
ದುಡ್ಡಿನ ದುನಿಯಾ ಇದು. ಈಗ ಪರಿಸ್ಥಿತಿ ಹೇಗಾಗಿದೆ ಅಂದ್ರೆ ದುಡ್ಡಿದ್ದರೆ ಮಾತ್ರ ಜನ ಸಂಬಂಧಗಳಿಗೆ ಬೆಲೆ ಕೊಡ್ತಾರೆ, ಗೌರವ ಕೊಡ್ತಾರೆ. ಇದೇ ಕಾರಣಕ್ಕಾಗಿ ನಾನು ಅಂದುಕೊಂಡಂತೆ ಬಾಳಬೇಕು, ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ಬೆಳೆಯಬೇಕು, ಸಿಕ್ಕಾಪಟ್ಟೆ ದುಡ್ಡು ಮಾಡ್ಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಯಶಸ್ಸು ಸಾಧಿಸುವುದು, ಶ್ರೀಮಂತಿಕೆ (Richness) ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಕಠಿಣ ಪರಿಶ್ರ ಅತ್ಯಗತ್ಯ. ಜೊತೆಗೆ ಈ ಕೆಲವೊಂದಿಷ್ಟು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ತುಂಬಾನೇ ಮುಖ್ಯ ಎಂದಿದ್ದಾರೆ ಚಾಣಕ್ಯ (Chanakya). ಹೌದು ಈ ಅಭ್ಯಾಸಗಳಿರುವವರು ಮಾತ್ರ ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ಬೆಳೆಯಲು, ಹಣ ಗಳಿಸಲು ಸಾಧ್ಯ ಎನ್ನುತ್ತಾರೆ. ನಿಮಗೂ ಸಹ ಇದೇ ರೀತಿ ಶ್ರೀಮಂತರಾಗುವ ಬಯಕೆಯೇ? ಹಾಗಿದ್ರೆ ಚಾಣಕ್ಯರು ಹೇಳಿರುವ ಈ ಅಭ್ಯಾಸಗಳನ್ನು ನೀವೂ ಪಾಲಿಸಿ.
ಹಣವನ್ನು ಗೌರವಿಸಿ: ಚಾಣಕ್ಯನ ಪ್ರಕಾರ, ಹಣವನ್ನು ಅಗೌರವಿಸಿದರೆ, ಅದು ನಿಮ್ಮತ್ತ ಸುಳಿಯುವುದಿಲ್ಲ. ಹಾಗಾಗಿ ಹಣವನ್ನು ಗೌರವಿಸಿ ದುಂದುವೆಚ್ಚ, ಆಡಂಬರ ಮತ್ತು ಅಜಾಗರೂಕತೆಯನ್ನು ತಪ್ಪಿಸಿ. ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಿ, ಬಜೆಟ್ ರಚಿಸಿ, ಹಣ ಉಳಿಸಿ ಮತ್ತು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಇದು ಖಂಡಿತವಾಗಿಯೂ ಹೆಚ್ಚು ಹಣ ಗಳಿಕೆಗೆ ಸಹಾಯ ಮಾಡುತ್ತದೆ.
ಬಹು ಆದಾಯದ ಮೂಲ: ಚಾಣಕ್ಯರ ಪ್ರಕಾರ, ಒಂದೇ ಆದಾಯದ ಮೂಲವನ್ನು ಅವಲಂಬಿಸಿರುವ ವ್ಯಕ್ತಿಗೆ ಹಣದ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ಉಳಿತಾಯ ಮಾಡಲು ಕೂಡ ಸಾಧ್ಯವಾಗುವುದಿಲ್ಲ. ಆದ್ದರಿಂದ, ಬಹು ಆದಾಯದ ಮೂಲಗಳನ್ನು ಸೃಷ್ಟಿಸಿ. ಬಹು ಮೂಲಗಳಿಂದ ಹಣ ಗಳಿಸಲು ಹೊಸ ಕೌಶಲ್ಯಗಳನ್ನು ಕಲಿಯಿರಿ. ಈ ಅಭ್ಯಾಸ ಖಂಡಿತ ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ.
ಸಮಯಕ್ಕೆ ಗೌರವ ನೀಡಿ: ಚಾಣಕ್ಯರ ಪ್ರಕಾರ, ಸಮಯವನ್ನು ಅಗೌರವಿಸುವುದು ಅತ್ಯಂತ ದೊಡ್ಡ ಮೂರ್ಖತನ. ಸಮಯ ಮತ್ತು ಹಣ ಎರಡೂ ಅಮೂಲ್ಯ ಸಂಪನ್ಮೂಲಗಳು. ಆಲಸ್ಯ, ಸೋಮಾರಿತನವನ್ನು ತಪ್ಪಿಸುವ ಮೂಲಕ ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿ. ಖಂಡಿತವಾಗಿಯೂ ಈ ಅಭ್ಯಾಸ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುವುದರಲ್ಲಿ ಎರಡು ಮಾತಿಲ್ಲ.
ಕೆಟ್ಟ ಜನರ ಸಹವಾಸವನ್ನು ಬಿಡಿ: ಚಾಣಕ್ಯ ನೀತಿಯ ಪ್ರಕಾರ, ಕೆಟ್ಟ ಜನರ ಸಹವಾಸವು ಸಂಪತ್ತು ಮತ್ತು ಗೌರವ ಎರಡನ್ನೂ ನಾಶಪಡಿಸುತ್ತದೆ. ಸೋಮಾರಿ, ಕುಡುಕ ಅಥವಾ ವ್ಯರ್ಥ ಜನರ ಸಹವಾಸವನ್ನು ತಪ್ಪಿಸಿ. ಏಕೆಂದರೆ ಇವರಿಂದ ನೀವು ಜೀವನದಲ್ಲಿ ಎಂದಿಗೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಇವರುಗಳ ಬದಲಾಗಿ ಯಶಸ್ಸು ಸಾಧಿಸಲು ನಿಮ್ಮನ್ನು ಪ್ರೇರೇಪಿಸುವ ಸಕಾರಾತ್ಮಕ, ಒಳ್ಳೆಯ ಜನರ ಸ್ನೇಹವನ್ನು ಬೆಳೆಸಿ.
ಇದನ್ನೂ ಓದಿ: ಇಂತಹ ಒಬ್ಬ ಸ್ನೇಹಿತ ಶತ್ರುಗಳಿಗಿಂತ ಹೆಚ್ಚು ಅಪಾಯಕಾರಿ ಎನ್ನುತ್ತಾರೆ ಚಾಣಕ್ಯ
ಸಣ್ಣ ಖರ್ಚುಗಳ ಮೇಲೂ ನಿಗಾ ಇರಿಸಿ: ಒಂದು ಸಣ್ಣ ರಂಧ್ರ ದೊಡ್ಡ ಹಡಗುಗಳನ್ನು ಮುಳುಗಿಸುವಂತೆ ನೀವು ತುಂಬಾ ಸಣ್ಣದೆಂದು ಭಾವಿಸುವ ದುಂದುವೆಚ್ಚಗಳು ಆರ್ಥಿಕ ನಷ್ಟವನ್ನು ಉಂಟುಮಾಡಬಹುದು. ಹಾಗಾಗಿ ಪ್ರತಿಯೊಂದು ಖರ್ಚಿನ ಬಗ್ಗೆ ನಿಗಾ ಇರಿಸಿ. ಹೀಗೆ ಅನಗತ್ಯ ಖರ್ಚುಗಳನ್ನು ನಿಲ್ಲಿಸುವುದು ಸಮೃದ್ಧಿಯತ್ತ ಸಾಗುವ ಮೊದಲ ಹೆಜ್ಜೆಯಾಗಿದೆ.
ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಿ: ನಾವು ತೆಗೆದುಕೊಳ್ಳುವ ಸಮಯೋಚಿತ ನಿರ್ಧಾರಗಳು ಯಶಸ್ಸಿಗೆ ಪ್ರಮುಖವಾಗಿದೆ ಎಂದು ಚಾಣಕ್ಯರು ಹೇಳುತ್ತಾರೆ. ಹಾಗಾಗಿ ಎಚ್ಚರಿಕೆಯಿಂದ ಯೋಚಿಸಿ, ನಿರ್ಧಾರಗಳನ್ನುತಗೆದುಕೊಳ್ಳಿ. ಹೀಗೆ ಧೈರ್ಯ ಮತ್ತು ವಿಶ್ಲೇಷಿಸಿ ತೆಗೆದುಕೊಂಡ ಸರಿಯಾದ ಹೆಜ್ಜೆ ನಿಮ್ಮ ಇಡೀ ಜೀವನವನ್ನು ಬದಲಾಯಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ