Womens Day Special : ರುದ್ರಭೂಮಿಯಲ್ಲಿ ಭದ್ರ ಬದುಕು ಕಟ್ಟಿಕೊಂಡ ವನಜಾ ಪೂಜಾರ್ತಿ, ಇವರ ಬದುಕಿನ ಯಶೋಗಾಥೆಯೇ ರೋಚಕ
ತೊಟ್ಟಿಲನ್ನು ತೂಗುವ ಕೈಯೊಂದು ಇಡೀ ದೇಶವನ್ನೇ ಆಳಬಲ್ಲದು ಎನ್ನುವ ಮಾತಿದೆ. ಆ ಮಾತಿನಂತೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿ ಛಾಪು ಮೂಡಿಸಿದ ಮಹಿಳೆಯರು ನಮ್ಮ ಸುತ್ತ ಮುತ್ತಲಿನಲ್ಲಿದ್ದಾರೆ. ಅಂತಹ ಮಹಿಳೆಯರ ಸಾಲಿಗೆ ಉಡುಪಿ ಜಿಲ್ಲೆಯ ಬೀಡಿನಗುಡ್ಡೆಯ ವನಜಾ ಪೂಜಾರ್ತಿಯವರು ಸೇರುತ್ತಾರೆ. ಕಳೆದ ಮೂವತ್ತೈದು ವರ್ಷಗಳಿಂದ ಶವಸಂಸ್ಕಾರ ಕಾಯಕವನ್ನೇ ಪ್ರೀತಿಸುತ್ತಿರುವ ಈ ವನಜಕ್ಕ ಉಳಿದ ಹೆಣ್ಣು ಮಕ್ಕಳಿಗೆ ಮಾದರಿಯ ವ್ಯಕ್ತಿಯಾಗಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಯನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿ ಗೌರವಿಸುವ ಕೆಲಸವನ್ನು ಮಾಡುತ್ತಲೇ ಇದೆ.

ಮಹಿಳೆಗೆ ಹಿಂದೂ ಸಂಪ್ರದಾಯವು ಕೆಲವೊಂದು ಕಟ್ಟುಕಟ್ಟಳೆಯನ್ನು ವಿಧಿಸಿದ್ದು, ಅದನ್ನು ಮೀರಿ ನಡೆದರೆ ಸಮಾಜವು ಅಂತಹವರನ್ನು ನೋಡುವ ದೃಷ್ಟಿಯೇ ಬೇರೆ. ಆದರೆ ಹೆಣ್ಣು ಗಟ್ಟಿಗಳಾದರೆ ಪುರುಷ ಮಾಡುವ ಕೆಲಸವನ್ನು ತಾನು ಕೂಡ ಮಾಡಬಲ್ಲಳು ಎನ್ನುವುದಕ್ಕೆ ಉಡುಪಿ ಜಿಲ್ಲೆಯ ಮಹಿಳೆಯೊಬ್ಬರು ಉದಾಹರಣೆಯಾಗಿದ್ದಾರೆ. ಬದುಕು ಕಲಿಸಿದ ಪಾಠಗಳು ನೂರೆಂಟು, ಕಷ್ಟದ ದಿನಗಳಲ್ಲಿ ಹೊಟ್ಟೆಯ ಹಸಿವನ್ನು ನೀಗಿಸುವ ಸಲುವಾಗಿ ಶವಸಂಸ್ಕಾರವನ್ನೇ ಬದುಕಾಗಿಸಿಕೊಂಡ ಈ ದಿಟ್ಟ ಮಹಿಳೆಯ ಹೆಸರೇ ವನಜಾ ಪೂಜಾರ್ತಿ.
ಇವರು ಜಬ್ಬ ಪೂಜಾರಿ ಮತ್ತು ರಾಧು ಪೂಜಾರ್ತಿಯವರ ಸುಪುತ್ರಿಯಾಗಿದ್ದು, ಓದು ಬರಹವೂ ತಿಳಿದಿಲ್ಲ, ಆಧುನಿಕ ಜ್ಞಾನದ ಅರಿವೇ ಇಲ್ಲ. ವಯಸ್ಸು 70 ದಾಟಿದರೂ ಇವರು ಬೀಡಿನಗುಡ್ಡೆಯ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಕಾಯಕ ಮಾಡುತ್ತ ಅದರಲ್ಲೇ ಖುಷಿ ಕಾಣುತ್ತಿದ್ದಾರೆ. ಹೌದು, ಉಡುಪಿ ಜಿಲ್ಲೆಯ ವನಜಾ ಪೂಜಾರ್ತಿಯವರು ಸುಡುಗಾಡು ಸೇವೆಯನ್ನೇ ಬದುಕಾಗಿಸಿಕೊಂಡ ರೀತಿ ನಿಜಕ್ಕೂ ರೋಚಕವಾದದ್ದು.
ವನಜ ಪೂಜಾರ್ತಿಯವರು ಮೂಡಸಗ್ರಿಯ ಶಿವಳ್ಳಿ ಗ್ರಾಮದವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಬೀಡಿನಗುಡ್ಡೆಯಲ್ಲಿ ಸೂರು ಕಟ್ಟಿಕೊಂಡು ಮಕ್ಕಳ ಜೊತೆಗೆ ವಾಸವಿದ್ದಾರೆ. ಆದರೆ ಮದುವೆಯಾದ ಹೊಸದರಲ್ಲೇ ಪತಿಯ ಸುಡುಗಾಡು ಸೇವೆಯು ವನಜಕ್ಕನವರ ಬದುಕಿಗೆ ದೊಡ್ಡಮಟ್ಟದಲ್ಲಿ ತಿರುವು ನೀಡಿತು. ಪತಿ ಪೂವ ಪೂಜಾರಿಯೊಂದಿಗೆ ಮಾವಿನ ಮಿಡಿ ಮಾರಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಇತ್ತ ವನಜಕ್ಕನವರು ತನ್ನ ಮೂರು ಚಿಕ್ಕ ಮಕ್ಕಳೊಂದಿಗೆ 1975 ರಲ್ಲಿ ಗಂಡನೊಂದಿಗೆ ಹೆಣ ಸುಡುವ ಕೆಲಸಕ್ಕೆ ಕೈ ಜೋಡಿಸಿದರು.
ಆದರೆ ಇವರ ಬದುಕಿನಲ್ಲಿ ಮತ್ತೊಂದು ಕಠಿಣ ನಿರ್ಧಾರವು ಹಿಂದೂ ಸಂಪ್ರದಾಯವನ್ನೇ ಮುರಿಯುವಂತೆ ಮಾಡಿತ್ತು. 1992 ರಲ್ಲಿ ಪತಿಯ ಮರಣದ ನಂತರ ಬದುಕಿನ ಬಂಡಿಯನ್ನು ಸಾಗಿಸುವುದು ಅನಿವಾರ್ಯವಾಗಿತ್ತು. ಮುಂದೇನು ಎಂದು ಯೋಚಿಸಿದಾಗ ಶವಸಂಸ್ಕಾರವನ್ನೇ ಮುಂದುವರೆಸಿಕೊಂಡು ಹೋಗುವ ನಿರ್ಧಾರಕ್ಕೆ ಬಂದರು. ಅಂದಿನಿಂದ ಶುರುವಾದದ್ದೇ ಬದುಕಿನ ನಿಜವಾದ ಹೋರಾಟದ ಹಾದಿ.
ಅಲ್ಲಿಂದ ಶುರುವಾದದ್ದೆ ಸಮಾಜದವರ ನೂರಾರು ಚುಚ್ಚು ಮಾತುಗಳು. ಇವಳ ಮಕ್ಕಳನ್ನು ಯಾರು ಮದುವೆಯಾಗುತ್ತಾರೆ ಎನ್ನುವ ಚುಚ್ಚು ಮಾತು ಒಂದೆಡೆ, ಹೊಟ್ಟೆ ಹಸಿವು ಇನ್ನೊಂದೆಡೆ, ಹೆಣ್ಣಿಗೆ ಸಮಾಜವು ಹಾಕಿರುವ ಕಟ್ಟುಪಾಡುಗಳು ಮತ್ತೊಂದೆಡೆ. ಈ ಎಲ್ಲವೂ ಸ್ವ ದುಡಿಮೆಯ ಮುಂದೆ ಮಸುಕಾಗಿ ಬಿಟ್ಟವು. ಇವರ ಗಟ್ಟಿತನವನ್ನು ಕಂಡು ನಾಲಿಗೆಗೆ ಲಗಾಮಿಲ್ಲದೇ ಮಾತನಾಡುತ್ತಿದ್ದ ವ್ಯಕ್ತಿಗಳ್ಳೆಲ್ಲರೂ ಮೌನವಹಿಸಿದರು. ಕಳೆದ ಮೂವತ್ತೈದು ವರ್ಷಗಳಿಂದ ಈ ಕಾಯಕದಲ್ಲೇ ದೇವರನ್ನು ಕಾಣುತ್ತಿರುವ ವನಜಕ್ಕನವರಿಗೆ ವಯಸ್ಸು 70 ದಾಟಿದೆ. ಒಬ್ಬರಿಗೆ ಈ ಕಾಯಕವನ್ನು ಮಾಡಲು ಸಾಧ್ಯವಾಗದ ಕಾರಣ, ದೊಡ್ಡ ಅಳಿಯ ಉಮೇಶ್ ಪೂಜಾರಿಯವರು ಅತ್ತೆಯ ಕೆಲಸಕ್ಕೆ ಕೈ ಜೋಡಿಸುತ್ತಿದ್ದಾರೆ.
ನಲವತ್ತು ಸಾವಿರಕ್ಕೂ ಹೆಚ್ಚು ಶವ ಸಂಸ್ಕಾರಗಳನ್ನು ಮಾಡಿದ ವನಜಕ್ಕನವರು, ಅಪಘಾತದಲ್ಲಿ ಸಿಲುಕಿ ಅಸುನೀಗಿದ ಯಾರದೋ ಮಕ್ಕಳ ಶವಗಳು ಬಂದಾಗ ಕಣ್ಣೀರು ಹಾಕಿದ್ದಾರೆ. ಯಾರದೋ ಅಮ್ಮ, ಅಪ್ಪ, ಅಣ್ಣ-ತಮ್ಮ, ಅಕ್ಕ-ತಂಗಿ, ಅಜ್ಜ-ಅಜ್ಜಿ ಕಳೆದುಕೊಂಡವರ ಪಾಲಿಗೆ ಇವರ ಸಾಂತ್ವನ ನೀಡಿದ್ದಾರೆ. ಈಗಾಗಲೇ ಹಸಿಗೂಸಿನಿಂದ ಹಿಡಿದು ಮುಪ್ಪನ್ನು ಕಂಡ ಹಳಬರ ಶವಗಳು, ಅಪಘಾತದಲ್ಲಿ ಸಾವನ್ನಪ್ಪಿದ ಶವಗಳು, ಅನಾಥ ಶವಗಳ ಅಂತ್ಯಸಂಸ್ಕಾರ ಮಾಡುವಾಗ ವಿಚಲಿತಲಾಗದೇ ಸೇವಾಮನೋಭಾವವನ್ನು ಮಾಡಿ ದೊಡ್ಡತನವನ್ನು ಮೆರೆದಿದ್ದಾರೆ. ಆದರೆ ಇದೀಗ ಎಲ್ಲಾ ರೀತಿಯ ನೋವನ್ನು ಕಂಡ ವನಜಕ್ಕನವರ ಕಣ್ಣೀರು ಕಾಣುತ್ತಿಲ್ಲ. ಅವರ ನಗುವಿನಲ್ಲೊಂದು ಸಾರ್ಥಕ ಭಾವವೊಂದು ಕಾಣಿಸುತ್ತದೆ.
ಇದನ್ನೂ ಓದಿ: ಈ ವರ್ಷ ರಂಜಾನ್ ಯಾವಾಗ?; ದಿನಾಂಕ, ಸಮಯ, ಇಫ್ತಾರ್ ಕೂಟದ ವಿವರ ಇಲ್ಲಿದೆ
ಬೀಡಿನಗುಡ್ಡೆಯ ವನಜಕ್ಕನವರ ಈ ಕಾಯಕಕ್ಕೆ ನೂರಮೂವತ್ತಕ್ಕೂ ಹೆಚ್ಚು ಸನ್ಮಾನಗಳು ನಡೆದಿದೆ. ಸ್ವರ್ಣ ಫ್ರೆಂಡ್ಸ್, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಮೊಗವೀರ ಯುವ ಸಂಘಟನೆ ಉಡುಪಿ ಹೀಗೆ ಹಲವು ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿದೆ. ವನಜಕ್ಕನವರಿಗೆ ಒಂದು ಗಂಡು, ಎರಡು ಹೆಣ್ಣು ಮಕ್ಕಳು, ಅಳಿಯಂದಿರು ಹಾಗೂ ಮೊಮ್ಮಕ್ಕಳಿರುವ ಸುಖಿ ಕುಟುಂಬ. ಆದರೆ ತನ್ನ ಇಳಿ ವಯಸ್ಸಿನಲ್ಲಿಯು ಸ್ಮಶಾನದಲ್ಲಿ ಹೆಣ ಸುಡುವ ಕೆಲಸದಲ್ಲೇ ತಮ್ಮ ಖುಷಿ ಕಾಣುತ್ತಿದ್ದು, ಇವರ ಸಾಧನೆಯ ಹಾದಿ ಉಳಿದ ಹೆಣ್ಣು ಮಕ್ಕಳಿಗೆ ಮಾದರಿಯಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Mon, 4 March 24