
ಜೈನ ಧರ್ಮದ (Jainism) ಪ್ರಮುಖ ಹಬ್ಬಗಳಲ್ಲಿ ಮಹಾವೀರ ಜಯಂತಿಯೂ (Mahavir Jayanthi) ಒಂದು. ಸತ್ಯ, ಅಹಿಂಸೆ, ಅಪರಿಗ್ರಹ, ಬ್ರಹ್ಮಚರ್ಯ, ಕ್ಷಮೆ ಈ ಪಂಚ ತತ್ವಗಳ (vows) ಮೂಲಕ ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ಪಸರಿಸಿದ ಹಾಗೂ ಸತ್ಯ ಅಹಿಂಸೆಯ, ಶಾಂತಿ, ಸೌಹಾರ್ದತೆಯ ಸಂದೇಶವನ್ನು ನೀಡುವ ಮೂಲಕ ಇವರು ಸಮಾಜಕ್ಕೆ ನೈತಿಕ ಮಾರ್ಗವನ್ನು ತೋರಿಸಿದ ಜೈನ ಧರ್ಮದ (Jain Dharma) 24 ನೇ ಮತ್ತು ಕೊನೆಯ ತೀರ್ಥಂಕರ ಭಗವಾನ್ ಮಹಾವೀರರ (Mahavira) ಜನ್ಮ ಜಯಂತಿಯ ನೆನಪಿಗಾಗಿ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ಚೈತ್ರ ಮಾಸದ 13 ನೇ ದಿನದಂದು ಅಂದರೆ ಚೈತ್ರ ಶುಕ್ಲ ತ್ರಯೋದಶಿ ದಿನದಂದು ಜೈನ ಸಮುದಾಯದವರು ಬಹಳ ಭಕ್ತಿ ಪೂರ್ವಕವಾಗಿ ಈ ಮಂಗಳಕರ ಹಬ್ಬವನ್ನು ಆಚರಿಸುತ್ತಾರೆ. ಈ ಬಾರಿ ಮಹಾವೀರ ಜಯಂತಿ ಯಾವಾಗ, ಈ ಆಚರಣೆಯ ಹಿನ್ನೆಲೆ ಮತ್ತು ಮಹತ್ವವೇನು ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಚೈತ್ರ ಮಾಸದ 13 ನೇ ದಿನದಂದು ಅಂದರೆ ಚೈತ್ರ ಶುಕ್ಲ ತ್ರಯೋದಶಿಯಂದು ಮಹಾವೀರ ಜಯಂತಿಯನ್ನು ಆಚರಿಸಲಾಗುವುದು. ಈ ಬಾರಿ ಏಪ್ರಿಲ್ 10 ರಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ.
ತ್ರಯೋದಶಿ ತಿಥಿ ಆರಂಭ- ಏಪ್ರಿಲ್ 09, 2025 ರಾತ್ರಿ 10:55
ತ್ರಯೋದಶಿ ತಿಥಿ ಕೊನೆ- ಏಪ್ರಿಲ್ 11, 2025 ಬೆಳಗ್ಗೆ 1:00
ಚೈತ್ರ ಮಾಸದ ಶುಕ್ಲ ಪಕ್ಷದ 13 ನೇ ದಿನದಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ. ಜೈನ ಧರ್ಮದ ಸ್ಥಾಪಕರೆಂದು ಪರಿಗಣಿಸಲ್ಪಟ್ಟ ಭಗವಾನ್ ಮಹಾವೀರರ ಜನ್ಮ ಜನ್ಮ ಜಯಂತಿಯ ನೆನಪಿಗಾಗಿ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತದೆ. ಮಹಾವೀರ ಜಯಂತಿ ಜೈನ ಸಮುದಾಯಕ್ಕೆ ಒಂದು ಪ್ರಮುಖ ಮಂಗಳಕರ ಹಬ್ಬವಾಗಿದೆ. ಈ ದಿನದಂದು ಜೈನರು ಭಗವಾನ್ ಮಹಾವೀರರನ್ನು ಪ್ರಾರ್ಥಿಸುತ್ತಾರೆ ಮತ್ತು ಅವರ ಬೋಧನೆಗಳ ಪ್ರಕಾರ ಬದುಕುವ ಪ್ರತಿಜ್ಞೆಯನ್ನು ಮಾಡುತ್ತಾರೆ. ಈ ಹಬ್ಬವು ಜೈನ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಮಾನವ ಕುಲಕ್ಕರ ಸತ್ಯ, ಅಹಿಂಸೆ, ಸೌಹಾರ್ದತೆ ಮತ್ತು ಸಂಯಮವನ್ನು ಪ್ರೇರೇಪಿಸುವ ದಿನವಾಗಿದೆ.
ಇದನ್ನೂ ಓದಿ: ಊಟ ಮಾಡಿದ ನಂತರ ಬಾಳೆ ಎಲೆಯನ್ನು ಒಳಮುಖವಾಗಿ ಮಡಚುವುದೇಕೆ?
ಮಹಾವೀರ ಜಯಂತಿಯನ್ನು ಜೈನ ಸಮುದಾಯವು ಬಹಳ ಶ್ರದ್ಧಾ ಭಕ್ತಿಯಿಂದ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಪ್ರಾರ್ಥನೆಗಳನ್ನು ಸ್ತೋತ್ರಗಳನ್ನು ಪಠಿಸುವ ಮೂಲಕ ಜೈನರು ಭಕ್ತಿ ಪೂರ್ವಕವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ರಥದ ಮೇಲೆ ಮಹಾವೀರರ ವಿಗ್ರಹವನ್ನಿಟ್ಟು ಮೆರವಣಿಗೆಯನ್ನು ನಡೆಸಲಾಗುತ್ತದೆ. ಅನೇಕ ಜೈನರು ದಿನವಿಡೀ ಉಪವಾಸ ಆಚರಿಸುತ್ತಾರೆ ಮತ್ತು ಜೈನ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅಷ್ಟೇ ಅಲ್ಲದೆ ಈ ದಿನ ಜೈನರು ಮಹಾವೀರರ ಬೋಧನೆಗಳಿಗೆ ಅನುಗುಣವಾಗಿ ದತ್ತಿ ಚಟುವಟಿಕೆಗಳನ್ನು ಮಾಡುತ್ತಾರೆ, ನಿರ್ಗತಿಕರಿಗೆ ಸಹಾಯ ಮಾಡುತ್ತಾರೆ, ದಾನದ ಕಾರ್ಯಗಳಲ್ಲಿ ತೊಡಗುತ್ತಾರೆ.
ಜೈನ ನಂಬಿಕೆಗಳ ಪ್ರಕಾರ, ಭಗವಾನ್ ಮಹಾವೀರರು ಚೈತ್ರ ಮಾಸದ ಶುಕ್ಲ ಪಕ್ಷದ 13 ನೇ ದಿನದಂದು ಪಾಟ್ನಾದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಬಿಹಾರದ ವೈಶಾಲಿ ಜಿಲ್ಲೆಯ ಕುಂದಲ್ಪುರ ಹಳ್ಳಿಯು ರಾಜಮನೆತನದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಸಿದ್ಧಾರ್ಥ ಮತ್ತು ತಾಯಿಯ ಹೆಸರು ರಾಣಿ ತ್ರಿಶಾಲ. ಮಹಾವೀರರ ಬಾಲ್ಯದ ಹೆಸರು ವರ್ಧಮಾನ್. ಲೌಕಿಕ ಬದುಕು, ಭೋಗ ಜೀವನದಲ್ಲಿ ಆಸಕ್ತಿಯನ್ನೇ ಹೊಂದಿರದ ಮಹಾವೀರರು ತಮ್ಮ 30 ನೇ ವಯಸ್ಸಿನಲ್ಲಿ ಐಷಾರಾಮಿ ಜೀವನ, ರಾಜ ವೈಭೋಗವನ್ನು ತೊರೆದು 12 ವರ್ಷಗಳ ಕಾಲ ಕಠಿಣ ತಪ್ಪಸ್ಸನ್ನು ಮಾಡಿ ಕೈಲವ್ಯ ಜ್ಞಾನವನ್ನು ಪಡೆದರು. ನಂತರ ಇವರು ಪಂಚತತ್ವಗಳಾದ ಅಹಿಂಸೆ, ಆಸ್ತೇಯ, ಬ್ರಹ್ಮಚರ್ಯ, ಸತ್ಯ ಮತ್ತು ಅಪರಿಗ್ರಹದ ಬಗ್ಗೆ ಜಗತ್ತುಗೆ ಸಾರುವ ಮೂಲಕ ಜೈನ ಧರ್ಮವನ್ನು ಪ್ರಚಾರ ಮಾಡಲು ಪ್ರಾರಂಭಿಸಿದರು. ಹೀಗೆ ಸತ್ಯ, ಅಹಿಂಸೆ, ಶಾಂತಿಯ ಸಂದೇಶವನ್ನು ಸಾರುತ್ತಾ ಅವರು ತಮ್ಮ 72 ನೇ ವಯಸ್ಸಿನಲ್ಲಿ ನಿರ್ವಾಣ ಪಡೆದರು ಎಂದು ಹೇಳಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:58 pm, Wed, 9 April 25