AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yakshagana: ಪುರಾಣ ಎಂದರೆ ಬಹಳ ಹಿಂದಿನದು, ಪುರಾತನ ಎನ್ನುವ ಅರ್ಥ ಮಾತ್ರವೇ?

YakshaRanga: ಹಾಗಿದ್ದರೆ ಪುರಾಣ ಎಂದರೆ ಬಹಳ ಹಿಂದಿನದು. ಪುರಾತನ ಎನ್ನುವ ಅರ್ಥ ಮಾತ್ರವೇ? ‘ಪುರಾಪಿ ನವಂ ಪುರಾಣಮ್’. ಹಳತಾಗಿಯೂ ಹೊಸತಾಗಿ ಇರುವಂಥದ್ದು ಪುರಾಣ. ಹಿಂದೆಯೂ ಇಂದೂ ಮುಂದೂ ಎಂದೆಂದೂ ಹೊಸತಾಗಿ ಇರುವುದು ಎನ್ನುವುದೂ ಇದರ ತಾತ್ಪರ್ಯ ಆಗಲಾರದೇ?

Yakshagana: ಪುರಾಣ ಎಂದರೆ ಬಹಳ ಹಿಂದಿನದು, ಪುರಾತನ ಎನ್ನುವ ಅರ್ಥ ಮಾತ್ರವೇ?
ಪುರಾಣ ಪಾತ್ರಗಳ ವರ್ತಮಾನ (ಚಿತ್ರ: ಮುರಳಿಮೋಹನ ಅಬ್ಬೆಮನೆ)
ganapathi bhat
|

Updated on:Aug 08, 2021 | 5:03 PM

Share

ವೇದ, ಭಗವದ್ಗೀತೆ, ಪುರಾಣಗಳನ್ನುಳಿದು ಭಾರತೀಯ ಸಂಸ್ಕೃತಿಯೇ ಅಪೂರ್ಣ. ಪುರಾಣಗಳಂತೂ ಜನಸಾಮಾನ್ಯರನ್ನೂ ತಲುಪಿ ಜನಜೀವನದಲ್ಲಿ ತನ್ನ ಪಾತ್ರಗಳ ಮೂಲಕ ಹಾಸುಹೊಕ್ಕಾಗಿದೆ. ಅದರಲ್ಲೂ ಯಕ್ಷಗಾನ ಬಯಲಾಟ, ತಾಳಮದ್ದಳೆಗಳ ಆಡುಂಬೊಲವಾದ ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜನಸಾಮಾನ್ಯರೂ ಪುರಾಣ ಪಾತ್ರಗಳ ವಿಶ್ಲೇಷಣೆ ಮಾಡಬಲ್ಲರು.

ಸಾಮಾನ್ಯ ಸಂಭಾಷಣೆಯನ್ನೇ ಕೇಳಿ. ಗಮನಿಸಿ. ಜೀವನದಲ್ಲಿ ಸತ್ಯವಂತನಾಗಿದ್ದವನು ಅಥವಾ ಸತ್ಯಕ್ಕಾಗಿ ಎಲ್ಲವನ್ನೂ ಕಳಕೊಂಡವನ ಬಗ್ಗೆ ‘ಅವನು ಹರಿಶ್ಚಂದ್ರನ ಮೊಮ್ಮಗ’, ಬಹಳ ಸಾತ್ವಿಕ ವ್ಯಕ್ತಿಯ ಬಗ್ಗೆ ‘ಅವನು ದೊಡ್ಡ ಧರ್ಮರಾಯ’, ವಾಚಾಳಿಯಾಗಿ ಮಾತನಾಡುವವನು ಆದರೆ ‘ಇವನದ್ದು ಹನುಮಂತನ ಬಾಲದ ಹಾಗೆ’, ಹೊಟ್ಟೆಬಾಕನಾದರೆ ‘ಅಯ್ಯೋ ಅವನೊಬ್ಬ ಬಕಾಸುರ’, ಹೀಗೇ ‘ತ್ರಿಶಂಕು ಸ್ವರ್ಗ’, ‘ಭಗೀರಥ ಪ್ರಯತ್ನ’ ಇಂಥಾ ಮಾತುಗಳು ಸಾಮಾನ್ಯವಾಗಿ ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ.

ಹಾಗಿದ್ದರೆ ಪುರಾಣ ಎಂದರೆ ಬಹಳ ಹಿಂದಿನದು. ಪುರಾತನ ಎನ್ನುವ ಅರ್ಥ ಮಾತ್ರವೇ? ‘ಪುರಾಪಿ ನವಂ ಪುರಾಣಮ್’. ಹಳತಾಗಿಯೂ ಹೊಸತಾಗಿ ಇರುವಂಥದ್ದು ಪುರಾಣ. ಹಿಂದೆಯೂ ಇಂದೂ ಮುಂದೂ ಎಂದೆಂದೂ ಹೊಸತಾಗಿ ಇರುವುದು ಎನ್ನುವುದೂ ಇದರ ತಾತ್ಪರ್ಯ ಆಗಲಾರದೇ?

ಪುರಾಣದ ಕತೆಗಳಲ್ಲಿ ಇರುವ ಅತಿರಂಜಕತೆ, ಅತಿಮಾನುಷ ಶಕ್ತಿ ಇತ್ಯಾದಿಗಳನ್ನುಳಿದು ನಾವು ಆಲೋಚಿಸಿದರೆ, ಕಲಿಯುಗದಲ್ಲೂ ಪುರಾಣ ಪಾತ್ರಗಳಿಲ್ಲವೇ? ದಾಯಾದಿಗಳನ್ನು ಕೊಂದಾದರೂ ಆಸ್ತಿಯನ್ನು ವಶಪಡಿಸಿಕೊಳ್ಳುವವರಲ್ಲಿ ಕೌರವ. ಬೇರೆಯವರ ಪತ್ನಿಯರನ್ನು ಕಾಮದ ಕಣ್ಣಿಂದ ನೋಡುವವರಲ್ಲಿ ರಾವಣನು, ಕೀಚಕ. ತನ್ನ ಮಕ್ಕಳು ಏನು ಮಾಡಿದರೂ ಕಣ್ಮುಚ್ಚಿ ಸಮರ್ಥಿಸುವ ಬುದ್ಧಿಗುರುಡ ತಂದೆಯರಲ್ಲೊಬ್ಬ ದೃತರಾಷ್ಟ್ರ. ಅಸಹಾಯಕರಾಗಿ ಬಾಯಿ ಮುಚ್ಚಿಕೊಂಡಿರುವ ಸ್ತ್ರೀಯರಲ್ಲಿ ಕಣ್ಣಿದ್ದೂ ಬಟ್ಟೆ ಕಟ್ಟಿಕೊಂಡ ಗಾಂಧಾರಿ. ಮನೆಯ ಮಕ್ಕಳು ಜಗಳಾಡುವಾಗ ನ್ಯಾಯ ನಿರ್ಣಯ ಮಾಡುವ ಸಾಮರ್ಥ್ಯ ಇದ್ದರೂ ಮೌನವಾಗಿ ಕುಳಿತುಬಿಡುವ ವೃದ್ಧರಲ್ಲೊಬ್ಬ ಭೀಷ್ಮ. ಪತಿ ಮರಣಿಸಿದಾಗ ಧೃತಿಗೆಡದೆ ಕೂಲಿ ಮಾಡಿಯಾದರೂ ಮಕ್ಕಳನ್ನು ಒಂದು ನೆಲೆಗೆ ತರಲು ಶ್ರಮಿಸಿದ ಮಹಿಳೆಯಲ್ಲೊಬ್ಬಳು ಕುಂತಿ. ತಾನು ಕೆಲಸಕ್ಕಿರುವ ಮನೆಯವರಿಗೇ ಚಾಡಿ ಹೇಳಿಕೊಟ್ಟು ಮನೆಮುರಿಯಲು ಕಾರಣಳಾದವಳಲ್ಲಿ ಒಬ್ಬ ಮಂಥರೆ.

ಹೀಗೆ ಕಾಣುವ ಕಣ್ಣಿದ್ದರೆ ಪುರಾಣ ಪಾತ್ರಗಳೆಲ್ಲಾ ಜೀವಂತವಾಗಿ ನಮ್ಮೆದುರೇ ಓಡಾಡುತ್ತಿರಬಹುದು ಅಥವಾ ನಾವೇ ಆ ಪಾತ್ರಗಳಲ್ಲಿ ಒಂದಾಗಿರಬಹುದು. ಇವೆಲ್ಲಾ ಮುಖ್ಯಪಾತ್ರಗಳು. ಹಾಗೆಂದು ಹೆಸರೇ ಇಲ್ಲದ, ಆದರೆ ಪಾತ್ರಗಳಾಗಿ ಕಾಣಿಸಿಕೊಂಡ ಪ್ರಜೆಗಳೂ ಆಗ ಇದ್ದರಲ್ಲ. ಅನ್ಯಾಯವನ್ನು ಮಾತಿನಿಂದಲ್ಲದೆ, ಕೃತಿಯಿಂದಲೇ ವಿರೋಧಿಸಿದ ಪ್ರಜೆಗಳು.

ತಮ್ಮ ಆರಾಧ್ಯಮೂರ್ತಿಯಾದ ರಾಮ ಪಟ್ಟಾಭಿಷಿಕ್ತನಾಗುವ ದೃಶ್ಯವನ್ನು ಕಣ್ತುಂಬಿಕೊಳ್ಳುವ ಆಸೆಯಲ್ಲಿದ್ದಾಗ, ಪ್ರಜೆಗಳಿಗೆ ನಿಜವಾಗಿ ಕಂಡದ್ದು ಆತ ನಾರುಡೆಯುಟ್ಟು ವನವಾಸಕ್ಕೆ ಹೊರಟ ದೃಶ್ಯ. ದಶರಥನ ಈ ತೀರ್ಮಾನವನ್ನು ಪ್ರಜೆಗಳು ವಿರೋಧಿಸಿದ್ದು ಹೇಗೆ? ಅಯೋಧ್ಯೆಯ ಪ್ರತಿಯೊಬ್ಬ ಪ್ರಜೆಯೂ ರಾಮನ ಜೊತೆಗೆ ಕಾಡಿಗೆ ಹೊರಡುವ ಮೂಲಕ. ಭಾರತದ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ನಾಯಕರ ಜೊತೆ ಕಷ್ಟನಷ್ಟಗಳನ್ನು ಎದುರಿಸಿ ಪ್ರತಿಭಟಿಸಿದ, ಬೆಂಬಲಿಸಿದ ಭಾರತೀಯರೂ ಇಂಥಾ ಪ್ರಜೆಗಳ ಪ್ರತಿರೂಪವಲ್ಲವೇ?

ಸಮುದ್ರ ಮಥನದ ಕಾಲದಲ್ಲಿ ಯಾವ ಸಮುದ್ರದಿಂದ ಹಾಲಾಹಲ ಹುಟ್ಟಿತೋ ಅಲ್ಲಿಂದಲೇ ಮುಂದೆ ಅಮೃತವೂ ಬಂತು. ಇದು ಏನನ್ನು ಸೂಚಿಸುತ್ತದೆ? ಕೆಡುಕಿನಿಂದಲೇ ಒಳಿತೂ ಹುಟ್ಟಬಲ್ಲುದು. ನಾವು ನಿರಾಶರಾಗಬೇಕಾದ, ಧೃತಿಗೆಡಬೇಕಾದ ಅಗತ್ಯವಿಲ್ಲ. ಒಂದುವೇಳೆ ಹಾಲಾಹಲ ಬಂದಾಗ ದೇವತೆಗಳೂ ದಾನವರೂ ಮಥನವನ್ನು ನಿಲ್ಲಿಸುತ್ತಿದ್ದರೆ? ಅಮೃತ ಬರುವುದಕ್ಕೇ ಇರಲಿಲ್ಲ. ಹಾಗಾಗಿ, ಎದೆಗುಂದದೆ ಮರಳಿ ಯತ್ನವನ್ನು ಮಾಡಿ ಕೆಟ್ಟುಹೋದದ್ದನ್ನೂ ಸರಿಪಡಿಸಬಹುದು. ಹೀಗೆ ಪುರಾಣದ ಪಾತ್ರಗಳು ಎಂದೂ ಜೀವಂತ.

ನುಡಿಗಟ್ಟಾಗಿಯೋ ಗಾದೆಯಾಗಿಯೋ ನಮ್ಮೊಡನೆ ಇರುವ ಪುರಾಣದ ಪಾತ್ರಗಳು, ತಮ್ಮ ವ್ಯಕ್ತಿತ್ವ, ಸ್ವಭಾವಗಳಿಂದ ವರ್ತಮಾನದಲ್ಲೂ ನಾಯಕರಾಗಿ, ಖಳನಾಯಕರಾಗಿ, ಪೋಷಕಪಾತ್ರಗಳಾಗಿ ತಮ್ಮ ಮಿತಿಯೊಳಗೆ ಕಾಣಿಸಿಕೊಳ್ಳುತ್ತಾರೆ. ಮುಂದೆಯೂ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಯಾಕೆಂದರೆ, ಪುರಾಪಿ ನವಂ ಪುರಾಣಮ್.

ಬರಹ: ಹರೀಶ ಬಳಂತಿಮೊಗರು

***

ಟಿವಿ9 ಕನ್ನಡ ಡಿಜಿಟಲ್‌ ಹೊಸ ಪ್ರಯತ್ನ ಪುರಾಣ ಪಾತ್ರಗಳು, ಪುರಾಣದ ಘಟನೆಗಳು, ಅನುಭವ, ಆಸ್ವಾದನೆ ಬದುಕಿಗೆ ದಾರಿದೀಪ ಆಗಬಲ್ಲವು. ಒಂದಷ್ಟು ಹೊಸನೋಟ, ತಿಳುವಳಿಕೆಯನ್ನೂ ನೀಡಬಲ್ಲವು. ಮನಸಿಗೆ ಸಂತೋಷ, ನೆಮ್ಮದಿಯನ್ನೂ ತುಂಬಬಲ್ಲವು.

ಮೇಲಿನ ಬರಹದಲ್ಲಿ ಹರೀಶ ಬಳಂತಿಮೊಗರು ತಿಳಿಸಿರುವಂತೆ ಪುರಾಣ ಪಾತ್ರಗಳನ್ನು ತಿಕ್ಕಿ, ತೀಡಿ, ವಿರೋಧಿಸಿ, ಪ್ರಶ್ನಿಸಿ, ಎದುರಿಸಿ, ಒಪ್ಪಿ, ಅಪ್ಪುವ ಅವಕಾಶ ಯಕ್ಷಗಾನ ಕಲಾ ವಲಯದ ಜನತೆಗೆ ಹೆಚ್ಚು. ಪುರಾಣ ಪಾತ್ರಗಳನ್ನೂ ದಿನವೂ ಮಾತನಾಡಿಸುವಂತೆ.. ಏಕೆಂದರೆ ಇಲ್ಲಿ ದಿನನಿತ್ಯವೂ ನೂರಾರು ಆಟ.

ಈ ನೆಲೆಯಲ್ಲಿ ʼಪುರಾಣ ಪಾತ್ರಗಳ ವರ್ತಮಾನʼ ಎಂಬ ಸರಣಿಯನ್ನು ಪುರಾಣ ಮತ್ತು ಯಕ್ಷಗಾನದ ಸಮೀಕರಣದೊಂದಿಗೆ ಆರಂಭಿಸುತ್ತಿದ್ದೇವೆ. ಸದ್ಯ ಆಯ್ದ ಸಹೃದಯರು ಪುರಾಣ ಪಾತ್ರಧಾರಿಗಳಾಗಿ ತಮ್ಮ ಅನುಭವ, ಅದರ ತಯಾರಿಯಲ್ಲಿನ ಅನುಭವ, ಅಥವಾ ರಂಗಸ್ಥಳದಲ್ಲಿ ಪುರಾಣ ಪಾತ್ರಗಳನ್ನು ಕಂಡ ಬಗೆ, ರಂಗದ ಹಿಂದಿನ ಚೌಕಿಯ ನೆನಪು, ಮತ್ತು ಅದರಿಂದ ಬದುಕಿಗೇನು? ಬದುಕಲ್ಲಿ ಏನು? ಎಂದು ಚರ್ಚಿಸುತ್ತಾರೆ.

ಮುಂದೆ ಇದನ್ನು ವಿಸ್ತರಿಸುವ ಇರಾದೆ ಇದೆ. ಈ ನೆಲೆಯಲ್ಲಿ ತಾವೂ ಕೂಡ ಮೇಲಿನ ಉದ್ದೇಶಕ್ಕೆ ಸರಿಯಾಗಿ ತಮ್ಮ ಬರಹವನ್ನು ನಮಗೆ ಕಳುಹಿಸಿಕೊಡಬಹುದು. ಮೇಲ್ ಮಾಡುವಾಗ ‘ಯಕ್ಷಗಾನ’, ‘ಯಕ್ಷರಂಗ’ ಅಥವಾ ‘ಪುರಾಣ ಪಾತ್ರಗಳ ವರ್ತಮಾನ’ ಸರಣಿಗೆ ಲೇಖನ ಎಂದು ನಮೂದಿಸಲು ಮರೆಯಬೇಡಿ.

ನಮ್ಮ ಇಮೇಲ್‌ ವಿಳಾಸ:  tv9kannadadigital@gmail.com

ಇದನ್ನೂ ಓದಿ: Yoga Malike: ದಿನವಿಡೀ ದೈಹಿಕ ಶ್ರಮದ ಕೆಲಸ ಮಾಡುವವರಿಗೆ ಯೋಗ ಅವಶ್ಯವೇ?

(Series on Yakshagana and Purana characters YakshaRanga special write up by Harish Balanthimogaru)

Published On - 5:01 pm, Sun, 8 August 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ