
ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದರ ಜೊತೆಗೆ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹೌದು ಶಿಕ್ಷಣವು ವ್ಯಕ್ತಿಯ ಜೀವನ ಗುಣಮಟ್ಟವನ್ನು ಸುಧಾರಿಸುವುದು ಮಾತ್ರವಲ್ಲದೆ, ಆತನ ಜ್ಞಾನ, ಕೌಶಲ್ಯ, ವ್ಯಕ್ತಿತ್ವವನ್ನು ಅಭಿವೃಧಿಪಡಿಸುತ್ತದೆ. ಅಷ್ಟೇ ಅಲ್ಲದೇ ಶಿಕ್ಷಣವು ಯಾವುದೇ ಒಂದು ದೇಶ ಅಥವಾ ಸಮಾಜವನ್ನು ಉತ್ತಮವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದೇ ರೀತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ (Dr. APJ Abdul Kalam) ಅವರು ಸಹ ಶಿಕ್ಷಣವು ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ ಇಡೀ ಸಮಾಜವನ್ನು ಪರಿವರ್ತಿಸುವ ಮಾಂತ್ರಿಕ ಶಕ್ತಿ ಎಂದು ನಂಬಿದ್ದವರು. ಜೊತೆಗೆ ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ನಂಬಿದ್ದ ಅವರು ಶಿಕ್ಷಣವನ್ನು ಉತ್ತೇಜಿಸುವಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡುವಲ್ಲಿ ಹಾಗೂ ತಮ್ಮ ಸ್ಪೂರ್ತಿದಾಯಕ ಮಾತಿನ ಮೂಲಕ ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ ಕಲಾಂ ತಮ್ಮ ಇಡೀ ಜೀವನವನ್ನು ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟರು. ಈ ನಿಟ್ಟಿನಲ್ಲಿ ಕಲಾಂ ಅವರ ಜನ್ಮ ದಿನದ ಸವಿ ನೆನಪಿಗಾಗಿ ಪ್ರತಿವರ್ಷ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ (World Students’ Day) ದಿನವನ್ನು ಆಚರಿಸಲಾಗುತ್ತದೆ.
ಡಾ. ಕಲಾಂ ಒಬ್ಬ ವಿಜ್ಞಾನಿ ಮತ್ತು ಭಾರತದ ಮಿಸೈಲ್ ಮ್ಯಾನ್ ಮಾತ್ರವಲ್ಲದೆ, ಯುವಜನರು ದೊಡ್ಡ ಕನಸು ಕಾಣಲು ಮತ್ತು ಅವುಗ ಳನ್ನು ಸಾಧಿಸಲು ಯಾವಾಗಲೂ ಪ್ರೇರೇಪಿಸುವ ಶಿಕ್ಷಕರೂ ಆಗಿದ್ದರು. ಅವರ ಬೋಧನಾ ಪರಂಪರೆ ಮತ್ತು ಅವರು ಸ್ಥಾಪಿಸಿದ ಆದರ್ಶಗಳನ್ನು ಗೌರವಿಸಲು ವಿಶ್ವಸಂಸ್ಥೆಯು ಅಕ್ಟೋಬರ್ 15 ಅನ್ನು ವಿಶ್ವ ವಿದ್ಯಾರ್ಥಿ ದಿನವೆಂದು ಘೋಷಿಸಿತು. ಮೊದಲ ಬಾರಿಗೆ 2010 ರಲ್ಲಿ, ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ 79ನೇ ಜನ್ಮದಿನದಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಯಿತು. ಶಿಕ್ಷಣ, ಪ್ರಪಂಚದಾದ್ಯಂತ ವಿದ್ಯಾರ್ಥಿಗಳ ಪ್ರಗತಿಗಾಗಿ ಅವರು ಮಾಡಿದ ಕಾರ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅವರ ಮಹತ್ವದ ಕೊಡುಗೆಯನ್ನು ಗೌರವಿಸಲು ವಿಶ್ವ ಸಂಸ್ಥೆಯು ಡಾ. ಎ.ಪಿ.ಜೆ ಅಬ್ದಲ್ ಕಲಾಂ ಅವರ ಜನ್ಮ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಮನೆ, ಮನ ಬೆಳಗುವ ಹೆಣ್ಣು ಸಮಾಜದ ಕಣ್ಣು; ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಸಲ್ಲದು
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ