Chanakya Niti: ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಈ ಗುಣಗಳನ್ನು ತ್ಯಜಿಸಲೇಬೇಕು ಎನ್ನುತ್ತಾರೆ ಚಾಣಕ್ಯ
ಯಾರೇ ಆದರೂ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಕಠಿಣ ಪರಿಶ್ರಮ ಮಾತ್ರವಲ್ಲ ಕೆಲವೊಂದು ಗುಣಗಳು ಕೂಡಾ ಅವಶ್ಯಕವಾಗಿರುತ್ತದೆ. ಅದೇ ರೀತಿ ಇನ್ನೊಂದು ಬೇಡದ ಗುಣಗಳನ್ನು ತ್ಯಜಿಸುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಾದರೆ ಜೀವನದಲ್ಲಿ ಆಗಿರಬಹುದು ಅಥವಾ ವೃತ್ತಿ ಜೀವನದಲ್ಲಿಯೇ ಆಗಿರಬಹುದು ಯಶಸ್ಸನ್ನು ಸಾಧಿಸಲು ನಾವು ಯಾವ ಕೆಟ್ಟ ಗುಣವನ್ನು ಬಿಟ್ಟುಬಿಡಬೇಕು ಎಂಬುದನ್ನು ನೋಡೋಣ ಬನ್ನಿ.

ಮಹಾನ್ ವಿದ್ವಾಂಸರಾಗಿರುವ ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿ ಶಾಸ್ತ್ರದಲ್ಲಿ ರಾಜತಾಂತ್ರಿಕತೆಯ ವಿಷಯಗಳನ್ನು ಮಾತ್ರವಲ್ಲದೆ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಸೋಲು, ಗೆಲುವು, ಎಂತಹವರ ಸ್ನೇಹ ಮಾಡಬೇಕು, ಸುಂದರ ದಾಂಪತ್ಯ ಜೀವನದ ಸೂತ್ರ ಹೀಗೆ ನಮ್ಮ ಜೀವನಕ್ಕೆ ಬೇಕಾದ ಹಲವಾರು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು (success) ಪಡೆಯಬೇಕೆಂದರೆ ಅವನು ಯಾವ ಗುಣವನ್ನು ಹೊಂದಿರಬೇಕು ಮತ್ತು ಯಾವ ಕೆಟ್ಟ ಗುಣಗಳನ್ನು (bad qualities) ತ್ಯಜಿಸಬೇಕು ಎಂಬುದರ ಬಗ್ಗೆಯೂ ಹೇಳಿದ್ದಾರೆ. ನೀವು ಕೂಡಾ ಯಶಸ್ವಿ ವ್ಯಕ್ತಿಯಾಗಲು ಬಯಸಿದರೆ ಆಚಾರ್ಯ ಚಾಣಕ್ಯರು ಹೇಳಿದ ಈ ಕೆಲವೊಂದು ಗುಣಗಳನ್ನು ಇಂದೇ ತ್ಯಜಿಸಿ.
ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಈ ಗುಣಗಳನ್ನು ತ್ಯಜಿಸಿ:
ಕೆಟ್ಟವರ ಸಹವಾಸ ಬಿಟ್ಟುಬಿಡಿ: ನೀವು ಕೆಟ್ಟವರ ಸಹವಾಸದಲ್ಲಿದ್ದರೆ ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಚಾಣಕ್ಯ ನೀತಿಯ ಪ್ರಕಾರ, ಕೆಟ್ಟ ಸಹವಾಸವನ್ನು ಬಿಡಲು ಸಾಧ್ಯವಾಗದವರು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಟ್ಟವರ ಸಹವಾಸದಲ್ಲಿ ಒಬ್ಬ ವ್ಯಕ್ತಿಯು ಕೆಟ್ಟ ಕಾರ್ಯಗಳ ಕಡೆಗೆ ಆಕರ್ಷಿತನಾಗುತ್ತಾನೆ. ಈ ಕೆಟ್ಟ ಅಭ್ಯಾಸಗಳು ವ್ಯಕ್ತಿಯ ಜೀವನವನ್ನು ಹಾಳುಮಾಡುತ್ತವೆ. ಅಂತಹ ವ್ಯಕ್ತಿಗೆ ಸಮಾಜದಲ್ಲಿ ಯಾವುದೇ ಗೌರವ ಕೂಡಾ ಸಿಗುವುದಿಲ್ಲ. ಹಾಗಾಗಿ ಕೆಟ್ಟವರ ಸಹವಾಸ ಬಿಟ್ಟು ಬಿಡಿ.
ದುರಾಸೆ ಬಿಟ್ಟು ಬಿಡಿ: ದುರಾಸೆ ಮನುಷ್ಯನನ್ನು ಕುರುಡನನ್ನಾಗಿ ಮಾಡುತ್ತದೆ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಹೆಚ್ಚು ಹಣ ಗಳಿಸುವ ಭರದಲ್ಲಿ ಅದು ನಿಮ್ಮನ್ನು ತಪ್ಪು ದಾರಿ ತುಳಿಯುವಂತೆ ಮಾಡುತ್ತದೆ. ಹೀಗೆ ತಪ್ಪು ದಾರಿಯಲ್ಲಿ ಗಳಿಸಿದ ಹಣ, ಯಶಸ್ಸು ಎಂದಿಗೂ ಶಾಶ್ವತವಲ್ಲ. ಹಾಗಾಗಿ ಪ್ರಾಮಾಣಿಕತೆಯಿಂದ ದುಡಿದು ಒಳ್ಳೆಯ ದಾರಿಯಲ್ಲಿ ಹಣ ಗಳಿಸಿ ಎಂದು ಚಾಣಕ್ಯ ಹೇಳುತ್ತಾರೆ.
ಕೋಪವನ್ನು ಬಿಟ್ಟು ಬಿಡಿ: ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚಾಗಿ ತಪ್ಪು ನಿರ್ಧಾರಗಳಾಗಿರುತ್ತದೆ. ಕೋಪವು ಸಂಬಂಧವನ್ನು ಹಾಳು ಮಾಡುವುದಲ್ಲದೆ ಜೀವನದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತದೆ. ಹಾಗಾಗಿ ಯಶಸ್ಸು ಗಳಿಸಬೇಕಾದರೆ ಕೋಪವೆಂಬ ನಿಮ್ಮೊಳಗಿನ ಶತ್ರವನ್ನು ಮೊದಲು ತ್ಯಜಿಸಿ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ.
ಇದನ್ನೂ ಓದಿ: ತಾಯಂದಿರ ದಿನದಂದು ಪ್ರೀತಿಯ ಅಮ್ಮನಿಗೆ ಈ ಕೆಲವು ಸರ್ಪ್ರೈಸ್ ಗಿಫ್ಟ್ಗಳನ್ನು ನೀಡಿ
ನಕಾರಾತ್ಮಕ ಆಲೋಚನೆಗಳನ್ನು ತ್ಯಜಿಸಿ: ನಿಮ್ಮ ಆಲೋಚನೆಗಳು ನಿಮ್ಮ ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ನಕಾರಾತ್ಮಕ ಆಲೋಚನೆಗಳಿಂದ ಸುತ್ತುವರೆದಿರುವ ಜನರು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಚಾಣಕ್ಯ ನೀತಿಯ ಪ್ರಕಾರ, ವ್ಯಕ್ತಿಯ ಯಶಸ್ಸಿನಲ್ಲಿ ಸಕಾರಾತ್ಮಕತೆಯು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಸಕಾರಾತ್ಮಕ ಚಿಂತನೆಯೊಂದಿಗೆ ಕೆಲಸ ಮಾಡಿ ಮತ್ತು ಜೀವನದಲ್ಲಿ ಯಶಸ್ಸನ್ನು ಸಾಧಿಸುವಿರಿ.
ಸೋಮಾರಿತನದಿಂದ ದೂರವಿರಿ: ಎಂದಿಗೂ ಸೋಮಾರಿತನವನ್ನು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಚಾಣಕ್ಯ ನೀತಿಯ ಪ್ರಕಾರ, ಸೋಮಾರಿತನವೇ ಮನುಷ್ಯನ ದೊಡ್ಡ ಶತ್ರು. ಯಾರು ಸೋಮಾರಿಗಳಾಗಿರುತ್ತಾರೋ ಅಂತಹ ಜನರು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಜೀವನದಲ್ಲಿ ಯಶಸ್ವಿಯಾಗಬೇಕು, ಖ್ಯಾತಿ ಗಳಿಸಬೇಕು ಎಂದು ಬಯಸಿದರೆ ಸೋಮಾರಿತನವನ್ನು ಇಂದೇ ಬಿಟ್ಟುಬಿಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ