗೆ ಫೋನ್ ಪೇ ಮಾಡಲು ತಾಕೀತು ಮಾಡಿದ್ದರು. ಹಣಕ್ಕೆ ಪೀಡಿಸಿದ್ದರಿಂದ ರಾಜಕುಮಾರ್ ಹುಂದೇಕರ್ ಲೋಕಾಯುಕ್ತಕ್ಕೆ ದೂರು ನೀಡಿದ್ದ. ಲೋಕಾಯುಕ್ತ ಎಸ್.ಪಿ ಧನ್ಯ ನಾಯ್ಕ, ಸಿಪಿಐ ವಿನಾಯಕ್ ಬಿಲ್ಲವ ತಂಡದಿಂದ ದಾಳಿ ಹಿಡಿದಿದ್ದಾರೆ. ಸದ್ಯ ಜೈಲರ್ಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.